Advertisement

ವಿಧಾನಸಭಾ ಚುನಾವಣೆಯ ಗುರಿಯಲ್ಲಿ ಅನಗತ್ಯ ಗೊಂದಲ ಸೃಷ್ಟಿ;ತಾ.ಪಂ.ಮಾಜಿ ಸದಸ್ಯ ನಾಗರಾಜ ಶೆಟ್ಟಿ

11:25 AM Oct 23, 2022 | Team Udayavani |

ಶಿರಸಿ: ರಾಜಕೀಯಕ್ಕೆ ಬಡ ಅತಿಕ್ರಮಣದಾರರ ಬಳಕೆ ಮಾಡಿಕೊಳ್ಳಲಾಗುತ್ತಿದೆ.  ಬರಲಿರುವ ವಿಧಾನ ಸಭಾ ಚುನಾವಣೆಯ ಗುರಿಯಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬಿಜೆಪಿ ಪ್ರಮುಖ, ತಾ.ಪಂ. ಮಾಜಿ ಸದಸ್ಯ ನಾಗರಾಜ ಶೆಟ್ಟಿ ಆರೋಪಿಸಿದರು.

Advertisement

ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅತಿಕ್ರಮಣದಾರರ ಪರವಾಗಿಯೇ ಇದ್ದಾರೆ. ವಿನಾ‌ಕಾರಣ ಕಾಂಗ್ರೆಸ್ ಪ್ರೇರಿತ ಸಮಾವೇಶ‌ ನಡೆಸುತ್ತಿದ್ದಾರೆ ಎಂದರು.

ಉತ್ತರ ಕನ್ನಡ ಕಾಡಿನ ಜಿಲ್ಲೆ. ಎಲ್ಲಿ ನೋಡಿದರೂ ಕಾಡೇ ತುಂಬಿದ್ದು, ಅಲ್ಲಿನ ಪರಿಸರದಲ್ಲಿ ಅತಿಕ್ರಮಣದಾರರೇ ಹೆಚ್ಚಿದ್ದು, ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗ ಹೋರಾಟದ ಹೆಸರ‌ಲ್ಲಿ ವಕೀಲರೂ ಆದ ರವೀಂದ್ರ ನಾಯ್ಕ ಅವರು ಇಲ್ಲ ಸಲ್ಲದ ಆರೋಪ ಮತ್ತು ಗೊಂದಲವನ್ನು ಸೃಷ್ಟಿ ಮಾಡಿ, ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಮಾಡುತ್ತಿದ್ದಾರೆ. ಹಳ್ಳಿಯ ಜನರ ಮುಗ್ಧತೆಯನ್ನು ಬಳಸಿಕೊಂಡು ಅವರಿಗೆ ಅನಾವಶ್ಯಕ ಅವಶ್ಯಕತೆಯಿಲ್ಲದ ವಿಷಯಗಳನ್ನು ಅವರ ಮನಸ್ಸಿನಲ್ಲಿ ತುಂಬಿದ್ದಾರೆ ಎಂದರು.

ಇಲ್ಲಿ ನಿಜವಾದ ಪರಿಸ್ಥಿತಿ ಹಾಗಿಲ್ಲ. ಹಳೆಯ ಅತಿಕ್ರಮಣ ಮತ್ತು ಈಗಾಗಲೇ ಜಿ.ಪಿ.ಎಸ್. ಆದ ಯಾರದೇ ವಾಸದ ಮನೆ ಮತ್ತು ಕೃಷಿ ಜಮೀನನ್ನು ಯಾವುದೇ ಕಾರಣಕ್ಕೂ ತೊಂದರೆ ನೀಡುವುದಿಲ್ಲ ಎಂದು ಸರಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಆದರೂ ಶಿರಸಿ-ಸಿದ್ದಾಪುರ ತಾಲೂಕಿನಲ್ಲಿ ರವೀಂದ್ರನಾಥ ನಾಯ್ಕ ಇವರು ಹೋರಾಟದ ಹೆಸರಿನಲ್ಲಿ ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದು, ಸಭಾಧ್ಯಕ್ಷರು ಮತ್ತು ಬಿ.ಜೆ.ಪಿ. ಪಕ್ಷದ ವಿರುದ್ಧ ಸುಮ್ಮನೇ ಆರೋಪ ಮಾಡುತ್ತಿದ್ದಾರೆ ಎಂದರು.

ಹೋರಾಟಗಾರರ ವಯಕ್ತಿಕ ಸ್ವಾರ್ಥ ಸಾಧನೆಗೆ ಈ ರೀತಿ ಹೇಳಿಕೆ ಕೊಡುತ್ತ ಬಂದಿದ್ದಾರೆ. ಈಗಾಗಲೇ ಸಭಾಧ್ಯಕ್ಷರು ಅಧಿಕಾರಿಗಳಿಗೆ ತಿಳಿಸಿರುವಂತೆ ಯಾವುದೇ ಕಾರಣಕ್ಕೂ ಜಿ.ಪಿ.ಎಸ್. ಆದ ಹಳೆಯ ಅತಿಕ್ರಮಣದಾರರ ವಿಷಯಕ್ಕೆ ಹೋಗದಂತೆ ಖಡಕ್ ಸೂಚನೆ ನೀಡಿರುತ್ತಾರೆ.  ಅಂತಹ ಪ್ರಕರಣ ನಮ್ಮ ತಾಲೂಕಿನಲ್ಲಿ ಯಾವುದೂ ನಡೆದಿರುವುದಿಲ್ಲ ಎಂದರು.

Advertisement

32 ವರ್ಷಗಳಿಂದ ಅತಿಕ್ರಮಣ ಹೋರಾಟ ಮಾಡುತ್ತೇನೆಂದು ಹೇಳಿಕೊಳ್ಳುವ ನಾಯ್ಕ ಅವರಿಂದ ಜನರಿಗೆ ಆದ ಲಾಭ ಏನು?. ಗೊಂದಲ ಸೃಷ್ಟಿಸುವುದನ್ನು ಬಿಟ್ಟು ಬೇರೆ ಯಾವ ರೀತಿಯಿಂದ ಸಹಾಯ ಮಾಡಿದ್ದೀರಿ? ಸುಮ್ಮನೆ ಬೇರೆಯವರ ಮೇಲೆ ಇಲ್ಲ-ಸಲ್ಲದ ಆಪಾದನೆ ಮಾಡುವುದು ಬಿಟ್ಟು ಜನರು ನೆಮ್ಮದಿಯಿಂದ ಜೀವನವನ್ನು ನಡೆಸಲು ನೀವು ಸಹಕಾರ ನೀಡಿ ಎಂದು ಹೇಳಿದರು.

ಪ್ರತಿ ಸಲ ಚುನಾವಣೆ ಬಂದಾಗ ಮಾತ್ರ ಹೋರಾಟದ ನೆಪ ಮಾಡಿಕೊಂಡು ಬರುವನನ ಉದ್ದೇಶವೇನು? ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ಪ್ರಚಾರ ನಡೆಸುತ್ತಿರುವಂತೆ ಕಾಣುತ್ತದೆ. ನೀವು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕನಾಗಿ ಕನಸು ಕಂಡಿದ್ದರೆ ನೇರವಾಗಿ ಜನರ ಬಳಿ ಹೋಗಿ. ಅದನ್ನು ಬಿಟ್ಟು ಗೊಂದಲದ ವಾತಾವರಣ ಸೃಷ್ಟಿಸುವ ಅವಶ್ಯಕತೆಯಿಲ್ಲ ಎಂದಿದ್ದಾರೆ.

ಸಭಾಧ್ಯಕ್ಷರು ಅತಿಕ್ರಮಣದಾರರ ಪರವಾಗಿ ಹಿಂದಿನ ಯಾವುದೂ ಸರಕಾರಗಳು ಮಾಡದೇ ಇರುವಂತಹ ಅತಿಕ್ರಮಣದಾರರಿಗೆ ಸರಕಾರದ ವಸತಿ ಮನೆ ನೀಡುವಂತೆ ಮಾಡಿದ್ದು ಕಾಗೇರಿಯವರು. ಈಗಾಗಲೇ ಸಭಾಧ್ಯಕ್ಷರು ವಿಧಾನಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಿದ್ದು, ಗಮನಕ್ಕಿದೆ. ಇತ್ತೀಚೆಗೆ ಉನ್ನತ ಮಟ್ಟದ ಅಧಿಕಾರಿಗಳನ್ನು ಕರೆದು ಚರ್ಚಿಸಿದ್ದು, ಅತಿಕ್ರಮಣದಾರರಿಗೆ ಯಾವ ರೀತಿಯ ನ್ಯಾಯ ಕೊಡಿಸಬೇಕೆಂಬುದನ್ನು ಮೇಲ್ಮನವಿ ಸಲ್ಲಿಸಲು ತಿಳಿಸಿದ್ದಾರೆ. ಪಕ್ಷಾತೀತ ಹೋರಾಟ ಎಂಬ ಹೆಸರಿನಲ್ಲಿ ರಾಜಕೀಯ ಹಿತಾಸಕ್ತಿ ಸಾಧಿಸುವುದು ಸರಿಯಲ್ಲ ಎಂದರು.

2013 ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಸ್ಥಳೀಯ ಮಟ್ಟದಲ್ಲಿ ಸಮಿತಿಯನ್ನು ರಚಿಸಿ ಅತಿಕ್ರಮಣದಾರರು ಸಾಗುವಳಿ ಮಾಡಿಕೊಂಡಿರುವ ಜಮೀನು ಮತ್ತು ಮನೆಗಳನ್ನು ಜಿ.ಪಿ.ಎಸ್. ಮಾಡಿಸಿಕೊಟ್ಟಿದ್ದಾರೆ. ಅಂತಹ ಜಮೀನುಗಳಿಗೆ ಯಾವುದೇ ಕಾರಣಕ್ಕೂ ಅರಣ್ಯ ಅಧಿಕಾರಿಗಳು ತೊಂದರೆ ನೀಡಲು ಸಾಧ್ಯವಿಲ್ಲ ಎಂದೂ ತಿಳಿಸಿದರು.

ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ‌ ನಾಗರಾಜ ಶೆಟ್ಟಿ ಹಾಗೂ ಇತರರು‌‌ ಮಾತನಾಡಿದರು. ಮಂಜುನಾಥ ಭಂಡಾರಿ, ರತ್ನ ‌ಶೆಟ್ಟಿ, ಪ್ರಭಾವತಿ ಗೌಡ ಹಾಗೂ ಇತರರಿದ್ದರು‌.

ಅರಣ್ಯ ಅತಿಕ್ರಮಣದಾರರ ಪರವಾಗಿ ಕಾಗೇರಿಯವರು ಮತ್ತು ಬಿ.ಜೆ.ಪಿ. ಸರಕಾರ ಬೆಂಬಲವಾಗಿ ನಿಂತಿದೆ. – ನಾಗರಾಜ್ ಶೆಟ್ಟಿ, ಬಿಜೆಪಿ ಪ್ರಮುಖ

Advertisement

Udayavani is now on Telegram. Click here to join our channel and stay updated with the latest news.

Next