Advertisement

ಶಿರಸಿಯಲ್ಲಿ ಡಕ್ಕಣಕ್ಕ ಡಕ್ಕಣಕ 

12:30 AM Mar 16, 2019 | |

 ಶಿರಸಿಯಲ್ಲಿ ಶುರುವಾಗುತ್ತಿದೆ ರಂಗುಬಿರಂಗು. ಇದು ಹೋಳಿಯ ಎಫೆಕ್ಟ್. ಐದು ರಾತ್ರಿಗಳ ಕಾಲ ಶಿರಸಿಯ ರಸ್ತೆಗಳಿಗೆ ಬಿಡುವಿಲ್ಲ, ಇಡಿ ಊರಿಗೆ ಊರೇ ನಿದ್ದೆಗೆಟ್ಟು ಕೂತಿರುತ್ತದೆ. ಬಡವ, ಬಲ್ಲಿದ, ಜಾತಿ-ಮತ ಇದಾವುದರ 
ಬೇಧವಿಲ್ಲದೇ ಎಲ್ಲರೂ ಸೇರಿ ಬಣ್ಣವನ್ನೆರಚಿ ವರ್ಷಕ್ಕೊಮ್ಮೆ ಕೂಡುವ ಒಂದು ವಿಶೇಷ ದಿನ. 

Advertisement

ಡಕ್ಕಣಕ ಡಕ್ಕಣಕ ಡಕ್ಕಣಕ ಡಕ್ಕಣಕ…..ಶಿರಸಿಯ ಗಲ್ಲಿಗಲ್ಲಿಗಳಲ್ಲಿ ಈಗ  ತಮಟೆಗಳದ್ದೇ ಸದ್ದು . ನಾಲ್ಕು ರಸ್ತೆಗಳು ಸೇರುವಲ್ಲೋ,  ರಸ್ತೆಯ ಪಕ್ಕದ ಅಶ್ವತ್ಥಕಟ್ಟೆಯಲ್ಲೋ ಹಿರಿಕಿರಿಯರು ಸೇರಿದಂತೆ ಎಲ್ಲರೂ ಈ ತಾಳಕ್ಕೆ ಹೆಜ್ಜೆಹಾಕುವವರೇ. ಹೋಳಿ ಹುಣ್ಣಿಮೆ ಸಮೀಪಿಸುತ್ತಿದ್ದಂತೆ ಅಲ್ಲಿ ಸೇರುವ ಜನರ ಸಂಖ್ಯೆ ಕೂಡ ಏರುತ್ತದೆ.  ಒಂದು ಕಡೆ ತಮಟೆಯನ್ನು ಬಾರಿಸುವ ತಂಡದ ತಾಳಕ್ಕೆ ಕತ್ತಿ , ಢಾಲು ಹಿಡಿದ ವ್ಯಕ್ತಿಗಳು ಹೆಜ್ಜೆಹಾಕಿ ಅತ್ತಿತ್ತ ಓಡಾಡುತ್ತಿದ್ದರೆ ಇನ್ನೊಂದು ಕಡೆ ಆಯೋಜಕರ ಹಿರಿಕಿರಿತಲೆಗಳ ಚರ್ಚೆ, ಲೆಕ್ಕಾಚಾರ ಆಗಲೇ ಶುರುವಾಗಿದೆ. ಯಾವ ದಿನ ಯಾರು ಪಾತ್ರಧಾರಿಗಳಾಗಬೇಕು, ಸªಬ್ಧ ಚಿತ್ರಗಳು ಹೇಗಿರಬೇಕು, ವೇಷವು ಹಾದುಹೋಗುವ ದಾರಿ ಯಾವುದು? ಹೀಗೆ…

 ಹೋಳಿ, ಬಣ್ಣದ ಓಕುಳಿಯಲ್ಲಿ ಮಿಂದೇಳುವ ಹಬ್ಬ.  ಬಡವ, ಬಲ್ಲಿದ, ಜಾತಿ-ಮತ ಇದಾವುದರ ಭೇದವಿಲ್ಲದೇ ಎಲ್ಲರೂ ಸೇರಿ ಬಣ್ಣವನ್ನೆರಚಿ ವರ್ಷಕ್ಕೊಮ್ಮೆ ಕೂಡುವ ಒಂದು ವಿಶೇಷ ದಿನ.  ಒಂದಿಷ್ಟು ರಂಗು, ಕೊಂಚ ಅಮಲು, ಸ್ವಲ್ಪ ಮೋಜು ಮತ್ತೂಂದಿಷ್ಟು ಮಸ್ತಿ.  ಈ ರಂಗಿನಹಬ್ಬವೆಂದರೆ ಬರೀ ಇಷ್ಟೇಯಾ… ಅಂತ ಅಂದುಕೊಂಡಿರಾ?  ಇರಿ, ನಿಮಗಿಲ್ಲೊಂದು ಅಚ್ಚರಿ ಇದೆ.  ಹೋಳಿ ಹಬ್ಬ ಎಲ್ಲಕಡೆ ಒಂದು ದಿನದ ಆಚರಣೆಯಾದರೆ, ಶಿರಸಿಯಲ್ಲಿ ಇದು ಐದು ದಿನಗಳ ಸಂಭ್ರಮ. ಇನ್ನೂ ಸರಿಯಾಗಿ ಹೇಳಬೇಕೆಂದರೆ-ಐದು ರಾತ್ರಿಗಳ ಅಚರಣೆ. ಅಷ್ಟೂ ರಾತ್ರಿಗಳು ಊರಿಗೆ ಊರೇ ರಸ್ತೆಯ ಇಕ್ಕೆಲಗಳಲ್ಲಿ ಬಂದು ಕೂತಿರುತ್ತದೆ. ಅಲ್ಲೇ ನಿದ್ದೆ, ಅಲ್ಲೇ ಆಕಳಿಕೆ.  ತಮಟೆಗಳ ಸದ್ದು ಆರ್ಭಟಿಸುತ್ತಾ ಬಂದಾಗ ನಿದ್ದೆ ಕಣ್ಣಿಂದ ಹಾರಿಹೋಗುತ್ತದೆ. ಅದೊಂದು ಥರ ಅಘೋಷಿತ ಜಾಗರಣೆ. ಈ ಹುಚ್ಚು, ಪಡ್ಡೆ ಹುಡುಗರಿಂದ ಹಿಡಿದು ವಯಸ್ಸಾದ ಹಿರಿಯಜ್ಜರವರೆಗೂ ಎಲ್ಲರಿಗೂ ಅಂಟಿಕೊಂಡಿರುತ್ತದೆ. 

Advertisement

ಏನಿದು ಬೇಡರ ವೇಷ? 
ಬೇಡರವೇಷದ ಹಿಂದೆ ಒಂದು ಕಥೆ ಇದೆ.  ಅದು ಸುಮಾರು ಮುನ್ನೂರು ವರ್ಷಗಳ ಹಿಂದಿನ ಮಾತು. ವಿಜಯನಗರದ ಅವಸಾನದ ನಂತರ ಇಂದಿನ ಶಿರಸಿ ಅಂದರೆ, ಆಗಿನ ಕಲ್ಯಾಣಪಟ್ಟಣವೂ ಸೇರಿದಂತೆ ಈ ಭಾಗವು ಸೋಂದೆ ಅರಸರ ಆಳ್ವಿಕೆಯಲ್ಲಿತ್ತು. ಮುಸ್ಲಿಂ ದಂಡುಕೋರರ ಭೀತಿಯ ಹಿನ್ನೆಲೆಯಲ್ಲಿ ಸೋಂದಾ ಅರಸರು ಈ ಭಾಗದ ರಕ್ಷಣೆಗಾಗಿ ಬೇಡ ಜನಾಂಗಕ್ಕೆ ಸೇರಿದ ಮಲ್ಲೇಶಿ ಎಂಬ ಯುವ ವೀರನನ್ನು ನೇಮಿಸಿದ್ದರು. ಅಪ್ರತಿಮ ಸಾಹಸಿಗನಾಗಿದ್ದ ಮಲ್ಲೇಶಿಗೆ ಕ್ರಮೇಣ ಅಧಿಕಾರದ ಮದವೇರಿ ದುರಾಡಳಿತಕ್ಕಿಳಿಯುತ್ತಾನೆ. ಇವೆಲ್ಲದರ ಜೊತೆಗೆ ಸ್ರಿàಲೋಲನೂ ಆಗುತ್ತಾನೆ. ಮಲ್ಲೇಶಿಯ ಪಿಡುಗನ್ನು ತಾಳಲಾರದ ಜನ, ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ರಾತ್ರಿವೇಳೆ ತನ್ನದೇ ಶೈಲಿಯಲ್ಲಿ ತಮಟೆಯ ತಾಳಕ್ಕೆ ನರ್ತಿಸುತ್ತಾ ಊರೆಲ್ಲಾ ಗಸ್ತು ತಿರುಗುವ ಈತನ ಕಣ್ಣು, ಊರಿನ ದಾಸಪ್ಪ ಶೆಟ್ಟಿಯ ಮಗಳು ರುದ್ರಾಂಬಿಕಾಳ ಮೇಲೆ ಬೀಳುತ್ತದೆ. ಇದೇ ಸಂದರ್ಭವನ್ನು ಬಳಸಿಕೊಂಡು ಮಲ್ಲೇಶಿಯನ್ನು ಖೆಡ್ಡಾಕ್ಕೆ ತಳ್ಳುವುದಕ್ಕೆಂದು ಜನರೆಲ್ಲಾ ಸೇರಿ ಯೋಜನೆ ರೂಪಿಸುತ್ತಾರೆ. ಸಮಾಜ ಕಲ್ಯಾಣಕ್ಕಾಗಿ ತನ್ನ ಜೀವನವನ್ನು ಪಣಕ್ಕಿಡಲು ಒಪ್ಪುವ ರುದ್ರಾಂಬಿಕ,ಾ ಮಲ್ಲೇಶಿಯನ್ನು ವರಿಸುತ್ತಾಳೆ. ಹೋಳಿ ಹುಣ್ಣಿಮೆಯ ರಾತ್ರಿ, ಎಂದಿನಂತೆ ಕುಣಿಯುತ್ತಿದ್ದ ಗಂಡನ ಮುಖದ ಮೇಲೆ ಉಪಾಯದಿಂದ ಆಮ್ಲವನ್ನೆರಚಿ, ಆತನನ್ನು ಸುಟ್ಟು, ಜನರಿಗೆ ಹಿಡಿದು ಕೊಡುತ್ತಾಳೆ. ಕಣ್ಣು ಕಾಣದಾದರೂ, ತನ್ನ ಮುಖವನ್ನು ಸುಟ್ಟ ಪತ್ನಿಯನ್ನು ಅಟ್ಟಿಸಿಕೊಂಡು ಹೋಗುವ ಮಲ್ಲೇಶಿಯನ್ನು ಹನ್ನೆರಡು ಜನ ಸೇರಿ, ಕಟ್ಟಿ ಜೀವಂತವಾಗಿ ಸುಟ್ಟು ಹಾಕುತ್ತಾರೆ. ಈ ಚಿತೆಯಲ್ಲೇ ಹಾರಿ ಪ್ರಾಣ ತ್ಯಜಿಸುವ ರುದ್ರಾಂಬಿಕಾಳ ಬಲಿದಾನದ ನೆನಪಿಗಾಗಿ ಹೋಳಿಹಬ್ಬದಂದು ಬೇಡರ ವೇಷವನ್ನು ಹಾಕುತ್ತಾರೆ. ಮುಖಸುಟ್ಟ ಕೆಂಪು ಮುಖದ ಬೇಡ, ಅವನನ್ನು ಕಟ್ಟಿ ಎಳೆದಾಡುವ ಸ್ಥಳೀಯರು ,  ಬಾಯಿ ಬಡಿದುಕೊಳ್ಳುವ ದುರ್ಗಾಂಬಿಕಾ, ಹೀಗೆ ಈ ಕಥೆಯ ಅನೇಕ ಪಾತ್ರಗಳನ್ನು ಇಂದಿಗೂ ಇಲ್ಲಿ ಕಾಣಬಹುದು . 

ಎರಡು ವರ್ಷಕ್ಕೊಮ್ಮೆ ಹೋಳಿ
 ಶಿರಸಿಯಲ್ಲಿ ಹೋಳಿ ಉತ್ಸವ ನಡೆಯುವುದು ಎರಡು ವರ್ಷಕ್ಕೊಮ್ಮೆ . ಕರ್ನಾಟಕದ ಅತಿ ದೊಡ್ಡ ಜಾತ್ರೆಯೆಂದೇ ಪ್ರಸಿದ್ಧವಾಗಿರುವ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯ ಮಧ್ಯದ ವರ್ಷದಲ್ಲಿ ಹೋಳಿ ಹಬ್ಬ ಬರುತ್ತದೆ.
 ರಾತ್ರಿಯಾಗುತ್ತಿದ್ದಂತೆ ಶಿರಸಿಯ ಗಲ್ಲಿ ಗಲ್ಲಿಗಳಿಂದ ಹೊರಡುವ ಬೇಡರು ರಸ್ತೆಗಳಲ್ಲಿ ಅಬ್ಬರಿಸುತ್ತಾರೆ. ಕೊನೆಯ ದಿನ, ಅಂದರೆ-ಹುಣ್ಣಿಮೆಯ ಮುನ್ನಾದಿನದ ರಾತ್ರಿ ಸರಿಸುಮಾರು 50ಕ್ಕೂ ಹೆಚ್ಚು ಬೇಡರ ವೇಷದ ತಂಡಗಳು ಬೀದಿಗಳನ್ನು ಆಕ್ರಮಿಸಿಕೊಳ್ಳುತ್ತವೆ. ಸಮಾಧಾನದ ವಿಷಯವೇನೆಂದರೆ, ಇತರ ಜಾನಪದ ಪ್ರಾಕಾರಗಳ ಪರಿಸ್ಥಿತಿಗೆ ವಿರುದ್ಧವಾಗಿ ಈ ಬೇಡರ ವೇಷಕ್ಕೆ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೆಚ್ಚುತ್ತಿದೆ ಎಂಬುದನ್ನು ರಾತ್ರಿಯೆಲ್ಲ ನಿದ್ದೆಗೆಟ್ಟು ರಸ್ತೆಯಲ್ಲಿ ಕಿಕ್ಕಿರಿದು ಸೇರುವ ಜನಸಂದಣಿಯೇ ಹೇಳುತ್ತದೆ. ಸಮಯಕ್ಕನುಗುಣವಾಗಿ ಈ ವೇಷವೂ ಹಲವು ಮಾರ್ಪಾಟುಗಳನ್ನು ತನ್ನಲ್ಲಿ ಸೇರಿಸಿಕೊಂಡಿದೆ. ದೊಡ್ಡ ವಾಹನಗಳಲ್ಲಿ ಬೇಡನನ್ನು ಹಿಂಬಾಲಿಸುವ ಸ್ಥಬ್ಧಚಿತ್ರಗಳು, ಗುಂಪಿನಲ್ಲಿ ಧುತ್ತನೆ ಪ್ರತ್ಯಕ್ಷವಾಗುವ ಛದ್ಮವೇಷಧಾರಿಗಳು ಇವೆಲ್ಲಕ್ಕೆ ಇತ್ತೀಚಿನ ಸೇರ್ಪಡೆಯೆಂದರೆ ಡಿ.ಜೆ. ಸಂಗೀತ. ಇದರ ಆರ್ಭಟದಲ್ಲಿ ಬೇಡನ ನೃತ್ಯವನ್ನು ಮರೆಮಾಚುತ್ತಿದೆ ಎಂಬುದು ಕೆಲವರ ವಾದವಾದರೆ, ಸಾಂಪ್ರದಾಯಿಕ ನೃತ್ಯದಲ್ಲಿ ತಮ್ಮದೇ ಶೈಲಿಯನ್ನು ಅಳವಡಿಸಿ ಕೆಲವು ವೇಷಧಾರಿಗಳು ಬೇಡನ ನೃತ್ಯವನ್ನು ಕುಲಗೆಡಿಸುತ್ತಿದ್ದಾರೆಂಬುದು ಇನ್ನೂ ಕೆಲವರ ಅಂಬೋಣ.

ಇವೆಲ್ಲದರ ನಡುವೆಯೂ,  ಈ ಬೇಡರ ವೇಷವು ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.  ದೂರದೂರಿನಲ್ಲಿರುವ ಶಿರಸಿ ಮೂಲದವರಿಗೆ ತಮ್ಮೂರಿಗೆ ಬರಲು ಇದೊಂದು ನೆಪ ಕೂಡ. ಅಷ್ಟಕ್ಕೂ, ಬೇಡರ ವೇಷದ ಗುಂಗು ಶಿರಸಿಯ ಹೋಳಿಯ ರಂಗಿಗೆ ಇನ್ನಷ್ಟು ಮೆರುಗನ್ನು ನೀಡಿ ಆಕರ್ಷಿಸುತ್ತಿದೆ. ಹೀಗಾಗಿ, ನೀವು ಬನ್ನಿ.  ಆಮೇಲೆ ಹೇಗಿದ್ದರೂ ಸಂಸಾರದ ಜಂಜಾಟದಲ್ಲಿ ಇದ್ದೇ ಇದೆಯಲ್ಲ ಡಕ್ಕಣಕ ಡಕ್ಕಣಕ. 

 ವೇಷಕ್ಕೆ 40 ಸಾವಿರ ಖರ್ಚು
ಬೇಡರವೇಷ ಹಾಕುವುದರ ಜೊತೆಗೆ ಒಂದು ಬಂಡಿ ( ಸ್ಥಬ್ಧ ವೇಷ) ಗೆ ಸುಮಾರು ನಲವತ್ತು ಸಾವಿರದ ರೂಪಾಯಿಯಷ್ಟು ಖರ್ಚಾಗುತ್ತದೆ. ಇತ್ತೀಚೆಗೆ ಅಲಂಕಾರಕ್ಕೆಂದು ಹೆಚ್ಚು ಹೆಚ್ಚು ನವಿಲುಗರಿಗಳ ಗುತ್ಛವನ್ನು ಬಳಸುತ್ತಿದ್ದಾರೆ. ” ಒಮ್ಮೆ  ಈ ರೀತಿ ಬಳಕೆಯಾದ ನವಿಲುಗರಿಗಳನ್ನು ಎರಡು ವರ್ಷಗಳವರೆಗೆ ಕಾಪಿಟ್ಟುಕೊಳ್ಳುವುದೇ ಒಂದು ದೊಡ್ಡ ಸವಾಲು. ಕೀಟಬಾಧೆ , ತೇವಾಂಶದಿಂದ ಗರಿಗಳ ಆಯಸ್ಸು ಕಡಿಮೆಯಾಗಿ ಪುಡಿಯುದುರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಹೆಚ್ಚು ಕಾಳಜಿಯಿಂದ ಸಂಭಾಳಿಸಬೇಕು ಎನ್ನುತ್ತಾರೆ ಇಪ್ಪತ್ತೆ„ದು ವರ್ಷಗಳಿಂದ ಬೇಡನ ಪ್ರಸಾಧನದಲ್ಲಿ ತೊಡಗಿಸಿಕೊಂಡಿರುವ  ಶಿರಸಿಯ ಕಲಾವಿದ ಈ ಮೋಹನ ಆಚಾರಿ. 

  ಉಮೇದಿಗೆ ಬೇಡನ ವೇಷ ಹಾಕಬಹುದು. ಆದರೆ, ಅದರೊಂದಿಗೆ ಹದಿನೈದರಿಂದ ಇಪ್ಪತ್ತು ಕಿ.ಮೀಯಷ್ಟು ಹೆಜ್ಜೆಹಾಕುವುದು ಸುಲಭವಲ್ಲ. ಹೋಳಿ ಹಬ್ಬ ಬರುವುದೇ ಸುಡು ಬೇಸಿಗೆಯಲ್ಲಾದ್ದರಿಂದ ಬೇಡ ವೇಷಧಾರಿಗೆ ಮೈತುಂಬ ಬೆವರ ಸ್ನಾನವಾಗುತ್ತದೆ.  ಈ ಕಾರಣಕ್ಕಾಗಿಯೇ ಮುಖಕ್ಕೆ ಆಯಿಲ್‌ ಪೇಂಟ್‌ ಬಳಿಯುತ್ತಾರೆ. ಸಂಯಮ ಬೇಡುವ ಈ ಪ್ರಸಾಧನಕ್ಕೆ ಸುಮಾರು ಮೂರರಿಂದ ನಾಲ್ಕು ಘಂಟೆ ಸಮಯ ಹಿಡಿಯುತ್ತದೆ. 

ಬೇಡರ ವೇಷಹಾಕಿಕೊಳ್ಳಲು ಶಿರಸಿಯ ಗಲ್ಲಿಗಲ್ಲಿಗಳಲ್ಲಿ ಸಾಕಷ್ಟು ಜನ ಕಾಯುತ್ತಿರುತ್ತಾರೆ. ಬಾಲ್ಯದಿಂದಲೇ ಈ ನೃತ್ಯವನ್ನು ನೋಡಿ ಬೆಳೆದಿರುವುದರಿಂದ ಇಲ್ಲಿಯವರಿಗೆ ಈ ಹೆಜ್ಜೆ ಹಾಕುವುದು ಕರತಲಾಮಲಕ. ಹತ್ತು ಹದಿನೈದುವರ್ಷಗಳಿಂದ ಬೇಡರ ವೇಷವನ್ನು ಹಾಕಿಕೊಂಡು ಬಂದವರೂ ಇಲ್ಲಿದ್ದಾರೆ. ವೇಷವನ್ನು ಹೊತ್ತು ಊರು ತುಂಬ ಸಂಚರಿಸಲು ದೈಹಿಕ, ಮಾನಸಿಕ ಸ್ಥೈರ್ಯ ಬೇಕಿರುವುದರಿಂದ ಯುವಕರೇ ಹೆಚ್ಚಾಗಿ ಭಾಗವಹಿಸುತ್ತಾರೆ. ಸಮಾಜದ ಎಲ್ಲ ವರ್ಗದ ಜನರೂ ಇಲ್ಲಿ ಪಾಲ್ಗೊಳ್ಳುವುದರಿಂದ ಇದೊಂದು ಸಾಮಾಜಿಕ ಸಹಬಾಳ್ವೆಯ ಹಬ್ಬವೂ ಆಗಿದೆ. 

ಲೇಖನ: ಸುನೀಲ ಬಾರ್ಕೂರ್‌
ಚಿತ್ರಗಳು: ಗೋಪಾಲ್‌ ಬಾರ್ಕೂರ್‌ , ಕಿರಣ ಹಾಣಜಿ     

Advertisement

Udayavani is now on Telegram. Click here to join our channel and stay updated with the latest news.

Next