Advertisement

ಆ.1ರಿಂದ ರಾಜ್ಯದೆಲ್ಲೆಡೆ ‘ಮತ್ತೆ ಕಲ್ಯಾಣ’ಅಭಿಯಾನ: ಪಂಡಿತಾರಾಧ್ಯ ಶ್ರೀ

11:55 AM Jul 20, 2019 | Naveen |

ಸಿರಿಗೆರೆ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಆ.1ರಿಂದ 30ರವರೆಗೆ ನಡೆಯಲಿರುವ ‘ಮತ್ತೆ ಕಲ್ಯಾಣ’ದಲ್ಲಿ ಸಮಾಜದ ಎಲ್ಲಾ ವರ್ಗದ ಸಮುದಾಯದವರು ಆಸಕ್ತಿಯಿಂದ ಭಾಗವಹಿಸಬೇಕೆಂಬುದು ತಮ್ಮ ಆಶಯವಾಗಿದೆ ಎಂದು ಸಾಣೆಹಳ್ಳಿ ತರಳಬಾಳು ಜಗದ್ಗುರು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

Advertisement

ಜಿಲ್ಲೆಯಲ್ಲಿ ಆ.15 ರಂದು ನಡೆಯಲಿರುವ ಮತ್ತೆ ಕಲ್ಯಾಣ ಸಮಾವೇಶದ ವಿಚಾರವಾಗಿ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಮತ್ತೆ ಕಲ್ಯಾಣ ಆಚರಣೆಯಲ್ಲಿ ಅಲ್ಲಮಪ್ರಭುವಿನ ಶಿವಾಚಾರದ ಧ್ವಜವನ್ನು ಬಳಸಿಕೊಳ್ಳಬಹುದಲ್ಲದೆ ಬೇರೆ ಯಾವುದೇ ಸಿದ್ಧಾಂತಗಳ ಧ್ವಜಗಳನ್ನು ಬಳಸಿಕೊಳ್ಳಬಾರದು. ಇದು ತತ್ವಗಳ ಹಾಗೂ ಶರಣ ಸಂಸ್ಕೃತಿಯನ್ನು ಅನಾವರಣಗೊಳ್ಳುವ ಮೇಳವಾಗಬೇಕಲ್ಲದೆ ಯಾವುದೇ ಕುಂಭಮೇಳದ ಸಮಾವೇಶವಾಗಬಾರದು ಎಂದರು.

ಕಲ್ಯಾಣವೆಂಬುದು ವಿಶಿಷ್ಟವಾದ ಅರಿವಿನ ನಡಿಗೆಯಾಗಿತ್ತು. ಸಮಾಜದ ಎಲ್ಲಾ ಸಮುದಾಯಗಳ, ಕಸುಬುಗಳಿಗೆ ಸೇರಿದ್ದ ಸಾಮಾನ್ಯರು ಅಸಮಾನ್ಯವಾದ ಪಾಠಗಳನ್ನು ಜಗತ್ತಿಗೆ 12ನೇ ಶತಮಾನದಲ್ಲಿ ಕಲಿಸಿದರು. ಅದ್ಭುತವಾದ ಸಂಗತಿಗಳನ್ನು ಸರಳವಾದ ಕನ್ನಡ ಭಾಷೆಯಲ್ಲಿ ವಚನಗಳ ಮೂಲಕ ಕ್ರೋಢೀಕರಿಸಿದರು. ಜಗತ್ತನ್ನು ಇಂದು ಬಾಧಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಅರಿವು, ಆಚಾರ, ಅನ್ನದಾಸೋಹ ಮತ್ತು ಕಾಯಕಗಳ ಮೂಲಕ ಪರಿಹಾರವನ್ನು ಸೂಚಿಸಿದರು.

ವಿದ್ಯಾರ್ಥಿಗಳಿಗೆ ಸಂವಾದ: ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಜಿಲ್ಲೆಗಳಲ್ಲಿಯೂ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಗೋಷ್ಠಿಯನ್ನು ಏರ್ಪಡಿಸಲಾಗುವುದು. ಸಂವಾದ ಗೋಷ್ಟಿಗೆ ಮಾರ್ಗದರ್ಶಕವಾಗುವಂತಹ ‘ಮತ್ತೆ ಕಲ್ಯಾಣ’ ಕೈಪಿಡಿಯನ್ನು ಪ್ರಕಟಿಸಲಾಗಿದ್ದು, ಈ ಕೃತಿ ಸಂವಾದಕ್ಕೆ ಮಾರ್ಗದರ್ಶಿಯಾಗಲಿದೆ ಎಂದರು.

ಚಿತ್ರದುರ್ಗದಲ್ಲಿ ಆ.15ರಂದು ಮತ್ತೆ ಕಲ್ಯಾಣ: ಹಿಂದಿನ ದಿನ ತುಮಕೂರಿನ ಕಾರ್ಯಕ್ರಮ ಮುಗಿಸಿಕೊಳ್ಳುವ ಪಂಡಿತಾರಾಧ್ಯ ಶ್ರೀಗಳವರು ಆ.15ರಂದು ಚಿತ್ರದುರ್ಗಕ್ಕೆ ಬೆಳಗ್ಗೆ 9 ಗಂಟೆಗೆ ಆಗಮಿಸಲಿದ್ದಾರೆ. ರಾಷ್ಟ್ರದ ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ಹೊಳಲ್ಕೆರೆ ರಸ್ತೆಯಲ್ಲಿರುವ ಸಂಪಿಗೆ ಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಬೆಳಿಗ್ಗೆ 9.15ಕ್ಕೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡುವರು.

Advertisement

ಸಾಮರಸ್ಯ ನಡಿಗೆಯ ಸಂದರ್ಭದಲ್ಲಿ ವಿಶೇಷವಾಗಿ ವೀರಗಾಸೆ ಮತ್ತು ಡೊಳ್ಳು ಪ್ರದರ್ಶನ ಏರ್ಪಡಿಸಲಾಗುವುದು ಎಂದು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಂ. ವೀರೇಶ್‌ ತಿಳಿಸಿದರು. ಕಾಂಗ್ರೆಸ್‌ ಮುಖಂಡ ಜಿ.ಎಸ್‌. ಮಂಜುನಾಥ, ಉದ್ಯಮಿ ತಾಜ್‌ಪೀರ್‌, ಶ್ಯಾಮಲಾ, ರಾಕ್‌ಪೋರ್ಟ್‌ ದ್ಯಾಮಣ್ಣ, ಪತ್ರಕರ್ತ ಚಿತ್ರಲಿಂಗಪ್ಪ, ಪ್ರಗತಿಪರ ಕೃಷಿಕ ಶಿವನಕೆರೆ ಶಿವಪ್ರಸಾದ, ಬಾಳೆಕಾಯಿ ರಾಜು, ಉದ್ಯಮಿ ಐಗಳ ರುದ್ರೇಶ್‌ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next