Advertisement

ಗ್ರಾಹಕರ ವಂಚನೆ ಪ್ರಕರಣ ಹೆಚ್ಚಳ ಆತಂಕಕಾರಿ

03:17 PM Jul 15, 2019 | Team Udayavani |

ಸಿಂಧನೂರು: ಗ್ರಾಹಕರ ಠೇವಣಿ ದೋಚುವ ಪ್ರಕರಣಗಳು ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ನಿಗಾ ವಹಿಸಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ನಿರ್ದೇಶಕ ಆರ್‌.ತಿಮ್ಮಯ್ಯಶೆಟ್ಟಿ ಹೇಳಿದರು.

Advertisement

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರು, ಕಲಬುರಗಿ ಪ್ರಾಂತೀಯ ಕಚೇರಿ ವತಿಯಿಂದ ರಾಯಚೂರು ಜಿಲ್ಲೆಯ ಸಿಂಧನೂರು, ಲಿಂಗಸುಗೂರು ಮತ್ತು ಮಸ್ಕಿ ತಾಲೂಕುಗಳ ಸೌಹಾರ್ದ ಸಹಕಾರಿಗಳಿಗಾಗಿ ನಗರದ ವಿನಯ ರೆಸಿಡೆನ್ಸಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಷಯಾಧಾರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ದೇಶಾದ್ಯಂತ ಸಾರ್ವಜನಿಕರಿಂದ ಅಪಾರ ಮೊತ್ತದ ಠೇವಣಿ ಪಡೆದು ಜನರಿಗೆ ವಂಚನೆ ಮಾಡಿ ಕಣ್ಮರೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಠೇವಣಿದಾರರ ಹಿತರಕ್ಷಣೆಗೆ ಸೂಕ್ತ ಕಾಯ್ದೆ, ವ್ಯವಸ್ಥೆ ಇಲ್ಲದಿರುವುದರ ಕಾರಣವನ್ನು ಸರ್ಕಾರ ಗಮನಿಸಿದೆ. ವಂಚಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಪ್ರಸ್ತುತ ಕಾನೂನುಗಳಲ್ಲಿನ ಲೋಪದೋಷಗಳ ದುರ್ಲಾಭ ಪಡೆಯುತ್ತಿರುವುದನ್ನು ಹಾಗೂ ಬೇರೆ ಬೇರೆ ನಿಯಂತ್ರಕ ಸಂಸ್ಥೆಗಳ ನಡುವಿನ ಸಾಮರಸ್ಯದ ಕೊರತೆ, ಬೇರೆ ಬೇರೆ ರಾಜ್ಯಗಳ ನಡುವಿನ ಸಾಮರಸ್ಯದ ಕೊರತೆಗಳು, ವಂಚಕರು ಸುಲಭವಾಗಿ ಕಾನೂನಿನ ಹಿಡಿತಕ್ಕೆ ಸಿಗದೆ ಇರುವುದು ಮತ್ತು ವಂಚನೆಗೊಳಗಾದ ಜನರಿಗೆ ಸೂಕ್ತ ನ್ಯಾಯ ಸಿಗದಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.

ನಿರ್ದೇಶಕ ಬಿ.ರಾಜಶೇಖರ ಮಾತನಾಡಿ, ಈ ಸುಗ್ರೀವಾಜ್ಞೆ ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸುವ ಠೇವಣಿಗಳನ್ನು ಎರಡು ಭಾಗವಾಗಿ ವಿಂಗಡಿಸಿದೆ. ಒಂದು ನಿಯಂತ್ರಿತ ಠೇವಣಿಗಳು, ಇನ್ನೊಂದು ಅನಿಯಂತ್ರಿತ ಠೇವಣಿಗಳು. ಸುಗ್ರೀವಾಜ್ಞೆಯ ಮೊದಲನೆಯ ಶೆಡ್ಯೂಲ್ನಲ್ಲಿ ನಿಯಂತ್ರಿತ ಠೇವಣಿ ಯೋಜನೆಗಳ ಮತ್ತು ಅಂತಹ ಪ್ರತಿಯೊಂದು ಯೋಜನೆಗಳ ನಿಯಂತ್ರಣ ಪ್ರಾಧಿಕಾರಗಳ ಪಟ್ಟಿಯನ್ನು ನೀಡಲಾಗಿದೆ ಎಂದು ವಿವರಿಸಿದರು. ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧಿಸಲು ಸುಗ್ರೀವಾಜ್ಞೆ-2019 ವಿಷಯ ಕುರಿತು ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಸಂಘಗಳ ನಿಯಮಿತ ಉಪ ಪ್ರಧಾನ ವ್ಯವಸ್ಥಾಪಕ ಶ್ರೀಕಾಂತ ಬರುವೆ, ಸೌಹಾರ್ದ ದಾವಾ ಪಂಚಾಯತಿ ನ್ಯಾಯಾಲಯದಲ್ಲಿ ದಾವೆಗಳನ್ನು ದಾಖಲಿಸುವ ದಾವಾ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳ ಕುರಿತು ಸಹ ಪ್ರಧಾನ ವ್ಯವಸ್ಥಾಪಕ ಶ್ರೀಧರ ಮಾತನಾಡಿದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತರಬೇತಿ ಉದ್ಘಾಟಿಸಿದರು. ಜಿಲ್ಲಾ ಸಂಯೋಜಕ ವೆಂಕಟೇಶ ರಾಠೊಡ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next