Advertisement

ಸರಳ ಯೋಗಾಸನ : ದೈಹಿಕ, ಮಾನಸಿಕ ಚಟುವಟಿಕೆಗಳು ಸರಾಗ

12:15 AM Jun 20, 2021 | Team Udayavani |

ಕೋವಿಡ್‌-19 ಎನ್ನುವುದು ಒಂದು ಸೋಂಕು ರೋಗ. ಈ ರೋಗದ ಬಗ್ಗೆ ನಾವು ಅತಿಯಾದ ಕಾಳಜಿ ವಹಿಸಬೇಕಾಗಿದೆ. ಈ ಸೋಂಕು ತಗಲಿದ ಬಹುತೇಕ ಜನರಿಗೆ ಏರು ಜ್ವರ, ಒಣ ಕೆಮ್ಮು ಮತ್ತು ಸುಸ್ತು ಸಾಮಾನ್ಯ. ಕೆಲವರಿಗೆ ಮೈ-ಕೈ ನೋವು, ಉಸಿರಾಟದ ತೊಂದರೆ, ಸ್ನಾಯು, ಸಂಧಿಗಳ ನೋವು, ಗಂಟಲು ನೋವು, ತಲೆನೋವು, ಚಳಿ ಮತ್ತು ಒಮ್ಮೊಮ್ಮೆ ಭೇದಿ ಕೂಡ ಕಾಣಿಸುತ್ತದೆ.

Advertisement

ಮಧುಮೇಹ, ಹೃದಯದ ತೊಂದರೆ ಗಳು, ಶ್ವಾಸಕೋಶದ ತೊಂದರೆಗಳು ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವಂಥವರಲ್ಲಿ ಪರಿಣಾಮ ಹೆಚ್ಚು. ಕೆಲವರು ನ್ಯುಮೋನಿಯಾದಂಥ ಬಲು ತೀವ್ರವಾದ ಸಂಕಟದಿಂದ ನರಳುತ್ತಾರೆ. ಸೋಂಕು ತಗಲಿ ಸಂಪೂರ್ಣ ಚಿಕಿತ್ಸೆಯ ಅನಂತರ ಅನೇಕ ಜನರು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಖನ್ನತೆಗೆ ಒಳಗಾಗುತ್ತಾರೆ.

ಚಿಕಿತ್ಸೆಯ ಅನಂತರ ನಮ್ಮ ಜೀವನ ಶೈಲಿಯನ್ನು, ಆಹಾರ ಕ್ರಮವನ್ನು ಬದಲಾಯಿ ಸುವುದು ಸೂಕ್ತವಾಗಿರುತ್ತದೆ. ದೈಹಿಕವಾಗಿ, ಮಾನಸಿಕವಾಗಿ ದೈನಂದಿನ ಚಟುವಟಿಕೆಗಳನ್ನು ಸರಳವಾಗಿ ನಿರ್ವಹಿಸಲು ಯೋಗಾಭ್ಯಾಸವು ಅತೀ ಆವಶ್ಯಕವಾಗಿದೆ.
ಯೋಗವೆಂಬುದು ಕೇವಲ ವ್ಯಾಯಾಮದಲ್ಲಿ ಅದೊಂದು ಜೀವನಶೈಲಿ. ಯೋಗ ಭಾರತದ 4,000 ವರ್ಷಗಳಷ್ಟು ಹಿಂದಿನ ಪುರಾತನ ತಣ್ತೀ. ಯೋಗದ ಪ್ರಕಾರ ದೇಹವು ಪಂಚಕೋಶಗಳಿಂದ ಮಾಡಲ್ಪಟ್ಟಿದೆ. ಅವುಗಳೆಂದರೆ ಅನ್ನಮಯಕೋಶ, ಪ್ರಾಣಮಯ ಕೋಶ, ಮನೋಮಯಕೋಶ, ವಿಜ್ಞಾನಮಯಕೋಶ ಹಾಗೂ ಆನಂದಮಯಕೋಶ. ಈ ಪಂಚಕೋಶಗಳಲ್ಲಿ ಉಂಟಾದ ಆರೋಗ್ಯದ ವ್ಯತ್ಯಾಸವನ್ನು ಯೋಗ ಚಿಕಿತ್ಸೆಯ (ಇಂಟಿಗ್ರೇಟೆಡ್‌ ಅಪ್ರೋಚ್‌ ಆಫ್ ಯೋಗ ಥೆರಪಿ) ಮೂಲಕ ಗುಣಪಡಿಸಬಹುದು.

ವಿಭಾಗೀಯ ಪ್ರಾಣಾಯಾಮ
ವಿಭಾಗೀಯ ಪ್ರಾಣಾಯಾಮದಲ್ಲಿ ಮೂರು ಹಂತಗಳಿವೆ. ಮೊದಲನೆಯದಾಗಿ ಉದರ ಭಾಗದ ಉಸಿರಾಟದ ಕ್ರಿಯೆ. ಎದೆಯ ಭಾಗದ ಉಸಿರಾದ ಕ್ರಿಯೆ, ಮೂರನೆಯದಾಗಿ ಭುಜಭಾಗದ ಉಸಿರಾಟ ಕ್ರಿಯೆ. ಈ ಎಲ್ಲ ಅಭ್ಯಾಸಗಳನ್ನು ಅ. ಉ. ಮ ಕಾರದೊಂದಿಗೆ ಅಭ್ಯಾಸ ಮಾಡುವುದರಿಂದ ಅನೇಕ ಉಪಯೋಗಗಳನ್ನು ಪಡೆಯಬಹುದು.
-  ಮಾನಸಿಕ ಒತ್ತಡ ನಿವಾರಣೆಗೊಳ್ಳುತ್ತದೆ.
-  ಉಸಿರಾಟದ ಕ್ರಿಯೆ ಸುಧಾರಣೆಯಾಗುತ್ತದೆ.
-  ಉರಿಯೂತ ಕಡಿಮೆಯಾಗುವುದರೊಂದಿಗೆ ದೇಹಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಕಪಾಲಭಾತಿ ಪ್ರಾಣಾಯಾಮ: ಶ್ವಾಸಕೋಶಗಳನ್ನು ಬಲಗೊಳಿ ಸುವುದು ಈ ಪ್ರಾಣಾಯಾಮದ ಅತೀ ಪ್ರಮುಖ ಪ್ರಯೋಜನವಾಗಿದೆ. ಅಧಿಕ ರಕ್ತದೊತ್ತಡ ಇರುವವರು ಈ ಅಭ್ಯಾಸವನ್ನು ಮಾಡಬಾರದು.

ನಾಡಿ ಶೋಧನ ಪ್ರಾಣಾಯಾಮ: ಈ ಪ್ರಾಣಾಯಾಮದ ಅಭ್ಯಾಸದಿಂದ ಹೃದಯನಾಗಳ ಆರೋಗ್ಯ ಸುಧಾರಣೆ, ಅಧಿಕ ರಕ್ತದೊತ್ತಡ ನಿಯಂತ್ರಣ, ಶ್ವಾಸಕೋಶಗಳ ಬಲವರ್ಧನೆ, ಖನ್ನತೆ ನಿವಾರಕ ಹೀಗೆ ಹಲವಾರು ಉಪಯೋಗಗಳನ್ನು ಪಡೆಯಬಹುದು.

Advertisement

ಭ್ರಾಮರಿ ಪ್ರಾಣಾಯಾಮ: ಭ್ರಮರ ಎಂದರೆ ಜೇನುದುಂಬಿ, ಜೇನು ನೋಣದ ಝೇಂಕಾರ ಶಬ್ಧವನ್ನು ಮಾಡುವ ಕಾರಣ ಈ ಪ್ರಾಣಾಯಾಮಕ್ಕೆ ಭ್ರಾಮರಿ ಎಂಬ ಹೆಸರು. ಈ ಪ್ರಾಣಾಯಾಮ ಮಾಡುವುದರಿಂದ ನಿದ್ರಾಹೀನತೆ ನಿವಾರಣೆಗೊಳ್ಳುತ್ತದೆ. ಮೆದುಳಿಗೆ ಮತ್ತು ಮನಸ್ಸಿಗೆ ಶಾಂತಿ ದೊರೆಯುತ್ತದೆ.

ಸೂಕ್ತ ಯೋಗಾಭ್ಯಾಸಗಳು
ಕೋವಿಡ್‌-19 ಸೋಂಕಿನಲ್ಲಿ ಗುಣಮುಖವಾದ ಅನೇಕ ಜನರಲ್ಲಿ ಆರೋಗ್ಯದ ಬದಲಾವಣೆಯನ್ನು ಕಾಣಬಹುದು. ಮಾನಸಿಕ ಒತ್ತಡ ನಿವಾರಣೆ ಹಾಗೂ ವಿವಿಧ ಮಾನವ ಕ್ರಿಯಾತ್ಮಕ ವ್ಯವಸ್ಥೆಯನ್ನು (ಹ್ಯೂಮನ್‌ ಫ‌ಂಕ್ಷನಲ್‌ ಸಿಸ್ಟಮ್‌) ವೃದ್ಧಿಸಿಕೊಳ್ಳಲು ಈ ಕೆಳಗಿನ ಯೋಗಾಭ್ಯಾಸವನ್ನು ಮಾಡುವುದು ಸೂಕ್ತ.

1. ತಾಡಾಸನ: ನಿಂತು ಮಾಡುವ ಆಸನಗಳಲ್ಲಿ ಒಂದಾದ ತಾಡಾಸನ ಸುಲಭವಾಗಿ ಅಭ್ಯಾಸ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಪಡೆಯ ಬಹುದು. ಈ ಆಸನ ಅಭ್ಯಾಸ ಮಾಡುವು ದರಿಂದ ದೇಹದ ಸಮತೋಲನವನ್ನು ಕಾಪಾಡಿಕೊಳ್ಳಬಹುದು.

2. ವೀರಭದ್ರಾಸನ: ನಿಂತು ಮಾಡುವ ಆಸನಗಳಲ್ಲಿ ಒಂದಾದ ವೀರಭದ್ರಾಸನವು ಎದೆಯ ಭಾಗವನ್ನು ವಿಸ್ತರಣೆ ಮಾಡುವ ಮೂಲಕ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

3. ಸರಳ ಭುಜಂಗಾಸನ: ಭುಜಂಗ ಎಂದರೆ ಹೆಡೆ ಎತ್ತಿದ ಸರ್ಪ; ಈ ಆಸನವನ್ನು ಅಭ್ಯಾಸ ಮಾಡುವುದರಿಂದ ಬೆನ್ನು, ಎದೆ, ಹೊಟ್ಟೆ ಭಾಗದ ನರಗಳನ್ನು ಬಲಪಡಿಸಬಹುದು ಹಾಗೂ ಹೃದಯ ಮತ್ತು ಶ್ವಾಸಕೋಶಗಳು ಚೈತನ್ಯಗೊಳ್ಳುವುದು. ಉಸಿರಾಟದ ಕ್ರಿಯೆ ಸರಾಗವಾಗಿ ನಡೆಯುವುದು.

4. ಅರ್ಧ ಉಷ್ಟ್ರಾಸನ: ಈ ಆಸನ ಅಭ್ಯಾಸದಿಂದ ಜೀರ್ಣಕ್ರಿಯೆಯು ಹಾಗೂ ಉಸಿರಾಟ ಕ್ರಿಯೆಯು ಸುಧಾರಣೆಗೊಳ್ಳುತ್ತದೆ.

– ಡಾ| ಕುಸುಮಾ ಎ.ಎಸ್‌., ಎಸ್‌ಯುವೈಎಎಸ್‌ಎ ಸಹಾಯಕ ಉಪನ್ಯಾಸಕಿ

Advertisement

Udayavani is now on Telegram. Click here to join our channel and stay updated with the latest news.

Next