Advertisement

ಇರುವುದೆಲ್ಲವ ಬಿಟ್ಟು ಸಿಂಬು ಬರ್ತಾರೆ!

11:02 AM May 23, 2018 | |

ಇತ್ತೀಚೆಗಷ್ಟೇ ಕಾವೇರಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ತಮಿಳು ನಟ ಸಿಂಬು “ಕನ್ನಡಿಗರು ನಮ್ಮ ಅಣ್ಣತಮ್ಮಂದಿರು ಇದ್ದಂಗೆ. ನಾವು ಕೇಳಿದರೆ “ಒಂದು ಲೋಟ ನೀರು’ ಕೊಡುವುದಿಲ್ಲವೇ? ನಮ್ಮ ನಮ್ಮಲ್ಲಿ ಯಾಕೆ ಕಿತ್ತಾಟ, ನೀವು ಒಂದೇ ಒಂದು ಗ್ಲಾಸ್‌ ನೀಡು ಕೊಟ್ಟರೂ ಸಾಕು’ ಎಂದು ಹೇಳಿಕೆ ನೀಡುವುದರ ಮೂಲಕ ಭಾರೀ ಸುದ್ದಿಯಾಗಿದ್ದರು. 

Advertisement

ಅಲ್ಲದೆ, ಕನ್ನಡದ “ಇರುವುದೆಲ್ಲವ ಬಿಟ್ಟು’ ಚಿತ್ರಕ್ಕೆ ಮೊದಲ ಸಲ ಹಾಡಿದ್ದಾರೆ ಎಂಬ ಸುದ್ದಿಯನ್ನು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಹಾಡು ಹಾಡಿ, ಚಿತ್ರತಂಡವನ್ನು ಪ್ರೋತ್ಸಾಹಿಸಿದ್ದ ಸಿಂಬು, ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬರುವುದಾಗಿಯೂ ಹೇಳಿದ್ದರು. ಈಗ ಸಿಂಬು ಮೇ. 25 ರ ಶುಕ್ರವಾರ ಸಂಜೆ ನಡೆಯಲಿರುವ “ಇರುವುದೆಲ್ಲವ ಬಿಟ್ಟು’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬರುತ್ತಿದ್ದಾರೆ.

ನಿರ್ದೇಶಕ ಕಾಂತರಾಜ್‌ ಕನ್ನಲ್ಲಿ ಮತ್ತು ಸಂಗೀತ ನಿರ್ದೇಶಕ ಶ್ರೀಧರ್‌ ವಿ.ಸಂಭ್ರಮ್‌ ಅವರು ಇತ್ತೀಚೆಗೆ ಚೆನ್ನೈಗೆ ತೆರಳಿ, ಸಿಂಬು ಅವರಿಂದ ಹಾಡನ್ನು ಹಾಡಿಸಿಕೊಂಡು ಬಂದಿದ್ದರು. ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್‌ ಬರೆದ “ಊರ ಸುದ್ದಿ ಕೇಳ್ತಾ ಇರುವೆ, ಎಲ್ಲರಿಗೂ ಹೇಳ್ತಾ ಇರುವೆ, ನಿಂದು ಸ್ವಲ್ಪ ಸೇರ್ಸುತ್ತಿರುವೆ, ಯಾಕೆ ಬಿಟ್ಟುಕೊಳ್ತೀ ಇರುವೆ…’ ಎಂಬ ಹಾಡಿಗೆ ಸಿಂಬು ಧ್ವನಿಯಾಗಿದ್ದರು.

ಈ ಹಾಡು ತುಂಬಾ ಸ್ಪೀಡ್‌ ಇದ್ದುದರಿಂದ, ಮೊದಲು ಹಾಡನ್ನು ಅಭ್ಯಾಸ ಮಾಡಿಕೊಂಡು ಆ ಬಳಿಕ ಸ್ಪಷ್ಟ ಕನ್ನಡದಲ್ಲಿ ಹಾಡಿದ್ದರು ಸಿಂಬು. ಈ ಹಿಂದೆ ತೆಲುಗು, ತಮಿಳು ಚಿತ್ರಗಳಿಗೆ ಹಾಡಿರುವ ಸಿಂಬು, ಇದೇ ಮೊದಲ ಸಲ ಕನ್ನಡದ ಚಿತ್ರಕ್ಕೆ ಹಾಡಿರುವುದು ವಿಶೇಷ. ತಿಲಕ್‌, ಮೇಘನಾರಾಜ್‌ ಅಭಿನಯದ ಈ ಚಿತ್ರವನ್ನು ದೇವರಾಜ್‌ ದಾವಣಗೆರೆ ನಿರ್ಮಿಸಿದ್ದಾರೆ. ಕೆ.ಎಂ.ಪ್ರಕಾಶ್‌ ಸಂಕಲನವಿದೆ. ವಿಲಿಯಮ್‌ ಡೇವಿಡ್‌ ಅವರ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next