Advertisement

ಕನ್ನಡದ ದಿಗ್ಗಜರ ಬೆಸೆದ ಬೆಳ್ಳಿ ಸೊಬಗು

12:18 PM May 27, 2019 | Suhan S |

ಬೆಂಗಳೂರು: ವೇದಿಕೆ ಮೇಲೆ ಗುರುಗಳು, ವೇದಿಕೆ ಮುಂಭಾಗ ಅವರ ಬಳಿ ಕಲಿತು ಉನ್ನತ ಹುದ್ದೆಗೆ ಏರಿದ ಸಾಧಕರು. ಗುರುಗಳಿಗೆ ತಕ್ಕ ಶಿಷ್ಯರೆಂಬ ಪ್ರಶಂಸೆಯ ಮಾತುಗಳು, ದಶಕಗಳ ನಂತರ ಸಿಕ್ಕ ಸ್ನೇಹಿತರ ಸಂತಸದ ಕ್ಷಣಗಳು…

Advertisement

ಇದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಭಾನುವಾರ ನಡೆದ 1992-94ನೇ ಸಾಲಿನ ವಿದ್ಯಾರ್ಥಿಗಳ ‘ಬೆಳ್ಳಿ ಸೊಬಗು; ಸ್ನೇಹ ಸಮ್ಮಿಲನ ಮತ್ತು ಗುರುವಂದನೆ’ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.

ಡಾ.ಹಂಪ ನಾಗರಾಜಯ್ಯ, ಪ್ರೊ.ಬರಗೂರು ರಾಮಚಂದ್ರಪ್ಪ, ಡಾ.ಸಿದ್ದಲಿಂಗಯ್ಯ, ಡಾ.ಕೆ.ವೀರಣ್ಣ, ಡಾ.ಬಸವರಾಜ ಕಲ್ಗುಡಿ ಸೇರಿ ಗುರುಗಳು ವೇದಿಕೆ ಮೇಲಿದ್ದರೆ ವೇದಿಕೆ ಮುಂಭಾಗ ಒಂದು ಕಾಲದಲ್ಲಿ ಆ ಮೇಸ್ಟ್ರೆಗಳ ಕೈ ಕೆಳಗೆ ಕಲಿತು ಇಂದು ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರವ 33 ಕನ್ನಡ ಪ್ರಾಧ್ಯಾಪಕರು, ಆರು ಕೆಎಎಸ್‌ ಅಧಿಕಾರಿಗಳು ಕುಳಿತಿದ್ದರು.

1992-94ನೇ ಸಾಲಿನಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಯನ ನಡೆಸಿದ ಎಲ್ಲಾ ವಿದ್ಯಾರ್ಥಿಗಳನ್ನು ಒಟ್ಟಾಗಿ ಸೇರಿಸುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮ ಆಯೋಜಿಸಿದ್ದರು. ಕಾರ್ಯಕ್ರಮದ ಮೊದಲು ಕಾಲೇಜಿಗೆ ಹೊಸದಾಗಿ ಬಂದ ವಿದ್ಯಾರ್ಥಿಗಳಂತೆ ಎಲ್ಲರು ತಮ್ಮ ಪರಿಚಯ ಮಾಡಿಕೊಂಡರು. ಕಾಲೇಜು ದಿನಗಳಲ್ಲಿ ಕಳೆದ ಸಂತಸದ ಕ್ಷಣಗಳನ್ನು ಮೆಲುಕು ಹಾಕಿದರು. ನಂತರ ತಮ್ಮ ಸಾಧನೆಗೆ ಕಾರಣವಾದ ಕನ್ನಡ ಅಧ್ಯಯನ ಕೇಂದ್ರದ ಅಂದಿನ ಪ್ರಾಧ್ಯಾಪಕರಾಗಿದ್ದ ಡಾ.ಹಂ.ಪ.ನಾಗರಾಜಯ್ಯ, ಡಾ.ಸಿ.ವೀರಣ್ಣ, ಪ್ರೊ.ಬರಗೂರು ರಾಮಚಂದ್ರಪ್ಪ, ಡಾ.ಕಾರ್ಲೋಸ್‌, ಡಾ.ಸಿದ್ದಲಿಂಗಯ್ಯ, ಡಾ.ಬಸವರಾಜ್‌ ಸಿ.ಕಲ್ಗುಡಿ ಅವರನ್ನು ಸ್ಮರಣಿಕೆ ಕೊಟ್ಟು ಗೌರವಿಸಿ ಗುರುವಂದನೆ ಸಲ್ಲಿಸಿದರು. ಗುರುವಂದನೆ ಸ್ವೀಕರಿಸಿ ಮಾತನಾಡಿದ ಪ್ರೊ.ಹಂಪ ನಾಗರಾಜಯ್ಯ ಅವರು, ವಿದಾರ್ಥಿಗಳಿಗೆ ವಿದ್ಯೆಗಿಂತ ವಿವೇಕ ಮುಖ್ಯ ಎಂಬ ಮಾತು ಎಂದಿಗೂ ಸತ್ಯ. ವಿವೇಕ ಇಲ್ಲದೇ ಯಾವುದೇ ಕಾರ್ಯಸಿದ್ಧಿ ಆಗಲಾರದು. ಎಷ್ಟೇ ಪದವಿಗಳನ್ನು ಪಡೆದರು ಅವಿವೇಕದಂತಹ ಅಂಶದಿಂದ ಅದು ವ್ಯರ್ಥವಾಗುತ್ತದೆ. ಅದರೆ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ವಿವೇಕ ಮರೆಯಾಗುತ್ತಿದೆ. ಗುರು ಹಾಗೂ ಪುಸ್ತಕದಿಂದ ಅರ್ಧ ಭಾಗ ಕಲಿತು ಉಳಿದ ಅರ್ಧಭಾಗವನ್ನು ಸ್ವಬುದ್ಧಿಯಿಂದ ಕಲಿತು ಮುನ್ನಡೆದರೆ ಜೀವನದಲ್ಲಿ ಗುರಿ ಸಾಧಿಸಬಹುದು. ಅಂದು ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರ ರಾಜ್ಯಕ್ಕೇ ಮಾದರಿಯಾಗಿದ್ದು, ಅದಕ್ಕೆ ಕಾರಣರಾದ ಜಿ.ಎಸ್‌.ಶಿವರುದ್ರಪ್ಪ, ಕಿ.ರಂ.ನಾಗರಾಜ, ಡಿ.ಆರ್‌.ನಾಗರಾಜ್‌ ಒಳಗೊಂಡು ಸಾಕಷ್ಟು ಜನರ ಸೇವೆ ಸ್ಮರಣೀಯ ಎಂದು ಹೇಳಿದರು.

ಗುರುಕುಲ ಪದ್ಧತಿಯಲ್ಲಿ ಈ ರೀತಿ ಸಾಧನೆ ಮಾಡಿದ ನಂತರ ಗುರುಗಳಿಗೆ ವಂದನೆ ತಿಳಿಸುವ ವಿಚಾರ ಬರುತ್ತದೆ. ನಮ್ಮಂತ ಮೇಸ್ಟ್ರೆಗಳ ಪಾಠದ ಆಚೆಗೆ ನೀವು ಸಾಕಷ್ಟು ಕಲಿತು ಇಂದು ಸಾಧನೆ ಮಾಡಿರುವುದು ಸಂತಸದ ವಿಚಾರ. ನೀವು ನಮ್ಮ ವಿದ್ಯಾರ್ಥಿಗಳು ಎಂದು ಹೇಳಿಕೊಳ್ಳುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

Advertisement

ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಇಂದು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರ ಸಂಖ್ಯೆ ಹೆಚ್ಚಾಗಿ ವಿದ್ಯಾರ್ಥಿಗಳಿಗೆ ಪ್ರಿಯವಾಗುವ ಮೇಸ್ಟ್ರೆಗಳ ಸಂಖ್ಯೆ ಕಡಿಮೆಯಾಗಿರುವುದು ಬೇಸರದ ಸಂಗತಿ. ನಮ್ಮ ಕನ್ನಡ ಅಧ್ಯಯನ ಕೇಂದ್ರವು ಕರ್ನಾಟಕದ ಎಲ್ಲಾ ರೀತಿಯ ವಿಚಾರಗಳ ಒಕ್ಕೂಟವಾಗಿತ್ತು. ಮನುಷ್ಯನ ಸಂಬಂಧಗಳು ಕಾಲಾತೀತವಾದವು ಎನ್ನುತ್ತಾರೆ. ಆದರೆ, ಇಂದು ಮಾನವೀಯ ಸಂಬಂಧ ಕುಸಿದು ಹೊಗುತ್ತಿದೆ. ತಾಂತ್ರಿಕತೆಯು ತಾತ್ವಿಕತೆಯನ್ನು ನಾಶ ಮಾಡುತ್ತಿದೆ. ಹಸಿವಿನ ರಾಜಕಾರಣ ಬಿಟ್ಟು ಹಸುವಿನ ರಾಜಕಾರಣ ನಡೆಯುತ್ತಿದೆ. ಭಾವನಾತ್ಮಕತೆ ಬಿಟ್ಟು ಭಾವೋನ್ಮಾದಲ್ಲಿ ಭಾರತವನ್ನು ಕೆಡವಲಾಗುತ್ತಿದೆ. ಇಂತಹ ಕಾಲದಲ್ಲಿ ಮತ್ತೆ ಎಲ್ಲರೂ ಸೇರಿರುವುದು ಸಂತಸ ವಿಚಾರ ಎಂದು ಹೇಳಿದರು.

ಕವಿ ಸಿದ್ದಲಿಂಗಯ್ಯ ಮಾತನಾಡಿ, ಗುರುಗಳ ಸ್ಥಾನ ಮಹತ್ವದ್ದು. ವಿದ್ಯಾರ್ಥಿಗಳ ಜತೆ ಭಾವನಾತ್ಮಕ ಸಂಬಂಧ ಸಾಧ್ಯವಾಗುವುದು ಕನ್ನಡ ಶಿಕ್ಷಕರಿಗೆ ಮಾತ್ರ. ಚಂದ್ರಮತಿ ಪ್ರಲಾಪದಂತಹ ಭಾವನಾತ್ಮಕ ಸಂದರ್ಭ ಗಳ ಕುರಿತು ಪಾಠ ಮಾಡುವಾಗ ಪ್ರಾಧ್ಯಾಪಕರು ಕಣ್ಣಿರು ಹಾಕಿ ಪಾಠ ಮಾಡಿದ್ದು, ಮಕ್ಕಳೂ ಕಣ್ಣೀರು ಹಾಕಿಕೊಂಡು ಕೇಳಿದ್ದುಂಟು. ಇನ್ನು ಕನ್ನಡ ಹೊರತುಪಡಿಸಿ ವಿಜ್ಞಾನದಲ್ಲಿ ಪ್ರಯೋಗ ಶಾಲೆಯ ಹೊಗೆಯಿಂದ, ಗಣಿತದಲ್ಲಿ ಕಠಿಣ ಲೆಕ್ಕ ಅರ್ಥವಾಗದೇ ಕಣ್ಣೀರು ಬರಬಹುದಷ್ಟೇ ಹೊರತು ಭಾವನಾತ್ಮಕವಾಗಿ ಅಲ್ಲ ಎಂದು ಹಾಸ್ಯಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next