Advertisement

ರೇಷ್ಮೆಗೂಡು ಹರಾಜಲ್ಲಿ ತಾಂತ್ರಿಕ ದೋಷ: ಗೊಂದಲ

01:05 PM Feb 08, 2022 | Team Udayavani |

ರಾಮನಗರ: ಸರ್ಕಾರದ ವ್ಯವಸ್ಥೆಗಳು ಅವ್ಯವಸ್ಥೆಗಳಾದರೆ ಸಮಸ್ಯೆ ಎದುರಿಸುವುದು ಸಾಮಾನ್ಯ ಜನ ಎಂಬುದಕ್ಕೆ ರಾಮನಗರ ರೇಷ್ಮೆ ಗೂಡು ಮಾರುಕಟ್ಟೆ ಉತ್ತಮ ಉದಾಹರಣೆ. ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಇ-ಪೇಮೆಂಟ್‌ ವ್ಯವಸ್ಥೆ ಪುನಃ ಜಾರಿಗೆ ತರಲಾಗಿದ್ದು ಸೋಮವಾರ ತಾಂತ್ರಿಕ ದೋಷದಿಂದಾಗಿ ರೀಲರ್‌ಗಳು ಮತ್ತು ರೇಷ್ಮೆ ಬೆಳೆಗಾರರು ಸಂಕಷ್ಟ ಅನುಭವಿಸಿದರು. ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಹರಾಜಿನಲ್ಲಿ ಖರೀದಿಸಿದ ಗೂಡಿಗೆ ರೀಲರ್‌ಗಳು ಆನ್‌ಲೈನ್‌ ಮೂಲಕ ಗೂಡು ಬೆಳೆಗಾರರಿಗೆ ಹಣ ಪಾವತಿಸಬೇಕು. ಈ ಹಿಂದೆಯೂ ಈ ಪದ್ಧತಿ ಜಾರಿಗೆ ತರಲಾಗಿತ್ತು. ಆದರೆ ಹಲವಾರು ಕಾರಣಗಳಿಂದ ಅದು ಸ್ಥಗಿತಗೊಂಡಿತ್ತು.

Advertisement

ಇದೇ ವ್ಯವಸ್ಥೆಯನ್ನು ಪುನಃ ಆರಂಭಿಸಲಾಗಿದೆ. ಆದರೆ, ತಾಂತ್ರಿಕದೋಷ ಕಾರಣ ಕೆಲವು ಗೊಂದಲಗಳಿಗೆ ಕಾರಣವಾಗಿದೆ. ಆನ್‌ಲೈನ್‌ ಮೂಲಕ ಹಣ ಪಾವತಿಸಲಾಗದ ರೀಲರ್‌ಗಳ ಪರಿಸ್ಥಿತಿ ಒಂದೆಡೆಯಾದರೆ, ಇನ್ನೊಂದೆಡೆ ಬೆಳೆಗಾರರು ಹರಾಜು ಮೊತ್ತಕ್ಕೆ ಒತ್ತಾಯಿಸಿದ ಘಟನೆ ನಡೆಯಿತು.

ವಿಘ್ನ: ನೂತನ ವ್ಯವಸ್ಥೆಯಲ್ಲಿ ವಿದ್ಯುನ್ಮಾನ ತೂಕ ವ್ಯವಸ್ಥೆಯಲ್ಲಿ ತೂಕಗೊಂಡ ಪ್ರಮಾಣದ ಗೂಡಿಗೆ ಹರಾಜು ಮೊತ್ತದಷ್ಟು ಹಣ ರೀಲರ್‌ಗಳ ಬ್ಯಾಂಕ್‌ ಖಾತೆಯಲ್ಲಿ ಲಭ್ಯವಾಗಬೇಕು. ಗಣಕಯಂತ್ರಗಳೇ ಈ ಎಲ್ಲಾ ಅಂಶ ಕ್ರೂಢೀಕರಿಸಿ ಹರಾಜು ಮೊತ್ತ ಬ್ಯಾಂಕ್‌ ಖಾತೆಯಲ್ಲಿ ಲಭ್ಯವಾಗದಿದ್ದರೆ ಪ್ರಕ್ರಿಯೆಯನ್ನು ಅಲ್ಲೇನಿಲ್ಲಿಸುತ್ತದೆ. ಸಾಕಷ್ಟು ಹಣವನ್ನು ಬ್ಯಾಂಕ್‌ ಖಾತೆಯಲ್ಲಿ ಲಭ್ಯವಾಗದಿರುವುದು ಗೂಡು ಖರೀದಿದಾರರು ಮಾಡಿಕೊಂಡ ಸಮಸ್ಯೆ. ಆದರೆ, ಹರಾಜು ಮೊತ್ತ ಬ್ಯಾಂಕ್‌ ಖಾತೆಯಲ್ಲಿ ಲಭ್ಯವಿದ್ದರೂ ಸರ್ವರ್‌ ಮೇಲಿನ ಒತ್ತಡದಿಂದ ಹಣ ಪಾವತಿಯಾಗದ ಉದಾಹರಣೆ ನಡೆದಿವೆ. ರೀಲರ್‌ನ ಬ್ಯಾಂಕ್‌ನಿಂದ ಮೊತ್ತ ಕಡಿತವಾಗಿದೆ.

ಆದರೆ ಉಪನಿರ್ದೇಶಕರ ಖಾತೆಗೆ ಜಮೆ ಆಗಲೇ ಇಲ್ಲ. ಕಡಿಮೆ ಮೊತ್ತವನ್ನು ಸರಿದೂಗಿಸಲು ರೀಲರ್‌ಗಳು ತಮ್ಮ ಬ್ಯಾಂಕ್‌ ಖಾತೆಗೆ ಹೆಚ್ಚುವರಿ ಹಣ ಜಮೆ ಮಾಡಲು ಸಹ ತೊಂದರೆಯಾಗಿದೆ.ತಾಂತ್ರಿಕೆ ದೋಷಗಳಿಂದಾಗಿ ವಿದ್ಯುನ್ಮಾನ ತೂಕ ವ್ಯವಸ್ಥೆ (ಇ-ವೈಮೆಂಟ್‌) ಮತ್ತು ವಿದ್ಯುನ್ಮಾನ ಹಣ ಪಾವತಿ (ಇ-ಪೇಮೆಂಟ್‌) ವ್ಯವಸ್ಥೆಗೆ ಆರಂಭದ ದಿನವೇ ವಿಘ್ನ ಉಂಟಾಗಿದೆ.ಹಳೇ ವ್ಯವಸ್ಥೆಗೆ ರೀಲರ್‌ಗಳ ಒತ್ತಾಯ: ಸೋಮವಾರ ಹರಾಜು ವೇಳೆ ಉಂಟಾದ ತಾಂತ್ರಿಕ ದೋಷದ ಕಾರಣ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಚೆಕ್‌, ನಗದು ಮೂಲಕ ಹರಾಜು ಮೊತ್ತವನ್ನು ಬೆಳೆಗಾರರಿಗೆ ಪಾವತಿಸುವುದಾಗಿ ರೀಲರ್‌ಗಳು ಪಟ್ಟು ಹಿಡಿದರು. ಆದರೆ ಮಾರುಕಟ್ಟೆ ಅಧಿಕಾರಿಗಳು ಸರ್ಕಾರದ ಆದೇಶ ಉಲ್ಲಂಘನೆ ಆಗುತ್ತದೆ ಎಂದು ಹಿಂದೇಟು ಹಾಕಿದರು.

ಈ ಮಧ್ಯೆ ಹರಾಜು ಪ್ರಕ್ರಿಯೆ ಮುಗಿದರೂ ತಾವು ತಂದ ಗೂಡು ತೂಕವಾಗದೆ ಉಳಿದುಕೊಂಡಿರುವ ಬಗ್ಗೆ ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದರು. ಹರಾಜು ಮೊತ್ತ ಪಾವತಿಸುವಂತೆ ಪಟ್ಟು ಹಿಡಿದರು. ಸಮಸ್ಯೆಬಿಗಡಾಯಿಸುತ್ತಿರುವುದನ್ನು ಅರಿತ ಅಧಿಕಾರಿಗಳು ಮಾರುಕಟ್ಟೆಸಲಹಾ ಸಮಿತಿ ಸದಸ್ಯರು, ರೀಲರ್‌ಗಳು, ಬೆಳೆಗಾರರ ಸಭೆ ಆಯೋಜಿಸಿದರು. ತಾಂತ್ರಿಕೆ ದೋಷಕ್ಕೆ ಪರಿಹಾರ ಸಿಗುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ.

Advertisement

ಜಾರಿ ದಿನದಂದೇ ಗೊಂದಲ : ರಾಜ್ಯದ ರೇಷ್ಮೆ ಮಾರುಕಟ್ಟೆಗಳ ಸುಧಾರಣಾ ಕ್ರಮದ ಭಾಗವಾಗಿ ಸರ್ಕಾರ ರೇಷ್ಮೆ ಗೂಡು ಮಾರುಕಟ್ಟೆಗಳಲ್ಲಿ ವಿದ್ಯುನ್ಮಾನ ತೂಕ ವ್ಯವಸ್ಥೆ, ವಿದ್ಯುನ್ಮಾನ ಹಣ ಪಾವತಿ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿದ್ದು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಹರಾಜು ಪ್ರಕ್ರಿಯೆ ಮುಗಿದ ನಂತರ ಹರಾಜಾದ ರೇಷ್ಮೆ ಗೂಡನ್ನು ತೂಕಹಾಕಲಾಗುತ್ತದೆ. ಈ ಮೊದಲು ತೂಕ ಹಾಕಿದ ನಂತರಹರಾಜು ಮೊತ್ತವನ್ನು ನಿರ್ಧರಿಸಿ ರೀಲರ್‌ಗಳಿಗೆ ತಿಳಿಸಲಾಗುತ್ತಿತ್ತು. ತದ ನಂತರ ರೀಲರ್‌ಗಳು ಬೆಳೆಗಾರರಿಗೆ ಚೆಕ್‌, ನಗದು ಇತ್ಯಾದಿ ಮೂಲಕ ಹಣ ಪಾವತಿಸುತ್ತಿದ್ದರು.ಆದರೆ ಈ ಪದ್ಧತಿಯಲ್ಲಿ ವಿಶ್ವಾಸದ ಮೇಲೆ ಗೂಡು ಕೊಟ್ಟ ನಂತರ ಹರಾಜು ಮೊತ್ತ ಪಾವತಿಯಾಗದೆ ತೊಂದರೆಅನುಭವಿಸಿದ ಪ್ರಸಂಗಗಳು ನಡೆದಿದ್ದವು. ಹೀಗಾಗಿ ರೀಲರ್‌ ಗಳು ಹರಾಜಿನಲ್ಲಿ ಭಾಗವಹಿಸುವ ಮುನ್ನ ಗೂಡುಮಾರುಕಟ್ಟೆ ಉಪನಿರ್ದೇಶಕರ ಬ್ಯಾಂಕ್‌ ಖಾತೆಗೆ ಹಣವನ್ನು ಚೆಕ್‌, ನಗದು ಮೂಲಕ ಜಮೆ ಮಾಡಿ ಹರಾಜಿನಲ್ಲಿ ಭಾಗವಹಿಸುವ ವ್ಯವಸ್ಥೆ ಜಾರಿಯಾಗಿತ್ತು. 2 ವರ್ಷಗಳ ಹಿಂದೆ ಉಪನಿರ್ದೇಶಕರ ಖಾತೆಯಿಂದ ಲಕ್ಷಾಂತರ ರೂ ಹಣ ರೈತರ ಬ್ಯಾಂಕ್‌ ಖಾತೆಗೆ ಜಮೆ ಆಗಿರಲೇ ಇಲ್ಲ. ಈ ಕಹಿ ಘಟನೆ ರಾಮನಗರ ಮಾರುಕಟ್ಟೆಗೆ ಕಪ್ಪು ಚುಕ್ಕೆಯಾಗಿತ್ತು.ಹೀಗಾಗಿ ರಾಜ್ಯ ಸರ್ಕಾರ ವಿದ್ಯುನ್ಮಾನ ತೂಕ, ವಿದ್ಯುನ್ಮಾನ ಹಣ ಪಾವತಿ ವ್ಯವಸ್ಥೆ ಸುಧಾರಣೆಗೊಳಿಸಿ ಫೆ.7ರಿಂದ ಜಾರಿ ಮಾಡಲು ನಿರ್ಧರಿಸಿದೆ.

ಸರ್ಕಾರ ವ್ಯವಸ್ಥೆ ಮಾಡಬೇಕಿದೆ : ಇಡೀ ಏಷ್ಯಾದಲ್ಲೇ ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿಅತಿ ಹೆಚ್ಚು ವಹಿವಾಟು ನಡೆಯುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಳೆಗಾರರು ಇಲ್ಲಿ ಉತ್ತಮ ಬೆಲೆ ಸಿಗುತ್ತದೆ ಎಂಬ ಕಾರಣಕ್ಕೆ ಹರಾಜಿಗೆ ಬರುತ್ತಾರೆ. ಇತ್ತೀಚಿನಲ್ಲಿ ದಾಖಲೆ ಮೊತ್ತಕ್ಕೆ ರೇಷ್ಮೆಗೂಡುಹರಾಜು ಆಗುತ್ತಿದೆ. ತೀರಾ ಇತ್ತೀಚೆಗೆ ಕೆ.ಜಿ.ಗೂಡಿಗೆ 1043 ರೂ. ಹರಾಜು ಆಗಿದೆ. ಇತಿಹಾಸದಲ್ಲೇ ಇದು ಅತಿ ಹೆಚ್ಚು ಹರಾಜು ಮೊತ್ತ. ರಾಮನಗರ ರೇಷ್ಮೆ ಗೂಡು ಮಾರುಕಟ್ಟೆಯನ್ನು ವಿಶ್ವದರ್ಜೆಗೆ ಏರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಚನ್ನಪಟ್ಟಣದಲ್ಲಿ ಹೈಟೆಕ್‌ ಮಾರುಕಟ್ಟೆ ನಿರ್ಮಿಸಲು ಮುಂದಾಗಿದೆ. ಆದರೆ ತಾಂತ್ರಿಕದೋಷ ತಲೆ ದೋರಿದಂತೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಬೇಕಿದೆ ಎಂದು ರೀಲರ್‌ಗಳು ಮತ್ತು ರೇಷ್ಮೆ ಬೆಳೆಗಾರರು ಒತ್ತಾಯಿಸಿದ್ದಾರೆ.

ಇ-ಪೇಮೆಂಟ್‌, ಇ-ವೇಮಂಟ್‌ ವ್ಯವಸ್ಥೆಯಲ್ಲಿ ಭಾಗವಹಿಸಲು ರೀಲರ್‌ಗಳ ಕಡೆಯಿಂದ ಅಭ್ಯಂತರವೇನಿಲ್ಲ. ಆದರೆ ತಾಂತ್ರಿಕದೋಷಗಳಿಗೂ ರೀಲರ್‌ಗಳನ್ನೇ ಬೊಟ್ಟುಮಾಡುವುದು ಸರಿಯಲ್ಲ. ರೈತರ ಹಿತಕ್ಕೆ ರೀಲರ್‌ ಗಳು ಸ್ಪಂದಿಸುತ್ತಿದ್ದೇವೆ. ಮುಹೀಬ್‌ ಪಾಷಾ, ಅಧ್ಯಕ್ಷರು ರೀಲರ್‌ಗಳ ಸಂಘ, ರಾಮನಗರ

ಮಾರುಕಟ್ಟೆಯಲ್ಲಿ ಸೋಮವಾರದಿಂದ ಆನ್‌ ಲೈನ್‌ಪೇಮೆಂಟ್‌ ಜಾರಿಗೆ ತರಲಾಗಿತ್ತು. ಆದರೆ, ಬ್ಯಾಂಕ್‌ ಸರ್ವರ್‌, ತಾಂತ್ರಿಕ ಸಮಸ್ಯೆವುಂಟಾಗಿದೆ. ಮಾರಪ್ಪ, ಉಪನಿರ್ದೇಶಕ, ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆ, ರಾಮನಗರ

ಆನ್‌ಲೈನ್‌ ಪೇಮೆಂಟ್‌ನಲ್ಲಿ ತಾಂತ್ರಿಕ ದೋಷಕಾಣಿಸಿಕೊಂಡಿದೆ. ಹಾಗಾಗಿ ಯಥಾಸ್ಥಿತಿಯಲ್ಲಿಗೂಗಲ್‌ ಪೇ ಹಾಗೂ ಪೋನ್‌ ಪೇ, ಹಣ ನೀಡುವ ಮೂಲಕ ವ್ಯವಹಾರ ಮಾಡಲಾಗಿದೆ. ರವಿ, ಮಾರುಕಟ್ಟೆ ಸಲಹಾ ಸಮಿತಿ ಸದಸ್ಯ, ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next