ಹೊಸದಿಲ್ಲಿ : ಪಾಕಿಸ್ಥಾನದಲ್ಲಿನ ಐಎಸ್ಐ ಶಿಬಿರಗಳಲ್ಲಿ ಸಿಕ್ಖ್ ಯುವಕರಿಗೆ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ತರಬೇತಿ ನೀಡಲಾಗುತ್ತಿದೆ. ಕೆನಡ ಮತ್ತಿತರ ಕಡೆಗಳಲ್ಲಿ ನೆಲೆಸಿರುವ ಸಿಕ್ಖರಿಗೆ ಭಾರತದ ವಿರುದ್ಧ ಸುಳ್ಳು ಮತ್ತು ನಂಜಿನ ಅಪಪ್ರಚಾರದ ಮೂಲಕ ಭಾರತದ ವಿರುದ್ಧ ಪ್ರಚೋದಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಸಂಸದೀಯ ಮಂಡಳಿಗೆ ಮಾಹಿತಿ ನೀಡಿದೆ.
ಸಿಕ್ಖ ಯುವಕರನ್ನು ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಮೂಲಕ ಬುದ್ಧಿಪಲ್ಲಟಿಸಲಾಗುತ್ತಿದೆ ಎಂದು ಹಿರಿಯ ಬಿಜೆಪಿ ನಾಯಕ ಮುರಳೀ ಮನೋಹರ ಜೋಷಿ ನೇತೃತ್ವದ ಅಂದಾಜು ಸಮಿತಿಗೆ ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದ ಉನ್ನತ ಅಧಿಕಾರಿಗಳನ್ನು ಒಳಗೊಂಡ ತಂಡವು ಮಾಹಿತಿ ನೀಡಿದೆ.
ಸಿಕ್ಖ ಬಂಡಾಯ ರಂಗದಲ್ಲಿ ಈಚಿನ ದಿನಗಳಲ್ಲಿ ಬದಲಾವಣೆಗಳಾಗುತ್ತಿರುವುದು ಕಂಡು ಬಂದಿದೆ; ದೇಶಕ್ಕೆ ಇದೊಂದು ದೊಡ್ಡ ಸವಾಲಾಗುವ ಸಾಧ್ಯತೆ ಇದೆ ಎಂದು “ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಮತ್ತು ಆಂತರಿಕ ಭದ್ರತಾ ಪಡೆಗಳ ಮುಂದಿರುವ ಸವಾಲುಗಳು, ಅವುಗಳ ವಿಶ್ಲೇಷಣೆ ಮತ್ತು ನಿರ್ವಹಣಾ ವ್ಯವಸ್ಥೆ’ ಕುರಿತ ಮಂಡಳಿಯ ವರದಿಯನ್ನು ಮೊನ್ನೆ ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾಯಿತು.
ಯುರೋಪ್, ಅಮೆರಿಕ ಮತ್ತು ಕೆನಡದಲ್ಲಿ ನೆಲೆಸಿರುವ ಸಿಕ್ಖ ತರುಣರಿಗೆ ತಪ್ಪು ಮಾರ್ಗದರ್ಶನ ನೀಡಿ ಅವರ ದಾರಿ ತಪ್ಪಿಸಲಾಗುತ್ತಿದೆ ಮತ್ತು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವಂತೆ ಅವರನ್ನು ಪ್ರಚೋದಿಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.