Advertisement

ಅಡ್ಡರಸ್ತೆಗಳ ಸೂಚನ ಫಲಕಗಳು ಅಡ್ಡ ಬಿದ್ದಿವೆ!

10:37 AM Oct 15, 2018 | |

ಮಹಾನಗರ: ಒಂದು ಕಡೆ ನಗರ ಸ್ಮಾರ್ಟ್‌ಸಿಟಿಯಾಗಿ ಪರಿವರ್ತನೆಯಾಗುತ್ತಿದೆ. ಇನ್ನೊಂದೆಡೆ, ಮಹಾನಗರಗಳಿಗೆ ಇರಲೇ ಬೇಕಾದ ಮೂಲಸೌಕರ್ಯಗಳು ಸಮರ್ಪಕವಾಗಿಲ್ಲ ಎನ್ನುವುದು ವಾಸ್ತವ. ಅದಕ್ಕೊಂದು ಉತ್ತಮ ನಿದರ್ಶನ ನಗರದ ಹಲವು ಬಡಾವಣೆಗಳಲ್ಲಿ ಅಡ್ಡಲಾಗಿ ಬಿದ್ದಿರುವ ಅಡ್ಡರಸ್ತೆ ನಾಮಫಲಕಗಳು!

Advertisement

ನಗರದ ಮುಖ್ಯರಸ್ತೆಗಳಿಂದ ಒಳ ರಸ್ತೆಗಳ ಕಡೆಗೆ ಸಾಗುವ ದಾರಿಯಲ್ಲಿ ಅಳವಡಿಸಲಾದ ಬಹುತೇಕ ಕಡೆಯ ಅಡ್ಡರಸ್ತೆ ಸೂಚನ ಫಲಕಗಳು ಸಮರ್ಪಕ ನಿರ್ವಹಣೆ ಇಲ್ಲದೆ ಹೆಸರಿಗಷ್ಟೇ ಇವೆ ಎಂಬಂತಾಗಿವೆ. ಇದರಿಂದ ಹೊಸದಾಗಿ ನಗರಕ್ಕೆ ಆಗಮಿಸುವ ಮಂದಿ ತಮ್ಮ ಪರಿಚಿತರು, ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ದಾರಿ ಹುಡುಕುವುದೇ ಕಷ್ಟಕರವಾಗಿದೆ. ಈ ಬಗ್ಗೆ ಕ್ರಮ ಜರಗಿಸಬೇಕಾದ ಜನಪ್ರತಿನಿಧಿಗಳು ಹಾಗೂ ಮಹಾನಗರ ಪಾಲಿಕೆ ಮಾತ್ರ ಇತ್ತ ಗಮನಹರಿಸುತ್ತಿಲ್ಲ.

ಅಡ್ಡರಸ್ತೆ ಫಲಕದಲ್ಲಿನ ಹೆಸರೇ ಮಾಯ
ಜನರಿಗೆ ನಗರದ ವಿವಿಧ ಭಾಗಗಳಿಗೆ ದಾರಿ ತಿಳಿಸುವ ನಿಟ್ಟಿನಲ್ಲಿ ನಗರದ ಮುಖ್ಯ ಭಾಗಗಳಲ್ಲಿ ಸೂಚನ ಫಲಕಗಳನ್ನು ಕಳೆದ ಅವಧಿಯಲ್ಲಿ ಪಾಲಿಕೆ ಅಳವಡಿಸಿತ್ತು. ಆದಾದ ಬಳಿಕ ಮುಖ್ಯ ರಸ್ತೆಗಳಲ್ಲಿ ಸೂಚನ ಫಲಕಗಳ ಸಮಸ್ಯೆ ಬಗೆಹರಿಯಿತು. ಆದರೆ ಇದೀಗ ಒಳರಸ್ತೆಗಳಲ್ಲಿ ಇಂತಹದೇ ಸಮಸ್ಯೆ ಸೃಷ್ಟಿಯಾಗಿದೆ. ಕೆಲವು ಭಾಗಗಳಲ್ಲಿ ಅಡ್ಡರಸ್ತೆ ಫಲಕದ ಕಂಬಗಳು ಮಾತ್ರ ಉಳಿದಿದ್ದು, ಬರೆದ ಹೆಸರೇ ಮಾಯವಾಗಿದೆ. ಅದಕ್ಕೆ ಬಣ್ಣ ಹಚ್ಚಿ ಯಾವ ಕಡೆ ರಸ್ತೆ ಸಾಗುತ್ತದೆ ಎಂಬುದರ ಕುರಿತು ಬರೆಯಬೇಕಾದ ಆವಶ್ಯಕತೆ ಇದೆ.

ಅಡ್ಡ ಬಿದ್ದಿವೆ ಅಡ್ಡರಸ್ತೆ ಫಲಕ
ಕೆಲವು ಭಾಗಗಳಲ್ಲಿ ಅಡ್ಡ ರಸ್ತೆ ಸೂಚನ ಫಲಕ ಬುಡ ಸಮೇತ ಧರೆಗುರುಳಿದೆ. ಅಪಘಾತ ಅಥವಾ ಇನ್ಯಾವುದೋ ಕಾರಣಗಳಿಂದಾಗಿ ಅಡ್ಡರಸ್ತೆ ಕಂಬಗಳು ಬೀಳುತ್ತಿದೆ. ಇದಕ್ಕೆ ಕಾರಣರಾದ ವ್ಯಕ್ತಿಗಳು ಈ ಬಗ್ಗೆ ಕ್ಯಾರೇ ಅನ್ನದೇ ಹೋಗುತ್ತಿದ್ದಾರೆ. ಆ ಬಳಿಕ ಸೂಚನ ಫಲಕದ ಕಾಮಗಾರಿ ಮಾಡುವ ಬಗ್ಗೆ ಪಾಲಿಕೆಯು ಆಸಕ್ತಿ ತೋರುತ್ತಿಲ್ಲ. 

ಅಡ್ಡ ಫಲಕಗಳ ಮೇಲೆ ಜಾಹೀರಾತು ಮಹಿಮೆ
ಅಡ್ಡರಸ್ತೆಗಳ ಫಲಕಗಳ ಮೇಲೆ ದಾರಿ ಬಗ್ಗೆ ಮಾಹಿತಿ ನೀಡುವ ಬರೆಹಗಳು ಮಾಯ, ಒಂದುವೇಳೆ, ಜನರ ಉಪಯೋಗಕ್ಕಾಗಿ ಅಡ್ಡರಸ್ತೆ ನಾಮ ಫಲಕಗಳನ್ನು ಹಾಕಿದರೆ ಅವುಗಳ ಮೇಲೆಯೇ ಜಾಹೀರಾತು ಪೋಸ್ಟರ್‌ಗಳು ರಾರಾಜಿಸುತ್ತಿವೆ. ಇಂತಹ ಜಾಹೀರಾತುದಾರರ ಮೇಲೆ ಇನ್ನಾದರೂ ಕ್ರಮ ಜರಗಿಸಬೇಕಾದ್ದು ಪಾಲಿಕೆಯ ಜವಾಬ್ದಾರಿ.

Advertisement

ನಿರ್ವಹಣೆ ಮರೀಚಿಕೆ
ಬಹುತೇಕ ಒಳರಸ್ತೆಗಳ ಫಲಕಗಳು ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಯಲ್ಲಿದೆ. ಈ ಬಗ್ಗೆ ಪಾಲಿಕೆಯ ಗಮನ ಸೆಳೆಯಲು ಆ ವ್ಯಾಪ್ತಿಯ ಜನರು ಆಸಕ್ತಿ ಇರುವುದಿಲ್ಲ. ಯಾಕೆಂದರೆ ಅವರಿಗೆ ರಸ್ತೆಯ ಬಗ್ಗೆ ಮೊದಲೇ ಮಾಹಿತಿ ಇರುತ್ತದೆ. ಆದರೆ ಹೊರ ಭಾಗಗಳಿಂದ ಬರುವ ಜನರಿಗೆ ಅಡ್ಡರಸ್ತೆಗಳ ಫಲಕಗಳು ಹೆಚ್ಚು ಸಹಕಾರಿಯಾಗುತ್ತದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕಾದ ಆವಶ್ಯಕತೆ ಇದೆ.

ನಾಮಫಲಕ ಗುರುತಿಸಲು ಕ್ರಮ
ನಗರದ ವಿವಿಧ ಭಾಗಗಳ ಅಡ್ಡರಸ್ತೆಗಳ ಫಲಕಗಳಲ್ಲಿ ಶಿಥಿಲಾವಾಸ್ಥೆಯಲ್ಲಿರುವ ಫಲಕಗಳನ್ನು ಗುರುತಿಸಿ ಕೂಡಲೇ ಆ ಬಗ್ಗೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವುದು.
ಶಶಿಧರ್‌ ಹೆಗ್ಡೆ, ಮನಪಾ
   ಮುಖ್ಯ ಸಚೇತಕರು

ಪ್ರಜ್ಞಾ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next