ಚಿಕ್ಕಮಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ಗೆ ಸೋಲಿನ ಭಯ ಕಾಡುತ್ತಿದೆ. ಅವರು ನಿದ್ದೆಯಲ್ಲಿಯೂ ಮೋದಿ, ಬಿಜೆಪಿ ಕನಸು ಕಾಣುತ್ತಿದ್ದಾರೆ. ನಿದ್ದೆಯಿಂದ ಎದ್ದು ಏನೇನೋ ಮಾತನಾಡುತ್ತಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದರು.
ಕಡೂರು ತಾಲೂಕು ಹುಲಿಕೆರೆ ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಬ್ಬರ ಮನಸ್ಸಿನಲ್ಲಿ ಕಾಂಗ್ರೆಸ್ ಸೋಲಿನ ಭಯ ಕಾಡುತ್ತಿದೆ. ಯಾರಿಗೆ ಭಯ ಶುರುವಾಗುತ್ತೋ ಅವರಿಗೆ ಮಾತಿನ ಮೇಲೆ ಹಿಡಿತವಿರಲ್ಲ. ಹಾಗಾಗಿ ಮಾತನಾಡುತ್ತಿದ್ದಾರೆ. ಅವರು ಏನು ಮಾತನಾಡುತ್ತಿದ್ದಾರೆಂಬುದು ಜನಕ್ಕೆ ಗೊತ್ತಾಗಿದೆ. ಸಿದ್ದರಾಮಯ್ಯ ಕಂಡರೆ ಡಿ.ಕೆ.ಶಿವಕುಮಾರ್ಗೆ ಆಗಲ್ಲ. ಅವರ ಮನೆಯ ಜಗಳ ಸರಿಮಾಡಿಕೊಳ್ಳಲಿ. ಇಬ್ಬರು ಒಂದೇ ಕಾರ್ಯಕ್ರಮದಲ್ಲಿ ಇದ್ದಾಗ ಒಬ್ಬರದ್ದು ಆ ಕಡೆ ಮುಖ ಇನ್ನೊಬ್ಬರ ಮುಖ ಈ ಕಡೆ. ಇನ್ನೂ ಇಬ್ಬರು ಬೇರೆ ಬೇರೆ ಯಾತ್ರೆ ಮಾಡಿದರೆ ಉತ್ತರ-ದಕ್ಷಿಣ ಆಗುತ್ತಾರೆ ಎಂದರು.
ಈ ಚುನಾವಣೆ ಮುಗಿದ ಮೇಲೆ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಗಂಟು ಮೂಟೆ ಕಟ್ಟಿಕೊಂಡು ಯಾತ್ರೆ ಹೊರಡಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಇದು ಕೊನೆಯ ಚುನಾವಣೆ ಎಂದರು. ನಮ್ಮ ಪಕ್ಷಕ್ಕೆ ಇಬ್ಬರೂ ಬೇಡವೇ ಬೇಡ. ಇಬ್ಬರ ಅಗತ್ಯವೂ ಪಕ್ಷಕಿಲ್ಲ. ಸರಕಾರ ರಚನೆಗೆ ಬೇಕಾದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲುತ್ತೇವೆ. ರಾಜ್ಯ ಉಸ್ತುವಾರಿಯಾಗಿ ಕೆ.ಅಣ್ಣಾಮಲೈ, ಅರುಣ್ ಸಿಂಗ್ ಮತ್ತು ಧರ್ಮೇಂದ್ರ ಪ್ರಸಾದ್ ಅವರನ್ನು ನೇಮಿಸಿರುವುದನ್ನು ಸ್ವಾಗತಿಸುತ್ತೇನೆ.