Advertisement

ನಾನು ಮುಂದಿನ ಬಾರಿಯೂ ಬಾದಾಮಿ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತೇನೆ : ಸಿದ್ದು

10:32 PM Mar 15, 2021 | Team Udayavani |

ಬೆಂಗಳೂರು : ನಾನು ಮುಂದಿನ ಬಾರಿಯೂ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದಲೇ ಕಣಕ್ಕಿಳಿಯುತ್ತೇನೆ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸರಕಾರಕ್ಕೆ ಧೈರ್ಯವಿದ್ದರೆ ವಿಧಾನಸಭೆಯನ್ನೇ ವಿಸರ್ಜಿಸಿ ಚುನಾವಣೆಗೆ ಹೋಗಲಿ ಎಂದು ಸವಾಲು ಹಾಕಿದ ಪ್ರಸಂಗ ನಡೆಯಿತು.

Advertisement

ಇದಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮತ್ತೆ ಅಧಿಕಾರಕ್ಕೆ ಬರುವುದಾಗಿ ತಿರುಕನ ಕನಸು ಕಾಣುತ್ತಿದ್ದೀರಿ. ನಾನು ಮಂಡಿಸಿದ ಬಜೆಟ್‌ ಅನ್ನು ಜನ ಮೆಚ್ಚಿದ್ದಾರೆ. ಅದನ್ನಿಟ್ಟುಕೊಂಡೇ ಮುಂಬವರು ಮೂರು ವಿಧಾನಸಭೆ, ಒಂದು ಲೋಕಸಭಾ ಚುನಾವಣೆಯಲ್ಲಿ ಗೆದ್ದು ನಂತರ ಚರ್ಚಿಸುತ್ತೇನೆ ಎಂದು ಪ್ರತಿ ಸವಾಲೊಡ್ಡುವ ರೀತಿಯಲ್ಲಿ ತಿರುಗೇಟು ನೀಡಿದ್ದು ಗಮನ ಸೆಳೆಯಿತು.

ಸೋಮವಾರ ಮಧ್ಯಾಹ್ನ ಬಜೆಟ್‌ ಮೇಲಿನ ಚರ್ಚೆ ಮುಂದುವರಿಸಿದ ಸಿದ್ದರಾಮಯ್ಯ, ಇಂತಹ ಬಜೆಟ್‌ ನೀಡಲು ಆಪರೇಷನ್‌ ಕಮಲ’ ನಡೆಸಿ ಅಧಿಕಾರಕ್ಕೆ ಬಂದಿರಾ ಎಂದು ಪ್ರಶ್ನಿಸಿದರು. ಆಗ ಯಡಿಯೂರಪ್ಪ, ನೀವೇ ಕಳುಹಿಸಿಕೊಟ್ಟವರು ಎಂದು ನಕ್ಕರು. ಅದಕ್ಕೆ ಸಿದ್ದರಾಮಯ್ಯ, ನಾನು ನಿಮ್ಮ ಬಳಿ ಬಂದು ಆ ರೀತಿ ಮಾತನಾಡಿದ್ದೆನಾ ಎಂದು ಕೇಳಿದರು. ಅದಕ್ಕೆ ಯಡಿಯೂರಪ್ಪ, ಅದೆಲ್ಲಾ ಬಹಿರಂಗ ಚರ್ಚೆ ಯಾಕೆ ಬಿಡಿ’ ಎಂದು ಮತ್ತೆ ನಕ್ಕರು. ಇದಕ್ಕೆ ಸಿದ್ದರಾಮಯ್ಯ, ಬಹಿರಂಗವಾಗಿ ಮಾತನಾಡಿ. ನಾನು ಎದುರಿಸಲು ಸಿದ್ಧನಿದ್ದೇನೆ ಎಂದರು.

ಇದನ್ನೂ ಓದಿ :ಕೋವಿಡ್ 19 : ಬೀದರನಲ್ಲಿ ಇಂದು 33 ಹೊಸ ಪ್ರಕರಣಗಳು ಪತ್ತೆ

ಆಗ ಯಡಿಯೂರಪ್ಪ, ಅಧಿಕಾರಕ್ಕೆ ಬರುವುದಾಗಿ ತಿರುಕನ ಕನಸು ಕಾಣುತ್ತಿದ್ದೀರಿ. ಆಯವ್ಯಯವನ್ನು ಜನ ಮೆಚ್ಚಿದ್ದು, ಇದನ್ನಿಟ್ಟುಕೊಂಡೇ ಉಪಚುನಾವಣೆಗಳಲ್ಲಿ ಗೆದ್ದು ನಂತರ ಇಲ್ಲೇ ಚರ್ಚೆ ಮಾಡುತ್ತೇನೆ ಎಂದು ಸವಾಲು ಹಾಕಿದರು. ಅದಕ್ಕೆ ಸಿದ್ದರಾಮಯ್ಯ, ಉಪಚುನಾವಣೆ ಏಕೆ, ವಿಧಾನಸಭೆಯನ್ನೇ ವಿಸರ್ಜಿಸಿ ಚುನಾವಣೆಗೆ ಹೋಗೋಣ ಎಂದಾಗ ಯಡಿಯೂರಪ್ಪ, ನಿಮ್ಮ ಎಲ್ಲ ಶಾಸಕರಿಂದ ಪತ್ರ ಬರೆಸಿ ಕೊಡಿ ಎಂದು ಹೇಳಿದರು.

Advertisement

ಈ ಮಧ್ಯೆ, ಕಾಂಗ್ರೆಸ್‌ ಕೆ.ಆರ್‌.ರಮೇಶ್‌ ಕುಮಾರ್‌, ಉಪಚುನಾವಣೆಯ ಸೋಲು- ಗೆಲುವು ಯಾವ ಪಕ್ಷಕ್ಕೂ ಜನಾದೇಶ ಎಂದು ಹೇಳಲಾಗದು. ಇಂಗ್ಲಿಷ್‌ ಭಾಷೆ ವಿಶೇಷ ಎಂದರೆ ಬೈ- ಬೈ’ (ಬಿವೈ ಹಾಗೂ ಬಿಯುವೈ) ಎರಡೂ ಒಂದೇ ರೀತಿ ಕೇಳುತ್ತದೆ. ಎಲ್ಲವೂ ಹಣದ ಮೌಲ್ಯದ ಮೇಲೆ ಅವಲಂಬಿತ ಎಂದಾಗ ಸದನ ನಗೆಯಲ್ಲಿ ತೇಲಿತು.

ಸಚಿವ ಕೆ.ಎಸ್‌. ಈಶ್ವರಪ್ಪ, 2018ರ ವಿಧಾನಸಭೆ ಹಾಗೂ 2019ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ನೀವು ಸೋತಿದ್ದೀರಿ. ಕಾಂಗ್ರೆಸ್‌ ಬಯಸಿದಾಗಲೆಲ್ಲಾ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗೋಣ ಎಂಬುದಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕಷ್ಟೇ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ :ನೋಟಾ: ಕೇಂದ್ರದ ಅಭಿಪ್ರಾಯ ಕೋರಿದ ಸುಪ್ರೀಂ ಕೋರ್ಟ್

ಅದಕ್ಕೆ ರಮೇಶ್‌ ಕುಮಾರ್‌, ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಕಳೆದುಕೊಂಡಿರುವುದನ್ನು ಒಪ್ಪಿಕೊಳ್ಳುತ್ತೇವೆ. ಇಂದು ಹಣವಿಲ್ಲದವರು ಯೋಗ್ಯತೆ ಇದ್ದವರೂ ಯಾವ ಪಕ್ಷದಿಂದಲೂ ಸದನಕ್ಕೆ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಭಾವುರಾವ್‌ ದೇಶಪಾಂಡೆಯವರ ಬಗ್ಗೆ ಯಾರಾದರೂ ಏನಾದರೂ ಮಾತನಾಡಲು ಸಾಧ್ಯವೇ. ಅವರು ಅರ್ಜಿ ಹಾಕಿ ಸ್ಪರ್ಧಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಈ ನಡುವೆ ಜೆಡಿಎಸ್‌ನ ಸಾ.ರಾ. ಮಹೇಶ್‌, ಸಿದ್ದರಾಮಯ್ಯನವರೇ ಕಳುಹಿಸಿದರು ಎಂಬ ಬಗ್ಗೆ ಅಲ್ಲಿ ಇಲ್ಲಿ ಮಾತುಗಳು ಕೇಳಿಬರುತ್ತಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ಕಾಲೆಳೆದರು. ಆಗ ಸಿದ್ದರಾಮಯ್ಯ, ನಾನು ಆ ರೀತಿ ಬಯಸಿದ್ದರೆ ನೇರವಾಗಿಯೇ ಕಳುಹಿಸುತ್ತಿದ್ದೆ. ಯಾರಿಗೂ ಹೆದರುತ್ತಿರಲಿಲ್ಲ. ಆ ದರಿದ್ರ ವ್ಯವಸ್ಥೆ ನನಗಿನ್ನೂ ಬಂದಿಲ್ಲ. ನಮ್ಮ ಪಕ್ಷದವರನ್ನು ಇನ್ನೊಂದು ಪಕ್ಷಕ್ಕೆ ಕಳುಹಿಸುವ ಮಟ್ಟಕ್ಕೆ ಇಳಿದಿಲ್ಲ. ಅವರು ವಾಪಾಸ್‌ ಬಂದರೂ ಕರೆದುಕೊಳ್ಳುವುದಿಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕದಂತೆ. ಅಲ್ಲಿ, ಇಲ್ಲಿ ಮಾತಾಡುವುದು ಏನೂ ಇಲ್ಲ. ಯಾವ ರಾಜಿಯೂ ಇಲ್ಲ ಎಂದು ಗುಡುಗಿದರು.

ಇದನ್ನೂ ಓದಿ :ಉದ್ಯಾವರ : ಹೊಳೆಯಲ್ಲಿ ಕಪ್ಪೆ ಚಿಪ್ಪು ಹೆಕ್ಕಲು ಹೋದ ಯುವಕ ನೀರು ಪಾಲು

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಂದಿನ ಬಾರಿ ಚುನಾವಣೆಗೆ ಸ್ಪರ್ಧೆ ಬಗ್ಗೆ ಸ್ವಲ್ಪ ಸ್ಪಷ್ಟತೆ ನೀಡುವಿರಾ ಎಂದು ಪ್ರಶ್ನಿಸಿದರು. ಆಗ ಸಿದ್ದರಾಮಯ್ಯ, ಮುಂದಿನ ಬಾರಿ ಸ್ಪರ್ಧಿಸುತ್ತೇನೆ. 2018ರಲ್ಲಿ ಸ್ಪರ್ಧಿಸಬಾರದು ಎಂದು ಚಿಂತಿಸಿದ್ದೆ ಎಂಬುದಾಗಿ ಹಿಂದೆ ಹೇಳಿದ್ದೆ ಎಂದು ಹೇಳಿದರು. ಸಚಿವ ಆರ್‌.ಅಶೋಕ್‌, ಎಲ್ಲಿಂದ ಸ್ಪರ್ಧಿಸುತ್ತೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಸಿದ್ದರಾಮಯ್ಯ, ಪದ್ಮನಾಭನಗರ ಎಂದವರು ಬಳಿಕ, 224 ಕ್ಷೇತ್ರದಲ್ಲಿ ಅದೂ ಒಂದು ಕ್ಷೇತ್ರವಲ್ಲವೆ. ನಾನು ಪ್ರತಿನಿಧಿಸುತ್ತಿರುವ ಬಾದಾಮಿಯಿಂದಲೇ ಸ್ಪರ್ಧಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಈ ನಡುವೆ ಜೆಡಿಎಸ್‌ನ ಎಚ್‌.ಡಿ.ರೇವಣ್ಣ, ಕಾಂಗ್ರೆಸ್‌ ಯಾವ ಸ್ಥಿತಿಗೆ ಬಂದಿದೆ ಎಂದರೆ ಈಗಾಗಲೇ ಸಿಂಧಗಿಯಲ್ಲಿ ನಮ್ಮ ಪಕ್ಷದವರನ್ನು ಸೆಳೆದಿದೆ. ಶಿವಮೊಗ್ಗಕ್ಕೆ ಭರ್ಜರಿ ಅಭ್ಯರ್ಥಿ ಹುಡುಕಿದ್ದಾರೆ. ನಮ್ಮ ಪಕ್ಷಕ್ಕೆ ಇಷ್ಟೊಂದು ಬೇಡಿಕೆ ಇದೆಯಲ್ಲಾ ಎಂದು ನಗುತ್ತಾ ಹೇಳಿದರು. ಅದಕ್ಕೆ ಸಿದ್ದರಾಮಯ್ಯ, ನಿಮಗೆ ಸ್ವಂತ ಶಕ್ತಿಯ ಸರ್ಕಾರ ರಚಿಸಲು ಸಾಧ್ಯವಿಲ್ಲದ ಕಾರಣ ಬೇಡಿಕೆಯ ಪಕ್ಷವಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ವೈರಮುಡಿ ಉತ್ಸವ: ಹೊರ ರಾಜ್ಯ, ಜಿಲ್ಲೆಯ ಭಕ್ತಾಧಿಗಳಿಗೆ ನಿರ್ಬಂಧ, ಸರಳವಾಗಿ ಆಚರಿಸಲು ನಿರ್ಧಾರ

ಈ ಮಧ್ಯೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಸದನಕ್ಕೆ ಬಂದು ತಮ್ಮ ಸ್ಥಾನದಲ್ಲಿ ಆಸೀನರಾದರು. ಆಗ ಸಚಿವ ಬಸವರಾಜ ಬೊಮ್ಮಾಯಿ, ನೀವು ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳುವ ಮೂಲಕ ಯಾರಿಗೆಲ್ಲಾ ಸಂದೇಶ ಕೊಡಬೇಕೋ ಅವರಿಗೆ ಕೊಟ್ಟಿದ್ದೀರಿ ಬಿಡಿ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಕೊನೆಗೆ ಸಿದ್ದರಾಮಯ್ಯ, ರಾಜಕೀಯ ನಿಂತ ನೀರಲ್ಲ. ಬದಲಾವಣೆ ಆಗುತ್ತಿರುತ್ತದೆ. ಸದ್ಯಕ್ಕೆ ಕಾಂಗ್ರೆಸ್‌ ಇಲ್ಲ ಎಂಬುದು ವಾಸ್ತವ. ಆದರೆ ಮುಂದೆ ಬರಲ್ಲ ಎನ್ನಲಾಗದು. ಮುಂದೆ ಮತ್ತೆ ಬರಲಿದೆ ಎಂಬುದು ವಾಸ್ತವ ಎಂದು ಹೇಳಿ ಚರ್ಚೆಗೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜನರನ್ನು ನಾವೇ ಬದಲಿಸಿದ್ದೇವೆ ಅಲ್ಲವೆ ಎಂದಾಗ ಸಿದ್ದರಾಮಯ್ಯ, ಖಂಡಿತ. ಸಂಸದೀಯ ಮೌಲ್ಯ ಕುಸಿತಕ್ಕೆ ರಾಜಕಾರಣಿಗಳಾದ ನಾವು ನಮ್ಮನ್ನೇ ದೂಷಿಸಿಕೊಳ್ಳಬೇಕು’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next