Advertisement

ಹಳ್ಳಿಜನರಿಗೆ ಸೌಲಭ್ಯ ಕಲ್ಪಿಸಿದಲ್ಲಿ ಅಭಿವೃದ್ದಿ ಕಾಣಲಿದೆ : ಸಿದ್ದರಾಮಯ್ಯ

09:25 PM Mar 26, 2022 | Team Udayavani |

ಹುಣಸೂರು: ಅಧಿಕಾರಸ್ಥರು ಧರ್ಮ,ಜಾತಿ ಹೆಸರಲ್ಲಿ ರಾಜಕಾರಣ ಮಾಡದೆ ಹಳ್ಳಿ ಜನರಿಗೆ ಸೌಲಭ್ಯ ಕಲ್ಪಿಸಿದಲ್ಲಿ ದೇಶ ಅಭಿವೃದ್ದಿ ಪಥದತ್ತ ಸಾಗಲಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಹುಣಸೂರು ಬೈಪಾಸ್ ರಸ್ತೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಕಾವೇರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ತಮ್ಮ ಅವಧಿಯಲ್ಲಿ ಹಳ್ಳಿಜನರಿಗೆ ಸೌಲಭ್ಯ ಕಲ್ಪಿಸಿದಲ್ಲಿ ಅಭಿವೃದ್ದಿ ಕಾಣಬಹುದೆಂಬ ದೃಷ್ಟಿಯಿಂದ ತಾವು ಆರೋಗ್ಯ ಕ್ಷೇತ್ರ ಸೇರಿದಂತೆ ಎಲ್ಲ ಜಾತಿ, ಧರ್ಮದವರಿಗೂ ಸಮನಾಗಿ ಸೌಲಭ್ಯ ಕಲ್ಪಿಸಿದ್ದೆ, ಎಂದೂ ಸಹ ಧರ್ಮದ ಹೆಸರಲ್ಲಿ ರಾಜಕಾರಣ ನಡೆಸಿರಲಿಲ್ಲ. ಧರ್ಮವನ್ನು ಮನೆಯಲ್ಲಿ ಆಚರಿಸಿಕೊಳ್ಳಲಿ ಆದರೆ ಆಡಳಿತ ನಡೆಸುವವರು ಧರ್ಮದ ಹೆಸರಲ್ಲಿ ರಾಜಕಾರಣ ಮಾಡಿದರೆ ಅದು ಸಂವಿಧಾನಕ್ಕೆ ಅಪಚಾರವೆಸಗಿದಂತೆ ಎಂದರು.

ಕೇಂದ್ರದ ಮನಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ನರೇಗಾ ಯೋಜನೆಗೆ 1.11 ಲಕ್ಷ ಕೋಟಿ ಮೀಸಲಿಟ್ಟು ಹಳ್ಳಿಜನರಿಗೆ ಉದ್ಯೋಗ ಕಲ್ಪಿಸಲಾಗಿತ್ತು. ಈಗಿನ ಸರಕಾರ 70

ಸಾವಿರ ಕೋಟಿ ಅನುದಾನ ಕಲ್ಪಿಸಿದ್ದು, ಪ್ರತಿವರ್ಷ ಕಡಿತಗೊಳಿಸಲಾಗುತ್ತಿದೆ. ಇದೇನಾ ದೇಶದ ಅಭಿವೃದ್ದಿ ಎಂದರೆ.

ಸದನದಲ್ಲಿ ತಾವು ಮೂರು ಬಾರಿ ರಾಗಿ ಖರೀದಿ ಬಗ್ಗೆ ಗಮನ ಸೆಳೆದರೂ ಸಹ ಅಡಳಿತ ನಡೆಸುತ್ತಿರುವವರು ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಇದೆನಾ ಅಭಿವೃದ್ದಿ ಎಂದರೆ ಎಂದು ಪ್ರಶ್ನಿಸಿದ ಅವರು, ಒಂದೆಡೆ ಲಾಭ-ಮತ್ತೊಂದೆಡೆ ನಷ್ಟವೂ ಆಗಬಹುದು ಆದರೆ ರೈತರ ಹಿತ ಕಾಯಬೇಕಾದ್ದು ಸರಕಾರಗಳ ಆಧ್ಯ ಕರ್ತವ್ಯವಾಗಬೇಕು. ಕಳೆದ ೫ ವರ್ಷಗಳಿಂದ ಅಡುಗೆ ಎಣ್ಣೆ, ಗ್ಯಾಸ್, ಕಬ್ಬಿಣ ಸೇರಿದಂತೆ ಎಲ್ಲಾ ಬೆಲೆಗಳು ಗಗನಕ್ಕೇರುತ್ತಲೇ ಇದೆ. ಇದಕ್ಕೆ ಕಡಿವಾಣ ಬೀಳಬೇಕು. ರೈತ ಬೆಳೆದ ರಾಗಿ,ಜೋಳ, ಭತ್ತ ಖರೀದಿಗೆ ಸರಕಾರಗಳು ಮುಂದಾಗಬೇಕು. ಆ ಮೂಲಕ ರೈತರ ನೆರವಿಗೆ ಬರಬೇಕೆಂದು ಆಗ್ರಹಿಸಿದರು.

Advertisement

ವೈದ್ಯ ಡಾ.ಲೋಹಿತ್ ಮತ್ತವರ ವೈದ್ಯ ಸ್ನೇಹಿತರು ಇಂತಹ ಕಷ್ಟದ ಕಾಲದಲ್ಲೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತಿರುವುದು ಸಂತಸ ತಂದಿದೆ, ಆದರೆ ಹಳ್ಳಿಗಾಡಿನ ಬಡವರ ನೆರವಿಗೆ ನಿಲ್ಲಬೇಕು. ಆಸ್ಪತ್ರೆ ನಿರ್ಮಿಸುವಾಗಲೇ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಂಡು ಆರಂಭಿಸಬೇಕೆಂದರು.

ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ರಾಜ್ಯದ ಬಡಜನರಿಗೆ ಹಲವು ಭಾಗ್ಯಗಳನ್ನು ಕಲ್ಪಿಸಿದ್ದ ಸಿದ್ದರಾಮಯ್ಯನವರ ಅಧಿಕಾರವಧಿಯಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಮನುಷ್ಯನಾದವನು ಸಹಾಯವನ್ನು ಮರೆಯುವುದು ಸಹಜ ಆದರೆ 40 ವರ್ಷಗಳಿಂದ ತುಂಬದ ಈ ಭಾಗದ ಕೆರೆಗಳಿಗೆ ನೀರು ತುಂಬಿಸಿ ರೈತರ ನೆರವಿಗೆ ನಿಂತಿರುವುದು, ನಗರದ ಹೈಟೆಕ್ ಆಸ್ಪತ್ರೆ, ಸುಸಜ್ಜಿತ ಅರಸು ಭವನ ನಿರ್ಮಾಣ, ಜಿ.ಟಿ.ಡಿ.ಸಿ ಕಾಲೇಜು ಮಂಜೂರು, ಅರಸು ಕಾಲೇಜು ಅಬೀವೃದ್ದಿ ಸೇರಿದಂತೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಇನ್ನು ಅವರ ಆಶಯದಂತೆ ವರ್ಷದ ಹಿಂದೆ ಬಾಡಿಗೆ ಕಟ್ಟದಲ್ಲಿದ್ದರೂ ಡಾ.ಲೋಹಿತ್ ಮತ್ತವರ ಸಂಸ್ಥೆ ಕೋವಿಡ್ ಸಂದರ್ಭದಲ್ಲಿ ಬಡಜನರಿಗೆ ನೆರವಾಗಿದ್ದನ್ನು ಸ್ಮರಿಸಿ, ಬಡವರಿಗೆ ನೆರವಾಗುವವರಿಗೆ ತಮ್ಮ ಸಹಕಾರ ವಿರಲಿದೆ ಎಂದರು.

ಇದನ್ನೂ ಓದಿ :ಪತ್ನಿಯ ಮಾಜಿ ಪತಿ ಕೊಲೆಗೆ ಯತ್ನ : ರೌಡಿಶೀಟರ್‌ ಸೇರಿ ಆರು ಮಂದಿ ಬಂಧನ

ಕಡಿಮೆ ದರದಲ್ಲಿ ಸೇವೆ, ಡಾ.ಲೋಹಿತ್ ವಾಗ್ದಾನ:
ಆಸ್ಪತ್ರೆಯ ಮುಖ್ಯಸ್ಥ ಡಾ.ಲೋಹಿತ್ ಮಾತನಾಡಿ ವರ್ಷದಲ್ಲಿ ಕೆಲ ಬಡವರಿಗಾಗಿ 1200 ಆಪರೇಷನ್ ನಡೆಸಿದ್ದು, ಕೋವಿಡ್ ಸಂದರ್ಭದಲ್ಲಿ ಉಚಿತ ಸೇವೆಯೂ ನೀಡಿದ್ದೇವೆ. ಹುಣಸೂರು ಸುತ್ತಮುತ್ತಲಿನ ನಾಲ್ಕು ತಾಲೂಕನ್ನು ಕೇಂದ್ರವಾಗಿಸಿಕೊಂಡು ನೂರು ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕೆಂದು ಆರಂಭಿಸಲಾಗುತ್ತಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾಘಟಕ, ತುರ್ತುಚಿಕಿತ್ಸೆ, ಸಿಟಿ ಸ್ಕ್ಯಾನಿಂಗ್, ಸುಸಜ್ಜಿತ ಆಪರೇಷನ್ ಥಿಯೇಟರ್ ಹಾಗೂ 24*7 ಮಾದರಿಯಲ್ಲಿ ನುರಿತ ತಜ್ಞರಾದ ಡಾ.ವಿಶ್ವಾಸ್, ಡಾ. ಅರ್ಜುನ್, ಡಾ.ಸೋಮಶೇಖರ್ ಮತ್ತಿತರರು ತಮ್ಮೊಂದಿಗೆ ಸೇವೆ ನೀಡಲಿದ್ದು, ಬಳಸಿಕೊಳ್ಳುವಂತೆ ಮನವಿ ಮಾಡಿ, ಆಸ್ಪತ್ರೆ ನಿರ್ಮಾಣದ ನಂತರದಲ್ಲಿ ಸಿದ್ದರಾಮಯ್ಯ ನರ್ಸಿಂಗ್ ಕಾಲೇಜು ಆರಂಭಿಸಿ, ಬಡ ವಿದ್ಯಾರ್ಥಿಗಳಿಗೆ ನೆರವಾಗುವುದಾಗಿ ವಾಗ್ದಾನ ಮಾಡಿದರು.

ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ದಾವಣಗೆರೆಯ ತಿಪ್ಪಣ್ಣ, ಶಂಭಯ್ಯ, ಮೇಠಿ, ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಗೋವಿಂದೇಗೌಡ, ಮುಖಂಡರಾದ ರವಿಶಂಕರ್, ನಗರಸಭೆ ಅಧ್ಯಕ್ಷ ದೇವನಾಯ್ಕ, ಮಾಜಿ ಅಧ್ಯಕ್ಷರಾದ ಸೌರಭಸಿದ್ದರಾಜು, ಅನುಷಾ, ಹುಡಾ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ರಾಕೇಶ್‌ಪಾಪಣ್ಣ, ದಸಂಸದ ಹರಿಹರ ಆನಂದಸ್ವಾಮಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದರು. ಎರಡು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಸಿದ್ದುಗೆ ಆಹ್ವಾನ: ಅಭಿಮಾನಿಗಳು ಸಿದ್ದರಾಮಯ್ಯರನ್ನು ತಮ್ಮ ಕ್ಷೇತ್ರಕ್ಕೆ ಕರೆಯುತ್ತಿದ್ದಾರೆ, ತಮ್ಮ ಯಶಸ್ಸಿಗೆ ಕಾರಣರಾಗಿರುವ ಸಿದ್ದರಾಮಯ್ಯನವರು ಅರಸರ ಕರ್ಮಭೂಮಿಯಿಂದ ಸ್ಪರ್ಧಿಸುವುದಾದಲ್ಲಿ ತುಂಬು ಹೃದಯತಿಂದ ಸ್ವಾಗತಿಸುವುದಾಗಿ ಸಭೆಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next