Advertisement

ಹೆಚ್ಚಿದ ಸಿದ್ದು ತೂಕ;·ಇಂದು ಬೆಂಗಳೂರಿಗೆ ಆಗಮಿಸಲಿರುವ ಸಿದ್ದರಾಮಯ್ಯ

06:00 AM Jun 28, 2018 | Team Udayavani |

ಬೆಂಗಳೂರು: ಧರ್ಮಸ್ಥಳದ ಶಾಂತಿವನದ  ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯವಾಗಿ ತೂಕ ಹೆಚ್ಚಿಸಿಕೊಂಡು ಗುರುವಾರ ರಾತ್ರಿ ಬೆಂಗಳೂರಿಗೆ ಮರಳಲಿದ್ದು, ಇದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಕೂಡ ಗುರುವಾರವೇ ರಾಜಧಾನಿಗೆ ಆಗಮಿಸುತ್ತಿದ್ದಾರೆ. 

Advertisement

ಜತೆಗೆ, ವಾರಾಂತ್ಯದಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಕೂಡ ಬೆಂಗಳೂರಿಗೆ ಬರುತ್ತಿದ್ದು, ಇವರೆಲ್ಲರೂ ಸಿದ್ದರಾಮಯ್ಯ ಜತೆಗೆ ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹೈಕಮಾಂಡ್‌ ಸಂದೇಶ ಹೊತ್ತು ವೇಣುಗೋಪಾಲ್‌ ಆಗಮಿಸುತ್ತಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯ ಜೊತೆಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ನಂತರದಲ್ಲಿ ಬರುವ ಆಜಾದ್‌ ಅವರೂ ಸಿದ್ದರಾಮಯ್ಯ ಜತೆ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.

ಇವೆಲ್ಲದರ ನಡುವೆಯೇ ಉಪಮುಖ್ಯಮಂತ್ರಿ ಪರಮೇಶ್ವರ್‌ ಅವರು, ಗುರುವಾರ ಕಾಂಗ್ರೆಸ್‌ ಸಚಿವರ ಸಭೆ ಕರೆದಿದ್ದಾರೆ. ಬಜೆಟ್‌ ಅಧಿವೇಶನದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಸಮ್ಮಿಶ್ರ ಸರ್ಕಾರದ ಬಗ್ಗೆ ಅನಗತ್ಯ ಹೇಳಿಕೆ ನೀಡದಂತೆ ಸೂಚನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಂದು ಸಿದ್ದು ವಾಪಸ್‌
ಹದಿನಾಲ್ಕು ದಿನ ಶಾಂತಿವನದಲ್ಲಿದ್ದ ಸಿದ್ದರಾಮಯ್ಯ ಗುರುವಾರ ಬೆಂಗಳೂರಿಗೆ ಬರುತ್ತಿದ್ದು, ಅವರ ಭೇಟಿಗಾಗಿ ನಾಯಕರ ದಂಡೇ ಕಾಯುತ್ತಿದೆ. ಬಜೆಟ್‌ ಮಂಡನೆ ವಿಚಾರದಲ್ಲಿ ಅತೃಪ್ತಿಯಷ್ಟೇ ಅಲ್ಲದೆ ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಆಪ್ತ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದರಿಂದ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ, ಅವರ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ರಾಜಕೀಯ ವಲಯದಲ್ಲೂ ಇದೆ.

Advertisement

ಈ ಮಧ್ಯೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ದೆಹಲಿಗೆ ತೆರಳಿ ಕಾಂಗ್ರೆಸ್‌ ಹೈಕಮಾಂಡ್‌ ಜತೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಮುಂದಿನ ವಿದ್ಯಮಾನಗಳು ಕುತೂಹಲ ಕೆರಳಿಸಿವೆ.

ಅಲ್ಲೋಲ ಕಲ್ಲೋಲ
ಸಿದ್ದರಾಮಯ್ಯ ಅವರು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿದ್ದುಕೊಂಡೇ ಸಮ್ಮಿಶ್ರ ಸರ್ಕಾರದಲ್ಲಿ ಬಜೆಟ್‌ ಮಂಡಿಸುವುದರ ಬಗ್ಗೆ ಅಸಮಾಧಾನ ಹಾಗೂ ಲೋಕಸಭೆ ಚುನಾವಣೆ ನಂತರ ಸರ್ಕಾರದ ಭವಿಷ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ.

ಸಿದ್ದರಾಮಯ್ಯ ಅವರು  ಆಪ್ತ ಶಾಸಕರ ಜತೆ ಲೋಕಾಭಿರಾಮವಾಗಿ ಮಾತನಾಡಿದ್ದ ವಿಡಿಯೋ ದೃಶ್ಯಗಳು ಖಾಸಗಿ ವಾಹಿನಿಗಳಲ್ಲಿ ಪ್ರಸಾರಗೊಂಡ ನಂತರವಂತೂ ಶಾಂತಿವನ ರಾಜಕೀಯ ಚಟುವಟಿಕೆಗಳ ಕೇಂದ್ರವೂ ಆಗಿತ್ತು. ಸಿದ್ದರಾಮಯ್ಯ ಅವರ ವಿರುದ್ಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ ಹೈಕಮಾಂಡ್‌ಗೆ ದೂರು ನೀಡುವ ಮಟ್ಟಕ್ಕೂ ಪರಿಸ್ಥಿತಿ ಹೋಗಿತ್ತು. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಮತ್ತೂಂದೆಡೆ  ಈ ಬೆಳವಣಿಗೆಗಳ ಮಧ್ಯೆ, ಸಿದ್ದರಾಮಯ್ಯ ಅವರನ್ನು ಮೂವತ್ತಕ್ಕೂ ಹೆಚ್ಚು ಶಾಸಕರು ಸೇರಿದಂತೆ ಸಚಿವರು, ವಿಧಾನಪರಿಷತ್‌ ಸದಸ್ಯರು, ಮಾಜಿ ಸಚಿವರು, ಪಕ್ಷದ ಮುಖಂಡರು ಭೇಟಿ ಮಾಡಿ ಚರ್ಚಿಸಿದ್ದು ಒಂದು ರೀತಿಯ ಬಲಪ್ರದರ್ಶನವೂ ಆಯಿತು.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಶಾಂತಿವನಕ್ಕೆ ಭೇಟಿ ನೀಡಿ  ರಾಜಿ ಸಂಧಾನ ಎಂಬಂತೆ ಮಾತುಕತೆ ಸಹ ನಡೆಸಿದರು. ಹೈಕಮಾಂಡ ಸೂಚನೆ ಮೇರೆಗೆ ಲೋಕಸಭೆ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ಸಿದ್ದರಾಮಯ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದರು ಎಂದು ಹೇಳಲಾಗಿದೆ.

ಜೂ.30 ಕ್ಕೆ ಸಮನ್ವಯ ಸಮಿತಿ ಸಭೆ
ಸಿದ್ದರಾಮಯ್ಯ ಅವರು ಶಾಂತಿವನದಿಂದ ಮೈಸೂರು ಅಥವಾ ಬಾದಾಮಿಗೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಜೂ.30 ರಂದು ಸಮನ್ವಯ ಸಮಿತಿ ಸಭೆ ಇರುವುದರಿಂದ ಬೆಂಗಳೂರಿಗೆ ವಾಪಸ್ಸಾಗಲು ತೀರ್ಮಾನಿಸಿದರು. ಸಮನ್ವಯ ಸಮಿತಿ ಸಭೆಯ ನಂತರ ಬಾದಾಮಿಗೆ ಐದು ದಿನಗಳ ಭೇಟಿ ಕಾರ್ಯಕ್ರಮವಿದೆ.

ಬಜೆಟ್‌ ಮಂಡನೆಯಾದ್ರೆ ಸದನಕ್ಕೆ ಬರ್ತಾರಾ
ಸಮ್ಮಿಶ್ರ ಸರ್ಕಾರ ಹೊಸ ಬಜೆಟ್‌ ಮಂಡಿಸುವ ಅವಶ್ಯಕತೆ ಇಲ್ಲ ಎಂದು ಪಟ್ಟು ಹಿಡಿದಿದ್ದರೆ, ಬಜೆಟ್‌ ಮಂಡಿಸಿಯೇ ತೀರುತ್ತೇನೆ ಎಂದು ಕುಮಾರಸ್ವಾಮಿ ಹಠ ಹಿಡಿದಿದ್ದಾರೆ. ಹೀಗಾಗಿ, ಜುಲೈ 5 ರಂದು ಸಿದ್ದರಾಮಯ್ಯ ಬಜೆಟ್‌ ಮಂಡನೆ ದಿನ ಸದನಕ್ಕೆ ಬರ್ತಾರಾ ಎಂಬುದು ಕಾದು ನೋಡಬೇಕಾಗಿದೆ.

ಬುಧವಾರವೂ ಭರ್ಜರಿ ಭೇಟಿ
ಈ ಮಧ್ಯೆ ಬುಧವಾರವೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಇಬ್ಬರು ಸಚಿವರು, 6 ಮಂದಿ ಶಾಸಕರು, ಓರ್ವ ಸಂಸದ ಹಾಗೂ ವಿಧಾನ ಪರಿಷತ್‌ ಸದಸ್ಯ ಸೇರಿ ಹಲವರು ಭೇಟಿಯಾಗಿ ಚರ್ಚಿಸಿದರು. ಮೊದಲಿಗೆ ಮಾಜಿ ಸಚಿವ ಎಚ್‌.ಆಂಜನೇಯ ಪ್ರತ್ಯೇಕವಾಗಿ ಚರ್ಚೆ ನಡೆಸಿ ಅಲ್ಲಿಂದ ತೆರಳಿದರು. ನಂತರ  ಪೌರಾಡಳಿತ ಸಚಿವ ರಮೇಶ್‌ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್‌ ಕಮಟಳ್ಳಿ, ಕಾಗವಾಡದ ಶ್ರೀಮಂತ ಪಾಟೀಲ್‌, ಬಸವ ಕಲ್ಯಾಣದ ಬಿ.ನಾರಾಯಣ, ಬಳ್ಳಾರಿ ಶಾಸಕ ನಾಗೇಂದ್ರ, ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌, ಮಸ್ಕಿ ಶಾಸಕ ಪ್ರತಾಪ್‌ಗೌಡ ಪಾಟೀಲ್‌ ರಾಯಚೂರು ಸಂಸದ ಬಿ.ವಿ.ನಾಯಕ್‌, ವಿಧಾನ ಪರಿಷತ್‌ ಸದಸ್ಯ ವಿವೇಕ್‌ ರಾವ್‌ ಪಾಟೀಲ್‌ ಆಗಮಿಸಿದರು.

ಒಂದೂವರೆ ಗಂಟೆ ಮಾತುಕತೆ.?
ಸಚಿವ ರಮೇಶ್‌ ಜಾರಕಿಹೊಳಿ ನೇತೃತ್ವದ ತಂಡ ಹಾಗೂ ಸಚಿವ ಶಿವಾನಂದ ಪಾಟೀಲ್‌ ಅವರು ಸುಮಾರು ಒಂದೂವರೆ ಗಂಟೆಗಳಷ್ಟು ಹೊತ್ತು ಮಾಜಿ ಮುಖ್ಯಮಂತ್ರಿಗಳ ಬಳಿ ಮಾತುಕತೆ ನಡೆಸಿದ್ದು ವಿಶೇಷ. ವೆಲ್ಲರೂ ಹೊರ ಬಂದ ಬಳಿಕ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಶಾಂತಿವನಕ್ಕೆ ಆಗಮಿಸಿದರು. ಆರಂಭದಲ್ಲಿ ಭೇಟಿಗೆ ಅವಕಾಶ ನೀಡದ ಸಿದ್ದರಾಮಯ್ಯ, ಬಳಿಕ ದೂರವಾಣಿ ಕರೆ ಮಾಡಿ ಕರೆಸಿಕೊಂಡರು.

ಸಿದ್ಧರಾಮಯ್ಯ ಅವರು ನಮ್ಮ ನಾಯಕರಾಗಿದ್ದು, ಅವರ ಆರೋಗ್ಯ ವಿಚಾರಿಸಿ ಹೊರಟಿದ್ದೇವೆ. ರಾಜಕೀಯವಾಗಿ ಯಾವುದೇ ಚರ್ಚೆ ಮಾಡಿಲ್ಲ. ದಯವಿಟ್ಟು ಬೇರೇನೂ ಕೇಳಬೇಡಿ.
-·ರಮೇಶ್‌ ರಮೇಶ್‌ ಜಾರಕಿಹೊಳಿ, ಪೌರಾಡಳಿತ ಸಚಿವ

ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ಧರಾಮಯ್ಯ ಅವರ ನೇತೃತ್ವದಲ್ಲೇ ಸರ್ಕಾರ ನಡೆಯುತ್ತಿದ್ದು, ಹೀಗಾಗಿ ಅವರಿಗೆ ಅಸಮಾಧಾನದ ಪ್ರಶ್ನೆಯೇ ಬರುವುದಿಲ್ಲ. ಸರ್ಕಾರದಲ್ಲಿ ಅವರನ್ನು ಬಿಟ್ಟು ಏನೂ ನಡೆಯಲು ಸಾಧ್ಯವಿಲ್ಲ. ಅವರನ್ನು ಕಡೆಗಣಿಸಿದರೆ ಸರ್ಕಾರಕ್ಕೆ ಉಳಿಗಾಲವಿಲ್ಲ.
– ಬಿ.ನಾರಾಯಣ ಶಾಸಕ

ಚುನಾವಣೆಯಲ್ಲಿ ಯಾರಿಗೂ ಬಹುಮತ ಇಲ್ಲದ ಕಾರಣ ಹೊಂದಾಣಿಕೆ ಮಾಡಲಾಗಿದ್ದು, ಸರ್ಕಾರದ  ಪ್ರಾರಂಭದ ದಿನಗಳಲ್ಲಿ ಇಂತಹ ಗೊಂದಲ ಸಹಜ. ಕಾಂಗ್ರೆಸ್‌ ಅಧ್ಯಕ್ಷ, ಉಪಮುಖ್ಯಮಂತ್ರಿಗಳಾಗಿರುವ ಪರಮೇಶ್ವರ್‌ ಅವರು ಎಲ್ಲಾ ವಿಚಾರಗಳ ಕುರಿತು ಸಿದ್ದರಾಮಯ್ಯರ ಜತೆ ಮಾತನಾಡಿದ್ದಾರೆ. ಜೂ. 30ರಲ್ಲಿ ಸಭೆ ನಡೆಯಲಿದ್ದು, ಅಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
-·ಟಿ.ಬಿ.ಜಯಚಂದ್ರ. ಮಾಜಿ ಸಚಿವ

ಬಜೆಟ್‌ ಗೊಂದಲಕ್ಕೆ ದೇವೇಗೌಡ ಬೇಸರ
ಈ ನಡುವೆ ಬಜೆಟ್‌ ಮಂಡನೆ ಸಂಬಂಧ ಗೊಂದಲ ಸೃಷ್ಟಿಯಾಗುತ್ತಿರುವ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಬಜೆಟ್‌ ಮಂಡನೆ ಕುರಿತು ಹಲವು ಗೊಂದಲಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಮಾಧ್ಯಮಗಳಲ್ಲಿ ಬಿತ್ತರಗೊಂಡಂತೆ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ಈ ಸಂಬಂಧ ಸಿದ್ಧತಾ ಕಾರ್ಯಗಳು ನಡೆಯುತ್ತಿದ್ದು, ಬಜೆಟ್‌ ಮಂಡನೆಗೆ ಯಾವುದೇ ಆತಂಕ ಬೇಡ. ಜು.5ರಂದು ಮೈತ್ರಿ ಸರ್ಕಾರದ ಬಜೆಟ್‌ ಮಂಡನೆಯಾಗಲಿದೆ ಎಂದು ಹೇಳಿದರು.

ತಮ್ಮ ದೆಹಲಿ ಭೇಟಿ ಬಗ್ಗೆ ಮಾಧ್ಯಮಗಳಲ್ಲಿ ಸತ್ಯಕ್ಕೆ ದೂರವಾದ ಸುದ್ದಿ ಪ್ರಕಟವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಪಸ್ವರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರೊಂದಿಗೆ ಸಮಾಲೋಚನೆ ನಡೆಸಲು ಬಂದಿದ್ದಾರೆ ಎಂದೆಲ್ಲಾ ಹೇಳಲಾಗುತ್ತಿದೆ. ಆದರೆ, ನಾನು ದೆಹಲಿಗೆ ಬಂದಿರುವುದು ರಕ್ಷಣಾ ಇಲಾಖೆಯ ಸ್ಥಾಯಿ ಸಮಿತಿ ಸಭೆಗಾಗಿಯೇ ಹೊರತು ಕಾಂಗ್ರೆಸ್‌ ನಾಯಕರ ಭೇಟಿಗಾಗಿ ಅಲ್ಲ. ಇನ್ನು ಕಾಂಗ್ರೆಸ್‌ ನಾಯಕರ ಭೇಟಿ, ಸಿದ್ದರಾಮಯ್ಯ ವಿರುದ್ಧ ದೂರಿನ ಪ್ರಶ್ನೆ ಎಲ್ಲಿ ಬಂತು ಎಂದರು.

ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ
ಯಾರೂ ಪಕ್ಷದ ವಿರುದ್ಧ ಮಾತನಾಡುವಂತಿಲ್ಲ. ವ್ಯಕ್ತಿ ಪೂಜೆ ಬಿಟ್ಟು ಪಕ್ಷದ ಪೂಜೆ ಮಾಡಿ. ಮಂಡ್ಯ ಲೋಕಸಭೆ ಉಪ ಚುನಾವಣೆ ಮೈತ್ರಿ ಬಗ್ಗೆ ಯಾರೂ ಮಾತನಾಡುವುದು ಬೇಡ. ನಾವು ಐದು ವರ್ಷದ ಸರ್ಕಾರಕ್ಕೆ ಸಹಿ ಹಾಕಿ ಕೊಟ್ಟಿದ್ದೇವೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರೇ ಒಪ್ಪಿಗೆ ಸೂಚಿಸಿದ್ದಾರೆ. 37 ಸ್ಥಾನ ಗಮನಿಸದೇ 224 ಸ್ಥಾನಗಳನ್ನು ಮನಸಿನಲ್ಲಿಟ್ಟುಕೊಂಡು ಮೈತ್ರಿ ರಚನೆ ಆಗಿದೆ. ಸಿದ್ದರಾಮಯ್ಯ ಅವರ ಮಾತುಗಳನ್ನು ಯಾರೋ ಕಿಡಿಗೇಡಿಗಳು ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. ಇದ್ಯಾವುದೂ ಅಧಿಕೃತವಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next