Advertisement

ಸಿದ್ದು ಕಣ್ಣೀರಿಟ್ಟಾಗ ಧೈರ್ಯ ತುಂಬಿದ್ದೇ ಗೌಡರು

12:30 PM Oct 25, 2021 | Team Udayavani |

ಮೈಸೂರು: “1999ರಲ್ಲಿ ನನಗಿನ್ನು ಚುನಾವಣೆ ಸಾಕು, ಸ್ಪರ್ಧಿಸಲು ಆಗುವುದಿಲ್ಲ. ವಕೀಲ ವೃತ್ತಿ ಮಾಡಿಕೊಂಡು ಇರುತ್ತೇನೆ ಎಂದು ಕಣ್ಣೀರು ಹಾಕಿದ್ದರು’. ಆಗ ಇದೇ ದೇವೇಗೌಡರು ಧೈರ್ಯತುಂಬಿ, ಬೆನ್ನುತಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೇಳಿದ್ದರು. ಇದೆಲ್ಲವೂ ಈಗ ಮರೆತು ಹೋಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

Advertisement

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಾಧ್ಯಮ ಮಿತ್ರರೊಂದಿಗೆ ಸಂವಾದ ನಡೆಸಿ, ನಾನು ಜೆಡಿಎಸ್‌ ನಲ್ಲಿದ್ದಾಗ ಪಕ್ಷ ಸಂಘಟಿಸಿದ್ದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕಾರ್ಯಕ್ರಮ ವೇದಿಕೆ ನಿರ್ಮಾಣ, ಶಾಮಿಯಾನ ಹಾಕುವುದು, ಬಂಟಿಂಗ್‌ ಕಟ್ಟುವುದು, ಕಾರ್ಯಕರ್ತರನ್ನು ಸೇರಿಸುವ ಕೆಲಸವನ್ನು ನಾವು ಮಾಡುತ್ತಿದ್ದೆವು. ಅವರು ಕಾರ್ಯಕ್ರಮಕ್ಕೆ ಬಂದು ಭಾಷಣ ಬಿಗಿಯುತ್ತಿದ್ದರು. ಅದೇ ಅವರು ಪಕ್ಷ ಸಂಘಟಿಸಿದ ಪರಿ. ಒಮ್ಮೆ ಪಕ್ಷದ ಕಾರ್ಯಕ್ರಮವೊಂದರ ಬ್ಯಾನರ್‌ನಲ್ಲಿ ಅವರ ಫೋಟೋ ಇಲ್ಲದ್ದಕ್ಕೆ ಕಾರ್ಯಕ್ರಮದಿಂದ ದೂರ ಉಳಿದಿದ್ದರು.

ಬಳಿಕ ಕೆ. ವೆಂಕಟೇಶ್‌ ಅವರನ್ನು ಸಂಧಾನಕ್ಕೆ ದೊಡ್ಡಗೌಡರು ಕಳುಹಿಸಿಕೊಟ್ಟಿದ್ದರು. ಇಂತ ವ್ಯಕ್ತಿ ಮುಖ್ಯಮಂತ್ರಿ ಸ್ಥಾನವನ್ನು ಬೇರೊಬ್ಬರಿಗೆ ಬಿಟ್ಟುಕೊಡುತ್ತಾರ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ವೇದಿಕೆಗಳಲ್ಲಿ ದೊಡ್ಡಗೌಡರ ಪಕ್ಕ ಕಾಲಮೇಲೆ ಕಾಲು ಹಾಕಿಕೊಂಡು ಕುಳಿತಿದ್ದಲ್ಲದೇ ಚಪ್ಪಲಿ ಕಾಲಿನಲ್ಲಿ ಒದ್ದುಕೊಂಡು ಕುಳಿತುಕೊಳ್ಳುತ್ತಿದ್ದರು. ಇದನ್ನೆಲ್ಲಾ ನಾವು ನೋಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು.

ಆನೆ ಹೋದರೆ ನಾಯಿ ಬೊಗಳುತ್ತವೆ: ಕುಮಾರ ಸ್ವಾಮಿ ಸೂಟ್‌ಕೇಸ್‌ ರಾಜಕಾರಣ ಮಾಡ್ತಿದ್ದಾರೆ ಎಂಬ ಶಾಸಕ ಜಮೀರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂತಹ ಹೇಳಿಕೆಗಳಿಗೆ ನಾವು ಉತ್ತರ ಕೊಡುವುದಕ್ಕೆ ಆಗುತ್ತಾ? ಬೀದಿಯಲ್ಲಿ ಆನೆ ಹೋಗುತ್ತಿದ್ದಾಗ ನಾಯಿಗಳು ಬೊಗಳುತ್ತವೆ, ಹಾಗಂತ ಎಲ್ಲದಕ್ಕೂ ಉತ್ತರ ಕೊಡುವುದಕ್ಕೆ ಸಾಧ್ಯವಾ, ನಾನು ಕಂಡವರ ಸೂಟ್‌ ಕೇಸ್‌ಗೆ ಕೈಹಾಕಿದ್ದೇನೆ ಅಂದೊRಳ್ಳೋಣ. ಆದರೆ ಎಚ್‌ .ಡಿ. ದೇವೆಗೌಡ ಸೂಟ್‌ಕೇಸ್‌ ತರಲು ಬಂದಿದ್ದಾರೆ ಅಂದಿದ್ದಾರೆ.

ನಾಲಿಗೆ ಇದೆ ಅಂತ ಹೊಲಸು ಮಾತನಾಡಿದ್ರೆ ಉತ್ತರಿಸಬೇಕಾ ಎಂದು ತಿರುಗೇಟು ನೀಡಿದರು. ನಾನು ಕಾಲೇಜಿನಲ್ಲಿ ಓದುತ್ತಿರುವಾಗ ಬೆಂಗಳೂರಿನ ನಾಲ್ಕು ವಾರ್ಡ್‌ಗಳಲ್ಲಿ ಕಸ ಸಂಗ್ರಹಿಸುವ ಟೆಂಡರ್‌ ತೆಗೆದುಕೊಂಡೆ. ಕಸದ ಟೆಂಡರ್‌ ತೆಗೆದುಕೊಂಡು ದುಡಿಮೆ ಮಾಡುತ್ತಿದ್ದಾರೆ. ಈ ಸಂದರ್ಭ ಪ್ರತಿಪಕ್ಷ ನಾಯಕ ನಾಗೇಗೌಡರು ಸದನದಲ್ಲಿ ವಿಷಯ ಪ್ರಸ್ತಾಪಿಸಿದರು.

Advertisement

ಆಗ ದೇವೇಗೌಡರು ರಾಜಕೀಯಕ್ಕೆ ಸಂಬಂಧಿಸಿದ ಯಾವ ಕೆಲಸದಲ್ಲೂ ನೀನು ಭಾಗಿಯಾಗಬೇಡ ಎಂದು ಹೇಳಿದಾಗ ಮೈಸೂರಿನಲ್ಲಿ ಚಿತ್ರದ ಹಂಚಿಕೆದಾರನಾಗಿ ಕೆಲಸ ಮಾಡಿದೆ. ನಾನು ನನ್ನ ತಂದೆ ನೆರಳಲ್ಲಿ ಬೆಳೆಯಲಿಲ್ಲ. ಬಡ್ಡಿ ದುಡ್ಡು ತೆಗೆದುಕೊಂಡು ದುಡಿದಿದ್ದೇನೆ ಎಂದು ಹೇಳಿದರು. ಸರ್ಕಾರ, ವಿಪಕ್ಷಕ್ಕೆ ಜನರ ಸಂಕಷ್ಟ ಬೇಕಿಲ್ಲ: ಉಪ ಚುನಾವಣೆಯನ್ನು ನಾವು ಲೆಕ್ಕಕ್ಕೆ ಇಟ್ಟಿರಲಿಲ್ಲ. ಆದರೆ ಎಚ್‌.ಡಿ. ದೇವೇಗೌಡರು ಮಾಡಿದ ಕೆಲಸ ಮತ್ತು ನನ್ನ ಅವಧಿಯಲ್ಲಿ ಸಾಲ ಮನ್ನಾ ಮಾಡಿದ್ದನ್ನು ಅಲ್ಲಿನ ಜನ ಪ್ರೀತಿಯಿಂದ ನೆನೆಸಿಕೊಳ್ಳುತ್ತಿದ್ದಾರೆ.

ಸಿಂಧಗಿಯಲ್ಲಿ ಗೆಲ್ಲುವ ವಿಶ್ವಾಸವಿದೆ. ಹಾನಗಲ್‌ನಲ್ಲಿ ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ. ಆದರೆ, ರಾಜ್ಯದ ಹಲವೆಡೆ ಭಾರಿ ಮಳೆಯಿಂದ ಮನೆಗಳು ಜಲಾವೃತವಾಗಿರುವುದು, ರಸ್ತೆ ಸಂಪರ್ಕ ಕಡಿತ ಹಾಗೂ ಬೆಳೆ ಹಾನಿಯಾಗಿದೆ. ಆದರೆ ಇತ್ತ ಸರ್ಕಾರ ಜನರ ಕಷ್ಟಗಳನ್ನು ನೋಡದೆ ಉಪಚುನಾವಣೆಗಾಗಿ ಎಲ್ಲಾ ಸಚಿವರನ್ನು ಬೂತ್‌ಗೆ ಒಬ್ಬರಂತೆ ನೇಮಿಸಿದೆ. ಇದನ್ನು ಸಮರ್ಥವಾಗಿ ವಿರೋಧಿಸದ ವಿಪಕ್ಷವೂ ಚುನಾವಣೆ ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದಿದೆ. ಈ ಎರಡೂ ಪಕ್ಷಗಳಿಗೆ ಜನರ ಸಂಕಷ್ಟ ಬೇಕಾಗಿಲ್ಲ. ಉಪಚುನಾವಣೆಯೇ ಮುಖ್ಯವಾಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ:- ತೆಲಂಗಾಣ ಗಡಿಯಲ್ಲಿ ಎನ್ ಕೌಂಟರ್: ಮೂವರು ನಕ್ಸಲರನ್ನು ಹತ್ಯೆಗೈದ ಪೊಲೀಸರು

ಈಗ ನಾವು ಕಡಿಮೆ ಸಂಖ್ಯೆಯಲ್ಲಿರಬಹುದು. ಆದರೆ, ಪರಿಶ್ರಮ ಪಟ್ಟರೆ, ಏನು ಬೇಕಾದರೂ ಸಾಧಿಸಬಹುದು. ಶ್ರಮದ ಫ‌ಲ ದೊರೆಯುತ್ತದೆ. ಉದಾಹರಣೆಗೆ ಬಿಜೆಪಿ 2 ಸ್ಥಾನದಲ್ಲಿತ್ತು, ನಂತರ 18, ಬಳಿಕ 85 ಆಮೇಲೆ 300ಕ್ಕೂ ಹೆಚ್ಚು ಸ್ಥಾನ ಗಳಿಸಿದೆ. ಅಂತೆಯೇ ಜೆಡಿಎಸ್‌ ಕೂಡ 123 ಕ್ಷೇತ್ರದಲ್ಲಿ ಗೆಲ್ಲುತ್ತದೆ. ಪಕ್ಷದ ಕಾರ್ಯಕರ್ತರನ್ನು ಸಂಘಟಿಸ ಲಾಗುತ್ತಿದೆ. ಪಕ್ಷ ಬಿಡುವ ತೀರ್ಮಾನ ಮಾಡಿದ್ದವರು ಹಿಂದಿರುಗಿ ಬರುವ ವಿಶ್ವಾಸವಿದ್ದು, ಅಂತಹ ಸೂಚನೆ ಕಂಡುಬರುತ್ತಿದೆ. ಪಕ್ಷ ತೊರೆದು ಹೋಗುವ ಯಾರನ್ನೂ ಬಲವಂತವಾಗಿ ಉಳಿಸಿಕೊಳ್ಳಲ್ಲ ಹೇಳಿದರು. ಕಾಂಗ್ರೆಸ್‌ನ ರೆಹಮಾನ್‌ ಖಾನ್‌ ಅವರು ಹೇಳಿರುವಂತೆ ದೇಶದಲ್ಲಿ 22 ಕೋಟಿ ಜನಸಂಖ್ಯೆ ಇರುವ ಮುಸಲ್ಮಾನರು ಈಗ ಅಲ್ಪಸಂಖ್ಯಾತರಲ್ಲ.

ಮುಸಲ್ಮಾನರಷ್ಟೇ. ಹಾಗಾಗಿ ನಾನು ಅಲ್ಪಸಂಖ್ಯಾತ ಮುಸಲ್ಮಾನರು ಎಂದು ಹೇಳುವುದಿಲ್ಲ ಎಂದರು. ಸಂವಾದದಲ್ಲಿ ಸಂಘದ ಅಧ್ಯಕ್ಷ ಎಸ್‌.ಟಿ. ರವಿಕುಮಾರ್‌, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ಉಪಾಧ್ಯಕ್ಷ ಅನುರಾಗ್‌ ಬಸವರಾಜು, ಖಜಾಂಚಿ ಪಿ. ರಂಗಸ್ವಾಮಿ ಉಪಸ್ಥಿತರಿದ್ದರು.

ವರುಣಾ ಕ್ಷೇತ್ರದಲ್ಲಿ ಕಾರ್ಯಕರ್ತರು ಇರಲಿಲ್ವಾ?

ನಾನು ಜೆಡಿಎಸ್‌ನಲ್ಲಿದ್ದಾಗ ಜೆಡಿಎಸ್‌ ಆಗಿತ್ತು. ಈಗ ಜೆಡಿಎಫ್ (ಫ್ಯಾಮಿಲಿ ಪಾರ್ಟಿ) ಎಂದು ಹೇಳಿದ್ದೀರಿ. ಹಾಗಾದರೆ ವರುಣಾದಲ್ಲಿ ನೀವು ಏನು ಮಾಡಿದಿರಿ ಸಿದ್ದರಾಮಯ್ಯ ಎಂದು ಪ್ರಶ್ನಿಸಿ, ಬಾದಾಮಿಯಲ್ಲಿ ನೀವು ನಿಂತು, ಚಾಮುಂಡೇಶ್ವರಿಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್‌ ಕೊಡಬಹುದಿತ್ತಲ್ಲವೇ ? ನಮ್ಮ ಪಕ್ಷವನ್ನು ಜೆಡಿಎಫ್ ಅಂತೀರಲ್ಲ ವರುಣಾದಲ್ಲಿ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರು ಇರಲಿ ಲ್ಲವೆ..? ನಮ್ಮದು ಫ್ಯಾಮಿಲಿ ಪಾರ್ಟಿ ಅಂತೀರ, ನಿಮ್ಮ ಮಗನನ್ನು ವರುಣಾದಲ್ಲಿ ನಿಲ್ಲಿಸಿದ್ರಲ್ಲ. ನಿಮ್ಮದು ಯಾವ ಪಾರ್ಟಿ ? ನಿಮ್ಮದು ಪ್ಯಾಮಿಲಿ ಪಾರ್ಟಿ ಅಲ್ವಾ ? ಅಲ್ಲಿ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು ಇರಲಿಲ್ಲವಾ..? ಎಲ್ಲರ ಮನೆ ದೋಸೆನೂ ತೂತೆ ಇದನ್ನು ಅರ್ಥ ಮಾಡಿಕೊಳ್ಳ ಬೇಕು ಎಂದು ಎಚ್‌ಡಿಕೆ ಕಿಡಿಕಾರಿದರು.

300 ಕೋಟಿ ಹಫ್ತಾ: ಇದು ಆರೆಸ್ಸೆಸ್‌ ಸಿದ್ಧಾಂತವೇ?

ಆರೆಸ್ಸೆಸ್‌ ಬಗ್ಗೆ ನಾನು ಇತ್ತೀಚೆಗೆ ಮಾತನಾಡಿದ್ದನ್ನೇ ದೊಡ್ಡದು ಮಾಡಿದರು. ಆದರೆ, “ಜಮ್ಮು ಕಾಶ್ಮೀರ ದಲ್ಲಿ ಎರಡು ಕಡತ ವಿಲೇವಾರಿಗೆ ಉದ್ಯಮಿಗಳು 300 ಕೋಟಿ ರೂ.ಹಫ್ತಾ ಕೊಟ್ಟಿದ್ದರು’ ಎಂದು ಅಲ್ಲಿನ ರಾಜ್ಯಪಾಲರು ಹೇಳಿಕೆ ಕೊಟ್ಟಿದ್ದಾರೆ. ಅವರ ಪಕ್ಷದ ಪ್ರಧಾನಿಗಳೇ ಜಮ್ಮ ಕಾಶ್ಮೀರದಲ್ಲಿ ನೇಮಿ ಸಿರುವ ರಾಜ್ಯಪಾಲರೇ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಇದು ಅವರ ಸಿದ್ಧಾಂ ತವೇ? ದೇಶದಲ್ಲಿ ಹಿಂದುತ್ವ ನಾಶ ಮಾಡಲು ಯಾರಿಂ ದಲೂ ಸಾಧ್ಯವಿಲ್ಲ. ಹಿಂದುತ್ವ ಈ ದೇಶದ ಬ್ರಾಂಡ್‌ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ಜಿಟಿಡಿ ಉಳಿಯುತ್ತೇನೆ ಎಂದಾಗ ಹೇಳುತ್ತೇನೆ

ಮೈಸೂರು: ಶಾಸಕ ಜಿ.ಟಿ.ದೇವೇಗೌಡ ಮತ್ತು ನಾನು ಸಂಪರ್ಕಿಸಿ ಎರಡೂವರೆ ವರ್ಷಗಳು ಕಳೆದಿದೆ. ಪಕ್ಷದಲ್ಲಿ ಉಳಿಯುವುದು ಅಥವಾ ಬಿಡುವುದು ಅವರಿಗೆ ಬಿಟ್ಟ ವಿಚಾರ. ಉಳಿಯುತ್ತೇನೆ ಎನ್ನುವ ಸಂದರ್ಭ ಬಂದಾಗ ಮುಂದಿನ ಮಾತನ್ನು ಹೇಳುತ್ತೇನೆ. ಈಗ ಏನನ್ನೂ ಹೇಳುವುದಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು. ಜಿಟಿಡಿ ಪಕ್ಷ ತೊರೆಯುವ ಬಗ್ಗೆ ಮಾತನಾಡಲು ಈಗ ಕಾಲಪಕ್ವವಾಗಿಲ್ಲ.

ಮೊದಲು ಅವರು (ಜಿಟಿಡಿ)ಉಳಿಯುತ್ತಾರೊ ಅಥವಾ ಇಲ್ಲವೇ ಎಂಬುದು ಗೊತ್ತಿಲ್ಲ. ಅವರು ನನ್ನೊಂದಿಗೆ ಸಂಪರ್ಕದಲ್ಲಿಲ್ಲ. ನಾನೇನೂ ಕದ್ದುಮುಚ್ಚಿ ಮಾತನಾಡಿಲ್ಲ. ಹಾಗಾಗಿ, ಅವರ ಬಗ್ಗೆ ಹೆಚ್ಚು ಮಾತನಾಡಲಾರೆ. ನಿಖೀಲ್‌ ಕುಮಾರಸ್ವಾಮಿ ಹಾಗೂ ಜಿ.ಡಿ. ಹರೀಶಗೌಡ ಅವರು ಸ್ನೇಹಿತರು. ಅವರ ಹಂತದಲ್ಲಿ ಏನಾದರೂ ಮಾತುಕತೆ ನಡೆಯುತ್ತಿರಬಹುದು. ಒಂದು ವೇಳೆ ಮಕ್ಕಳು ಹೇಳಿದರೆ ಕೇಳಬೇಕಾಗುತ್ತದೆ. ನಿಖೀಲ್‌ ಜತೆಗೆ ಹರೀಶ್‌ಗೌಡ, ಮಹದೇವ ಪುತ್ರ ಪ್ರಸನ್ನ, ಪುಟ್ಟರಾಜು ಪುತ್ರ ಶಿವರಾಜು ಸಮಕಾಲೀನರು.

ಅವರ ಮಟ್ಟದಲ್ಲಿ ಯಾವ ಬೆಳವಣಿಗೆ ನಡೆದಿದೆ ಎಂಬುದು ನನಗೆ ತಿಳಿದಿಲ್ಲ ಎಂದರು. ಪಕ್ಷ ಬಿಡುವ ತೀರ್ಮಾನ ಮಾಡಿದ್ದವರು ಹಿಂದಿರುಗಿ ಬರುವ ವಿಶ್ವಾಸವಿದ್ದು, ಅಂತಹ ಸೂಚನೆ ಕಂಡುಬರುತ್ತಿದೆ. ಪಕ್ಷ ತೊರೆದು ಹೋಗುವ ಯಾರನ್ನೂ ಬಲವಂತವಾಗಿ ಉಳಿಸಿಕೊಳ್ಳಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಜತೆ ಕೈ ಜೋಡಿಸಿದ್ದರಿಂದ ಜೆಡಿಎಸ್‌ ಶಕ್ತಿ ಕುಂದಿದೆ-

ಕಾಂಗ್ರೆಸ್‌ ಜೊತೆ ಕೈ ಜೋಡಿಸಿದ್ದರಿಂದ ಜೆಡಿಎಸ್‌ ಶಕ್ತಿ ಕುಂದಿದೆ. ಮುಂದಿನ ಸಾರ್ವತ್ರಿಕ ಚುನಾವಣೆ ವೇಳೆ ಯಾರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಜೆಡಿಎಸ್‌ ಸ್ವತಂತ್ರ್ಯವಾಗಿ ಸ್ಪರ್ಧಿಸಲಿದ್ದು, 123 ಕ್ಷೇತ್ರಗಳಲ್ಲಿ ಜಯಗಳಿಸುವ ವಿಶ್ವಾಸವಿದೆ. ನಾವು 2023ರ ಚುನಾವಣೆಯಲ್ಲಿ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇನೆ.

ಉತ್ತರ ಕರ್ನಾಟಕ ಭಾಗದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ. ಪ್ರಧಾನಿಗಳು ಸ್ವತ್ಛ ಭಾರತ್‌ ಎಂದು ಹೇಳುತ್ತಾರೆ. ಆದರೆ ಅಲ್ಲಿ ಈಗಲು ಬಯಲು ವಿಸರ್ಜನೆ ಇದೆ. ಉಪ ಚುನಾವಣೆಯಲ್ಲಿ ಯಾವುದೇ ಪಕ್ಷ ಗೆದ್ದರು, ಸಾರ್ವತ್ರಿಕ ಚುನಾವಣೆ ಫ‌ಲಿತಾಂಶ ಬೇರೆಯದೇ ಆಗಿರುತ್ತದೆ. ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರದ ಉಪ ಚುನಾವಣೆ ಇದಕ್ಕೆ ಸ್ಪಷ್ಟ ಉದಾಹರಣೆ ಎಂದು ಕುಮಾರಸ್ವಾಮಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next