Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಹೀನ್ ಸಂಸ್ಥೆ ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳು ಪ್ರದರ್ಶನ ಮಾಡಿರುವ ನಾಟಕದಲ್ಲಿ ಬಾಲಕಿಯು ಪೌರತ್ವ ಕಾಯ್ದೆ ಸಂಬಂಧ ದಾಖಲೆಗಳು ಕೇಳಲು ಬಂದವರಿಗೆ ಚಪ್ಪಲಿಯಿಂದ ಹೊಡೆಯಬೇಕು ಎಂದು ಹೇಳಿರುವುದು ನಿಜ. ಆದರೆ, ಆಕೆ ಪ್ರಧಾನಿ ಸೇರಿದಂತೆ ಯಾರ ಹೆಸರನ್ನು ಪ್ರಸ್ತಾಪ ಮಾಡಿಲ್ಲ. ಇದೊಂದು ವಿಡಂಬಣೆ ನಾಟಕ. ಈ ವಿಷಯ ಗಂಭೀರವಾಗಿ ಪರಿಗಣಿಸಿ ಕಲಂ 124(ಎ) ಅಡಿ ದೇಶದ್ರೋಹ ಪ್ರಕರಣ ದಾಖಲಿಸಿ, ಶಾಲೆ ಮುಖ್ಯಗುರು ಹಾಗೂ ಬಾಲಕಿ ತಾಯಿ ಬಂಧಿಸಿರುವುದು ಕಾನೂನು ಬಾಹಿರವಾಗಿದೆ ಎಂದರು.
ಮಕ್ಕಳಿಂದ ನಾಟಕ ಪ್ರದರ್ಶನ ವೇಳೆ ಪ್ರಧಾನಿಗೆ ಅವಹೇಳನ ಸಂಬಂಧ ನಗರದ ಶಾಹೀನ್ ಶಿಕ್ಷಣ ಸಂಸ್ಥೆ ವಿರುದ್ಧ ದೇಶದ್ರೋಹ ಪ್ರಕರಣ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುಖ್ಯಗುರು ಮತ್ತು ವಿದ್ಯಾರ್ಥಿನಿ ತಾಯಿಯನ್ನು ಶುಕ್ರವಾರ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿ ಎದೆಗುಂದದಂತೆ ಧೈರ್ಯ ತುಂಬಿದರು. ನಗರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ನೇರವಾಗಿ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ತೆರಳಿ ಮುಖ್ಯಗುರು ಮತ್ತು ಬಾಲಕಿಯ ತಾಯಿ ಜತೆಗೆ ಕೆಲ ಕಾಲ ಮಾತುಕತೆ ನಡೆಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದರು. ನಂತರ ಶಾಹೀನ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ, ನಾಟಕದಲ್ಲಿ ಪ್ರದರ್ಶನ ಮಾಡಿದ ಬಾಲಕಿ ಜತೆಗೂ ಮಾತನಾಡಿ ಧೈರ್ಯ ಹೇಳಿದರು. ಸಿದ್ದರಾಮಯ್ಯಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸೇರಿದಂತೆ ಜಿಲ್ಲೆಯ ಶಾಸಕರು ಮತ್ತು ಎಂಎಲ್ಸಿಗಳು ಸಾಥ್ ನೀಡಿದರು.