Advertisement

ಸರ್ಕಾರ ಉಳಿಸಿಕೊಳ್ಳಲು ಸಿದ್ದು ಯತ್ನ

01:33 AM May 29, 2019 | mahesh |

ಬೆಂಗಳೂರು: ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿಯನ್ನು ಮನವೊಲಿಸುವ ಬದಲು, ಅವರನ್ನು ದೂರ ಇಟ್ಟು ಅವರೊಂದಿಗೆ ಗುರುತಿಸಿಕೊಂಡಿರುವ ಅತೃಪ್ತ ಶಾಸಕರ ಮನವೊಲಿಸಿ ಸರ್ಕಾರ ರಕ್ಷಿಸಿಕೊಳ್ಳಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ.

Advertisement

ಸರ್ಕಾರದ ವಿರುದ್ಧ ಬಂಡಾಯ ಸಾರಿರುವ ರಮೇಶ್‌ ಜಾರಕಿಹೊಳಿ ಪಕ್ಷದ ಯಾವ ಮುಖಂಡರ ಮಾತಿಗೂ ಬೆಲೆ ಕೊಡದೆ, ತಮ್ಮಿಷ್ಟದಂತೆ ನಡೆದುಕೊಳ್ಳುತ್ತಿರುವುದರಿಂದ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ, ತಲೆ ಕೆಡಿಸಿಕೊಳ್ಳದೆ ಅವರೊಂದಿಗೆ ಕಾಂಗ್ರೆಸ್‌ನ ಯಾವುದೇ ಶಾಸಕರೂ ಹೋಗದಂತೆ ಕಾಪಾಡಿಕೊಳ್ಳಲು ತಂತ್ರ ರೂಪಿಸಿದ್ದಾರೆಂದು ತಿಳಿದು ಬಂದಿದೆ.

ಭಾನುವಾರ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನಂತರ ಕಾಂಗ್ರೆಸ್‌ ಮುಖಂಡರ ಜತೆ ನಡೆಸಿದ ಪ್ರತ್ಯೇಕ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ರಮೇಶ್‌ ಮನವೊಲಿಕೆಗೆ ಪ್ರಯತ್ನ ನಡೆಸದೆ, ಅವರೊಂದಿಗೆ ಗುರುತಿಸಿಕೊಂಡು ಬಿಜೆಪಿಯ ಆಪರೇಷನ್‌ ಕಮಲದ ಪಟ್ಟಿಯಲ್ಲಿದ್ದಾರೆಂದು ಹೇಳಲಾಗುತ್ತಿರುವ ಸುಮಾರು 12ಕ್ಕೂ ಹೆಚ್ಚು ಅತೃಪ್ತ ಶಾಸಕರೊಂದಿಗೆ ದೂರವಾಣಿ ಮೂಲಕ ಪ್ರತ್ಯೇಕವಾಗಿ ಮಾತನಾಡಿರುವ ಸಿದ್ದರಾಮಯ್ಯ, ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ಬಿಜೆಪಿಗೆ ಹೋಗುವುದರಿಂದ ಭವಿಷ್ಯದಲ್ಲಿ ಆಗುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿರುವ ಸಿದ್ದರಾಮಯ್ಯ ಇದೇ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಸಿಎಂ ಕುಮಾರಸ್ವಾಮಿ ಮಾತ್ರ ರಮೇಶ್‌ ಜಾರಕಿಹೊಳಿಯನ್ನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ನಿರ್ಧಾರ ತೆಗೆದುಕೊಳ್ಳದಂತೆ ಅವರ ಆಪ್ತ ಶಾಸಕ ಮಹೇಶ್‌ ಕುಮಠಳ್ಳಿ ಮೂಲಕ ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ. ಆದರೆ ಅವರ ಪ್ರಯತ್ನಕ್ಕೆ ರಮೇಶ್‌ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ತಿಳಿದು ಬಂದಿದೆ.

Advertisement

ಅಸಮಾಧಾನಿತರಿಗೆ ತಾಕೀತು: ಈ ನಡುವೆ ಮೈತ್ರಿ ಸರ್ಕಾರ ಹಾಗೂ ಸಿಎಂ ಹಾಗೂ ಡಿಸಿಎಂ ವಿರುದ್ಧ ಬಹಿರಂಗ ಹೇಳಿಕೆ ನೀಡಿ, ಮೈತ್ರಿ ಪಕ್ಷಗಳಿಗೆ ಮುಜುಗರ ಉಂಟು ಮಾಡುತ್ತಿರುವ ಮಾಜಿ ಸಚಿವ ಚಲುವರಾಯ ಸ್ವಾಮಿ ಹಾಗೂ ಮಾಜಿ ಶಾಸಕ ರಾಜಣ್ಣ ಅವರನ್ನು ಸಿದ್ದರಾಮಯ್ಯ ಮಂಗಳವಾರ ತಮ್ಮ ನಿವಾಸಕ್ಕೆ ಕರೆಯಿಸಿ ಬುದ್ಧಿವಾದ ಹೇಳಿದ್ದಾರೆಂದು ತಿಳಿದು ಬಂದಿದೆ.

ಸಿಎಂ ಕುಮಾರಸ್ವಾಮಿ ಜತೆ ಚರ್ಚಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ವೇಣುಗೋಪಾಲ್ ಅವರು ಬೆಂಗಳೂರಿಗೆ ಆಗಮಿಸಿದ ನಂತರವಷ್ಟೇ ಸಂಪುಟ ವಿಸ್ತರಣೆ ಕುರಿತು ತೀರ್ಮಾನವಾಗಲಿದೆ. ಅಲ್ಲಿವರೆಗೂ ಯಾವುದೇ ತೀರ್ಮಾನವಿಲ್ಲ ಎಂದು ತಿಳಿಸಿದರು.

ಗುಲಾಂ ನಬಿ ಆಗಮನ ಅನುಮಾನ: ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ಅವರೂ ರಾಜ್ಯಕ್ಕೆ ಆಗಮಿಸುವ ನಿರೀಕ್ಷೆ ಇತ್ತಾದರೂ ಬದಲಾದ ಸನ್ನಿವೇಶದಲ್ಲಿ ಅವರು ಬರುವುದು ಅನುಮಾನ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next