Advertisement

ಹಲ್ಲೆ ಘಟನೆಗೆ ಸಿದ್ದರಾಮಯ್ಯ ಕಾರಣ: ಅಶೋಕ್‌

01:31 AM Jan 21, 2019 | Team Udayavani |

ಬೆಂಗಳೂರು: ಈಗಲ್ಟನ್‌ ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ ಶಾಸಕ ಆನಂದ್‌ ಸಿಂಗ್‌ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿರುವ ಬಿಜೆಪಿ, ಮುಖ್ಯಮಂತ್ರಿ ಬದಲಾವಣೆಗೆ ಕಾಂಗ್ರೆಸ್‌ ಶಾಸಕರೇ ಒತ್ತಡ ಹೇಳಿದ್ದಾರೆ ಎಂಬುದಾಗಿ ಹೊಸ ಬಾಂಬ್‌ ಸಿಡಿಸಿದ್ದಾರೆ.

Advertisement

ಕಾಂಗ್ರೆಸ್‌ ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಹಲವು ಶಾಸಕರು ಒತ್ತಡ ಹೇರಿದ್ದಾರೆ ಎಂಬುದಾಗಿ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಅವರು ಗಂಭೀರ ಆರೋಪ ಮಾಡಿದ್ದಾರೆ. ಜತೆಗೆ, ಘಟನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದ್ದಾರೆ. ಸಭೆಯ ನೆಪದಲ್ಲಿ ರೆಸಾರ್ಟ್‌ ಸೇರಿರುವ ಶಾಸಕರು ಮೋಜು ಮಸ್ತಿಯಲ್ಲಿ ತೊಡಗಿದ್ದು, ರಾಜ್ಯದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ನಾಯಕರೊಂದಿಗೆ ಚರ್ಚಿಸಿ ಹೋರಾಟ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಆರ್‌.ಅಶೋಕ್‌, ಕಾಂಗ್ರೆಸ್‌ ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಮಾತು ಕೇಳಿ ಬಂದಿದೆ. ಇದಕ್ಕೆಲ್ಲಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.

ಶಾಸಕ ಆನಂದ್‌ ಸಿಂಗ್‌ ಅವರ ಎದೆಗೆ ಬಾಟಲಿಯಲ್ಲಿ ಚುಚ್ಚಿರುವುದರಿಂದ ಎದೆ ನೋವು ಬಂದಂತಿದೆ. ನಾನು ಈ ಹಿಂದೆ ಗೃಹ ಇಲಾಖೆ ನಿರ್ವಹಿಸಿದ್ದು, ಅವರಿಗಿಂತ ಮೊದಲು ನನಗೂ ಮಾಹಿತಿ ಬರುತ್ತದೆ. ಪ್ರಕರಣವನ್ನು ಮುಚ್ಚಿಡಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ಮಾನ ಮರ್ಯಾದೆ ರಾಜ್ಯದಲ್ಲಿದೆಯೋ ಅಥವಾ ರೆಸಾರ್ಟ್‌ ನಲ್ಲಿದೆಯೋ ಎಂದು ಪ್ರಶ್ನಿಸಿದರು. ಆನಂದ್‌ ಸಿಂಗ್‌ ಮದುವೆಗೆ ಹೋಗಿದ್ದಾರೆಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಮದುವೆ ನಡೆಯುತ್ತದೆ ಎಂದು ಇಂದೇ ನನಗೆ ಗೊತ್ತಾಗಿದ್ದು ಎಂದು ವ್ಯಂಗ್ಯವಾಡಿದರು. ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸಲು ಬಿಜೆಪಿ ಚಿಂತಿಸಿದೆ. ಈ ಬಗ್ಗೆ ರಾಜ್ಯಾಧ್ಯಕ್ಷರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಉದ್ದೇಶದಿಂದ ಶಾಸಕರನ್ನು ಎತ್ತಿ ಕಟ್ಟಿ ರೆಸಾರ್ಟ್‌ಗೆ ಕಳುಹಿಸಿದ್ದಾರೆ. ಈ ಬಗ್ಗೆ ಎಚ್‌.ಡಿ.ದೇವೇಗೌಡರು ಉತ್ತರಿಸಬೇಕು ಎಂದು ಹೇಳಿದರು. ರೆಸಾರ್ಟ್‌ನಲ್ಲಿ ಎರಡು ದಿನಗಳಿಂದ ಶಾಸಕರು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.

ಅಬಕಾರಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಕಳೆದ 2 ದಿನಗಳಿಂದ ರೆಸಾರ್ಟ್‌ಗೆ ಸ್ಕಾಟಲೆಂಡ್‌ನ‌ ಬ್ಲೂé ಲೆಬೆಲ್‌ ವಿಸ್ಕಿ ಪೂರೈಸಲಾಗಿದೆ. ಇದನ್ನು ಇಬ್ಬರು ಅಬಕಾರಿ ಉಪ ಆಯುಕ್ತರೇ ಹೇಳಿದ್ದಾರೆ. ಒಂದೊಂದು ಬಾಟಲಿ ಬೆಲೆ 30,000 ರೂ., 40,000 ರೂ.ಇದೆ ಎಂದು ಹೇಳಿದರು.

Advertisement

ಕುಮಾರಸ್ವಾಮಿ ಬದಲಾವಣೆಗೆ ಆಗ್ರಹ: ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಮಾತನಾಡಿ, ಕಾಂಗ್ರೆಸ್‌ಶಾಸಕರ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬದಲಾಯಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಿರುವುದನ್ನು ಮುಚ್ಚಿಟ್ಟಿದ್ದಾರೆ. ಇದರಿಂದ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ನಾಡಿನ ಜನತೆಗೆ ಹೇಗೆ ಸುಳ್ಳು ಹೇಳುತ್ತಿರುವುದು ಬಯಲಾಗಿದೆ ಎಂದು ಹೇಳಿದರು.

ಕಣ್ಣೀರು ಹಾಕುವರೇ?: ಸಣ್ಣ ಪುಟ್ಟ ವಿಚಾರಗಳಿಗೂ ಕಣ್ಣೀರು ಹಾಕುವ ಸೂಕ್ಷ್ಮ ಮನಸ್ಸಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಮೈತ್ರಿ ಸರ್ಕಾರದ ಶಾಸಕರೇ ಹೊಡೆದಾಡಿ ಕೊಂಡಿರುವ ಘಟನೆಗೆ ಕಣ್ಣೀರು ಹಾಕುವರೆ?. ಎಚ್‌.ಡಿ.ದೇವೇಗೌಡರು ಹತ್ತಾರು ಪಕ್ಷಗಳನ್ನು ಒಟ್ಟುಗೂಡಿಸಿ ದೇಶದಲ್ಲಿ ಸರ್ಕಾರ ರಚಿಸುವುದಾಗಿ ಹೇಳುತ್ತಾರೆ. ಕೇವಲ ಕಾಂಗ್ರೆಸ್‌ನೊಂದಿಗಿನ ಮೈತ್ರಿ ಸರ್ಕಾರದಲ್ಲೇ ರಾಜ್ಯದಲ್ಲಿ ಇಷ್ಟೆಲ್ಲಾ ರಾದ್ಧಾತ ನಡೆಯುತ್ತಿದೆ. ಇನ್ನು ಹತ್ತಾರು ಪಕ್ಷಗಳು ಒಟ್ಟಿಗೆ ಸೇರಿ ಸರ್ಕಾರ ರಚಿಸಿದರೆ ದೇಶದ ಅಭಿವೃದ್ಧಿ ಹಳ್ಳ ಹಿಡಿಯಬಹುದು ಎಂದು ವ್ಯಂಗ್ಯವಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next