Advertisement

ಸಿದ್ದರಾಮಯ್ಯ ಅಸಮರ್ಥ ರಾಜಕಾರಣಿ: ಕಟೀಲ್‌

09:16 AM Apr 27, 2022 | Team Udayavani |

ಹುಬ್ಬಳ್ಳಿ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮರ್ಥ ರಾಜಕಾರಣಿ. ಅವರು ಸಿಎಂ ಆಗಿದ್ದಾಗ ಮಾಡಿದ ಕಾರ್ಯಗಳೇ ಈಗಿನ ಕೋಮು ಗಲಭೆಗಳಿಗೆ ಕಾರಣವೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಗಂಭೀರ ಆರೋಪ ಮಾಡಿದರು.

Advertisement

ಹಳೇ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಅಸಮರ್ಥರೆನ್ನುವ ಸಿದ್ದರಾಮಯ್ಯ ಐದು ವರ್ಷ ಅಸಮರ್ಥವಾಗಿ ಆಡಳಿತ ಮಾಡಿದ್ದಾರೆ. ಅವರಷ್ಟು ಅಸಮರ್ಥರು ನಮ್ಮ ಗೃಹ ಸಚಿವರಲ್ಲ. ಅವರ ಸರ್ಕಾರದಲ್ಲಿ ಅತಿ ಹೆಚ್ಚು ಗಲಭೆ ಆದವು. 23 ಹಿಂದೂ ಕಾರ್ಯಕರ್ತರ ಹತ್ಯೆಗಳಾದವು. ಕಾರಾಗೃಹದಲ್ಲೂ ಹತ್ಯೆಗಳಾಗಿದ್ದವು. ಆವಾಗಲೇ ಹತ್ಯೆಗಳನ್ನು ತಡೆಯಲು ಆಗಲಿಲ್ಲ. ಒಬ್ಬರನ್ನು ಬಂಧಿಸುವ ಕಾರ್ಯ ಮಾಡಲಿಲ್ಲ ಎಂದರು.

ಕೇರಳದಿಂದ ಬಂದು ಇಲ್ಲಿ ಗಲಭೆಗಳನ್ನು ಸೃಷ್ಟಿಸಿದರು. ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆದವು. ದಾಂಧಲೆಕೋರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಬಿಟ್ಟು ಮೃದು ಧೋರಣೆ ತೋರಿದರು. ಅವರು ಗಲಭೆಕೋರರು, ಅಪರಾಧಿಗಳಿಗೆ ಬಿ ರಿಪೋರ್ಟ್‌ ಕೊಟ್ಟು ಬಿಡುಗಡೆಯ ಭಾಗ್ಯ ನೀಡುವ ತಪ್ಪು ಮಾಡಿದರು. ಅದರ ಪರಿಣಾಮವೇ ಇಂದು ಇಂತಹ ಗಲಭೆಗಳಿಗೆ ಪ್ರೇರಣೆಯಾಗಿದೆ. ಇದರ ವೈಫಲ್ಯದ ಹಿಂದೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಇದ್ದು, ಇಂಥವರು ನಮ್ಮ ಸರ್ಕಾರದ ಬಗ್ಗೆ ಮಾತನಾಡುತ್ತಾರೆ ಎಂದರು.

ಸಿದ್ದರಾಮಯ್ಯಗೆ ಇನ್ನಷ್ಟು ಗಲಭೆಗಳಾಗಿ ಅರಾಜಕತೆ ಸೃಷ್ಟಿಯಾಗಲಿ ಎಂಬ ಯೋಚನೆಯಿದ್ದು, ಹುಬ್ಬಳ್ಳಿ ಗಲಭೆಗೂ ಅವರೇ ಪ್ರೇರಣೆ ಆಗಿರಬಹುದು. ಎಸ್‌ಡಿಪಿಐ, ಪಿಎಫ್‌ಐದವರಿಗೆ ದೈಹಿಕ ಶಕ್ತಿ ಇದ್ದರೆ, ಅವರಿಗೆಲ್ಲ ಭೌತಿಕ ಶಕ್ತಿ ಸಿದ್ದರಾಮಯ್ಯ ಆಗಿದ್ದಾರೆ. ಅವರಿಂದಲೇ ಇಂತಹ ಗಲಾಟೆಗಳಾಗುತ್ತಿವೆ. ಕಾನೂನು ಭಂಜಕರಿಗೆ ಜಾತಿ-ಮತ-ಪಂಥವಿಲ್ಲ. ಯಾವ ಯಾವ ಸಂಘಟನೆಗಳು ಗಲಭೆಯಲ್ಲಿ ಭಾಗಿಯಾಗಿವೆ ಅನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಹಾದಿಯಲ್ಲಿ ಹುಬ್ಬಳ್ಳಿಯ ಗಲಭೆ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾರೇ ಭಾಗಿಯಾದ್ದರು ಅವರ ವಿರುದ್ಧ ಕ್ರಮ ಆಗುತ್ತದೆ ಎಂದರು.

ಹಳೇಹುಬ್ಬಳ್ಳಿ ಗಲಭೆ ಪೂರ್ವ ನಿಯೋಜಿತ ಕೃತ್ಯ. ಇದೊಂದು ತತ್‌ಕ್ಷಣ ಭಾವನೆಗಳಿಂದ ಕೆರಳಿದ ಘಟನೆ ಅಲ್ಲ. ದಾಂಧಲೆಕೋರರು ದೇವಾಲಯ, ಮನೆಗಳ ಮೊದಲು ಪೊಲೀಸರು ಮತ್ತು ಅವರ ವಾಹನಗಳ ಮೇಲೆ ದಾಳಿ ಮಾಡಿ ಕಲ್ಲು ತೂರಾಟ ಮಾಡಿದ್ದಾರೆ. ಘಟನೆಯ ವಾಸ್ತವಿಕತೆ ನೋಡಿದಾಗ ಇದರ ಹಿಂದೆ ಕಾಣದ ಕೈಗಳು ಇರುವುದು ಸ್ಪಷ್ಟವಾಗುತ್ತದೆ. ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಚುಕೋರರನ್ನು ಬಂಧಿಸುವ ಕಾರ್ಯ ನಡೆದಿದೆ. ಎಐಎಂಐಎಂ ಪಕ್ಷವೇ ಆಗಲಿ ಇತರ ಸಂಘಟನೆಗಳಾಗಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಈಗಾಗಲೇ ಕೆಲ ಸಂಘಟನೆಗಳ ನಾಯಕರ ಬಂಧನ ಕೂಡ ಆಗಿದೆ. ಯಾರೇ ಇದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಖಚಿತ ಎಂದರು.

Advertisement

ಶಾಸಕ ಅರವಿಂದ ಬೆಲ್ಲದ, ಮುಖಂಡರಾದ ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಮಹೇಶ ಟೆಂಗಿನಕಾಯಿ, ಸಂಜಯ ಕಪಟಕರ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next