Advertisement

BJP ಅವಧಿಯ 22 ಹಗರಣ ಪಟ್ಟಿ ಮುಂದಿಟ್ಟು ಸಿದ್ದರಾಮಯ್ಯ ತಿರುಗೇಟು

01:31 AM Jul 20, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ ಸಂಬಂಧ ವಿಪಕ್ಷಗಳ ಜಂಟಿ ಹೋರಾಟದ ವಿರುದ್ಧ ತೊಡೆತಟ್ಟಿರುವ ಸಿಎಂ ಸಿದ್ದರಾಮಯ್ಯ, “ನಿಮ್ಮ ಸರಕಾರದ ಅವಧಿಯಲ್ಲಿ ನಡೆದ ಅಕ್ರಮಗಳ ತನಿಖೆ ನಡೆಸಿ ನಿಮ್ಮನ್ನು ಬಲಿ ಹಾಕುತ್ತೇನೆ. ಇ.ಡಿ.ಗೆ ಹೆದರುವುದಿಲ್ಲ, ಬಿಜೆಪಿಯ ಭಯವಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

Advertisement

ಎರಡು ದಿನಗಳಿಂದ ಸದನದಲ್ಲಿ ನಡೆದ ಚರ್ಚೆಗೆ ಉತ್ತರಿಸಲು ಅಡ್ಡಿಪಡಿ ಸುತ್ತಿದ್ದ ಬಿಜೆಪಿ ನಾಯಕರ ವಿರುದ್ಧ ಕಟು ಶಬ್ದಗಳಲ್ಲಿ ಟೀಕೆಯ ಸುರಿಮಳೆಗರೆದ ಸಿದ್ದರಾಮಯ್ಯ, ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ 22 ಪ್ರಕರಣಗಳನ್ನು ಪ್ರಸ್ತಾವಿಸಿದರು. ಮಾತ್ರವಲ್ಲದೆ, ಇವೆಲ್ಲ ವುಗಳ ಬಗ್ಗೆ ತನಿಖೆ ನಡೆಸಿ ನಿಮ್ಮನ್ನು ಜೈಲಿಗೆ ಹಾಕಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ನನ್ನ ಹೆಸರಿಗೆ ಕಳಂಕ ತರಲು ನೀವು ಮಾಡುತ್ತಿರುವ ಯಾವ ಪ್ರಯತ್ನಗಳೂ ಯಶಸ್ಸು ಕಾಣುವುದಿಲ್ಲ. ಜಾರಿ ನಿರ್ದೇಶನಾಲಯ (ಇ.ಡಿ.)ಕ್ಕೆ ಹೆದರುವುದಿಲ್ಲ. ಬಿಜೆಪಿಯ ಒತ್ತಡಕ್ಕೆ ಜಗ್ಗುವುದಿಲ್ಲ. ರಾಜ್ಯದಲ್ಲಿ ಈ ಹಿಂದೆ ಯಾವುದೇ ಹಗರಣ ನಡೆದಾಗಲೂ ಇ.ಡಿ. ಮಧ್ಯಪ್ರವೇಶ ಮಾಡಿರಲಿಲ್ಲ. ಈಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಸಿಎಂ- ಡಿಸಿಎಂ ಈ ಪ್ರಕರಣದಲ್ಲಿ ಭಾಗಿಯಾಗಿ ದ್ದಾರೆಂದು ಸಾಕ್ಷಿ ನುಡಿಯುವಂತೆ ಬೆದರಿಕೆ ಹಾಕುತ್ತಿದ್ದಾರೆ. ಇವೆಲ್ಲವನ್ನೂ ನಾನು ಕಾನೂನುರೀತ್ಯಾ ಎದುರಿಸುತ್ತೇನೆ. ಜತೆಗೆ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣದ ಬಗ್ಗೆ ಎಸ್‌ಐಟಿಯಿಂದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡುತ್ತೇನೆ ಎಂದು ಆರ್ಭಟಿಸಿದರು.

ಉತ್ತರ ಓದಿದ ಸಿಎಂ
ಬಿಜೆಪಿ ಹಾಗೂ ಜೆಡಿಎಸ್‌ ಶಾಸಕರ ನಿರಂತರ ಮಧ್ಯಪ್ರವೇಶದ ಹಿನ್ನೆಲೆಯಲ್ಲಿ ತಮ್ಮ ಎಂದಿನ ಶೈಲಿಯ ಉತ್ತರವನ್ನು ಕೈಬಿಟ್ಟ ಸಿದ್ದರಾಮಯ್ಯ ಲಿಖೀತ ಉತ್ತರ ವನ್ನು ಸದನದಲ್ಲಿ ಮಂಡಿಸಿದರು. ಅದಕ್ಕೂ ಮುನ್ನ ಸ್ವಲ್ಪ ಕಾಲ ಬಿಜೆಪಿ ಆಡಳಿತ ಕಾಲದ ಹಗರಣಗಳ ಬಗ್ಗೆ ಪ್ರಸ್ತಾವಿಸಿ, ನೀವು ಅಧಿಕಾರದಲ್ಲಿದ್ದಾಗ ಲೂಟಿ ಹೊಡೆದಿದ್ದೀರಿ.

ಅದನ್ನು ನಾನು ಬಿಚ್ಚಿಡುತ್ತೇನೆಂಬ ಭಯ ನಿಮ್ಮನ್ನು ಕಾಡುತ್ತಿದೆ. ನೀವು ಭ್ರಷ್ಟಾಚಾರದ ಪಿತಾಮಹರು. ಯಡಿಯೂರಪ್ಪ, ಬೊಮ್ಮಾಯಿ ಕಾಲದಲ್ಲೇ ಅತೀ ಹೆಚ್ಚು ಹಗರಣಗಳು ನಡೆದಿವೆ. ಈಗ ನನಗೆ ಪಾಠ ಹೇಳಲು ಬರುತ್ತೀರಾ? ನಾನು 15 ಬಜೆಟ್‌ ಮಂಡಿಸಿದ್ದೇನೆ. ಇಷ್ಟು ವರ್ಷಗಳ ನನ್ನ ಅನುಭವದಲ್ಲಿ ಇಷ್ಟು ಕೆಟ್ಟ ರೀತಿಯಲ್ಲಿ ವಿಪಕ್ಷಗಳು ವರ್ತಿಸಿರಲಿಲ್ಲ. ಬಿಜೆಪಿಯವರು ಪ್ರಜಾಪ್ರಭುತ್ವ ಹಾಗೂ ಸಂಸದೀಯ ವ್ಯವಸ್ಥೆಯ ವಿರೋಧಿಗಳು ಎಂದು ಕಿಡಿಕಾರಿದರು.

Advertisement

ಕಿರಿಕಿರಿ ಸೃಷ್ಟಿಸಿದ ಘೋಷಣೆಗಳು
ಸಿಎಂ ಉತ್ತರ ನೀಡಲು ಪ್ರಾರಂಭಿಸುತ್ತಿದ್ದಂತೆ ಬಿಜೆಪಿ-ಜೆಡಿಎಸ್‌ ಶಾಸಕರು ಧರಣಿ ನಿರತ ಸ್ಥಳದಿಂದಲೇ ಘೋಷಣೆ ಮೊಳಗಿಸಲಾರಂಭಿಸಿದರು.

ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣ ನನಗೆ ಸಂಬಂಧ ಇಲ್ಲದೇ ಇದ್ದರೂ ನಾನು ರಾಜೀನಾಮೆ ನೀಡಬೇಕೆಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಹಾಗೂ ಬಿ.ವೈ. ವಿಜಯೇಂದ್ರ ಆಗ್ರಹಿಸುತ್ತಿದ್ದಾ ರೆ. ಇವರ ಕಾಲದಲ್ಲಿ ಲೂಟಿ ಮಾಡಿದ್ದಾ ರೆ. ನನ್ನ ಮೇಲೆ ಆರೋಪ ಹೊರಿಸುವಂತೆ ಇವರಿಗೆ ಕೇಂದ್ರದಿಂದ, ಪಕ್ಷದಿಂದ, ಆರೆಸ್ಸೆಸ್‌ನಿಂದ ಸೂಚನೆ ಇರಬೇಕು. ಅದಕ್ಕಾಗಿ ಹೀಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರೆ “ಭೂತದ ಬಾಯಿಯಲ್ಲಿ ಭಗವದ್ಗೀತೆ’ ಎಂದು ಬಿಜೆಪಿ ಸದಸ್ಯರು ತಿರುಗೇಟು ಕೊಟ್ಟರು.

ಸಿಎಂ ಉತ್ತರ ನೀಡಿದ ಬಳಿಕ ಸ್ಪೀಕರ್‌ ಖಾದರ್‌ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು. ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ನಾಯಕರು ಸ್ಪೀಕರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಸೋಮವಾರವೂ ಪ್ರತಿಭಟನೆ ಮುಂದುವರಿಸುವ ಜತೆಗೆ ಕಲಾಪ ಸಲಹಾ ಸಮಿತಿ ಸಭೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಮೋಕ್ಷ ಸಿಗುತ್ತದೆ
ಉತ್ತರ ನೀಡುವ ವೇಳೆ, “ನುಂಗಿದರಣ್ಣ ನುಂಗಿದರಣ್ಣ ದಲಿತರ ಹಣ ನುಂಗಿದರಣ್ಣ, ಸಿದ್ರಾಮಣ್ಣ’ ಎಂಬ ವಿಪಕ್ಷ ಶಾಸಕರ ಘೋಷಣೆ ಹೆಚ್ಚಾದಾಗ ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಸಿದ್ದರಾಮಯ್ಯ, “ನನ್ನ ಹೆಸರು ಹೇಳದೆ ಇದ್ದರೆ ಇವರಿಗೆ ಊಟ ಜೀರ್ಣವಾಗುವುದಿಲ್ಲ. ನನ್ನ ಹೆಸರು ಹೇಳಿಕೊಂಡು ಭಜನೆ ಮಾಡಿ. ಮೋಕ್ಷವಾದರೂ ಸಿಗುತ್ತದೆ’ ಎಂದು ಕಿಡಿಕಾರಿದರು. ಇದಕ್ಕೆ ವ್ಯಂಗ್ಯವಾಡಿದ ಬಿಜೆಪಿ ಶಾಸಕ ಭರತ್‌ ಶೆಟ್ಟಿ, “ನಿಮ್ಮ ಹೆಸರು ಹೇಳಿದರೆ ಮೋಕ್ಷವಲ್ಲ, ಮುಡಾ ಸಿಗುತ್ತದೆ’ ಎಂದು ಮುಡಾ ಹಗರಣವನ್ನು ಕೆದಕಿದರು.

ಆಣೆ ಪ್ರಮಾಣಕ್ಕೆ ಬಿಜೆಪಿ ಸವಾಲು
ರಾಜ್ಯ ಸರಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮತ್ತೆ ಸದನದಲ್ಲಿ ಪ್ರಸ್ತಾವವಾಗಿ ಶುಕ್ರವಾರದ ಕಲಾಪವನ್ನು ನುಂಗಿಹಾಕಿತು. ಬಿಜೆಪಿಯ ರವಿಕುಮಾರ್‌ ಮಾತನಾಡಿ, ನೀವು ಎಲ್ಲಿ ನಿಂತು ಪ್ರಮಾಣ ಮಾಡಿ ಎಂದರೂ ಅಲ್ಲಿ ನಿಂತು ಹೇಳುತ್ತೇನೆ. ವಾಲ್ಮೀಕಿ ಹಣ ತೆಲಂಗಾಣದ ಚುನಾವಣೆಗೆ ಬಳಕೆ ಆಗಿದೆ ಎಂದು ಹೇಳಿದ್ದು ಆಡಳಿತ ಪಕ್ಷದ ಸದಸ್ಯರನ್ನು ಸಿಟ್ಟಿಗೇಳುವಂತೆ ಮಾಡಿತು. ಸಭಾನಾಯಕ ಬೋಸರಾಜ್‌, ಸಚಿವ ಸಂತೋಷ್‌ ಲಾಡ್‌, ಚಲುವನಾರಾಯಣ ಸ್ವಾಮಿ, ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಂ, ಯತೀಂದ್ರ ಸಿದ್ದರಾಮಯ್ಯ, ಯು.ಬಿ. ವೆಂಕಟೇಶ್‌, ನಸೀರ್‌ ಅಹಮದ್‌ ಸಹಿತ ಹಲವರು ಸತ್ಯಕ್ಕೆ ದೂರವಾದ ಆರೋಪ ಮಾಡಲಾಗುತ್ತಿದೆ ಎಂದು ಗದ್ದಲ ಎಬ್ಬಿಸಿದರು.

ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಪ್ರಕರಣ ದಲ್ಲಿ ದೂರುದಾರರ ದೂರು ಆಧರಿಸಿ ಎಫ್ಐಆರ್‌ ದಾಖಲಿಸಿ ಕೊಂಡು ತತ್‌ಕ್ಷಣ ತನಿಖೆ ಕೈಗೊಳ್ಳಲಾಗಿದೆ. ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಕೂಡ ಎಫ್ಐಆರ್‌ ಆಗಿದೆ. ಎಸ್‌ಐಟಿ ತನಿಖೆಗೆ ವಹಿಸಲಾಗಿದೆ. ಇ.ಡಿ.ಯ ಮಧ್ಯ ಪ್ರವೇಶವೂ ಆಗಿದೆ. ಯಾರನ್ನೂ ರಕ್ಷಿಸುವುದಿಲ್ಲ. ತಪ್ಪಿತಸ್ಥರು ಶಿಕ್ಷೆ ಅನುಭವಿಸಬೇಕು.
-ಸಿದ್ದರಾಮಯ್ಯ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next