ಬೆಂಗಳೂರು: ಕಾಂಗ್ರೆಸ್ನಲ್ಲಿ ಉಂಟಾಗಿರುವ ಮುಂದಿನ ಸಿಎಂ ಸಂಬಂಧಿಸಿದ ಹೇಳಿಕೆ, ಪರ-ವಿರೋಧ ಆರೋಪ- ಪ್ರತ್ಯಾರೋಪಗಳ ಗೊಂದಲ ನಿವಾರಣೆಗೆ ಹೈಕಮಾಂಡ್ ಮಧ್ಯ ಪ್ರವೇಶಿಸುವ ಸಾಧ್ಯತೆಯಿದೆ. ಜುಲೈ ಮೊದಲ ವಾರದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ದಿಲ್ಲಿಗೆ ಕರೆಸಿಕೊಂಡು ಮುಖಾಮುಖೀ ಕೂರಿಸಿ ಚರ್ಚಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್ ನೇತೃತ್ವದ ಶಿಸ್ತುಪಾಲನಾ ಸಮಿತಿಯು, ಮುಂದಿನ ಮುಖ್ಯಮಂತ್ರಿ ಹೇಳಿಕೆ ನೀಡಿದ ಶಾಸಕರಿಗೆ ನೋಟಿಸ್ ನೀಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಜಾರಕಿಹೊಳಿ ಕಾಂಗ್ರೆಸ್ ಸೇರ್ಪಡೆ ಹೈಕಮಾಂಡ್ ನಿರ್ಧಾರ: ಸತೀಶ್:
ಬಾಗಲಕೋಟೆ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋಗಿದ್ದು ತಪ್ಪು ಎಂದು ನಾನು ಹೇಳುವುದಿಲ್ಲ. ರಮೇಶ್ ಮತ್ತು ಅವರ ಸ್ನೇಹಿತರು ಕಾಂಗ್ರೆಸ್ಗೆ ಮರಳುವ ಕುರಿತು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ನನ್ನಲ್ಲೂ ಸಿಎಂ ಕನಸಿದೆ: ಸತೀಶ್:
ಎಲ್ಲರಂತೆ ನನಗೂ ಸಿಎಂ ಆಗಬೇಕೆಂಬ ಕನಸಿದೆ. ಈಗಿನ ಆಕಾಂಕ್ಷಿಗಳೆಲ್ಲ ಸಿಎಂ ಆದರ ಬಳಿಕ ನಾನೂ ಮುಖ್ಯಮಂತ್ರಿ ಆಗಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಮುಂದಿನ ಬಾರಿ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ನಾನು ಅಥವಾ ನನ್ನ ಮಕ್ಕಳೇ ಚುನಾವಣೆಗೆ ಸ್ಪರ್ಧಿಸುತ್ತೇವೆ ಎಂದು ಅವರು ಹೇಳಿದರು.