Advertisement

Chitradurga: ಸಿದ್ದರಾಮಯ್ಯ ಸಂಕಟ ಬಂದಾಗ ಜಾತಿ ಮುಂದೆ ತರುತ್ತಾರೆ: ಸಿ.ಟಿ ರವಿ

01:12 PM Oct 10, 2024 | Team Udayavani |

ಚಿತ್ರದುರ್ಗ: ಜಾತಿ ಗಣತಿ ವಿಷಯ ಮುನ್ನಲೆಗೆ ಬಂದಿದ್ದು ನೋಡಿದರೆ ಸಿದ್ದರಾಮಯ್ಯ ಅವರಿಗೆ ಸಂಕಟ ಬಂದಾಗ ಈ ಜಾತಿ ಮುಂದೆ ತರುತ್ತಾರೆ. ವಾಲ್ಮೀಕಿ ಹಗರಣ, ಮುಡಾ ಹಗರಣ ಸರ್ಕಾರ ಜರ್ಜರಿತವಾಗಿದೆ. ಸರ್ಕಾರ ಭ್ರಷ್ಟ ಸರ್ಕಾರ ಇಮೇಜ್‌ ಅಂಟಿಸಿಕೊಂಡಿದೆ. ಜಾತಿ ಗಣತಿ ಮುನ್ನಲೆಗೆ ತಂದು ಮರೆ ಮಾಚುವ ಕೆಲಸ ಮಾಡುತ್ತಿದ್ದಾರೆ ಎಂದು ಎಂಎಲ್‌ ಸಿ ಸಿ.ಟಿ ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದ್ದತೆ ಇದ್ದರೆ ಕಾಂತರಾಜ್ ವರದಿ ನೀಡಿದ್ದು ಜನರ ವಿಷಯಾಂತರ ಮಾಡಲು ಜಾತಿ ಗಣತಿ ಮುನ್ನಲೆಗೆ ತಂದಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಮೀಸಲಾತಿ ವಿರೋಧಿ ಎಂದು ಹೇಳುತ್ತಾರೆ. ಪ್ರಧಾನಿ ನೆಹರೂ ಅವರು ಮೀಸಲಾತಿ ಅಭಿವೃದ್ಧಿ ವಿರೋಧಿ ಎಂದಿದ್ದರು. ಮೀಸಲಾತಿ ವಿರೋಧಿಸಲು ಪತ್ರ ಬರೆದಿದ್ದು ಮೋದಿ ಬಿಡುಗಡೆ ಮಾಡಿದ್ದರು. ಎಸ್‌ ಸಿ & ಎಸ್‌ ಟಿ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ. ಬಡ್ತಿ ಮೀಸಲಾತಿ ಪರವಾಗಿ ನಿಂತು ಸುಪ್ರೀಂ ಕೋರ್ಟ್ ಗೆ ಅಫಡೆವಿಟ್ ಕೊಟ್ಟಿದ್ದು ಬಿಜೆಪಿ. ಪ್ರಾಮಾಣಿಕ ಬದ್ದತೆ ಬಿಜೆಪಿ ಪಕ್ಷಕ್ಕೆ ಇದೆ. ಹಿಂದುಳಿದ ಆಯೋಗಕ್ಕೆ ಸಂವಿಧಾನ ಬದ್ದತೆ ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದರು.

ಸಿಎಂ ಪ್ರಾಮಾಣಿಕತೆ ಬಗ್ಗೆ ನಮಗೆ ಅನುಮಾನವಿದೆ. ತಮ್ಮ ಸರ್ಕಾರದ ಮೇಲೆ ಬಂದಿರುವ ಭ್ರಷ್ಟಾಚಾರ ಮರೆ ಮಾಚಲು ಜಾತಿ ಗಣತಿ ಮುನ್ನಲೆಗೆ ತಂದಿರುವ ಅನುಮಾನವಿದೆ. ಆರ್ಥಿಕ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಸಮೀಕ್ಷೆ ಮಾಡಲಿ. ಆಧಾರ್ ಕಾರ್ಡ್ ಆಧಾರದ ಮೇಲೆ ಸಮೀಕ್ಷೆ ಮಾಡಲಿ. ಹಿಂದುಳಿದ ವರ್ಗಗಳಲ್ಲಿ ಕೂಡಾ ಒಳ ಮೀಸಲಾತಿ ನೀಡಲಿ. ದಲಿತರಂತೆ ಹಿಂದುಳಿದ ವರ್ಗಗಳಿಗೂ ಒಳ ಮೀಸಲಾತಿ ಕೊಡಲಿ. ಕರ್ನಾಟಕ ರಾಜ್ಯ ಒಂದು ಹೊಸ ಮುನ್ನುಡಿಯನ್ನ ಬರೆಯಲಿ. ಹಿಂದುಗಳ ಒಳಗೆ ಒಡಕು ಮೂಡಿಸಲು ದುರ್ಬಳಕೆ ಆಗಬಾರದು. ಮುಸ್ಲಿಂ ನಲ್ಲಿ ಕೂಡಾ ಬಹಳ ಜಾತಿಗಳಿದ್ದು, ಅಲ್ಲಿಯೂ ತುಳಿತಕ್ಕೆ ಒಳಗಾದವರಿಗೆ ನ್ಯಾಯ ಸಿಗಲಿ. ಮುಸ್ಲಿಂ ಸಮುದಾಯಕ್ಕೂ ನ್ಯಾಯ ಸಿಗಬೇಕಿದೆ, ಅವಕಾಶ ವಂಚಿತ ಜಾತಿಗಳಿವೆ ಮುಸ್ಲಿಂ ಸಮುದಾಯದ ಸಮೀಕ್ಷೆಯೂ ಕೂಡಾ ಆಗಬೇಕಿದೆ. ರಾಜ್ಯದ ಜನರಿಗೆ ಜಾತಿ ಗಣತಿ ಯಾವ ಕಾರಣಕ್ಕೆ ತರುತ್ತಿದ್ದೀರಿ ಎಂದು ತಿಳಿದಿದೆ. ಆ ಕಾರಣಕ್ಕೆ ಜಾರಿ ಆದರೆ ರಾಜ್ಯದ ಜನ ಕ್ಷಮಿಸಲ್ಲ ಎಂದು ಗುಡುಗಿದರು.

ವಾಲ್ಮೀಕಿ ಹಗರಣದ ವರದಿಯನ್ನು ಇ.ಡಿ ಈಗಾಗಲೇ ನೀಡಿದೆ. 42 ಕೋಟಿ ಹಣ ನಾಗೇಂದ್ರ ಕಡೆ ಹೋಗಿದೆ. ಅದರಲ್ಲಿ 20 ಕೋಟಿ ಹಣ ಲೋಕಸಭಾ ಎಲೆಕ್ಷನ್ ಗೆ ಬಳಕೆ ಮಾಡಿದೆ. ಇಡಿ ವರದಿ ಹಾಗೂ ಎಸ್‌ ಐಟಿ ಚಾರ್ಜ್ ಶೀಟ್ ನೋಡಿದರೆ ಎಸ್‌ ಐಟಿ ಬಗ್ಗೆ ಅನುಮಾನವಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ ಐಟಿ ಬಗ್ಗೆ ತನಿಖೆ ನಡೆಸಬೇಕು. ಎಸ್‌ ಐಟಿ ರಚನೆ ಹಗರಣ ಮುಚ್ಚಿ ಹಾಕಲು ಮಾಡಿದರೆ, ಅದರ ಮೇಲೂ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಭದ್ರತೆಗೆ ಅಪಾಯ

Advertisement

ಪಾಕಿಸ್ತಾನದ ಪ್ರಜೆಗಳ ಪತ್ತೆಯಾಗಿ ರಾಜ್ಯದಲ್ಲಿ ನೆಲೆಸಿದ್ದು ಪತ್ತೆಯಾಗಿದೆ. ದೇಶದ ಆಂತರಿಕ ಭದ್ರತೆಗೆ ಇದೊಂದು ಅಪಾಯಕಾರಿ. ಗೂಢಾಚರರು, ಭಯೋತ್ಪಾದಕರು ಈ ರೀತಿಯಾಗಿ ಬರಬಹುದು, ಆರ್ಥಿಕವಾಗಿ ಭಾರತವನ್ನು ದುರ್ಬಳಕೆ ಮಾಡುವ ಸಂಚು ಇರಬಹುದು. ದೇಶದ ಆಂತರಿಕ ಮತ್ತು ಬಾಹ್ಯ ಸುರಕ್ಷತೆ ದೃಷ್ಟಿಯಿಂದ ಎನ್‌ಆರ್‌ ಸಿ ತನಿಖೆಗೆ ಒಳಪಡಿಸಬೇಕು. ಮಲೆನಾಡಿನ ಕಾಫಿ ತೋಟಗಳಲ್ಲಿ ಬಾಂಗ್ಲಾದೇಶ ನಿವಾಸಿಗಳು ಬರುತ್ತಿದ್ದಾರೆಂಬ ಮಾತಿದೆ. ಇಡೀ ದೇಶದಲ್ಲಿ ಎನ್‌ಆರ್‌ಸಿ  ಸಮೀಕ್ಷೆ ನಡೆಸಬೇಕಿದೆ. ವರ್ಕಿಂಗ್ ವೀಸಾ ನೀಡಿ, ಅವರ ಮೇಲೆ ನಿಗಾ ಇಡಲು ಅವಕಾಶ ಆಗುತ್ತದೆ ಎಂದು ಸಿ.ಟಿ ರವಿ ಹೇಳಿದರು.

ಉದ್ಯಮಿ ಸಂತ ಟಾಟಾ

ಖ್ಯಾತ ಉದ್ಯಮಿ ರತನ್ ಟಾಟಾ ನಿಧನರಾಗಿದ್ದಾರೆ. ಉಪ್ಪಿನಿಂದ ಹಡಗು ಕಟ್ಟುವವರೆಗೂ ಉದ್ದಿಮೆ ಸ್ಥಾಪನೆ ಮಾಡಿದ್ದಾರೆ. ಉದ್ಯಮಿ ಸಂತ ರತನ್ ಟಾಟಾ ಸರಳ ಜೀವಿ. ಅವರು ನಮ್ಮನ್ನ ಅಗಲಿದ್ದು ನೋವಾಗಿದೆ.ಸದಾಕಾಲವೂ ದೇಶಕ್ಕಾಗಿ ದುಡಿದು ಭಾರತದ ಪ್ರತಿಷ್ಠೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿ, ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ರವಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next