Advertisement

ಸಿದ್ಧಗಂಗಾ ಶ್ರೀಗಳಿಗೆ ಹೊಸ ಸ್ಟೆಂಟ್‌ ಅಳವಡಿಕೆ

12:08 AM May 13, 2017 | Team Udayavani |

ಬೆಂಗಳೂರು: ತೀವ್ರ ಜ್ವರ ಹಾಗೂ ಯಕೃತ್ತಿನ ಸೋಂಕಿನಿಂದ ಬಳಲುತ್ತಿರುವ ತುಮಕೂರಿನ ಸಿದ್ಧಗಂಗಾ ಮಠಾಧೀಶರಾದ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಕೆಂಗೇರಿ ಬಳಿಯ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಗೆ ಶುಕ್ರವಾರ ದಾಖಲಿಸಲಾಗಿದ್ದು, ಸ್ವಾಮೀಜಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಸ್ವಾಮೀಜಿ ಅವರಿಗೆ ಬುಧವಾರ ರಾತ್ರಿ ಜ್ವರ ಹಾಗೂ ನಿಶ್ಶಕ್ತಿ ಕಾಣಿಸಿಕೊಂಡಿದ್ದರಿಂದ ವೈದ್ಯರ ತಂಡ ಚಿಕಿತ್ಸೆ ಆರಂಭಿಸಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ಬೆಳಗ್ಗೆ 10 ಗಂಟೆ ವೇಳೆಗೆ ಸ್ವಾಮೀಜಿ ಅವರನ್ನು ನಗರದ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಅದರಂತೆ ಆಸ್ಪತ್ರೆಯ ತಜ್ಞರ ತಂಡ ಚಿಕಿತ್ಸೆ ಆರಂಭಿಸಿದೆ.

Advertisement

ಸ್ವಾಮೀಜಿ ಅವರು ಶುಕ್ರವಾರ ಬೆಳಗ್ಗೆ 10 ಗಂಟೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಕೃತ್ತಿನ ಸೋಂಕು ಹಾಗೂ ಕೆಲ ಅಡಚಣೆ ಉಂಟಾಗಿದ್ದರಿಂದ ಸ್ವಾಮೀಜಿಯವರಿಗೆ ಜ್ವರ ಕಾಣಿಸಿಕೊಂಡಿತ್ತು. ಜತೆಗೆ ವಯೋಸಹಜ ಸಮಸ್ಯೆಗಳಿಂದಲೂ ಬಳಲುತ್ತಿರುವ ಸ್ವಾಮೀಜಿ ಅವರಿಗೆ ಮೂತ್ರನಾಳದ ಸೋಂಕು ಕೂಡ ಬಾಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆ ಆರಂಭಿಸಲಾಗಿದೆ ಎಂದು ರವೀಂದ್ರನಾಥ್‌ ತಿಳಿಸಿದರು. ಸ್ವಾಮೀಜಿ ಅವರಿಗೆ ಈ ಹಿಂದೆ ಪಿತ್ತನಾಳದಲ್ಲಿ ಅಳವಡಿಸಲಾಗಿದ್ದ ಸ್ಟೆಂಟ್‌ನಿಂದಾಗಿ ತುಸು ಅಡಚಣೆ ಉಂಟಾಗಿತ್ತು. ಅದನ್ನು ಸರಿಪಡಿಸಲಾಗಿದ್ದು, ಮತ್ತೂಂದು ಲೋಹದ ಸ್ಟೆಂಟ್‌ ಅಳವಡಿಸಲಾಗಿದೆ. ಸ್ವಾಮೀಜಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.

ಸ್ವಾಮೀಜಿಗಳು ಆಸ್ಪತ್ರೆಗಳಿಗೆ ದಾಖಲಾಗಿರುವ ವಿಚಾರ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ನಟ ಗಣೇಶ್‌, ಪತ್ನಿ ಶಿಲ್ಪಾ ಗಣೇಶ್‌ ಸೇರಿದಂತೆ ಇತರರೂ ಯೋಗಕ್ಷೇಮ ವಿಚಾರಿಸಿದರು. ಶ್ರೀಗಳ ಆರೋಗ್ಯ ವಿಚಾರಿಸಿದ ಎಚ್‌.ಡಿ. ದೇವೇಗೌಡರು, ಸ್ವಾಮೀಜಿ ಅನಾರೋಗ್ಯದ ವಿಚಾರ ತಿಳಿದು ತುಸು ಗಾಬರಿಯಾಗಿತ್ತು. ಸದ್ಯ ಅವರ ಆರೋಗ್ಯ ಸುಧಾರಿಸುತ್ತಿದೆ. ಅವರಲ್ಲಿ ಇನ್ನೂ ಶಕ್ತಿ, ಚೈತನ್ಯವಿದೆ. ಭಗವಂತ ಅವರಿಗೆ ಹೆಚ್ಚು ಕಾಲ ಬಾಳುವ ಶಕ್ತಿ ನೀಡಲಿ. ಮುಂದಿನ ದಿನಗಳಲ್ಲಿ ನಮಗೆಲ್ಲಾ ಒಳ್ಳೆಯ ದಾರಿಯಲ್ಲಿ ನಡೆಯಲು ಆಶೀರ್ವದಿಸಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next