Advertisement

ಮನರಂಜಿಸಿದ ಶ್ಯಾಮಲಾ ಪ್ರಕಾಶ್‌ ಕಾವ್ಯ ಗಾಯನ

12:19 PM Jul 26, 2017 | |

ನಗರದಲ್ಲಿ ಇತ್ತೀಚೆಗೆ ಒಂದು ಅಪರೂಪದ ಕಾರ್ಯಕ್ರಮವನ್ನು  ಮುಂಬಯಿ  ಕನ್ನಡಿಗರ ಹಿರಿಯ ಸಂಸ್ಥೆ, ಮೈಸೂರು ಅಸೋಸಿಯೇಶನ್‌ ಸಂಸ್ಥೆ ಆಯೋಜಿಸಿತ್ತು, ಸಂಸ್ಥೆಯ  ಮುಖವಾಣಿ ನೇಸರು ಆಯೋಜಿಸಿದ್ದ ಜಾಗತಿಕ ಮಟ್ಟದ  ಕವನ ಸ್ಪರ್ಧೆಯ  ಬಹುಮಾನ ವಿತರಣೆ ಮತ್ತು ವಿಜೇತ ಸ್ಪರ್ಧಿಗಳ ಕವನಗಳ ಹಾಡುಗಾರಿಕೆಯು ಸಂಗೀತಾಭಿಮಾನಿಗಳಿಗೆ ವಿಶೇಷ ಅನುಭವವನ್ನು ನೀಡಿತ್ತು. ಬಹುಮಾನಿತ ಕವನಗಳ ಹಾಡುಗಾರಿಕೆಯು ನಗರದ  ಪ್ರಸಿದ್ಧ ಶಾಸ್ತ್ರೀಯ ಸಂಗೀತ ಗಾಯಕಿ, ಗಮಕಿ, ಲೇಖಕಿ, ವಿದುಷಿ ಶ್ಯಾಮಲಾ ಪ್ರಕಾಶ್‌ ಅವರಿಂದ ನಡೆಯಿತು. ಇವರು ಕರ್ನಾಟಕ ಶಾಸ್ತ್ರೀಯ ಗಾಯನದಿಂದ ಗುರುತಿಸಿಕೊಂಡವರಾದರೂ, ಹಿತ-ಮಿತವಾದ ಸಂಗೀತವನ್ನು ತೊಡಗಿಸಿ ಭಾವಗೀತೆಗಳನ್ನು ಹಾಡಿದ್ದು, ಕೇಳುಗರ ಮನಸೂರೆಗೊಂಡಿತು.

Advertisement

ಮುಕ್ತ ಛಂದದ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿ ಲಯಕ್ಕೆ ತೊಡಗಿಸಿ ಹಾಡುವಕಾರ್ಯ ಮಹಾ ಪ್ರಯಾಸದ ಕೆಲಸ. ಕಾವ್ಯ ಬುದ್ಧಿಗೆ ಮಾತ್ರವಲ್ಲ, ಮನಸ್ಸಿಗೂ ಆನಂದ ನೀಡಬೇಕು. ಕಾವ್ಯದ ಭಾವಗೇಯತೆಯ ಮೂಲಕ ಮನಮುಟ್ಟಬೇಕು. ಆ  ಭಾವ ಓದುಗರ, ಕೇಳುಗರ ಭಾವಲಹರಿಯನ್ನು ಸ್ಪಂದಿಸಬೇಕು. ಕಾವ್ಯದಲ್ಲಿ ಲಯವಿರಬೇಕು. ಪದಗಳಲ್ಲಿ ಕಾವ್ಯ ಶಕ್ತಿಯಿರಬೇಕು.ನವೋದಯ ಕವಿಗಳ ಕಾವ್ಯಗಳು ಸಂಗೀತದ ಮೂಲಕವೇ ಜನರನ್ನು ತಲುಪಿದ್ದು ಎಂಬುದು ನಿರ್ವಿವಾದ. ಆದರೆ ನವ್ಯದ ಕಾಲದಲ್ಲಿ ಮುಕ್ತಿಛಂಧದ ಮೂಲಕ ಕಾವ್ಯ ರಚನೆ ಆರಂಭಮಾತು. ಇದು ಭಾಷೆಯಯನ್ನು ಸರಳಗೊಳಿಸಿತಾದರೂ ಕಾವ್ಯಶಕ್ತಿಯನ್ನು  ಕಳೆದುಕೊಂಡು ವಾಚಾಳಿಯಾಯಿತು. ಕಾವ್ಯಗಳಲ್ಲಿ ಛಂದ, ಬಂಧಗಳೆಲ್ಲಾ ಮಾಯವಾಗಿ ಕೇವಲ ಬುದ್ಧಿಗೆ ಪ್ರಯಾಸ ನೀಡಿದ್ದರಿಂದ, ಸಾಹಿತ್ಯ ಜನರಿಂದ ದೂರವಾಯಿತು.

ವಿದುಷಿ ಶ್ಯಾಮಲಾ ಅವರು ಇಂತಹ ಮುಕ್ತಛಂದದ ಕವನಗಳನ್ನೂ ರಾಗ-ತಾಳಗಳ ಬಂಧಗಳಲ್ಲಿ ಪೋಣಿಸಿ, ಜನರಿಗೆ ಆಕರ್ಷಕವೆನಿಸುವಂತೆ ಹಾಡಿದ್ದು ಒಂದು ಸೃಜನಶೀಲ ಪ್ರಯೋಗವೇ ಸರಿ. ಕವಿತೆಗಳಲ್ಲಿ ಲಯಬದ್ಧ ಸಾಲುಗಳನ್ನು ಅರಗಿಸಿಕೊಂಡು, ಕವನದ ಮೂಲಭಾವಕ್ಕೆ ಧಕ್ಕೆ ಬಾರದಂತೆ ಕೆಲವು ಪದಗಳನ್ನು, ವಾಕ್ಯಗಳನ್ನು ಸಣ್ಣ ಬದಲಾವಣೆಗಳೊಂದಿಗೆ ಕಾವ್ಯಮಯವಾಗಿಸಿಕೊಂಡು, ಗೇಯಕ್ಕೆ ಬೇಕಾದಂತೆ ಪ್ರಾಸಗಳನ್ನು ಜೋಡಿಸಿಕೊಂಡು ಹಾಡಿದ್ದು ಎಲ್ಲರನ್ನೂ ಮುದಗೊಳಿಸಿತು. ಒಟ್ಟಿನಲ್ಲಿ ಕವನದ “ಎಡಿಟಿಂಗ್‌’ ಕೆಲಸ ಬಹಳ ಅಚ್ಚುಕಟ್ಟಾಗಿ ತೋರಿ ಬಂದಿತು.

ರಾಗ ಸಂಯೋಜನೆ ಹಾಗೂ ಪ್ರಸ್ತುತಿಯ ದೃಷ್ಟಿಯಿಂದಲೂ ಅತ್ಯಂತ ಯಶಸ್ವಿಯಾಯಿತೆಂಬುದರಲ್ಲಿ  ಸಂಶಯವಿಲ್ಲ. ಕವನಗಳಲ್ಲು ಬಹಳ ಅನುಭವಿಸಿ ಹಾಡುತ್ತಾ ಅವನ್ನು ತಮ್ಮದಾಗಿಸಿಕೊಂಡದ್ದು ವಿಶೇಷ ಆಕರ್ಷಣೆಯಾಗಿತ್ತು. ಪ್ರತಿ ಹಾಡಿನ ಮುಂಚೆ ಕೊಟ್ಟ ಕಾವ್ಯಭಾವದ ಸಣ್ಣ ವಿವರಣೆ ಇಲ್ಲಿಯ ಕವನಗಳನ್ನು ಬೇಗ ಗ್ರಹಿಸಲು ಸಾಧ್ಯವಾಯಿತು. “ಅಥಾತೋ ಭಕ್ತಿ ಜಿಜ್ಞಾಸಾ’ ಎಂಬ ಶೀರ್ಷಿಕೆಯ, “ನಿನ್ನ ನೆನಪಿನಲ್ಲಿ  ಏಕೋ ಇಂದು ಎನ್ನೆದೆಯು ಭಾರ ಭಾರ – ನೀನೆಷ್ಟು ದೂರದೂರ’ ಎನ್ನುವಗೀತೆ ಸತ್ಯೇಶ್‌ ಎನ್‌. ಬೆಂಗಳೂರು ಇವರ ರಚನೆಯಾಗಿತ್ತು.  ತಾಯಿಯ ನೆನಪಿನಲ್ಲಿ ಭಾವನಾತ್ಮಕವಾಗಿದ್ದು, ಇದರ ಸಂಗೀತವು ಆಧ್ಯಾತ್ಮಿಕ ಸ್ಪರ್ಶದೊಂದಿಗೆ ಮಾಂತ್ರಿಕತೆಯನ್ನು ಮೂಡಿಸಿತ್ತು.  ಸುಂದರಗತ ವರ್ತಮಾನಗಳ ನೆನಪುಗಳ ಸರಮಾಲೆಯಲ್ಲಿ, ಪ್ರೀತಿಯ ಸಿಂಚನವನ್ನು ಮೂಡಿಸಿದ ಗೀತೆ, “ಪಾರಿಜಾತದ ಮೊಗ್ಗು ಪಕಳೆ ಬಿಡಿಸುವ ಹೊತ್ತು – ನನಗೆ ನೀನು ನಿನಗೆ ನಾನು’ ಇದನ್ನು  ರೇಣುಕಾರಮಾನಂದ್‌, ಅಂಕೋಲ ಅವರು ರಚಿಸಿದ್ದು,  -ಇದರ ಗಾಯನ ಪ್ರಸ್ತುತಿ ಕೇಳುಗರ ಭಾವವೀಣೆಗಳನ್ನೇ ಮೀಟಿದಂತಿತ್ತು.

ಜಾತ್ರೆ ಮುಗಿದ ಬಯಲು ಕವನವನ್ನು‌ ವಿನಾಯಕ ಅರಳಿಸುರಳಿ, ಶಿವಮೊಗ್ಗ ಅವರು ರಚಿಸಿದ್ದು, ಗೀತೆಯ ಗಾಯನದಲ್ಲಿ ಕೆಲವು ಸಾಲುಗಳು ಹಾಡಿಗೂ, ವಾಚ್ಯವೆನಿಸಿದ ಕೆಲವು ಸಾಲುಗಳು ಓದಿಗೂ ಮೀಸಲಾಗಿ ಒಂದು ಹೊಸ ಪ್ರಯೋಗವಾಗಿ ಗಮನ ಸೆಳೆಯಿತು. ಶಾಂತಿ ಶೆಟ್ಟಿ, ಡೊಂಬಿವಲಿ ಅವರ ರಚನೆಯ “ಏನೆಂದು ಬರೆಯಲಿ ಹೇಳು’-ಅಧುನಿಕ ಸಾಮಾಜಿಕ ವೈಪರೀತ್ಯಗಳಿಂದ ಕೂಡಿದ ಭಾವವಿದ್ದು ವಾಚ್ಯವೆನಿಸಿದ್ದರೂ ಗಾಯನಕ್ಕಾಗಿ ಪ್ರಯಾಸಪಟ್ಟು ಮಿತಗೊಳಿಸಿದ್ದು ಸ್ಪಷ್ಟವಾಗುತ್ತಿತ್ತು. ತಾ. ಶ್ರೀ. ಗುರುರಾಜ್‌  ಬೆಂಗಳೂರು, ಅವರ “ಮುನಿಬ್ಯಾಡ ಮಳೆಯೆ’, ಜಿ. ಕೆ. ಕುಲಕರ್ಣಿಯವರ “ಸಣ್ಣ ಸೂಜಿ’ ಕವನಗಳು ಜಾನಪದ ಸಂಗೀತ ಸಂಯೋಜನೆ ಎಂದು ಹೃದ್ಯವೆನಿಸಿದವು.       

Advertisement

ಗಾಯಕಿಯೇ ತಿಳಿಸಿದಂತೆ, ಶುಭಾ ಎ. ಆರ್‌.  ಬೆಂಗಳೂರು ಇವರ “ಅಮ್ಮನ ನೆನಪಿನ ಮ್ಯೂಸಿಯಂ’ ಮತ್ತು ಮುಸ್ತಾಫ್‌ ಕೆ. ಎಚ್‌. ಕೊಡಗು ಇವರ “ನಾನು, ಉಮ್ಮ ಮತ್ತು ಹರಾಮ್‌’ ಕವನಗಳು ಬಹುಮಾನಿತವಾಗಿದ್ದರೂ, ಗಂಭೀರ ವೈಚಾರಿಕ ಚಿಂತನೆಗಳಿಂದ ಕೂಡಿದ್ದರಿಂದ ಅವುಗಳನ್ನು ಹಾಡುವುದು ಸಲ್ಲದು ಎಂಬ ಕಾರಣದಿಂದ ಅವು ಅಂದಿನ ಗಾಯನದಿಂದ ಹೊರಗುಳಿದವು.  

  ಈ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಾರ್ಮೋನಿಯಂನಲ್ಲಿ ಶ್ರೀ ದತ್ತಾತ್ರೇಯ ಮೋಕಲ್‌ ಮತ್ತು ತಬಲಾದಲ್ಲಿ ಖರೆ ಅವರು ಸಹಕರಿಸಿದರು. ರಾಷ್ಟ್ರಮಟ್ಟದಲ್ಲಿ ಅನೇಕ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿರುವ ಶ್ಯಾಮಲಾರವರು ಲೇಖಕಿಯಾಗಿ, ಅಂಕಣಗಾರ್ತಿಯಾಗಿ, ಗಮಕಿಯಾಗಿ, ಒಳ್ಳೆಯ ವಾಗ್ಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಂಗೀತ ಸಾಹಿತ್ಯವನ್ನು ಕುರಿತಾದ ಸಂಶೋಧನಾ ಮಹಾ ಪ್ರಬಂಧವನ್ನು ಮುಂಬಯಿ ವಿಶ್ವವಿದ್ಯಾಲಯಕ್ಕೆ ಈಗಾಗಲೇ ಸಲ್ಲಿಸಿದ್ದಾರೆ. ಮೇಲ್ಮಟ್ಟದ ಕಾರ್ಯಕ್ರಮವನ್ನು ರೂಪಿಸಿ ಯಶಸ್ವಿಯಾದ ಮೈಸೂರು ಅಸೋಸಿಯೇಶನ್‌ಗೆ ಅಭಿನಂದನೆಗಳು. ನಗರದ ಕಲಾಭಿಮಾನಿಗಳು, ಕನ್ನಡಾಭಿಮಾನಿಗಳಿಂದ ಸಭೆ ತುಂಬಿ ತುಳುಕುತ್ತಿದ್ದುದು ಕಾರ್ಯಕ್ರಮದ ಯಶಸ್ಸಿಗೆ ಕನ್ನಡಿ ಹಿಡಿದಂತಿತ್ತು ಎಂಬುದು ಉಲ್ಲೇಖನೀಯ ಅಂಶ. 

ಬೆಟರಾಯ ತುರುವೇಕೆರೆ  

Advertisement

Udayavani is now on Telegram. Click here to join our channel and stay updated with the latest news.

Next