Advertisement

ಶ್ರುತಿನಾಯ್ಡು ಈಗ ಸಿನಿಮಾ ನಿರ್ದೇಶಕಿ

09:11 AM May 21, 2019 | Lakshmi GovindaRaj |

ಜಗ್ಗೇಶ್‌ ಅಭಿನಯದ “ಪ್ರೀಮಿಯರ್‌ ಪದ್ಮಿನಿ’ ಚಿತ್ರಕ್ಕೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು ಗೊತ್ತೇ ಇದೆ. ಆ ಚಿತ್ರ ಈಗ 25ದಿನ ಪೂರೈಸಿ ಮುನ್ನುಗ್ಗುತ್ತಿದೆ. ಈ ಚಿತ್ರ ನಿರ್ಮಾಣದ ಮಾಡಿದ್ದ ಶ್ರುತಿನಾಯ್ಡು ಅವರೀಗ ಇದೇ ಖುಷಿಯಲ್ಲೊಂದು ಹೊಸ ಸುದ್ದಿ ಹರಿಬಿಟ್ಟಿದ್ದಾರೆ. ಆ ಹೊಸ ಸುದ್ದಿಯೇನೆಂದರೆ, ಅವರೀಗ ಸಿನಿಮಾವೊಂದನ್ನು ನಿರ್ದೇಶನ ಮಾಡಲು ತಯಾರಿ ನಡೆಸುತ್ತಿದ್ದಾರೆ.

Advertisement

ಹೌದು, ಈ ವಿಷಯವನ್ನು ಸ್ವತಃ ಶ್ರುತಿನಾಯ್ಡು ಅವರೇ ಹೇಳಿಕೊಂಡಿದ್ದಾರೆ. ಇಲ್ಲಿಯವರೆಗೆ ಶ್ರುತಿನಾಯ್ಡು, ಅವರನ್ನು ಜನರು ಕಿರುತೆರೆಯಲ್ಲಿ ನಟಿಯಾಗಿ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿಯೂ ನೋಡಿದ್ದಾರೆ. ಇತ್ತೀಚೆಗೆ ಅವರು ಮೊದಲ ಸಲ “ಪ್ರೀಮಿಯರ್‌ ಪದ್ಮಿನಿ’ ಚಿತ್ರ ನಿರ್ಮಾಣ ಮಾಡುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟರು.

ಆ ಮೂಲಕ ಯಶಸ್ಸನ್ನೂ ಪಡೆದುಕೊಂಡರು. ಕಿರುತೆರೆಯಲ್ಲಿ ಯಶಸ್ವಿ ನಿರ್ದೇಶಕಿ ಎನಿಸಿಕೊಂಡಿರುವ ಶ್ರುತಿನಾಯ್ಡು, ಇದೇ ಮೊದಲ ಬಾರಿಗೆ ಸಿನಿಮಾವೊಂದನ್ನು ನಿರ್ದೇಶಿಸಲು ಹೊರಟಿದ್ದಾರೆ. ಹೌದು, ಆ ಕುರಿತು ಹೇಳಿಕೊಳ್ಳುವ ಶ್ರುತಿನಾಯ್ಡು, ” ನನ್ನ ನಿರ್ಮಾಣದ “ಪ್ರೀಮಿಯರ್‌ ಪದ್ಮಿನಿ’ ಚಿತ್ರ 25 ದಿನಗಳನ್ನು ಪೂರೈಸಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಒಳ್ಳೆಯ ಸಿನಿಮಾ ನೀಡಿದರೆ, ಖಂಡಿತವಾಗಿಯೂ ಜನರು ಸ್ವೀಕರಿಸುತ್ತಾರೆ ಎಂಬುದಕ್ಕೆ “ಪ್ರೀಮಿಯರ್‌ ಪದ್ಮಿನಿ’ ಸಾಕ್ಷಿಯಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ನಾನು ಕಥೆ ಬರೆದು ನಿರ್ದೇಶಿಸಿದ “ಅತಿ ಮಧುರ ಅನುರಾಗ’ ಎಂಬ ಧಾರಾವಾಹಿ ಸಾಕಷ್ಟು ಅನುಭಕ ಕಟ್ಟಿಕೊಟ್ಟಿತ್ತು. ಆಗಿನಿಂದಲೂ ನಾನೊಂದು ಒಳ್ಳೆಯ ಕಥೆ ಹೆಣೆದು, ಸಿನಿಮಾ ಮಾಡಬೇಕು ಅಂತ ಯೋಚಿಸಿದ್ದೆ.

ಬಾಲಿವುಡ್‌ನ‌ಲ್ಲಿ ಮೇಘನಾ ಗುಲ್ಜಾರ್‌, ಗೌರಿ ಶಿಂಧೆ ಇವರೆಲ್ಲರ ಕೆಲಸ ನೋಡಿದಾಗ, ನನಗೂ ಒಂಥರಾ ಹೆಮ್ಮೆ ಎನಿಸುತ್ತಿತ್ತು. ನಾನೂ ಕೂಡ ಒಂದೊಳ್ಳೆಯ ಚಿತ್ರ ಯಾಕೆ ನಿರ್ದೇಶನ ಮಾಡಬಾರದು ಅಂತಾನೇ ಸದಾ ಯೋಚನೆ ಮಾಡುತ್ತಿದ್ದೆ. ಅದಕ್ಕೂ ಮೊದಲು ಒಳ್ಳೆಯ ಕಂಟೆಂಟ್‌ ಇರುವ “ಪ್ರೀಮಿಯರ್‌ ಪದ್ಮಿನಿ’ ಸಿನಿಮಾ ನಿರ್ಮಾಣ ಮಾಡಿದೆ.

Advertisement

ಅದು ಯಶಸ್ಸು ಕೊಟ್ಟಿದೆ. ಅದೇ ಖುಷಿಯಲ್ಲೀಗ ನಾನೊಂದು ಕಥೆ ಬರೆದು, ಒಂದು ಸಿನಿಮಾ ಮಾಡಲು ತಯಾರಿ ನಡೆಸಿದ್ದೆನೆ. ಇಷ್ಟರಲ್ಲೇ ಮತ್ತೂಂದು ಒಳ್ಳೆಯ ಕಥೆಯೊಂದಿಗೆ ನಿರ್ದೇಶಕಿಯಾಗಿ ಕಾಣಿಸಿಕೊಳ್ಳುತ್ತೇನೆ’ ಎಂದು ಖುಷಿಯಿಂದ ಹೇಳುತ್ತಾರೆ ಶ್ರುತಿನಾಯ್ಡು. ಚಿತ್ರದ ತಾರಾಬಳಗ, ಶೀರ್ಷಿಕೆ ಸೇರಿದಂತೆ ಇತರ ಅಂಶಗಳ ಕೆಲಸ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next