Advertisement

Shri Ram Mandir ಸೌಹಾರ್ದ,ರಾಷ್ಟ್ರೀಯತೆಯ ಪ್ರತೀಕ: ಭಕ್ತಸಾಗರದ ಕೊರಗು ನಿವಾರಣೆ

11:21 PM Jan 21, 2024 | Team Udayavani |

ವಿಶ್ವದ ಪಾರಂಪರಿಕ ನಗರಿ ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಭೂಮಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಲಲ್ಲಾನ ಪ್ರಾಣಪ್ರತಿಷ್ಠೆ ಜ. 22ರ ಸೋಮವಾರ ನಡೆಯಲಿದೆ. ಈ ಮೂಲಕ ಜಗತ್ತಿನ ಕೋಟ್ಯಂತರ ಜನರ ಐದು ಶತಮಾನಗಳ ಕನಸು ನನಸಾಗುತ್ತಿದೆ. ರಾಮಭಕ್ತರ ಬಲು ನಿರೀಕ್ಷೆಯ ಅಪೇಕ್ಷೆಯೊಂದು ಈಡೇರುತ್ತಿರುವ ಪರ್ವಕಾಲ ಇದಾಗಿದೆ. ಶ್ರೀರಾಮನ ಜನ್ಮಸ್ಥಳದಲ್ಲಿ ಆತನಿಗೊಂದು ಭವ್ಯ ದೇಗುಲವಿಲ್ಲ ಎಂಬ ಭಕ್ತಸಾಗರದ ಕೊರಗು ನಿವಾರಣೆಯಾಗಿ ನಿರ್ಮಾಣಗೊಂಡಿರುವ ಭವ್ಯ ವಾದ, ಬೃಹತ್‌ ದೇಗುಲದಲ್ಲಿ ಬಾಲರಾಮ ಪ್ರತಿಷ್ಠೆಗೊಳ್ಳುತ್ತಿದ್ದಾನೆ. ಈ ಸುಂದರ, ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕೇವಲ ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಅಯೋಧ್ಯೆಯತ್ತ ದೃಷ್ಟಿ ಹರಿಸಿದೆ. ಸಹಜವಾಗಿಯೇ ಜಗತ್ತಿನಾದ್ಯಂತದ ಭಕ್ತರು ಮತ್ತು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

Advertisement

ಶ್ರೀರಾಮ ಕೇವಲ ಪುರಾಣ ಪಾತ್ರಕ್ಕಷ್ಟೇ ಸೀಮಿತವಾಗಿರದೆ ಇಡೀ ಸಮಾಜಕ್ಕೆ ಓರ್ವ ಆದರ್ಶಪುರುಷನಾಗಿ ಬೆಳೆದು ನಿಂತಿದ್ದಾನೆ. ಈ ಭರತಖಂಡದಲ್ಲಿ, ವಿಶ್ವದ ಕೋಟ್ಯಂತರ ಭಕ್ತರ, ಅನುಯಾಯಿಗಳ ಪಾಲಿಗೆ ಆರಾಧ್ಯದೇವತೆಯಾಗಿ ತಲೆತಲಾಂತರಗಳಿಂದ ಜನ ಮಾನಸದಲ್ಲಿ ಅಚ್ಚಳಿಯದೆ ಶ್ರೀರಾಮ ಉಳಿದಿ ದ್ದಾನೆಂದರೆ ಆತ ಮಾನುಷಭಾ ವದಲ್ಲಿರುವ ದೈವತ್ವ ಎಂದರೆ ಅದು ಅತಿಶ ಯೋ ಕ್ತಿಯಲ್ಲ. ಇಂತಹ ಮರ್ಯಾದಾ ಪುರುಷೋತ್ತಮನ ಜನ್ಮಸ್ಥಾನದಲ್ಲಿ ಆತನಿಗೊಂದು ಸದೃಢ ದೇವಾಲಯ ನಿರ್ಮಾಣವಾಗಬೇಕೆಂಬ ಶತಮಾನಗಳ ಹೋರಾಟದ ಫ‌ಲಶ್ರುತಿಯಾಗಿ ಸುಂದರ ಮಂದಿರ ತಲೆ ಎತ್ತಿ ನಿಂತಿದೆ. ಚರಿತ್ರೆಯ ಪ್ರಮಾದಗಳನ್ನು ಸರಿಪಡಿಸುವ ಕಾರ್ಯವಾಗಿದೆ. ಶ್ರೀರಾಮನ ಜೀವನಗಾಥೆಯನ್ನು ನಾವು ಸಂಪೂರ್ಣವಾಗಿ ಮನನ ಮಾಡಿಕೊಂಡದ್ದೇ ಆದಲ್ಲಿ ಶ್ರೀರಾಮನ ಪಾಲಿಗೆ ಇದು ಅಸಹಜವೇನಲ್ಲ. ಆತ ತನ್ನ ಜೀವನದುದ್ದಕ್ಕೂ ಸಾಕಷ್ಟು ಸಂಕಷ್ಟ, ಸಮಸ್ಯೆ, ಪರೀಕ್ಷೆ, ಸವಾಲುಗಳನ್ನು ಎದುರಿಸಿಕೊಂಡೇ ಬಂದವನು. ಅದೇ ದೃಷ್ಟಿಕೋನದಲ್ಲಿ ನೋಡುವುದಾದರೆ ಇದು ಕೂಡ ಶ್ರೀರಾಮನ ಶಕ್ತಿಯನ್ನು ಮತ್ತೂಮ್ಮೆ ಸಾಬೀತುಪಡಿಸಿದಂತಾಗಿದೆ. ತನ್ಮೂಲಕ ಶ್ರೀರಾಮನ ಮತ್ತೂಂದು ವನವಾಸವೂ ಅಂತ್ಯಗೊಂಡು, ಪುರುಷೋತ್ತಮನ ಪುನರಾಗಮನಕ್ಕೆ ಅಯೋಧ್ಯೆ ಮಾತ್ರವಲ್ಲ ಇಡೀ ವಿಶ್ವವೇ ಸಾಕ್ಷಿಯಾ ಗುತ್ತಲಿದೆ.

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮ ಮಂದಿರ ಕೇವಲ ಸನಾತನ ಧರ್ಮೀಯರ ನಂಬಿಕೆ, ಭಕ್ತಿಗಷ್ಟೇ ಸೀಮಿತವಾಗಿರದೆ, ಸಮಸ್ತ ಭರತ ಕೋಟಿಯ ರಾಷ್ಟ್ರಭಕ್ತಿಯ, ರಾಷ್ಟ್ರೀಯತೆಯ ಸಂಕೇತವೂ ಹೌದು. ಶ್ರೀರಾಮ ಸಂಯಮ, ಧರ್ಮನಿಷ್ಠೆ, ವೀರತ್ವ, ಸಭ್ಯತೆ, ಮಾನವೀಯತೆ, ಸಚ್ಚಾರಿತ್ರ್ಯ, ಕರುಣಾಮಯಿ…ಹೀಗೆ ಸಕಲ ಗುಣ ಸಂಪನ್ನ. ಈ ಕಾರಣದಿಂದಾಗಿಯೇ ಆತ ಧರ್ಮಾತೀತ, ದೇಶಾತೀತ, ಕಾಲಾತೀತ ಆದರ್ಶ ಪುರುಷ. ಈ ಕಾರಣಕ್ಕಾಗಿ ರಾಮ ಮಂದಿರ ದೇಶಗಳ ಗಡಿಯ ಎಲ್ಲೆಯನ್ನು ಮೀರಿ ವಿಶ್ವಾದ್ಯಂತದ ಜನರ ಗಮನವನ್ನು ಸೆಳೆದಿದೆ. ಜನ್ಮಸ್ಥಳದಲ್ಲಿ ಶ್ರೀರಾಮನ ದೇಗುಲ ನಿರ್ಮಾಣಗೊಂಡು ಶ್ರೀರಾಮ ಅಲ್ಲಿ ನೆಲೆಯಾಗುತ್ತಿದ್ದಾನೆ. ಇಲ್ಲಿಗೆ ನಮ್ಮನ್ನಾಳುವವರು, ಧರ್ಮ ಸಂಸ್ಥಾಪಕರು, ಶ್ರೀರಾಮ ಭಕ್ತರು ವಿರಮಿಸುವಂತಿಲ್ಲ. ಶ್ರೀರಾಮ ಪ್ರತಿಯೊಂದು ಸಂಕಷ್ಟ, ಸವಾಲುಗಳನ್ನು ಎದುರಿಸಿದ ಬಳಿಕ ಆ ನೆಲದಲ್ಲಿ ಶಾಂತಿಯನ್ನು ಪುನರ್‌ ಸ್ಥಾಪಿಸಿದ್ದೇ ಅಲ್ಲದೆ ಮಾದರಿ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಿದ್ದನು. ಇಂತ ಹುದೇ ರಾಮರಾಜ್ಯವನ್ನು ಕಾಣುವ ಸೌಭಾಗ್ಯ ಈ ದೇಶವಾಸಿಗಳದ್ದಾಗಬೇಕು. ಈ ದಿಸೆಯಲ್ಲಿ ಇಡೀ ವ್ಯವಸ್ಥೆ ಒಗ್ಗೂಡಿ ಕಾರ್ಯೋನ್ಮುಖವಾಗಬೇಕು. ಶ್ರೀರಾಮನ ಭವ್ಯ ದೇಗುಲ ರಾಷ್ಟ್ರೀಯತೆ, ಸೌಹಾರ್ದತೆಯ ಪ್ರತೀಕವಾಗಿ ಮುಂದಿನ ದಿನಗಳಲ್ಲಿ ಪ್ರಜ್ವಲಿಸಲಿ ಎಂಬುದು ದೇಶವಾಸಿಗಳ ಸದಾಶಯ.

Advertisement

Udayavani is now on Telegram. Click here to join our channel and stay updated with the latest news.

Next