ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿರುವ ಕೆರೆ ಹಾಗೂ ಹೂದೋಟಕ್ಕೆ, ಬಿಲ್ಲವ ಸಮುದಾಯದ ಮುಖಂಡ, ಸಾಮಾಜಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ದಿ| ನಾರಾಯಣಸ್ವಾಮಿ ಅವರ ಹೆಸರನ್ನು ಇಡಲಾಗಿದೆ.
ರವಿವಾರ ನಡೆದ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಅವರು ನಾಮಫಲಕವನ್ನು ಅನಾವರಣಗೊಳಿಸಿದರು. ಸಮಾಜದಲ್ಲಿ ಸೇವೆ ಮಾಡಿದವರನ್ನು ಗುರುತಿಸಿ ಅವರ ಸಾಧನೆಗಳನ್ನು ಅವರ ನಿಧನಾನಂತರ ಉಲ್ಲೇಖ ಮಾಡುವಂತಹುದು ಅಗತ್ಯವಾಗಿ ನಡೆಯಬೇಕು. ಸಮಾಜಕ್ಕಾಗಿ ಸೇವೆ ಮಾಡಿದವರನ್ನು ಸ್ಮರಿಸುವುದು ಭಾರತೀಯ ಸಂಸ್ಕೃತಿ ಎಂದವರು ಹೇಳಿದರು.
ಜೆ.ಪಿ. ನಾರಾಯಣಸ್ವಾಮಿ ಅವರು ಸಮಾಜಕ್ಕಾಗಿ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ. ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಕಷ್ಟಪಟ್ಟಿದ್ದಾರೆ. ಜೀವಿತಾವಧಿಯಲ್ಲಿ ಮನುಷ್ಯ ಮಾಡುವ ಸಾಧನೆಗಳನ್ನು ಬೆಟ್ಟುಮಾಡಿ ಸಮಾಜಕ್ಕೆ ಇತರರು ತೋರಿಸಿದಾಗ ಅಂತಹ ಸ್ಫೂರ್ತಿ ಇನ್ನೊಬ್ಬರಲ್ಲಿ ಜಾಗೃತವಾಗುತ್ತದೆ. ಈ ನೆಲೆಯಲ್ಲಿ ನಾರಾಯಣ ಸ್ವಾಮಿ ಅವರ ಹೆಸರನ್ನು ದೇವಸ್ಥಾನದ ಕೆರೆ ಹಾಗೂ ಹೂದೋಟಕ್ಕೆ ಇರಿಸಲಾಗಿದೆ ಎಂದರು.
ಕ್ಷೇತ್ರದ ಪ್ರಮುಖರಾದ ಮಾಲತಿ ಜೆ. ಪೂಜಾರಿ, ಎಚ್.ಎಸ್. ಸಾಯಿರಾಂ, ಪದ್ಮರಾಜ್ ಆರ್., ಮಹೇಶ್ಚಂದ್ರ, ರವಿಶಂಕರ ಮಿಜಾರು, ಹರಿಕೃಷ್ಣ ಬಂಟ್ವಾಳ, ದೇವೇಂದ್ರ ಪೂಜಾರಿ, ಶೇಖರ್ ಪೂಜಾರಿ, ಮಹಾಬಲ ಸುವರ್ಣ, ಜೆ. ಶಂಕರ್, ಡಾ| ಬಿ.ಜಿ. ಸುವರ್ಣ, ಡಾ| ಅನುಸೂಯ, ಪಿ.ಕೆ. ಲೋಹಿತ್ ಪೂಜಾರಿ, ಜಯವಿಕ್ರಮ, ದೇವದಾಸ್, ಚಂದನ್, ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.