Advertisement

ಲಕ್ಷಾಂತರ ರೂ. ಮೌಲ್ಯದ ವಿಗ್ರಹ ಸೇರಿ ಹಲವು ಸ್ವತ್ತು ಕಳವು

10:22 AM Sep 02, 2017 | Team Udayavani |

ಸುಳ್ಯ: ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಇತಿಹಾಸ ಪ್ರಸಿದ್ಧ ಮರಕತ ಶ್ರೀ ದುರ್ಗಾ ಪರಮೇಶ್ವರೀ  ದೇವಸ್ಥಾನಕ್ಕೆ ಗುರುವಾರ ತಡರಾತ್ರಿ ಕಳ್ಳರು ನುಗ್ಗಿ ಲಕ್ಷಾಂತರ ಮೌಲ್ಯದ ವಿಗ್ರಹ ಸಹಿತ, ದೇವರ ಆಭರಣಗಳನ್ನು ದೋಚಿದ ಘಟನೆ ಸಂಭವಿಸಿದೆ.

Advertisement

1,600 ವರ್ಷಗಳ ಹಿಂದಿನ ಪಂಚಲೋಹದ ಅಪರೂಪದ ಮೂರ್ತಿ, ಹವಳದ ಪೆಂಡೆಂಟ್‌ ಇರುವ ಚೈನು, ಶ್ರೀ ದೇವಿಯ ತಾಳಿಸರ, 2 ಬೆಳ್ಳಿ ಕವಚಗಳನ್ನು ಕಳವುಗೈಯಲಾಗಿದೆ. ಪಂಚ ಲೋಹದ ವಿಗ್ರಹ ಲಕ್ಷಾಂತರ ರೂ. ಮೌಲ್ಯದಾಗಿದ್ದು, ನಿಖರ ಮೊತ್ತವನ್ನು ಇನ್ನಷ್ಟೆ ಅಂದಾಜಿಸಬೇಕಿದೆ. ಉಳಿ ದಂತೆ ಸುಮಾರು 3 ಲಕ್ಷ ರೂ. ಮಿಕ್ಕಿ ಮೌಲ್ಯದ ಆಭರಣವನ್ನು ಕದ್ದೊಯ್ಯಲಾಗಿದೆ.

ಪ್ರಕರಣದ ವಿವರ
ಶುಕ್ರವಾರ ದೇವಳದ ಅರ್ಚಕ ಶ್ರೀರಾಮ ಭಟ್‌ ಅವರು ದೇವಳದ ಸಮೀಪದ ನದಿಯಲ್ಲಿ ದೇವರ ಮೀನುಗಳಿಗೆ ಅನ್ನಪ್ರಸಾದ ಹಾಕಿ ಪೂಜಾ ಕಾರ್ಯಕ್ಕೆ ಬಂದ ಸಂದರ್ಭ ಈ ಘಟನೆ ಬೆಳಕಿಗೆ ಬಂದಿದೆ. ಅವರು ತತ್‌ಕ್ಷಣ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ. ದೇವಾಲಯದ ಮಾಹಿತಿ ಅನ್ವಯ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.

ಸಿಸಿ ಕೆಮರಾಕ್ಕೆ ಹಾನಿ
ದೇವಳದಿಂದ ನದಿಗೆ ಹೋಗುವ ಮೆಟ್ಟಿಲಿನ ಬದಿಯಲ್ಲಿ ಅಳವಡಿಸ ಲಾಗಿದ್ದ ಸಿಸಿ ಕೆಮರಾಕ್ಕೆ ಹಾನಿ ಮಾಡಲಾಗಿದೆ. ದೇವಾಲಯದ ಪ್ರಧಾನ ಬಾಗಿಲು ಮುರಿಯಲು ವಿಫಲವಾದ ಕಳ್ಳರು, ಅನಂತರ ಉತ್ತರ ಭಾಗದ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ. ಗರ್ಭಗುಡಿಯ ಬಾಗಿಲು ತೆರೆದಿದ್ದು ಅಲ್ಲಿಂದ ದೇವರ ಸೊತ್ತುಗಳನ್ನು ದೋಚಿರುವುದು ಕಂಡು ಬಂದಿದೆ.

ಮೂರ್ತಿಗಾಗಿ ಕನ್ನ
ಲಕ್ಷಾಂತರ ರೂ. ಮೌಲ್ಯದ ಮೂರ್ತಿಯನ್ನೇ ಕೇಂದ್ರೀಕರಿಸಿ ಈ ದರೋಡೆ ನಡೆದಿದೆ. ಅದಕ್ಕೆ ಪುಷ್ಟಿ ಎನ್ನುವಂತೆ ದೇವಳದಲ್ಲಿರುವ ಕಾಣಿಕೆ ಹುಂಡಿ ಮತ್ತು ಇನ್ನಿತರ ಬೆಳ್ಳಿಯ ವಸ್ತುಗಳನ್ನು ಕಳ್ಳರು ಕೊಂಡು ಹೋಗಿಲ್ಲ. ದೇವಿಯ ವಿಗ್ರಹದ ಆಭರಣ ಹಾಗೂ ಮೂರ್ತಿಯನ್ನು ಮಾತ್ರ ಕಳವುಗೈಯಲಾಗಿದೆ.

Advertisement

ವಿಶೇಷ ಪೂಜಾ ದಿನ
ಕಾರಣಿಕ ಕ್ಷೇತ್ರದ ಮರಕತ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಮರ್ಪಿಸುವ ದಿನ. ಪ್ರತಿ ಶುಕ್ರವಾರ ಶ್ರೀ ದೇವಿಗೆ ವಿಶೇಷ ಪೂಜೆ ನೆರವೇರು ತ್ತದೆ. ಈ ದಿನ ಕ್ಷೇತ್ರಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಘಟನೆಯ ಮಾಹಿತಿ ಇಲ್ಲದೆ ಶುಕ್ರವಾರವೂ ಭಕ್ತರು ಆಗಮಿಸಿದ್ದರು.

ಕಾರಣಿಕ ಮೂರ್ತಿ
ಸಾವಿರದ ಆರುನೂರು ವರ್ಷಗಳ ಇತಿಹಾಸ ಇರುವ ಮೂರ್ತಿಯನ್ನು ಕೆಲ ವರ್ಷಗಳ ಹಿಂದೆ ಜೀರ್ಣೋದ್ಧಾರ ಸಂದರ್ಭ ಸಂರಕ್ಷಣೆಯ ದೃಷ್ಟಿಯಿಂದ ಸುಬ್ರಹ್ಮಣ್ಯ ಮಠದಲ್ಲಿ ಇರಿಸಲಾಗಿತ್ತು. ಬ್ರಹ್ಮಕಲಶದ ಸಂದರ್ಭ ದೇವಾ ಲಯಕ್ಕೆ ತರಲಾಗಿತ್ತು.

ಎಸ್‌ಪಿ ಭೇಟಿ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಡಿವೈಎಸ್‌ಪಿ ಶ್ರೀನಿವಾಸ್‌, ಪ್ರೊಬೇಷನರಿ ಡಿವೈಎಸ್‌ಪಿ ಅಜಯ್‌ ಕುಮಾರ್‌ ಡಿ.ಎನ್‌, ಸುಳ್ಯ ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌, ಸುಬ್ರಹ್ಮಣ್ಯ ಠಾಣಾಧಿಕಾರಿ ಗೋಪಾಲ್‌ ಮೊದಲಾದವರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ಶ್ವಾನದಳದಿಂದ ತಪಾಸಣೆ
ದೇಗುಲದ ಪ್ರಧಾನ ಬಾಗಿಲ ಬಳಿ ಸುತ್ತಾಡಿದ ಶ್ವಾನ ಅನಂತರ ದೇವಾಲಯದ ಪಕ್ಕದ ಕಾಡಿನಲ್ಲಿನ ಹಳೆಯ ದಾರಿಯಲ್ಲಿ ಸಾಗಿ ಹಿಂದಿರುಗಿದೆ. ಹಾಗಾಗಿ ಕಳ್ಳರು ಅದೇ ಹಾದಿಯಲ್ಲಿ ದೇವಾಲಯ ಪ್ರವೇಶಿಸಿರಬಹುದು ಎನ್ನಲಾಗಿದೆ. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ.

ಹೊರ ರಾಜ್ಯದವರ ಕೃತ್ಯ?
ಜಾಲೂÕರು-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ 2 ಕಿ.ಮೀ.ದೂರದ ಅರಣ್ಯ ಪ್ರದೇಶದಲ್ಲಿ ಈ ದೇವಾಲಯವಿದೆ. ದೇವಾಲಯದ ಸ್ಥಳದಿಂದ 200 ಮೀ. ದೂರದಲ್ಲಿ ಅರ್ಚಕರ ಮನೆಯಿದೆ. ಮನೆಯ ಹಿಂದುಗಡೆಯ ಹಾದಿಯ ಸಂದಿಯಲ್ಲಿ ವಾಹನ ನಿಲ್ಲಿಸಿದ ಕುರುಹು ಕಂಡಿದೆ. ದೇವಾಲಯದಲ್ಲಿ  ಇಪ್ಪತ್ತು ದಿವಸಗಳ ಹಿಂದೆ ಉತ್ತರ ಭಾರತದ ಕಾರ್ಮಿಕರು ಟೈಲ್ಸ್‌ ಅಳವಡಿಸುವ ಕೆಲಸ ನಿರ್ವಹಿಸಿದ್ದರು. ಕೆಲ ದಿನಗಳ ಕಾಲ ದೇವಾಲಯ ದಲ್ಲೇ ತಂಗಿದ್ದರು. ಕೆಲಸ ಮುಗಿದ ಅನಂತರ ಊರಿಗೆ ತೆರಳಿದ್ದರು. ಅವರಿಗೆ ದೇವಾಲಯದ ಪರಿಸರದ ಮಾಹಿತಿ ಇದ್ದು, ಈ ಕೃತ್ಯದಲ್ಲಿ ಕೈವಾಡ ಇರುವ ಬಗ್ಗೆ ಗುಮಾನಿ ಮೂಡಿದೆ. ಈ ಹಿಂದೆ ಇದೇ ದೇವಾಲಯದ ಕಾಣಿಕೆ ಹುಂಡಿ ಕಳವು ಪ್ರಕರಣ ನಡೆದಿತ್ತು. ಇದೀಗ ದೇವರ ಮೂರ್ತಿಯನ್ನೇ ಕಳವುಗೈದ ಪ್ರಕರಣ ಗ್ರಾಮಸ್ಥರಲ್ಲಿ ತಲ್ಲಣ ಮೂಡಿಸಿದೆ.

ಶೀಘ್ರ ಆರೋಪಿಗಳ ಪತ್ತೆ
ಪ್ರಕರಣ ಶೀಘ್ರ ಭೇದಿಸಲು ಕ್ರಮ ಕೈಗೊಳ್ಳಲು ಸುಳ್ಯ ವೃತ್ತ ನಿರೀಕ್ಷಕ ಸತೀಶ್‌ ಕುಮಾರ್‌ ನೇತೃತ್ವದ ತನಿಖಾ ತಂಡ ರಚಿಸಲಾಗಿದೆ.
– ಸುಧೀರ್‌ ಕುಮಾರ್‌ ರೆಡ್ಡಿ
ಎಸ್‌.ಪಿ.

Advertisement

Udayavani is now on Telegram. Click here to join our channel and stay updated with the latest news.

Next