Advertisement

Shravana: ಶ್ರಾವಣ ಬಂತು  ಕಾಡಿಗೆ… ನಾಡಿಗೆ… ಬೀಡಿಗೆ! 

01:30 PM Aug 04, 2024 | Team Udayavani |

ಶ್ರಾವಣ ಮಾಸವೆಂದರೆ ಮಳೆಯ ವೈಭವ. ಹಬ್ಬಗಳ ಸಡಗರ, ರೈತಾಪಿ ಜನರು ಬಿತ್ತನೆ ಮುಗಿಸಿದ ನಿರುಮ್ಮಳ ಭಾವದಲ್ಲಿ ಈ ಮಾಸವನ್ನು ಆಚರಿಸುತ್ತಾರೆ. ಆಷಾಢದ ಗಾಳಿ ಕೊನೆಗೊಳ್ಳುತ್ತಲೇ ಪ್ರಕೃತಿ ಮಳೆಯಲ್ಲಿ ತೂಗಿ ತೊನೆಯುತ್ತಾ, ತಾನೇ ನೀರಾಗುತ್ತಾ ಆನಂದವನ್ನೂ, ಕೆಲವೊಮ್ಮೆ ರೇಜಿಗೆಯನ್ನೂ ತಂದೊಡ್ಡುತ್ತದೆ. ದಿನಕ್ಕೊಂದರಂತೆ ಬರುವ ಹಭºಗಳ ಕಾರಣದಿಂದ ಶ್ರಾವಣ ಮಾಸದುದ್ದಕ್ಕೂ ಮನೆಯ ಮುಂಬಾಗಿಲಿನ ತೋರಣ ಹಸಿರಾಗಿರುತ್ತದೆ. ದೇವರ ಮಂಟಪದಲ್ಲಿ ದೀಪ ಬೆಳಗುತ್ತಿರುತ್ತದೆ…

Advertisement

ಸೂರ್ಯ ಚಂದ್ರರ ಚಲನೆ ಹಾಗೂ ಪ್ರಕೃತಿಯ ಬದಲಾವಣೆಗಳನ್ನೇ ಕೇಂದ್ರವಾಗಿಟ್ಟುಕೊಂಡು ರಚಿಸಿದ ಭಾರತೀಯ ಪಂಚಾಂಗದಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಸ್ಥಾನಮಾನ. ಶ್ರಾವಣ ಮಾಸವು ಅಭಿವೃದ್ಧಿ, ಪ್ರಗತಿಗಳ ಸಂಕೇತವಾಗಿದೆ. ಭಾರತದಾದ್ಯಂತ ಪ್ರತಿ ಪ್ರಾಂತ್ಯಗಳಲ್ಲಿಯೂ ಶ್ರಾವಣದ ಆಚರಣೆಗೆ ವಿಶೇಷತೆ ಇದೆ. ಉತ್ತರ ಭಾರತದ ಪ್ರಾಂತ್ಯಗಳಲ್ಲಿ ಆಷಾಢದಲ್ಲಿ ಬರುವ ಕಾರು ಹುಣ್ಣಿಮೆಯ ಮರುದಿನದ ಪ್ರತಿಪದದಿಂದ ಶ್ರಾವಣ ಆರಂಭವಾದರೆ, ದಕ್ಷಿಣ ಭಾರತದಲ್ಲಿ ಆಷಾಢದಲ್ಲಿ ಬರುವ ನಾಗರ ಅಮಾವಾಸ್ಯೆಯ ಮರುದಿನದ ಪ್ರತಿಪದದಿಂದ ಶ್ರಾವಣ ಆರಂಭವಾಗುತ್ತದೆ.

“ಶ್ರಾವಣದ ಮಳೆ, ಹಸನಾದ ಬೆಳೆ’ ಎಂಬ ಮಾತು ಈ ಮಾಸದ ವೈಶಿಷ್ಟ್ಯವನ್ನು ಸಾರಿ ಹೇಳುತ್ತದೆ. ಪರಿಸರದಲ್ಲಿನ ಬದಲಾವಣೆಯ ಜೊತೆಗೆ ಹತ್ತು ಹಲವು ಸಂಭ್ರಮಗಳು, ಹಬ್ಬಗಳು ದಿನಕ್ಕೊಂದರಂತೆ ಸೇರಿಕೊಳ್ಳುತ್ತವೆ. ಪರಿಣಾಮವಾಗಿ, ಶ್ರಾವಣ ಮಾಸದುದ್ದಕ್ಕೂ ಮನೆಯ ಮುಂಬಾಗಿಲಿನ ತೋರಣ ಹಸಿರಾಗಿರುತ್ತದೆ. ದೇವರ ಮಂಟಪದಲ್ಲಿ ದೀಪ ಬೆಳಗುತ್ತಿರುತ್ತದೆ.

ಶ್ರಾವಣ ಸಂಭ್ರಮ…

ಶ್ರಾವಣವೆಂದರೆ ಪ್ರಕೃತಿಗೂ ಅದೇನೋ ಹುರುಪು. ಬಿರು ಬಿಸಿಲಿನಿಂದ ಬಳಲಿದ ಭೂಮಿಗೆ ಆಗ ತಾನೇ ಶುರುವಾದ ಮುಂಗಾರು ಮಳೆ, ಶ್ರಾವಣದಲ್ಲಿ ಜಡಿ ಮಳೆಯಾಗಿ ಸುರಿದು ಭೂಮಿಗೆ ಹಸಿರನ್ನು ಹೊತ್ತು ತರುವ ಸಂದರ್ಭ ಅದು. ಹೌದು. ಶ್ರಾವಣ ಮಾಸದಲ್ಲಿ ಎÇÉೆಲ್ಲೂ ಸಂಭ್ರಮದ ಸೋನೆಮಳೆ! ಅದನ್ನೇ ಬೇಂದ್ರೆಯವರು- “ಶ್ರಾವಣಾ ಬಂತು ಕಾಡಿಗೆ, ಬಂತು ನಾಡಿಗೆ, ಬಂತು ಬೀಡಿಗೆ’ ಎಂದು ಹೇಳಿದ್ದಾರೆ. ಬಾನ ತುಂಬಾ ಚದುರಿ ಬಾಗಿದ ಮೋಡಗಳು, ಬಿಡದೆ ಸುರಿಯುವ ಮಳೆ, ಮಳೆಯ ಕಾರಣದಿಂದ ಹಸಿರುಟ್ಟು ಕಂಗೊಳಿಸುವ ಭೂಮಿ, ಅದನ್ನು ಕಂಡು ಹಿಗ್ಗುವ ರೈತಾಪಿ ವರ್ಗ, ಬಣ್ಣ ಬಣ್ಣದ ಹೂವು-ಎಲೆಗಳಿಂದ ಕಣ್ಣು ಕೋರೈಸುವ ಬೆಟ್ಟ ಗುಡ್ಡಗಳ ಸಾಲು, ಮೈದುಂಬಿ ಹರಿಯುವ ಹಳ್ಳಕೊಳ್ಳ, ನದಿ, ಕೆರೆಗಳು, ಭೋರ್ಗರೆದು ಧುಮ್ಮಿಕ್ಕುವ ಜಲಪಾತಗಳು… ಆಹಾ, ಶ್ರಾವಣ ಸಂಭ್ರಮದಲ್ಲಿ ಬದಲಾಗುವ ಪ್ರಕೃತಿ ವೈಭವವನ್ನು ಎಷ್ಟು ಬಣ್ಣಿಸಿದರೂ ಸಾಲದು.

Advertisement

ಬಾಂಧವ್ಯಗಳನ್ನು ಬೆಸೆಯುತ್ತದೆ…

ಮಳೆಯ ಜೊತೆ ಇಳೆಯ ಸಂಬಂಧ ಬೆಸೆದು ಹಸಿರ ಹುಟ್ಟಿಗೆ ಕಾರಣವಾಗುವ ಶ್ರಾವಣ, ಬಾಂಧವ್ಯಗಳನ್ನು ಗಟ್ಟಿಗೊಳಿಸುತ್ತದೆ. ಆಷಾಢದ ವಿರಹದಿಂದ ಬೇಸತ್ತ ನವದಂಪತಿಗಳು ಶ್ರಾವಣದ ನೆಪದಲ್ಲಿ ಜೊತೆಯಾಗುತ್ತಾರೆ. ರಕ್ಷಾ ಬಂಧನದ ದಿನ ಸೋದರ-ಸೋದರಿಯರ ಬಾಂಧವ್ಯಕ್ಕೆ ಹೊಸ ಅರ್ಥ ಸಿಕ್ಕರೆ, ಭೀಮನ ಅಮಾವಾಸ್ಯೆಯ ನೆಪದಲ್ಲಿ ಗಂಡ-ಹೆಂಡಿರ ಒಲುಮೆ ಗಟ್ಟಿಯಾಗುತ್ತದೆ. ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಶ್ರಾವಣದ ಸಮಯದಲ್ಲಿ ತವರಿಗೆ ಹೋಗುವ ಅವಸರ. “ಪಂಚಮಿ ಹಬ್ಬ ಉಳಿದಾವ ದಿನ ನಾಕ, ಅಣ್ಣ ಬರಲಿಲ್ಲ ಯಾಕ ಕರಿಯಾಕ’ ಎಂಬುದು ಅವರ ತಹತಹದ ಹಾಡು. ಹಬ್ಬ ಮುಗಿಸಿಕೊಂಡು, ಹೆತ್ತವರ ಪ್ರೀತಿ-ಹಾರೈಕೆಯನ್ನು ಮನದೊಳಗೆ ತುಂಬಿಕೊಂಡು ತವರಿನಿಂದ ಗಂಡನ ಮನೆಗೆ ಹೋಗುವ ಮುನ್ನ ಹೆಣ್ಣುಮಕ್ಕಳು-“ಹಾಲುಂಡ ತವರಿಗೆ ಏನೆಂದು ಹಾಡಲಿ, ಹೊಳೆ ದಂಡಿಲಿರುವ ಕರಕೀಯ, ಕುಡಿಹಂಗ ಹಬ್ಬಲಿ ಅವರ ರಸಬಳ್ಳಿ’ ಎಂದು ಹಾರೈಸಿ ಹೋಗುತ್ತಾರೆ.

ಸಂತೆ-ಮಾರುಕಟ್ಟೆಗೂ ಸಂಭ್ರಮ!

ಆಷಾಢದ ಕಾರಣಕ್ಕೆ ನೀರಸವಾಗಿದ್ದ ವ್ಯಾಪಾರ-ವ್ಯವಹಾರಗಳು, ನಿಂತು ಹೋಗಿದ್ದ ಶುಭಕಾರ್ಯಗಳು ಶ್ರಾವಣದಲ್ಲಿ ಮತ್ತೆ ಶುರುವಾಗುತ್ತವೆ. ಶ್ರಾವಣದಲ್ಲಿ ಯಾವುದೇ ಕೆಲಸ ಆರಂಭಿಸಿದ್ರೂ ಒಳ್ಳೆಯದಾಗುತ್ತೆ ಎಂಬ ನಂಬಿಕೆ ಇರುವುದರಿಂದ ಹೊಸ ಉದ್ಯಮಗಳು ಆರಂಭವಾಗುತ್ತವೆ. ಪರಿಣಾಮ; ಪ್ರತಿ ಸಣ್ಣ, ದೊಡ್ಡ ವ್ಯಾಪಾರಸ್ಥರಿಗೂ ಬಿಡುವಿಲ್ಲದ ಕೆಲಸ ಜೊತೆಯಾಗಿ ಖರೀದಿ-ಮಾರಾಟ ಹೆಚ್ಚುತ್ತದೆ. ಈ ಕಾರಣದಿಂದ ಶ್ರಾವಣದಲ್ಲಿ ಮನುಷ್ಯರು ಮಾತ್ರವಲ್ಲ; ಸಂತೆ, ಮಾರುಕಟ್ಟೆಗಳೂ ಸಂಭ್ರಮಿಸುತ್ತವೆ!

ಪ್ರಕೃತಿಗೂ ಬದುಕಿಗೂ ಅದೆಷ್ಟು ಸಾಮ್ಯತೆ! ಒಮ್ಮೆ ಬಿರುಬಿಸಿಲು, ಮತ್ತೂಮ್ಮೆ ಕೊರೆವ ಚಳಿ. ಒಮ್ಮೆ ಅತಿವೃಷ್ಟಿ ಮತ್ತೂಮ್ಮೆ ಅನಾವೃಷ್ಟಿ. ಬದುಕಿನಲ್ಲಿ ಬರುವ ಕಷ್ಟ- ಸುಖಗಳು ಹೀಗೇ ಅಲ್ಲವೇ? ಯಾವ ಸಮಯವೂ ಶಾಶ್ವತವಲ್ಲ. ಋತುಗಳು ಬದಲಾದಂತೆ ವಾತಾವರಣವೂ ಬದಲಾಗುತ್ತದೆ. ಸಮಯ ಸರಿದಂತೆ, ಕಾಲಚಕ್ರ ತಿರುಗಿದಂತೆ ಬದುಕಿನ ಸನ್ನಿವೇಶಗಳು ಸಹ ಬದಲಾಗುತ್ತವೆ. ವೈಶಾಖದ ಸುಡು ಬಿಸಿಲಿನಂತಹ ಕಷ್ಟಗಳು, ಆಷಾಢದ ಶೂನ್ಯತೆಯಂತಹ ಖಾಲಿತನಗಳು ಕಳೆಯುತ್ತಿದ್ದಂತೆಯೇ ಸಂಭ್ರಮಗಳ ಮೂಟೆಯನ್ನೇ ಹೊತ್ತುಕೊಂಡು ಶ್ರಾವಣ ಮಾಸ ಬರುತ್ತದೆ. ಮುಂದಿನ ಅದೆಷ್ಟೋ ದಿನಗಳವರೆಗೂ ನಮ್ಮೊಂದಿಗೇ ಉಳಿದುಬಿಡುವ ಆ ಸಂಭ್ರಮವನ್ನು ಸ್ವಾಗತಿಸೋಣ.

ಸಾಲು ಸಾಲು ಹಬ್ಬಗಳು: 

ಶ್ರಾವಣದ ಪ್ರತಿ ದಿನಗಳೂ ಹಬ್ಬವೇ. ಶ್ರಾವಣ ಸೋಮವಾರದಂದು ಶಿವಾಲಯಗಳಲ್ಲಿ ವಿಶೇಷ ಪೂಜೆ, ಉಪವಾಸ ವ್ರತಾಚರಣೆಗಳು ನಡೆಯುತ್ತವೆ. ಮಂಗಳ ಗೌರಿ ಪೂಜೆಗೆ ಮೀಸಲಾಗಿರುವ ಶ್ರಾವಣದ ಮಂಗಳವಾರಗಳು, ಬುಧವಾರ-ಗುರುವಾರದ ಬುಧ, ಬೃಹಸ್ಪತಿಯರ ಪೂಜೆಗಳು, ಶ್ರಾವಣದ ಶುಕ್ರವಾರ ಗೌರಿ/ ಮಹಾಲಕ್ಷ್ಮಿಪೂಜೆ, ಶ್ರಾವಣ ಶನಿವಾರಗಳಂದು ವೈಷ್ಣವ ದೇವರ ಪೂಜೆ ನಡೆಯುತ್ತದೆ. ನಾಗರ ಪಂಚಮಿ, ರಕ್ಷಾ ಬಂಧನ, ವರಮಹಾಲಕ್ಷ್ಮೀ, ಕೃಷ್ಣ ಜನ್ಮಾಷ್ಟಮಿ, ಗುರುರಾಯರ ಆರಾಧನೆ, ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯದಿನಾಚರಣೆ… ಹೀಗೆ ಒಂದರ ಹಿಂದೊಂದು ಹಬ್ಬಗಳು ಬರುವುದು ಕೂಡ ಶ್ರಾವಣ ಮಾಸದಲ್ಲಿಯೇ. ಶ್ರಾವಣ ಸೋಮವಾರಗಳಂದು ಶಿವಭಕ್ತರು ಪರಶಿವನನ್ನು ಪೂಜಿಸಿದರೆ, ಶ್ರಾವಣ ಶನಿವಾರಗಳಂದು ವೈಷ್ಣವ ಭಕ್ತರು ವಿಷ್ಣುವನ್ನು ಆರಾಧಿಸುವುದು, ಆ ಸಂದರ್ಭದಲ್ಲಿ  ನಾಮ ಧರಿಸಿ “ವೆಂಕಟ್ರಮಣ ಗೋವಿಂದಾ… ಗೋವಿಂದ’ ಎಂದು ಹೇಳುತ್ತಾ ಭಿಕ್ಷೆ ಬೇಡುವುದು ಕೂಡ ಈ ಮಾಸದ ಮತ್ತೂಂದು ವಿಶೇಷ.

-ಅಶ್ವಿ‌ನಿ ಕುಲಕರ್ಣಿ, ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next