Advertisement

ಅಧ್ಯಾತ್ಮ ಇರುವಲ್ಲಿ ಆದರ್ಶದ ದರ್ಶನ

12:56 PM Jul 22, 2020 | Suhan S |

ಚಿತ್ರದುರ್ಗ: ಅಧ್ಯಾತ್ಮ ಪರಮಜ್ಞಾನ. ಇದು ತತ್ವಜ್ಞಾನವನ್ನು ಬಿಟ್ಟಿರಲು ಸಾಧ್ಯವಿಲ್ಲ. ತತ್ವಜ್ಞಾನದ ಮೂಲ ಅಧ್ಯಾತ್ಮ. ಅಧ್ಯಾತ್ಮ ಇರುವಲ್ಲಿ ಆದರ್ಶ ಇರುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಶ್ರಾವಣ ಮಾಸದ ಅಂಗವಾಗಿ ಮುರುಘಾ ಮಠದಲ್ಲಿ ಮಂಗಳವಾರದಿಂದ ಆರಂಭವಾದ ನೀವಿದ್ದಲ್ಲಿಯೇ ಶ್ರಾವಣ ದರ್ಶನ, ಬೌದ್ಧಿಕಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರ್ಜೀವ ಜಗತ್ತಿನಲ್ಲಿ ಘರ್ಷಣೆ ಉಂಟಾಗುತ್ತದೆ. ಮಾನವ ಲೋಕದಲ್ಲಿ ಸಂಘರ್ಷವಾಗುತ್ತದೆ. ಮರ ಮರ ಮಥನದಿಂದ ಅಗ್ನಿ ಹುಟ್ಟಿ ಆ ಮರನೆಲ್ಲವ ಸುಡದಿಪ್ಪುದೆ. ಕೆಲವರು ಕಾಡಿಗೆ ಬೆಂಕಿ ಹಚ್ಚಿ ವಿಘ್ನ ಸಂತೋಷ ಕಾಣುತ್ತಾರೆ. ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟುತ್ತದೆ ಎಂದು ಬಸವಣ್ಣ ಹೇಳುತ್ತಾರೆ ಎಂದರು.

ಅಧ್ಯಾತ್ಮದಲ್ಲಿ ಪರಮಾರ್ಥ ಪ್ರಕಾಶ ಇದೆ. ಅದು ನಮ್ಮ ಬದುಕಿನಲ್ಲಿ ಪ್ರವೇಶ ಆಗಬೇಕು. ವಿವೇಕದ ಪ್ರವೇಶ ಆಗಬೇಕು. ವಿವೇಕ, ಸುಜ್ಞಾನ ಎನ್ನುವ ಸೂರ್ಯ ಚಂದಿರರ ಉದಯವಾಗಬೇಕು ಎಂದರು. ಸಂಕುಚಿತ ಮನೋಭಾವಕ್ಕೆ ಭವಿಷ್ಯವಿಲ್ಲ. ಅದು ಕ್ಷಣಿಕ. ಗ್ರಂಥಾಧ್ಯಯನ ಮಾಡಿಕೊಂಡ ನಾವು ವಿಶಾಲ ಬುದ್ಧಿಯವರಾಗಬೇಕು. ಅನುಭವಮುಖೀ, ಅಧ್ಯಯನ ಮುಖೀಯಾಗಬೇಕು. ಈ ಗುಣಗಳು ಬದುಕನ್ನು ಪಳಗಿಸುತ್ತವೆ ಎಂದು ಶರಣರು ತಿಳಿಸಿದರು.

ಇನ್ನೂ ದುರ್ಬುದ್ಧಿಯನ್ನು ಬದುಕಿನಿಂದ ಉಚ್ಛಾಟನೆ ಮಾಡಬೇಕು. ಇದು ಬದುಕನ್ನು ನಾಶ ಮಾಡುತ್ತದೆ. ಮಹಾವೀರ, ಬುದ್ಧ, ತೀರ್ಥಂಕರರು, ಪೈಗಂಬರ್‌, ಏಸು, ಗಾಂ ಧೀಜಿ, ಪರಮಹಂಸ ಇವರು ದಾರ್ಶನಿಕರು. ಇವರಲ್ಲಿ ದುರ್ಬುದ್ಧಿ ಇರಲಿಲ್ಲ. ಶರಣರ, ಗುರುಗಳ ಸಂಪತ್ತು ಸುಜ್ಞಾನ. ಇದು ಇರುವಲ್ಲಿ ಸ್ವಾತಂತ್ರ್ಯ ಇರುತ್ತದೆ. ಪರಿವರ್ತಕರು, ದಾರ್ಶನಿಕರು, ಸಂತರು, ಸುಜ್ಞಾನಿಗಳು, ಸ್ವಾತಂತ್ರ್ಯ ಇರುವ ಹತ್ತಿರ ಸಾಮ್ರಾಜ್ಯ ನಿರ್ಮಾಣವಾಗುತ್ತದೆ. ಅವರವರ ಶರೀರಕ್ಕೆ ಅವರವರೇ ಅಧಿಪತಿಗಳು ಎಂದರು.

ಶುದ್ಧೀಕರಣ ಇರುವಲ್ಲಿ ಉನ್ನತೀಕರಣ ಇರುತ್ತದೆ. ಶರೀರ, ಇಂದ್ರೀಯಗಳ ಮೇಲೆ ಬುದ್ಧಿಯ ಮೇಲೆ ನಿಯಂತ್ರಣ ಸಾಧಿಸಬೇಕು. ಅಥಣಿಯ ಶಿವಬಸವ ಸ್ವಾಮೀಜಿ, ಶಿರಸಿಯ ಮಲ್ಲಿಕಾರ್ಜುನ ಸ್ವಾಮೀಜಿ, ಬಸವಕಿರಣ ಸ್ವಾಮಿಗಳು, ಸಾಧಕರು, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಆರ್‌.ಲಿಂಗರಾಜು ಮತ್ತಿತರರಿದ್ದರು. ರವಿ ಯಡಹಳ್ಳಿ ಸ್ವಾಗತಿಸಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next