Advertisement

ಇದ್ದೂ ಇಲ್ಲದಂತಿರುವ ಶ್ರದ್ಧಾಂಜಲಿ,ಮುಕ್ತಿ ಆ್ಯಂಬುಲೆನ್ಸ್‌

01:00 AM Aug 31, 2019 | Sriram |

ಮಹಾನಗರ: ಬಡ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರಿ ಆಸ್ಪತ್ರೆಗೆ ನೀಡಲಾಗಿದ್ದ ಶ್ರದ್ಧಾಂಜಲಿ ಆ್ಯಂಬುಲೆನ್ಸ್‌ ಜನರ ಬಳಕೆಗೆ ಸಿಗದೆ ಧೂಳು ಹಿಡಿಯುತ್ತಿದೆ.

Advertisement

ವೆನಾÉಕ್‌ ಆಸ್ಪತ್ರೆಯ ಶವಗಳನ್ನು ಉಚಿತವಾಗಿ ಮನೆಗೆ ತಲುಪಿಸುವ ಉದ್ದೇಶದಿಂದ ಯು.ಟಿ. ಖಾದರ್‌ ಅವರು ಆರೋಗ್ಯ ಸಚಿವರಾಗಿದ್ದಾಗ ವಿಶೇಷ ಕಾಳಜಿ ವಹಿಸಿ ಯು.ಟಿ. ಫರೀದ್‌ ಫೌಂಡೇಶನ್‌ ವತಿಯಿಂದ ಈ ವಾಹನವನ್ನು ಆಸ್ಪತ್ರೆಗೆ ನೀಡಿದ್ದರು. ಆದರೆ ವಾಹನವನ್ನು ಓಡಿಸಲು ಆರೋಗ್ಯ ಇಲಾಖೆಯ ಬಳಿ ಯಾವುದೇ ಅನುದಾನ ಇಲ್ಲ ಎಂಬ ಕಾರಣ ನೀಡಿ ಆ್ಯಂಬುಲೆನ್ಸ್‌ ಮೂಲೆಗೆ ಬಿದ್ದಿದೆ. ಸಾಮಾನ್ಯವಾಗಿ ಆ್ಯಂಬುಲೆನ್ಸ್‌ ಗಳಲ್ಲಿ ಮೃತದೇಹಗಳನ್ನು ಸಾಗಿಸಲಾಗುವುದಿಲ್ಲ. ಆದ್ದರಿಂದ ಮೃತರ ಸಂಬಂಧಿಕರು ಮೃತದೇಹ ಸಾಗಿಸಲು ಖಾಸಗಿ ಆ್ಯಂಬುಲೆನ್ಸ್‌ಗಳಿಗೆ ಮೊರೆ ಹೋಗಬೇಕಾಗಿತ್ತು. ಆದರೆ ಅದಕ್ಕೆ ದುಬಾರಿ ಬೆಲೆ ನೀಡಬೇಕಾಗಿರುವುದರಿಂದ ಬಡವರು ಸಂಕಷ್ಟಕ್ಕೆ ಒಳಗಾಗ ಬೇಕಿತ್ತು. ಹಾಗಾಗಿ ಯು.ಟಿ. ಖಾದರ್‌ ಆರೋಗ್ಯ ಸಚಿವರಾಗಿದ್ದಾಗ ಶ್ರದ್ಧಾಂಜಲಿ ಆ್ಯಂಬುಲೆನ್ಸ್‌ ವಾಹನದ ಯೋಜನೆ ರೂಪಿಸಿದ್ದರು. ಆದರೆ ಈಗ ಅದು ಸಮರ್ಪಕವಾಗಿ ಜಾರಿಗೆ ಬಾರದೆ ಸಾರ್ವಜನಿಕರು ಸಂಕಷ್ಟಕ್ಕೊಳಗಾಗಿದ್ದಾರೆ.

ಪಾಲಿಕೆ ಆ್ಯಂಬುಲೆನ್ಸ್‌ಗೆ ಇಲ್ಲ ಮುಕ್ತಿ
ಮನಪಾ ವತಿಯಿಂದ ಬಡ ಜನರಿಗೆ ಮೃತದೇಹ ಸಾಗಿಸಲು ಸಹಾಯವಾಗಲಿ ಎಂಬ ದೃಷ್ಟಿಯಿಂದ 2017ರಲ್ಲಿ ಒಂದು ಆ್ಯಂಬುಲೈನ್ಸ್‌ ತರಿಸಿ ಅದಕ್ಕೆ ಮುಕ್ತಿ ಆ್ಯಂಬುಲೆನ್ಸ್‌ ಎಂದು ಹೆಸರಿಡಲಾಯಿತು. ಅದಕ್ಕೆ ಪ್ರತಿ ತಿಂಗಳು 40,500 ರೂ. ಕೊಡುವುದು, ಅದರಲ್ಲಿ ಚಾಲಕನ ಸಂಬಳ, ಡಿಸೆಲ್‌ ಖರ್ಚು ಎಲ್ಲ ಬರಬೇಕು ಎಂದು ತೀರ್ಮಾನಿಸಲಾಗಿತ್ತು.

ಮಾಸಿಕ ಎರಡು ಸಾವಿರ ಕಿಲೋ ಮೀಟರ್‌ ಹೋಗಬಹುದು ಎಂದು ನಿಗದಿಪಡಿಸಲಾಯಿತು. ಒಂದು ವೇಳೆ ಅದಕ್ಕಿಂತ ಜಾಸ್ತಿ ಖರ್ಚು ಬಂದರೆ ಪಾಲಿಕೆಗೆ ಬಿಲ್‌ ಕೊಡಬೇಕು ಎಂದು ಸೂಚಿಸಲಾಗಿತ್ತು. ಆದರೆ ಈ ಆ್ಯಂಬುಲೆನ್ಸ್‌ ಚಾಲನೆಯಲ್ಲಿ ಇದೆಯಾ ಎಂಬುದಾಗಿ ಯಾರಿಗೂ ತಿಳಿದಿಲ್ಲ. ಹಾಗಾಗಿ ಮುಕ್ತಿ ಆ್ಯಂಬುಲೆನ್ಸ್‌ ಪಾಲಿಕೆ ಆವರಣದಲ್ಲೇ ನಿಂತಿರುತ್ತದೆ. ಮೃತದೇಹ ಸಾಗಾಟ ಮಾಡದೆ ಇದ್ದರೂ ತಿಂಗಳಿಗೆ ನಿಗದಿಪಡಿಸಿದ ಮೊತ್ತವನ್ನು ನೀಡಲೇ ಬೇಕಾಗುತ್ತದೆ. ಮುಕ್ತಿ ವಾಹನದ ಬಗ್ಗೆ ಯಾರಿಗೂ ತಿಳಿಯದೆ ಇರುವುದರಿಂದ ಅಗತ್ಯವುಳ್ಳ ಸಾರ್ವಜನಿಕರು ಇದರ ಬಳಕೆ ಮಾಡುತ್ತಿಲ್ಲ.

 ಅನುದಾನದ ಕೊರತೆ
ಸದ್ಯ ಶ್ರದ್ಧಾಂಜಲಿ ವಾಹನದ ಬಳಕೆಯಾಗುತ್ತಿಲ್ಲ. ಈ ಹಿಂದೆ ಟೆಂಡರ್‌ ಮೂಲಕ ಚಾಲಕರ ನೇಮಕ ಮಾಡಲಾಗಿತ್ತು. ಆದರೆ ಟೆಂಡರ್‌ ಮುಗಿದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಆ್ಯಂಬುಲೆನ್ಸ್‌ ಬಳಕೆ ಮಾಡಲಾಗುತ್ತಿಲ್ಲ. ಹೆಣ ಸಾಗಾಟದ ವಾಹನ ಎಂಬ ಕಾರಣಕ್ಕಾಗಿಯೇ ಯಾರೂ ಮುಂದೆ ಬರುತ್ತಿಲ್ಲ. ಈ ನಡುವೆ ಚಾಲಕರ ಸಂಬಳ, ಇಂಧನಕ್ಕೆ ಹಣ ನೀಡಲು ಇಲಾಖೆಯಲ್ಲಿ ಅನುದಾನದ ಕೊರತೆ ಇದೆ. ಸರಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ.
– ಡಾ| ರಾಮಕೃಷ್ಣ ರಾವ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

Advertisement

ಖಾಸಗಿ ಆ್ಯಂಬುಲೆನ್ಸ್‌ಗೆ ಸಾವಿರಾರು ರೂ. ಖರ್ಚು
ಸರಕಾರಿ ಆ್ಯಂಬುಲೆನ್ಸ್‌ಗಳು ಇದ್ದು ಇಲ್ಲದಂತಿರುವ ಕಾರಣದಿಂದ ಬಡ ಜನರು ಮೃತದೇಹ ಸಾಗಿಸಲು ಖಾಸಗಿ ಆ್ಯಂಬುಲೆನ್ಸ್‌ಗಳ ಮೊರೆ ಹೋಗಬೇಕಾಗುತ್ತದೆ. ಅವರು ಕಿ.ಮೀ.ಗೆ ಇಂತಿಷ್ಟು ಎಂಬುದಾಗಿ ದರ ನಿಗದಿಪಡಿಸುತ್ತಾರೆ. ಇದು ದುಬಾರಿಯಾಗಿರುವುದರಿಂದ ಸಾರ್ವಜನಿಕರು ಕಷ್ಟ ಅನುಭವಿಸುವಂತಾಗಿದೆ.

ಟೆಂಡರ್‌ ಮುಕ್ತಾಯ
ಈ ಆ್ಯಂಬುಲೆನ್ಸ್‌ ಬಳಕೆಯ ಆವಶ್ಯಕತೆ ಇರುವವರು ಪಾಲಿಕೆಗೆ ಕರೆ ಮಾಡಿ ತಿಳಿಸಬೇಕು. ಅವರಿಗೆ ಆ್ಯಂಬುಲೆನ್ಸ್‌ ಸೇವೆ ನೀಡಲಾಗುತ್ತಿದೆ. ಆದರೆ ಜುಲೈಯಲ್ಲಿ ಮುಕ್ತಿ ಆ್ಯಂಬುಲೆನ್ಸ್‌ನ ಟೆಂಡರ್‌ ಮುಗಿದಿದೆ. ಆದರೂ ಅದನ್ನು ಮೂರು ತಿಂಗಳಿಗೆ ವಿಸ್ತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಟೆಂಡರ್‌ ಕರೆದು ಮುಂದುವರಿಸಲಾಗುತ್ತದೆ ಎಂಬುದಾಗಿ ಪಾಲಿಕೆ ಅಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ.

-ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next