Advertisement

ಶ್ರದ್ಧಾ ಭಕ್ತಿ ನಿಷ್ಠೆ

03:50 AM Jan 01, 2017 | Team Udayavani |

ಇತ್ತೀಚೆಗಷ್ಟೇ ಮಣಿರತ್ನಂ ನಿರ್ದೇಶನದ ಕಾಟ್ರಾ ವಿಳೆಯಾಡೈ ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ನಟಿಸಿ ಬಂದಿದ್ದ ಯೂ ಟರ್ನ್ ಚೆಲುವೆ ಶ್ರದ್ಧಾ ಶ್ರೀನಾಥ್‌ ಇದೀಗ ಇನ್ನೊಂದು ತಮಿಳು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಸಜ್ಜಾಗುತ್ತಿದ್ದಾರೆ. ಈ ಬಾರಿ ಶ್ರದ್ಧಾ, ಮಾಧವನ್‌ ಎದುರು ವಿಕ್ರಮ್‌ ವೇದ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

Advertisement

ಬಹುಶಃ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಯಾರಾದರೂ ಫಾಸ್ಟ್‌ ಆಗಿ ಬೆಳೆಯುತ್ತಿದ್ದಾರೆ ಎಂದರೆ, ಆ ಪಟ್ಟಿಯಲ್ಲಿ ಶ್ರದ್ಧಾ ಹೆಸರು ಮೊದಲಿಗೆ ಕಾಣುತ್ತದೆ. ಈ ವರ್ಷದ ಆರಂಭದಲ್ಲಿ ಶ್ರದ್ಧಾ ಹೆಸರು ಅದೆಷ್ಟೋ ಜನರಿಗೆ ಗೊತ್ತಿರಲಿಲ್ಲ. ಆಕೆ ಯಾರು, ಹಿನ್ನೆಲೆ ಏನು ಎಂಬಂತಹ ಯಾವ ಪ್ರಶ್ನೆಗಳಿಗೂ ಸರಿಯಾದ ಉತ್ತರವಿರಲಿಲ್ಲ. ಪವನ್‌ ಕುಮಾರ್‌ ತಮ್ಮ ಯೂ ಟರ್ನ್ ಚಿತ್ರಕ್ಕೆ ಅದ್ಯಾರೋ ಹೊಸ ಹುಡುಗಿಯನ್ನು ಪರಿಚಯಿಸುತ್ತಿದ್ದಾರಂತೆ ಎಂಬಂತಹ ವಿಷಯ ಬಿಟ್ಟರೆ, ಶ್ರದ್ಧಾ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ. ಚಿತ್ರ ಬಿಡುಗಡೆಯಾಯ್ತು, ಶ್ರದ್ಧಾ ಅಭಿನಯದ ಬಗ್ಗೆ ಒಂದಿಷ್ಟು ಒಳ್ಳೆಯ ಮಾತುಗಳು ಕೇಳಿ ಬಂದವು. ಅಲ್ಲಿಂದ ಶ್ರದ್ಧಾ ಎಂಬ ಮೂಗುತಿ ಸುಂದರಿ ಸಿಕ್ಕಾಪಟ್ಟೆ ಸುದ್ದಿಯಾದರು.

ಪ್ರದೀಪ್‌ ವರ್ಮ ನಿರ್ದೇಶನದ ಊರ್ವಿ ಮತ್ತು ಸಿಂಪಲ್‌ ಸುನಿ ನಿರ್ದೇಶನದ ಆಪರೇಷನ್‌ ಅಲಮೇಲಮ್ಮ ಎಂಬ ಎರಡು ಚಿತ್ರಗಳಲ್ಲಿ ಶ್ರದ್ಧಾ ನಾಯಕಿಯಾಗಿ ನಟಿಸುತ್ತಿದ್ದಾರಂತೆ ಎಂಬ ಸುದ್ದಿಯೊಂದು ಆಕೆ ಕನ್ನಡ ಚಿತ್ರರಂಗದ ಬೇಡಿಕೆಯ ನಟಿ ಎಂದು ತೋರಿಸಿತು. ಇದರ ಮಧ್ಯೆ ಕಾಟ್ರಾ ವಿಳೆಯಾಡೈ ಎಂಬ ಮಣಿರತ್ನಂ ನಿರ್ದೇಶನದ ತಮಿಳು ಚಿತ್ರದಲ್ಲಿ ಶ್ರದ್ಧಾ ನಟಿಸುತ್ತಿರುವುದು ಸುದ್ದಿಯಾಯಿತು. ಜೊತೆಗೆ ಇವನ್‌ ತಂತಿರನ್‌ ಚಿತ್ರತಂಡದಲ್ಲೂ ಶ್ರದ್ಧಾ ಹೆಸರು ಕೇಳಿಬಂತು. ಈ ಐದು ಚಿತ್ರಗಳು ಇನ್ನೂ ಬಿಡುಗಡೆಯಾಗಬೇಕಿದೆ. 

ಅಷ್ಟರಲ್ಲೇ, ಗುರುನಂದನ್‌ ಅಭಿನಯದ ಹೊಸ ಕನ್ನಡ ಚಿತ್ರ ಮತ್ತು ವಿಕ್ರಮ ವೇದದಲ್ಲಿ ನಟಿಸುತ್ತಿರುವ ಸುದ್ದಿ ಬಂದಿದೆ. ಈಗ ಹೇಳಿ ಶ್ರದ್ಧಾ ಬಿಝಿ ನಟಿಯೋ, ಅಲ್ಲವೋ ಎಂದು.

ಊರ್ವಿ ಮತ್ತು ಆಪರೇಶನ್‌ ಅಲಮೇಲಮ್ಮ ಎರಡೂ ಚಿತ್ರಗಳ ಬಗ್ಗೆ ಶ್ರದ್ಧಾಗೆ ಎಷ್ಟು ಕುತೂಹಲಗಳಿವೆಯೋ, ಪ್ರೇಕ್ಷಕರಿಗೂ ಅಷ್ಟೇ ಕುತೂಹಲವಿದೆ. ಏಕೆಂದರೆ, ಎರಡೂ ಬೇರೆ ಬ್ಯಾನರ್‌ನ ಚಿತ್ರಗಳು. ಊರ್ವಿ ಮಹಿಳೆಯರ ಶೋಷಣೆಯ ಕುರಿತಾದ ಚಿತ್ರವಾದರೆ, ಆಪರೇಶನ್‌ ಅಲಮೇಲಮ್ಮ ಚಿತ್ರವು ಟಿಪಿಕಲ್‌ ತರಲೆ ಚಿತ್ರವಂತೆ. ಹಾಗಾಗಿ ಎರಡೂ ಚಿತ್ರಗಳ ಬಗ್ಗೆ ನಿರೀಕ್ಷೆ ಇಟ್ಟಿದ್ದಾರೆ ಶ್ರದ್ಧಾ. ಇದರಲ್ಲಿ ಒಂದು ಕ್ಲಿಕ್‌ ಎಂದರೂ, ಶ್ರದ್ಧಾ ಇನ್ನೊಂದಿಷ್ಟು ಚಿತ್ರಗಳಲ್ಲಿ ಬಿಝಿಯಾದರೆ ಆಶ್ಚರ್ಯವಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next