Advertisement

ಶ್ರದ್ಧಾ ಹೋಗಿ ರಚಿತಾ ಬಂದ್ರು ಡುಂ ಡುಂ ಡುಂ …

12:33 PM Oct 17, 2017 | |

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ದುನಿಯಾ’ ವಿಜಯ್‌ ನಿರ್ಮಿಸಿ, ನಾಯಕರಾಗಿ ನಟಿಸುತ್ತಿರುವ “ಜಾನಿ ಜಾನಿ ಯೆಸ್‌ ಪಪ್ಪಾ’ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್‌ ನಟಿಸಬೇಕಿತ್ತು. ಆದರೆ, ಡೇಟ್ಸ್‌ ಸಮಸ್ಯೆಯಿಂದಾಗಿ ಶ್ರದ್ಧಾ ಚಿತ್ರತಂಡದಿಂದ ಹೊರನಡೆದಿದ್ದಾರೆ. ಈಗ ಆ ಜಾಗಕ್ಕೆ ಪುನಃ ರಚಿತಾ ರಾಮ್‌ ಬಂದಿದ್ದಾರೆ. ಪುನಃ ರಚಿತಾ ರಾಮ್‌ ಬಂದಿದ್ದಾರೆ ಎನ್ನುವುದಕ್ಕೂ ಕಾರಣವಿದೆ. ಇದಕ್ಕೂ ಮುನ್ನ ಚಿತ್ರತಂಡದ ಫ‌ಸ್ಟ್‌ ಚಾಯ್ಸ ಆಗಿದ್ದವರು ರಚಿತಾ ರಾಮ್‌.

Advertisement

ಈ ಮೊದಲು ಚಿತ್ರದ ನಾಯಕಿಯಾಗಿ ರಚಿತಾ ರಾಮ್‌ ಆಯ್ಕೆಯಾಗಿದ್ದಾರೆ ಎಂದು ಸುದ್ದಿಯಾಗಿತ್ತು. ನಿರ್ದೇಶಕ ಪ್ರೀತಂ ಗುಬ್ಬಿ  ಸಹ ರಚಿತಾ ರಾಮ್‌ ನಾಯಕಿಯಾಗಿ ಆಯ್ಕೆಯಾಗಿರೋದನ್ನು ಕನ್‌ಫ‌ರ್ಮ್ ಮಾಡಿದ್ದರು ಮತ್ತು ರಚಿತಾ ಕೂಡಾ ಅದನ್ನು ಒಪ್ಪಿಕೊಂಡಿದ್ದರು. ಆದರೆ, ಒಂದು ಹಂತದಲ್ಲಿ ರಚಿತಾ ರಾಮ್‌ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದರು. ಆಗ ಬಂದಿದ್ದೇ ಶ್ರದ್ಧಾ ಶ್ರೀನಾಥ್‌.

ಈಗ ನೋಡಿದರೆ ಶ್ರದ್ಧಾ ಹೋಗಿ ಮತ್ತೆ ರಚಿತಾ ನಾಯಕಿಯಾಗಿದ್ದಾರೆ. ಅಲ್ಲಿಗೆ ರಚಿತಾ ರಾಮ್‌, ಈಗ “ಹೊಸ ಪದ್ಮಾವತಿ’ಯಾಗಿದ್ದು, ಚಿತ್ರತಂಡವು “ಹೊಸ ಪದ್ಮಾವತಿ …’ ಎಂಬ ಹಾಡಿನ ಚಿತ್ರೀಕರಣ ಮಾಡುತ್ತಿದೆ.”ಜಾನಿ ಜಾನಿ ಯೆಸ್‌ ಪಪ್ಪಾ’, ಜಾನಿ ಮೇರಾ ನಾಮ್‌’ ಚಿತ್ರದ ಮುಂದುವರಿದ ಭಾಗದಂತಿದ್ದರೂ ಆ ಕಥೆಗೂ ಇಲ್ಲಿನ ಕಥೆಗೂ ಯಾವುದೇ ಸಂಬಂಧವಿರುವುದಿಲ್ಲವಂತೆ. ಆದರೆ, ಈ ಚಿತ್ರಕ್ಕಾಗಿಯೂ ವಿಶೇಷವಾದ ಸೆಟ್‌ ಹಾಕಲಾಗುತ್ತಿದೆ.

“ಜಾನಿ ಮೇರಾ ನಾಮ್‌’ ಚಿತ್ರಕ್ಕಾಗಿ ಪ್ರೀತಂ ಗುಬ್ಬಿ ವಿಶೇಷವಾದ ಸೆಟ್‌ ಹಾಕಿಸಿದ್ದರು ಮತ್ತು ಬಹುತೇಕ ಸಿನಿಮಾ ಅಲ್ಲೇ ನಡೆದಿತ್ತು ಕೂಡಾ. ಈಗ “ಜಾನಿ ಜಾನಿ ಎಸ್‌ ಪಪ್ಪಾ’ ಚಿತ್ರಕ್ಕೂ “ರೈನ್‌ಬೋ ಕಾಲೋನಿ’ ಎಂಬ ಕಾಲೋನಿಯ ವಿಶೇಷ ಸೆಟ್‌ ಹಾಕಲಾಗುತ್ತಿದೆ. ಈ ಕಾಲೋನಿಯಲ್ಲಿ ಎಲ್ಲಾ ಜಾತಿ, ಧರ್ಮದ ಜನರು ಖುಷಿಯಿಂದ ಬದುಕುತ್ತಿರುವ ಸನ್ನಿವೇಶದ ಜೊತೆಗೆ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಇಲ್ಲೇ ನಡೆಯಲಿದೆಯಂತೆ.  

ಈ ಚಿತ್ರದಲ್ಲಿ ರಂಗಾಯಣ ರಘು, ಅಚ್ಯುತ್‌, ಸಾಧುಕೋಕಿಲ, ದತ್ತಣ್ಣ ಸೇರಿದಂತೆ ಅನೇಕರು ನಟಿಸುತ್ತಿದ್ದು, ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ದುನಿಯಾ ವಿಜಯ್‌ ಅವರೇ ನಿರ್ಮಿಸುತ್ತಿದ್ದಾರೆ. “ಜಯಮ್ಮನ ಮಗ’ ಚಿತ್ರವನ್ನು ತಮ್ಮ ಸ್ನೇಹಿತರೊಬ್ಬರ ಜೊತೆ ಸೇರಿಕೊಂಡು ವಿಜಯ್‌ ನಿರ್ಮಿಸಿದ್ದರು. ಆ ನಂತರ ಯಾವುದೇ ಚಿತ್ರ ನಿರ್ಮಿಸಿರಲಿಲ್ಲ. ಈಗ “ಜಾನಿ ಜಾನಿ ಎಸ್‌ ಪಪ್ಪಾ’ ನಿರ್ಮಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next