Advertisement

ಸಾಧಕರ ಅಕಾಲಿಕ ನಿಧನ ತುಂಬಲಾರದ ನಷ್ಟ : ಧರ್ಮದರ್ಶಿ ರಮೇಶ್‌ ಪೂಜಾರಿ

08:37 PM Nov 21, 2020 | Suhan S |

ಮುಂಬಯಿ, ನ. 20: ಕಲಾಕ್ಷೇತ್ರದ ಅನರ್ಘ್ಯ

Advertisement

ರತ್ನ ಬೈಲೂರು ಬಾಲಚಂದ್ರ ರಾವ್‌ ಅವರು ಜಾತೀಯತೆ ಮೀರಿ ನಿಂತ ವ್ಯಕ್ತಿ. ಎಲ್ಲರೊಂದಿಗೆ ಅನ್ಯೋನ್ಯದಿಂದ ಬಾಳಿದ ಅವರು ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ನಾಡು-ನುಡಿ, ಸಂಸ್ಕೃತಿ, ಸಂಸ್ಕಾರಗಳ ಪುನರುತ್ಥಾನಕ್ಕೆ ಸದಾ ಶ್ರಮಿಸುತ್ತಿದ್ದ ಅವರ ಅಕಾಲಿನ ನಿಧನ ಮುಂಬಯಿ ತುಳು-ಕನ್ನಡಿಗರಿಗೆ ಬಹುದೊಡ್ಡ ನಷ್ಟವಾಗಿದೆ. ಜಯ ಸಿ. ಸುವರ್ಣರು ಬಿಲ್ಲವ ಸಮುದಾಯದ ನಾಯಕರಾಗಿದ್ದರೂ ಎಲ್ಲ ಸಮುದಾಯ ಗಳ ಬಾಂಧವರೊಂದಿಗೆ ಉತ್ತಮ ಬಾಂಧವ್ಯ

ಉಳಿಸಿಕೊಂಡವರು. ಭಾರತ್‌ ಬ್ಯಾಂಕ್‌ನ ಪ್ರಗತಿಯ ಹರಿಕಾರ, ಬಿಲ್ಲವರ ಸಂಘಟನೆ ಗಾಗಿ ಅಲ್ಲಲ್ಲಿ ಸ್ಥಳೀಯ ಕಚೇರಿಗಳನ್ನು ಸ್ಥಾಪಿಸಿ, ಸಮಾಜ ಬಾಂಧವರಿಗೆ ಸ್ಥಾನಮಾನ ಕಲ್ಪಿಸಿ, ಸ್ವಾಭಿಮಾನಿಗಳಾಗಿ ಬಾಳಲು ಕಲಿಸಿ ದವರು ಜಯ ಸುವರ್ಣರು ಎಂದು ನೆರೂಲ್‌ ಶ್ರೀ ಶನಿಮಂದಿರದ ಅಧ್ಯಕ್ಷ, ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ ತಿಳಿಸಿದರು.

ಇತ್ತೀಚೆಗೆ ನಿಧನ ಹೊಂದಿದ ಕನ್ನಡ ಕಲಾಕೇಂದ್ರ ಮುಂಬಯಿ ಅಧ್ಯಕ್ಷ ಬೈಲೂರು ಬಾಲಚಂದ್ರ ರಾವ್‌ ಮತ್ತು ಬಿಲ್ಲವ ಸಮಾಜ ರತ್ನ ಜಯ ಸಿ. ಸುವರ್ಣ ಅವರಿಗೆ ನೆರೂಲ್‌ ಶ್ರೀ ಶನಿಮಂದಿರದಲ್ಲಿ  ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿ, ಇಬ್ಬರು ಸಾಧಕರ ಅಕಾಲಿಕ ನಿಧನ ತುಳು- ಕನ್ನಡಿಗರನ್ನು ವಿಚಲಿತಗೊಳಿಸಿದೆ ಎಂದರು.

ನೆರೂಲ್‌ ಶ್ರೀ ಶನೀಶ್ವರ ಮಂದಿರದ ಉಪಾಧ್ಯಕ್ಷ ಗೋಪಾಲ್‌ ವೈ. ಶೆಟ್ಟಿ  ಮಾತನಾಡಿ, ಕಲಾಕ್ಷೇತ್ರದ ಸಾಧಕರಾದ ಬಾಲಚಂದ್ರ ರಾವ್‌ ಅವರು ನಾಡು- ನುಡಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದರು. ಜಯ ಸುವರ್ಣರು ಬಿಲ್ಲವ ಸಮಾಜೋದ್ಧಾರಕರಾಗಿದ್ದು, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ರಂಗದಲ್ಲಿ ಅವರ ಸೇವೆ ಅಪಾರ ಎಂದು ನುಡಿನಮನ ಸಲ್ಲಿಸಿದರು.

Advertisement

ಶ್ರೀ ಅಯ್ಯಪ್ಪ ಚಾರಿಟೆಬಲ್‌ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಅನಿಲ್‌ ಕೆ. ಹೆಗ್ಡೆ ಮಾತನಾಡಿ, ಬಾಲಚಂದ್ರ ರಾವ್‌ ಅವರು ನೌಕಾಪಡೆಯಲ್ಲಿ ಉದ್ಯೋಗ ದಲ್ಲಿದ್ದು ದೇಶಸೇವೆ ಮಾಡಿದವರು. ಸಂಘಟನೆಯಲ್ಲೂ ಮುಂಚೂಣಿಯ ಲ್ಲಿದ್ದರು. ಜಯ ಸುವರ್ಣರು ಏಕತೆಯನ್ನು ಎತ್ತಿ ಹಿಡಿದ ಧೀಮಂತ ನಾಯಕರಾಗಿದ್ದಾರೆ. ವಿರೋಧಾಭಾಸವಿಲ್ಲದ ಸೌಮ್ಯ ಸ್ವಭಾವದ ಸಮಾಜ ಸೇವಕ ಅವರಾಗಿದ್ದರು ಎಂದರು.

ನೆರೂಲ್‌ ಶ್ರೀ ಶನೀಶ್ವರ ಮಂದಿರ ವಿಶ್ವಸ್ಥ ಪ್ರಭಾಕರ ಹೆಗ್ಡೆ ಅವರು ಬೈಲೂರು ಬಾಲ ಚಂದ್ರ ರಾವ್‌ ಅವರ ಕಾರ್ಯವೈಖರಿಯನ್ನು ಸ್ಮರಿಸಿ, ಕನ್ನಡಕ್ಕಾಗಿ ಅವರ ಸೇವೆ ಅಭಿನಂದನೀಯ. ತಾನು ತೊಡುತ್ತಿದ್ದ ಬಿಳಿ ಬಟ್ಟೆಯಂತೆ ಜಯ ಸುವರ್ಣರ ಮನಸ್ಸು ಕೂಡ ಶುಭ್ರವಾಗಿತ್ತು. ಭವನ ನಿರ್ಮಾಣದ ವೇಳೆ ಅವರ ಮಾರ್ಗದರ್ಶನವನ್ನು ಮರೆಯುವಂತಿಲ್ಲ ಎಂದರು.

ರಂಗಭೂಮಿ ಫೈನ್‌ ಆರ್ಟ್ಸ್ ಅಧ್ಯಕ್ಷ ತಾರಾನಾಥ್‌ ಶೆಟ್ಟಿ ಮಾತನಾಡಿ, ಬೈಲೂರು ಬಾಲಚಂದ್ರ ರಾವ್‌ ಅವರಲ್ಲಿ  ವೇಗದ ಯೋಚನಾ ಲಹರಿಯಿತ್ತು. ಬಡವರ ಬಗ್ಗೆ ಕಾಳಜಿ ಇದ್ದ ಜಯಣ್ಣನವರು ಹೆಸರಿಗೆ ತಕ್ಕಂತೆ ಜಯವನ್ನೇ ಸಾಧಿಸಿದವರು ಎಂದು ಹೇಳಿದರು.

ಬಿಜೆಪಿ ಕನ್ನಡ ಘಟಕದ ನವಿಮುಂಬಯಿ ಅಧ್ಯಕ್ಷ ಹರೀಶ್‌ ಪೂಜಾರಿ ಮಾತನಾಡಿ, ಬಿ. ಬಿ. ರಾವ್‌ ಅವರ ಕಲಾಸೇವೆ, ಸಮಾಜ ಸೇವೆಯಿಂದ ಸಮಾಜ ಅವರನ್ನು ಗುರುತಿಸುವಂತಾಗಿದೆ. ಜಯಣ್ಣನವರು ತಮ್ಮ ಸಮಾಜ ಸೇವೆಯಿಂದಾಗಿ ಸದಾ ಜನಮಾನಸದಲ್ಲಿ ನೆಲೆಸಿದವರು ಎಂದರು. ಭಾರತ್‌ ಬ್ಯಾಂಕ್‌ನ ಮಹಾಪ್ರಬಂಧಕ ರಮೇಶ್‌ ಪೂಜಾರಿ ಮಾತನಾಡಿ, ಇಬ್ಬರು ಮಹಾನ್‌ ವ್ಯಕ್ತಿಗಳು ನಮ್ಮನ್ನು ಅಗಲಿ ದ್ದಾರೆ. ಕಲಾಕ್ಷೇತ್ರದಲ್ಲಿ ಛಾಪು ಮೂಡಿಸಿದ ವ್ಯಕ್ತಿ ಬಿ. ಬಿ. ರಾವ್‌ ಅವರಾದರೆ, ಭಾರತ್‌ ಬ್ಯಾಂಕ್‌ನ ಶತ ಶಾಖೆಗಳ ಸರದಾರ ಜಯಣ್ಣನವರಾಗಿದ್ದಾರೆ  ಎಂದು ಹೇಳಿದರು.

ಸಾಮಾಜಿಕ ಮತ್ತು ಕಲಾಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿ ಸದಾ ನಗುಮುಖದ ಬಾಲಚಂದ್ರ ರಾವ್‌ ಅವರದ್ದಾದರೆ, ಮನುಕುಲದ ಶಿರೋಮಣಿ ಜಯಣ್ಣ ಎಂದು ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ನುಡಿನಮನ ಸಲ್ಲಿಸಿದರು. ಬಿ. ಬಿ. ರಾವ್‌ ಅವರು ಅಪ್ಪಟ ಕಲಾರಾಧಕರಾದರೆ, ಜಯಣ್ಣ ಅವರು ಯುಗ ಪ್ರವರ್ತಕರು ಎಂದು ಸಮಾಜ ಸೇವಕ ಸತೀಶ್‌ ಎರ್ಮಾಳ್‌ ತಿಳಿಸಿದರು.

ತಾರಾ ಬಂಗೇರ, ವೀಣಾ ವಿ. ಪೂಜಾರಿ ಅವರು ನುಡಿನಮನ ಸಲ್ಲಿಸಿದರು. ಶನಿ ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ ಅವರು ಪ್ರಸ್ತಾವಿಸಿದರು. ಬಿ. ಬಿ. ರಾವ್‌ ಮತ್ತು ಜಯ ಸಿ. ಸುವರ್ಣರ ಭಾವಚಿತ್ರಕ್ಕೆ ಪುಷ್ಪನಮನಗೈದು, ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸ್ಥಳೀಯ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ತುಳು, ಕನ್ನಡಿಗರು ಉಪಸ್ಥಿತರಿದ್ದರು.

ಬಾಲಚಂದ್ರ ರಾವ್‌ ಅವರು ಸ್ನೇಹಜೀವಿಯಾಗಿದ್ದರು. ಶನಿಮಂದಿರದ ಕಾರ್ಯಕಾರಿ ಸಮಿತಿಯನ್ನು  ನವಿಮುಂಬಯಿಯ ಕನ್ನಡ ಸಂಘದಲ್ಲಿ ಸೇರಿಸಿಕೊಂಡ ಶ್ರೇಯಸ್ಸು ಬಾಲಚಂದ್ರ ರಾವ್‌ ಅವರಿಗೆ ಸಲ್ಲುತ್ತದೆ. ಜಯ ಸಿ. ಸುವರ್ಣರ ಸಮಾಜ ಸೇವೆ ಅಪಾರವಾಗಿದೆ. ಸಮಾಜದ ಉನ್ನತಿಗಾಗಿ ಅವಿರತ ಶ್ರಮಿಸಿ ಭಾರತ್‌ ಬ್ಯಾಂಕ್‌ನ ಮುಖಾಂತರ ಇತರ ಸಮಾಜದವರ ಯಶಸ್ಸಿಗೆ ಕಾರಣಿಭೂತರಾಗಿದ್ದಾರೆ. ಮುಂಬಯಿಯಲ್ಲಿ ಹೆಚ್ಚಿನ ಹೊಟೇಲಿಗರಿಗೆ ಜಯ ಸುವರ್ಣರ ಋಣವಿದೆ. ಎಲ್ಲರೊಂದಿಗೆ ಒಂದಾಗಿ ಬದುಕು ಕಟ್ಟಿದ ಅವರ ಬದುಕು ಇತರರಿಗೆ ಮಾದರಿಯಾಗಿದೆ. ಸಂತೋಷ್‌ ಡಿ. ಶೆಟ್ಟಿ, ಕಾರ್ಯಾಧ್ಯಕ್ಷರು, ನೆರೂಲ್‌ ಶ್ರೀ ಶನೀಶ್ವರ ಮಂದಿರ

ಸುಮಾರು 18 ವರ್ಷಗಳಿಂದ ಬಾಲಚಂದ್ರ ರಾವ್‌ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ. ಅವರೋರ್ವ ಸ್ನೇಹಜೀವಿಯಾಗಿದ್ದು, ಕಲಾ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಪಾರವಾಗಿದೆ. ಮುಂಬಯಿಯ ಹಿರಿಯ ಸಂಸ್ಥೆ ಬಿಎಸ್‌ಕೆಬಿ ಅಸೋಸಿಯೇಶನ್‌ ಸಂಚಾಲಕತ್ವದ ನೆರೂಲ್‌ನ ಆಶ್ರಯ ತಾಣದಲ್ಲಿ ಹಿರಿಯ ನಾಗರಿಕರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟು ಇಂದು ಸಂಸ್ಥೆಯ ಕಾರ್ಯಕಾರಿ ಸಮಿತಿ ಮತ್ತು ಸದಸ್ಯರೆಲ್ಲರೂ ನನ್ನನ್ನು ಅದರ ಸದಸ್ಯರಂತೆ ಗೌರವಿಸುವಂತೆ ಮಾಡಿದವರು ಬಿ. ಬಿ. ರಾವ್‌. ಜಯ ಸಿ. ಸುವರ್ಣರು ಎಲ್ಲ ಸಮುದಾಯದವರಿಂದಲೂ ಗೌರವಿಸಲ್ಪಡುವ ವ್ಯಕ್ತಿ. ಈ ಇಬ್ಬರು ಚೇತನಗಳ ಆದರ್ಶ ನಮಗೆ ದಾರಿದೀಪವಾಗಬೇಕು. ವಿ. ಕೆ. ಸುವರ್ಣ,  ಗೌರವ ಪ್ರಧಾನ ಕಾರ್ಯದರ್ಶಿ, ನೆರೂಲ್‌ ಶ್ರೀ ಶನೀಶ್ವರ ಮಂದಿರ

Advertisement

Udayavani is now on Telegram. Click here to join our channel and stay updated with the latest news.

Next