Advertisement

ಷೋ ರೀಲ್: ದಿ ಪ್ರಸಿಡೆಂಟ್‌ ಸಿನಿಮಾ ಮತ್ತು ಗೊಟಬಯಾ ರಾಜಪಕ್ಷರೂ..

08:34 PM Sep 10, 2022 | Team Udayavani |

ಈ ಸಿನಿಮಾ ನೆನಪಾದದ್ದೇ ಶ್ರೀ ಲಂಕಾದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ. ಅದರೊಂದಿಗೆ ಜನರು ಪ್ರತಿಭಟನೆಗೆ ಬೀದಿಗಿಳಿದ ಸಂದರ್ಭ. ಪ್ರತಿಭಟನೆಯ ಕಾವು ಹೆಚ್ಚಾಗಿ ಶ್ರೀಲಂಕಾದ ರಾಷ್ಟ್ರಾಧ್ಯಕ್ಷರ ಬುಡಕ್ಕೇ ಬಂದಾಗ ದೇಶ ಬಿಟ್ಟು ಓಡಿ ಹೋಗಲೆತ್ನಿಸಿದ ದೃಶ್ಯಗಳು ಘಟಿಸಿದಾಗ.ವಿಶ್ವ ಇತಿಹಾಸದಲ್ಲಿ ಸಾಕಷ್ಟು ಮಂದಿ ಸರ್ವಾಧಿಕಾರಿಗಳು, ಸರ್ವಾಧಕ್ಷರೂ ಬಂದು ಹೋಗಿದ್ದಾರೆ. ಅತ್ಯಂತ ಕರಾಳ ಮುಖಗಳೂ ಗೋಚರಿಸಿವೆ, ಕೆಲವು ಅಪರೂಪದ ಉದಾಹರಣೆಗಳೂ ಇವೆ. ಆದರೂ ಹೆಚ್ಚಾಗಿ ನಮಗೆ ಪರಿಚಯವಾಗಿರುವುದು ಹುಚ್ಚುತನದ ಅತಿರೇಕವೆನ್ನಿಸುವಂಥ ಸರ್ವಾಧಿಕಾರಿಗಳೇ. ಅವರ ರಾಕ್ಷಸೀತನ, ಕ್ರೌರ್ಯ ಎಲ್ಲವೂ ಬಹುರೂಪದ್ದು. ಇಂದಿಗೂ ಕೆಲವು ದೇಶಗಳಲ್ಲಿ ಇಂಥ ಸರ್ವಾಧಿಕಾರಿಗಳು ಇರುವುದು ನಮ್ಮ ಕಣ್ಣೆದುರೇ ಇದೆ.

Advertisement

ಶ್ರೀಲಂಕಾದ ಪರಿಸ್ಥಿತಿಯನ್ನೂ ಗಮನಿಸೋಣ. ಆರ್ಥಿಕತೆ ಕುಸಿದು ಬಿದ್ದು, ಹಣದುಬ್ಬರ ಎಲ್ಲ ಹಂತಗಳನ್ನೂ ಮೀರಿ ಬದುಕೇ ದುರ್ಭರವೆನಿಸಿದಾಗ ಜನರು ‘ಇನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಬೀದಿಗಿಳಿದರು. ಇಂಥದೊಂದು ಸ್ಥಿತಿ ನಿರ್ಮಾಣವಾಗಲು ದೇಶದ ಅಧ್ಯಕ್ಷ ಹಾಗೂ ಪ್ರಧಾನಿ ನೇತೃತ್ವದ ಸರಕಾರಗಳು ಕೈಗೊಂಡ ವಿಚಿತ್ರ ತೀರ್ಮಾನಗಳು ಕಾರಣ ಎಂಬುದು ಜಗಜ್ಜಾಹಿರ. ಅದರ ಪರಿಣಾಮವನ್ನು ಅನುಭವಿಸಲಾಗದೇ ಜನರು ಹತಾಶರಾದರು. ಅವರ ಕೈಯಲ್ಲಿ ಇದ್ದ ಒಂದೇ ಅಸ್ತ್ರವೆಂದರೆ ಪ್ರತಿಭಟನೆ. ಆ ಮೂಲಕ ವ್ಯವಸ್ಥೆಯನ್ನು ಬದಲಾಯಿಸುವುದು. ಒಂದು ರೀತಿಯಲ್ಲಿ ಕ್ರಾಂತಿ.

ಈ ಎಲ್ಲ ಘಟನೆಗಳಹಿನ್ನೆಲಯಲ್ಲಿ ನೆನಪಾದ ಸಿನಿಮಾ ಇರಾನ್‌ ನ ಚಿತ್ರ ನಿರ್ದೇಶಕ ಮೊಹ್ಸಿನ್‌ ಮಕ್ಮಲ್ಬಫ್ ಅವರ ‘ದಿ ಪ್ರಸಿಡೆಂಟ್‌’. 2014 ರಲ್ಲಿ ರೂಪಿಸಿದ ಚಿತ್ರ. ಆ ವರ್ಷದ ವೆನಿಸ್‌ ಸಿನಿಮೋತ್ಸವದಲ್ಲಿ ವಿಶ್ವ ಪ್ರೀಮಿಯರ್‌ ಕಂಡ ಚಲನಚಿತ್ರವಿದು. ಆ ಬಳಿಕ ಗೋವಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲೂ (ಇಫಿ) ಉದ್ಘಾಟನಾ ಚಿತ್ರವಾಗಿ ಪ್ರದರ್ಶಿತವಾಯಿತು. ಆಲ್ಲದೇ ಚಿಕಾಗೊ, ಬೂಸಾನ್‌ ಮತ್ತಿತರ ಚಿತ್ರೋತ್ಸವಗಳಲ್ಲೂ ಪ್ರದರ್ಶಿತವಾಯಿತು. ಚಿಕಾಗೋದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯೂ ಪಡೆಯಿತು.

ಚಿತ್ರ ಆರಂಭಿಕ ದೃಶ್ಯವೇ ಕುತೂಹಲಕಾರಿಯಾದುದು. ವಿದ್ಯುತ್‌ ದೀಪಾಲಂಕಾರಗಳಿಂದ ಕಂಗೊಳಿಸುತ್ತಿರುವ ನಗರ. ಜನ, ವಾಹನ ಸಂಚಾರವೂ ಸಾಕಷ್ಟಿದೆ. ಇಡೀ ನಗರ ಬೆಳಕಿನಲ್ಲಿ ಮಿಂದೇಳುತ್ತಿದೆ. ಇತ್ತ ಅರಮನೆಯ ದೊಡ್ಡದಾದ ಗಾಜಿನ ಕಿಟಕಿಯಲ್ಲಿ ರಾಷ್ಟ್ರದ ಅಧ್ಯಕ್ಷ (Mikheil Gomiashvili) ಮತ್ತು ಮೊಮ್ಮಗ (Dachi Orvelashvili) ಕುಳಿತಿದ್ದಾರೆ. ಮೊಮ್ಮಗನಿಗೆ ನಗರವನ್ನು ತೋರಿಸುತ್ತಾ, ನೋಡು ಎಷ್ಟು ಚೆನ್ನಾಗಿದೆಯಲ್ಲವೇ. ಬೆಳಕಿನಿಂದ ಕಂಗೊಳಿಸುತ್ತಿದೆ ನೋಡು’ ಎಂದು ತೋರಿಸುತ್ತಾನೆ. ಮರು ಕ್ಷಣ ತನ್ನ ಅಧಿಕಾರದ ತಾಕತ್ತು ಪ್ರದರ್ಶಿಸಲು ‘ಈಗ ಏನಾಗುತ್ತದೆ ಎಂದು ನೋಡು’ ಎಂದು ಹೇಳಿ ಫೋನನ್ನು ಕೈಗೆತ್ತಿಕೊಂಡು ತನ್ನ ಆಳುಗಳಿಗೆ ‘ಕೂಡಲೇ ಎಲ್ಲ ಲೈಟು ಆರಿಸಿ’ ಎಂದು ಆದೇಶಿಸುತ್ತಾನೆ. ಅಧ್ಯಕ್ಷನ ಆದೇಶದಂತೆ ಒಂದೊಂದೇ ಲೈಟುಗಳು ಆರಿ ಕತ್ತಲು ಆವರಿಸಿಕೊಳ್ಳುತ್ತದೆ. ‘ನೋಡಿದೆಯಾ, ಹೇಗಿದೆ’ ಎಂದು ಹೇಳಿದಾಗ ಮೊಮ್ಮಗನಿಗೆ ಖುಷಿಯೋ ಖುಷಿ. ನಾನೂ ಒಮ್ಮೆ ಪ್ರಯತ್ನಿಸುವೆ ಎಂದು ಫೋನನ್ನು ತೆಗೆದುಕೊಂಡು ‘ ಲೈಟು ಬರಲಿ’ ಎನ್ನುತ್ತಾನೆ. ಅದರಂತೆ ಲೈಟು ಉರಿಯತೊಡಗುತ್ತದೆ. ಮರು ಕ್ಷಣವೇ ‘ಲೈಟು ಆರಲಿ’ ಎಂದು ಮೊಮ್ಮಗ ಆದೇಶಿಸುತ್ತಾನೆ. ಲೈಟುಗಳು ಆರುತ್ತವೆ. ಪುನಃ ಲೈಟುಗಳು ಹೊತ್ತಿಕೊಳ್ಳಲಿ ಎಂದು ಆದೇಶಿಸುತ್ತಾನೆ. ಆದರೆ ಲೈಟುಗಳು ಹೊತ್ತಿಕೊಳ್ಳುವುದಿಲ್ಲ. ಕೆಲವುಕ್ಷಣಗಳಾದರೂ ವಿದ್ಯುತ್‌ ಬಾರದು. ಇದನ್ನು ಕಂಡ ಅಧ್ಯಕ್ಷ ತನ್ನ ಫೋನ್‌ ನಲ್ಲಿ ‘ ಯಾರಿದ್ದೀರಿ, ಲೈಟು ಹಾಕಿ’ ಎಂದು ಆದೇಶಿಸುತ್ತಾನೆ. ಪ್ರಯೋಜನವಾಗದು. ಕೂಗಿಕೊಂಡರೂ ಉತ್ತರ ಸಿಗದು. ಅಷ್ಟರಲ್ಲಿ ನಗರದಲ್ಲಿ ಸ್ಫೋಟಗಳ ಸದ್ದು ಕೇಳಿಬರುತ್ತದೆ. ಗಾಜಿನ ಕಿಟಕಿಯಲ್ಲಿ ಸ್ಫೋಟದ ದೃಶ್ಯಗಳನ್ನು ನೋಡುತ್ತಾರೆ ಇಬ್ಬರೂ. ಏನು ಮಾಡುವುದೆಂದೋ ತಿಳಿಯದಾಗುತ್ತದೆ.

ದೇಶದಲ್ಲಿ ಸರ್ವಾಧಿಕಾರತನ ವಿರುದ್ಧ ಕ್ರಾಂತಿ ಆರಂಭವಾಗಿರುತ್ತದೆ. ಜನರೆಲ್ಲರೂ ಬೀದಿಗಿಳಿದು ಪ್ರತಿಭಟನೆ ಆರಂಭಿಸಿರುತ್ತಾರೆ. ಅಧ್ಯಕ್ಷ ತನ್ನ ಕುಟುಂಬವನ್ನು ಬೇರೆ ದೇಶಗಳಿಗೆ ಕಳುಹಿಸಲು ಸಿದ್ಧನಾಗಿ ವಿಮಾನ ನಿಲ್ದಾಣದವರೆಗೆ ಬಿಗಿ ಭದ್ರತೆಯಲ್ಲಿ ಬರುತ್ತಾನೆ. ಕುಟುಂಬ ತೆರಳಿದರೂ ಮೊಮ್ಮಗ ಮತ್ತು ಅಧ್ಯಕ್ಷ ರಾಜಧಾನಿಯಲ್ಲೇ ಉಳಿಯಲು ನಿರ್ಧರಿಸಿ ಅರಮನೆಗೆ ವಾಪಸಾಗುತ್ತಾರೆ. ರಸ್ತೆಯಲ್ಲಿ ಬರುವಾಗ ಎಲ್ಲೆಲ್ಲೂ ಹೊಗೆ, ಅಧ್ಯಕ್ಷನ ಪೋಸ್ಟರ್‌ಗಳಿಗೆ ಬೆಂಕಿ ಹಚ್ಚುತ್ತಿರುವ ದೃಶ್ಯ ಕಂಡು ಬರುತ್ತದೆ. ಎಲ್ಲಿ ನೋಡಿದರೂ ಜನರ ಗುಂಪು. ಈ ಮಧ್ಯೆ ಅಧ್ಯಕ್ಷ ಪರಾರಿಯಾಗಿದ್ದಾನೆಂದುಕೊಂಡು ಅಧ್ಯಕ್ಷನನ್ನು ಪತ್ತೆ ಹಚ್ಚಿಕೊಟ್ಟವರಿಗೆ ಬಹುಮಾನ ಘೋಷಿಸಲಾಗುತ್ತದೆ. ರಸ್ತೆ ಪ್ರತಿಭಟನೆ ನಿರತ ಕೋಪೋದ್ರಿಕ್ತ ನಾಗರಿಕರಿಂದ ತಪ್ಪಿಸಿಕೊಳ್ಳಲು ಅಧ್ಯಕ್ಷ ಮತ್ತು ಮೊಮ್ಮಗ ಮುಖ್ಯ ರಸ್ತೆ ಬಿಟ್ಟು ಹಳ್ಳಿ ಹಾದಿ ಹಿಡಿಯುತ್ತಾರೆ. ಅಲ್ಲಿಂದ ಸಿನಿಮಾ ಬೇರೆ ಹಾದಿಯನ್ನು ತೆಗೆದುಕೊಳ್ಳುತ್ತದೆ. ಕೋಪೋದ್ರಿಕ್ತ ಜನರ ಕೈಗೆ ಸಿಗದಂತೆ ಅಧ್ಯಕ್ಷ ಮಾರುವೇಷ ಹಾಕಿ ದಾರಿ ಸಿಕ್ಕಲೆಲ್ಲಾ ಹೋಗುತ್ತಾನೆ. ಪಿಟೀಲು ಹಿಡಿದು, ಜಿಪ್ಸಿಯಂತೆ ವೇಷ ಹಾಕಿ ಊರೂರು ಅಲೆದಾಡುತ್ತಾ ಅಂತಿಮವಾಗಿ ಹೇಗೇಗೋ ಸಮುದ್ರ ತಲುಪುತ್ತಾರೆ. ಅಲ್ಲಿಂದ ದೋಣಿ ಇತ್ಯಾದಿ ಹಿಡಿದು ಬೇರೆ ದೇಶಕ್ಕೆ ಹೋಗುವ ಲೆಕ್ಕಾಚಾರ. ಅಷ್ಟರಲ್ಲಿ ಜನರಿಗೆ ತಿಳಿದು ಬೆನ್ನಟ್ಟಿಕೊಂಡು ಬರುತ್ತಾರೆ. ಅಧ್ಯಕ್ಷ, ಮೊಮ್ಮಗ ಇಬ್ಬರೂ ಸಮುದ್ರದ ಬಳಿ ಇರುವ ಗುಹೆಯೊಳಗೆ ಅಡಗಿಕೊಂಡರೂ ಹೆಜ್ಜೆಯ ಜಾಡು ಹಿಡಿದು ಎಳೆದು ತಂದು ಬುದ್ಧಿ ಕಲಿಸುತ್ತಾರೆ. ಪ್ರಜಾಪ್ರಭುತ್ವದ ಕನಸಿನ ನಾಗರಿಕರು ಸರ್ವಾಧಿಕಾರತನಕ್ಕೆ ಕೊನೆ ಹಾಡುತ್ತಾರೆ.

Advertisement

ಚಿತ್ರದ ನಿರ್ದೇಶಕ ಮೊಹ್ಸಿನ್‌ ಮಕ್ಮಲ್ಬಫ್ ಬಹಳ ವ್ಯಂಗ್ಯ ಹಾಗೂ ವಿನೋದದ ಎಳೆಯಲ್ಲಿ ಕಥೆ ಹೇಳಲು ಪ್ರಯತ್ನಿಸಿದ್ದಾರೆ. ಇವೆಲ್ಲವೂ ಯಾವ ನಗರದಲ್ಲಿ ನಡೆದದ್ದು, ಯಾರ ಕಥೆ ಎಂದು ಕೇಳಿದರೆ, ‘ಒಂದು ಆನಾಮಿಕ ನಗರ’ ಎಂಬ ಕಲ್ಪನಾ ಲೋಕವನ್ನು ತೆರೆದಿಡುತ್ತಾರೆ. ಈ ಮೂಲಕ ನಿರ್ದೇಶಕ ನೇರವಾಗಿ ಈ ಕಥೆ ಇಂಥವರದ್ದು, ಇಂಥ ದೇಶದ್ದು ಎಂದು ನಿರ್ದಿಷ್ಟ ಪಡಿಸದೇ ಮಕ್ತವಾಗಿಡುತ್ತಾರೆ. ಇವರ ಉದ್ದೇಶವೂ ಅದೇ.
ಇಂಥದೊಂದು ಕಥೆ ಹಿಂದೆ ಹಲವು ದೇಶಗಳಲ್ಲಿ ನಡೆದಿರಬಹುದು, ಮುಂದೆಯೂ ಕೆಲವು ದೇಶಗಳಲ್ಲಿ ನಡೆಯಬಹುದು. ಹಾಗಾಗಿ ಕಥೆಗೆ ಸಾರ್ವಕಾಲಿಕತನ ತಂದುಕೊಡಲು ನಿರ್ದಿಷ್ಟತೆಯ ಹಣೆಪಟ್ಟಿ ಕಟ್ಟುವುದಿಲ್ಲ. ಸರ್ವಾಧಿಕಾರಿಗೆ ತನ್ನ ಆಡಳಿತದ ದುಷ್ಪರಿಣಾಮಗಳನ್ನು ದರ್ಶನ ಮಾಡಿಸಲು ನಿರ್ದೇಶಕರು ಬಹಳ ವಿಚಿತ್ರವಾದ ಸನ್ನಿವೇಶಗಳನ್ನು ಹೆಣೆಯುತ್ತಾರೆ. ಅದರಲ್ಲಿ ಸರ್ವಾಧಿಕಾರಿಯ ಕ್ರೌರ್ಯತೆಯೂ ವ್ಯಕ್ತವಾಗುತ್ತದೆ. ಹಾಗೆಯೇ ನಾಗರಿಕರ ಬೆಂಬಲವಿಲ್ಲದಿದ್ದರೆ ಒಬ್ಬ ಅಧ್ಯಕ್ಷನೂ ಕೇವಲ ಬೆದರು ಬೊಂಬೆಯೆಂಬುದನ್ನು ಚೆನ್ನಾಗಿ ಸಾಬೀತು ಪಡಿಸುತ್ತಾರೆ. ಚಿತ್ರದ ಕೊನೆಯ ಸನ್ನಿವೇಶಕ್ಕಿಂತ ಕೊಂಚ ಮೊದಲಿನ ಸನ್ನಿವೇಶದಲ್ಲಿ ಸೈನಿಕರು ಅಧ್ಯಕ್ಷನನ್ನು ಹುಡುಕಿಕೊಂಡು ರೈಲಿನಲ್ಲಿ ಬರುತ್ತಿರುವುದು ಕಾಣುತ್ತದೆ. ಏನು ಮಾಡಲೂ ತೋರದೇ ಅಲ್ಲಿಯೇ ಇದ್ದ ಬೆದರುಬೊಂಬೆಯ ಟೊಪ್ಪಿ, ದಿರಿಸು ತೆಗೆದುಕೊಂಡು ಅಧ್ಯಕ್ಷ ಹಾಗು ಮೊಮ್ಮಗ ಬೆದರುಬೊಂಬೆಯ ಭಂಗಿಯಲ್ಲಿ ನಿಲ್ಲುತ್ತಾರೆ. ಸೈನಿಕರು ಹಾಗೆಯೇ ಮುಂದುವರಿಯುತ್ತಾರೆ. ಇದು ಎಂಥ ವ್ಯಂಗ್ಯವೆಂದರೆ, ಎಲ್ಲ ದೇಶವನ್ನಾಳುವ ಮಂದಿಗಳು ನೆನಪು ಮಾಡಿಕೊಳ್ಳುವಂಥದ್ದು. ಇಂಥ ವ್ಯಂಗ್ಯ ಭರಿತ ಸನ್ನಿವೇಶಗಳು ಚಿತ್ರದ ತುಂಬಾ ಇವೆ.
ಕುರಿಮಂದೆಯ ಮಧ್ಯೆ ತನ್ನ ವೈಭವೋಪೇತ ಕಾರು ಬಿಟ್ಟು, ಒಂದು ದಂಪತಿಗೆ ಬಂದೂಕು ತೋರಿಸಿ, ತನ್ನ ಕಾರಿನಲ್ಲಿ ಕುಳ್ಳಿರಿಸಿ ಅವರ ದ್ವಿಚಕ್ರವಾಹನವನ್ನು ದರೋಡೆ ಮಾಡಿಕೊಂಡು ಪರಾರಿಯಾಗುತ್ತಾನೆ. ಇಂಥ ಪ್ರತಿ ಸನ್ನಿವೇಶಗಳಲ್ಲೂ ಸರ್ವಾಧಿಕಾರಿಯ ದೀನ ಸ್ಥಿತಿಯನ್ನು ಉಲ್ಲೇಖೀಸುತ್ತಲೇ ವಾಸ್ತವಕ್ಕೆ ಕನ್ನಡಿ ಹಿಡಿಯುತ್ತಾನೆ.

ಹಾಗೆಂದು ಚಿತ್ರ ಬರೀ ಸರ್ವಾಧಿಕಾರಿಯ ಕ್ರೌರ್ಯವನ್ನಷ್ಟನ್ನೇ ಹೇಳುವುದಿಲ್ಲ. ಪ್ರತಿ ಸನ್ನಿವೇಶದಲ್ಲೂ ನಾಗರಿಕರ ಹಿಂಸಾರೂಪದ ಪ್ರತಿಭಟನೆಯನ್ನು ಅನಾವರಣಗೊಳಿಸುತ್ತಾ ಕ್ರಾಂತಿಯೆಂಬುದರ ಹಿಂದಿರುವ ಹಿಂಸೆಯನ್ನು ಉಲ್ಲೇಖೀಸುತ್ತಾರೆ. ಸಂದರ್ಶನವನೊಂದರಲ್ಲಿ ಸ್ವತಃ ಮೊಹ್ಸಿನ್‌ ಹೇಳುವಂತೆಯೇ, ‘ಸರ್ವಾಧಿಕಾರಿಯ ಏಕಮುಖೀಯಾದ ಆಡಳಿತವೇ ಕ್ರೌರ್ಯಮಯವಾದುದು. ಆದರೆ ಅದನ್ನು ಖಂಡಿಸಿ ಪ್ರಜಾಪ್ರಭುತ್ವ ಬೇಕೆಂದು ಪ್ರತಿಪಾದಿಸಿ ಹಿಂಸಾರೂಪದ ಪ್ರತಿಭಟನೆಗಿಳಿಯುವ ನಾಗರಿಕರು ಅಂತಿಮವಾಗಿ ಆಯ್ದುಕೊಳ್ಳುವುದು ಹಿಂಸೆಯನ್ನೇ. ಇದೇ ವೈರುಧ್ಯ. ನಾನು ಎರಡೂ ನೆಲೆಗಳನ್ನು ತೋರಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ಹೇಳಿದವರು. ಚಿತ್ರ ನಿರ್ದೇಶಕರ ಈ ಉದ್ದೇಶ ಚಿತ್ರದಲ್ಲಿ ಯಶಸ್ವಿಯಾಗಿದೆ.

ಮೊಹ್ಸಿನ್‌ ಅವರೂ ಕ್ರಾಂತಿಯ ನೆಲೆಯಿಂದಲೇ ಬಂದವರು. ಹೋರಾಟಕ್ಕೆ ಇಳಿದು ಜೈಲು ವಾಸ ಅನುಭವಿಸಿ ಹೊರಬಂದವರು. ಹಾಗಾಗಿ ಅವರಿಗೆ ಎರಡೂ ನೆಲೆಗಳ ಅನುಭವವೂ ಇದೆ. ಅದನ್ನು ದೃಶ್ಯರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಚೆನ್ನಾಗಿ ಮೂಡಿಬಂದಿದೆ.
ಉತ್ಸಾಹ ಭರಿತ ಕಥಾನಕವನ್ನು ತೆರೆಯ ಮೇಲೆ ತಂದಿರುವ ಮೊಹ್ಸಿನ್‌, ಕೊನೆಯಲ್ಲಿ ಪ್ರಜಾಪ್ರಭುತ್ವದ ಆಶಯದೊಂದಿಗೆ ಕೊನೆಗೊಳಿಸುತ್ತಾರೆ. ಉದ್ರಿಕ್ರ ಗುಂಪು ಅಧ್ಯಕ್ಷನ ತಲೆ ಕಡಿಯಲು ಬಂದು ಕೊನೆಗೆ ಶಾಂತವಾಗಿ ಜೀವದಾನ ಮಾಡುವುದು ವಿಶೇಷ ಎನಿಸುತ್ತದೆ. ಸಮುದ್ರ ತೀರದಲ್ಲಿ ಅಧ್ಯಕ್ಷನ ಪಿಟೀಲಿಗೆ ಮೊಮ್ಮಗ ಕುಣಿಯತೊಡಗುತ್ತಾನೆ. ಅದೇ ಕೊನೆಯ ದೃಶ್ಯ. ಮೊಮ್ಮಗ ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳುವ ತಲೆಮಾರು ಎಂದು ಗುರುತಿಸುವುದಾದರೆ ಜನ ಬೆಂಬಲಿಸುವ ಪ್ರಜಾತಂತ್ರಕ್ಕೆ ಒಬ್ಬ ಸರ್ವಾಧಿಕಾರಿಯನ್ನೂ ಮಣಿಸುವ ಹಾಗೂ ತನ್ನನ್ನು ಬೆಂಬಲಿಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವ ಸಾಮರ್ಥಯವಿದೆ ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ. ಒಟ್ಟಿನಲ್ಲಿ ಉತ್ಸಾಹ ಭರಿತ ರೂಪಕವನ್ನು ಕಡೆದು ಕೊಟ್ಟಿರರುವ ನಿರ್ದೇಶಕ, ಎರಡು ಗಂಟೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಸೋಲುವುದಿಲ್ಲ.

ಇದೇ ಕಾರಣದಿಂದ ಗೊಟಬಯಾ ರಾಜಪಕ್ಷ ಅವರ ಮನೆಯನ್ನು ಪ್ರತಿಭಟನಾಕಾರರು ಆವರಿಸಿದಾಗ, ರಸ್ತೆಯಲ್ಲಿ ಹಿಂಸಾರೂಪಕ್ಕೆ ಪ್ರತಿಭಟನೆ ಜಾರಿದಾಗ, ಗೊಟಬಯಾ ಜೀವ ಉಳಿಸಿಕೊಳ್ಳಲು ಪರಾರಿಯಾದಾಗ..ಇದೇ ಸಿನಿಮಾದ ಹಲವು ದೃಶ್ಯಗಳು ನೆನಪಿಗೆ ಬಂದವು. ಇನ್ನೊಂದು ವಿಚಿತ್ರವೆಂದರೆ, ಈ ಚಿತ್ರದ ಬಗ್ಗೆ ಬರೆಯುವ ಹೊತ್ತಿಗೆ ಬ್ರಿಟನ್‌ ಅಧಿಪತ್ಯಕ್ಕೆ ಹೊಸ ರಾಜ ಪಟ್ಟಕ್ಕೇರಿದ್ದಾರೆ !

Advertisement

Udayavani is now on Telegram. Click here to join our channel and stay updated with the latest news.

Next