Advertisement

ಆರೋಗ್ಯ ವಾಣಿ: ಭುಜನೋವೇ? ಕಾರಣವೇನು? ತಿಳಿಯೋಣ ಬನ್ನಿ

10:02 AM Feb 19, 2023 | Team Udayavani |

„ ಪ್ರಜ್ವಲ್‌ ಉದಯೋನ್ಮುಖ ಯುವ ಕ್ರಿಕೆಟ್‌ ಆಟಗಾರ, ಅಪ್ರತಿಮ ವೇಗದ ಬೌಲರ್‌. ಪ್ರಮುಖ ಪಂದ್ಯವೊಂದರಲ್ಲಿ ಎಡವಟ್ಟಾಗಿ ಭುಜಕ್ಕೆ ಪೆಟ್ಟು ಬಿದ್ದು ತೀವ್ರ ನೋವು ಅನುಭವಿಸಿರುತ್ತಾನೆ.
„ ಹರ್ಷ ಕುಮಾರ್‌ ನಗರದ ಹಿರಿಯ ವಕೀಲರು. 2-3 ಬಾರಿ ಅಪಘಾತದಲ್ಲಿ ಭುಜಕ್ಕೆ ಏಟು ತಗುಲಿದೆ. ಭುಜದ ಕೀಲು ತಪ್ಪಲು ಆರಂಭವಾಗಿ ವರ್ಷವೊಂದರಲ್ಲಿ 4 ಬಾರಿ ಕೀಲು ತಪ್ಪಿ ಯಾತನೆ ಹೊಂದಿದ್ದಾರೆ.
„ ಮೇರಿ ಡಿ’ಸೋಜಾ ನಿವೃತ್ತಿ ಹೊಂದಿದ ಹಿರಿಯ ದಾದಿ. ಮಧುಮೇಹದ ರೋಗಿ. 2-3 ತಿಂಗಳಿನಿಂದ ಎಡಭುಜದಲ್ಲಿ ನೋವು ಹಾಗೂ ಬಿಗಿತ ಉಂಟಾಗಿದೆ. ಸ್ನಾನ ಮಾಡಿ ಬೆನ್ನು ಒರಸಲು ಹೆಣಗಾಡುತ್ತಿದ್ದಾರೆ.
„ ಕರೀಂ ಸಾಹೇಬರಿಗೆ ಎಪ್ಪತ್ತನೇ ವಯಸ್ಸಿನಲ್ಲಿ ಪಾರ್ಶ್ವವಾಯು ಬಡಿದು ಎರಡೂ ಭುಜಗಳು ಬಹಳ ಬಿಗಿದುಕೊಂಡಿವೆ. ಭುಜದ ನೋವು ಹಾಗೂ ಬಿಗಿತಕ್ಕೆ ಕಾರಣಗಳು
„ ಯೌವನಾವಸ್ಥೆಯಲ್ಲಿ ಹಾಗೂ ಮಧ್ಯ ವಯಸ್ಸಿನಲ್ಲಿ ಭುಜನೋವಿಗೆ ಸಾಮಾನ್ಯವಾದ ಕಾರಣವೆಂದರೆ ಭುಜದ ಮಾಂಸಖಂಡಗಳಲ್ಲಿ ಊತ ಉಂಟಾಗುವುದು. ಕೈಯನ್ನು ಮೇಲೆತ್ತಲು, ತಲೆಬಾಚಲು, ಬೆನ್ನು ಒರೆಸಲು, ಕವಾಟಿನ ಮೇಲಿನ ಡ್ರಾವರ್‌ ತಲುಪಲು ಹರಸಾಹಸ ಪಡುವುದು…. ಇವುಗಳ ಅನುಭವ ಮೂಡಿ ಬರುತ್ತದೆ.
„ ಕ್ರೀಡಾಪಟುಗಳಲ್ಲಿ ಭುಜದ ಸತತ ಉಪಯೋಗದ ಕಾರಣ ಮಾಂಸಖಂಡಗಳಲ್ಲಿ ಬಿರುಕು ಉಂಟಾಗಬಹುದು. ಆಗ ಕೈಯನ್ನು ಸ್ವಯಂ ಮೇಲೆತ್ತಲು ಕಷ್ಟವೆನಿಸುತ್ತದೆ. ಹಿರಿಯ ವಯಸ್ಸಿನಲ್ಲಿ ಮಾಂಸಖಂಡಗಳು ದುರ್ಬಲಗೊಂಡು ಭಾರದ ವಸ್ತು ಎತ್ತುವಾಗ ಅಥವಾ ಜಾರಿ ಬಿದ್ದಾಗ ಇದೇ ರೀತಿ ಬಿರುಕು ಬಿಡಬಹುದು.
„ ಪಾರ್ಶ್ವವಾಯು ರೋಗಕ್ಕೆ ಬಲಿಯಾದ ವ್ಯಕ್ತಿಗಳಲ್ಲಿ ಕೈಕಾಲಿನ ಮೇಲೆ ಸ್ವಾಧೀನ ತಪ್ಪುತ್ತದೆ. ದೀರ್ಘ‌ಕಾಲ ಬಳಸದೇ ಇರುವ ಭುಜ ಬಿಗಿದುಕೊಳ್ಳುತ್ತದೆ.
„ ಅಪಘಾತದಲ್ಲಿ ಕೈಯ ಮೂಳೆ ಮುರಿತ ಜೋಡಣೆಯ ಸಮಯದಲ್ಲಿ ದೀರ್ಘ‌ಕಾಲ ಭುಜವನ್ನು ಕೈಚೀಲದಲ್ಲಿ ನಿಷ್ಕ್ರಿಯಗೊಳಿಸಬೇಕಾದ ಸಂದರ್ಭದಲ್ಲಿ ಭುಜದ ಗಂಟಿನ ಚಲನವಲನ ಕುಂಠಿತಗೊಳ್ಳುತ್ತದೆ.
„ ಸಂಧಿವಾತ ಕಾಯಿಲೆಯಿಂದ ಬಳಲುವ ರೋಗಿಯಲ್ಲಿ ಬಹಳ ಅಪರೂಪವಾಗಿ ಭುಜದ ಗಂಟು ಸವೆದು ನೋವು ಉಂಟಾಗಬಹುದು.
„ ಎಡ ಭುಜದ ತೀವ್ರತರಹದ ನೋವು, ಆಯಾಸ, ಉಸಿರಾಟದಲ್ಲಿ ತೊಂದರೆ, ಹೃದಯ ಬಡಿತದಲ್ಲಿ ಏರುಪೇರು, ಇಡೀ ಕೈ ಸೆಳೆತ – ಇವೆಲ್ಲ ಹೃದಯಕ್ಕೆ ಸಂಬಂಧಪಟ್ಟ ಲಕ್ಷಣಗಳು. ಇದನ್ನು ನಿರ್ಲಕ್ಷಿಸುವಂತಿಲ್ಲ. ಕ್ಲಪ್ತ ಸಮಯಕ್ಕೆ ಹೃದಯದ ಪರೀಕ್ಷೆ ಹಾಗೂ ನುರಿತ ಚಿಕಿತ್ಸೆಯ ಅಗತ್ಯವಿದೆ.

Advertisement

ವಯಸ್ಸಾದಂತೆ ಭುಜದ ಸುತ್ತಮುತ್ತ ಇರುವ ಮಾಂಸಖಂಡಗಳು ಹಾಗೂ ಗಂಟಿನ ಒಳಪದರು ಕುಗ್ಗುತ್ತಾ ಹೋಗಿ ನೋವು ಹಾಗೂ ಬಿಗಿತ ಉಂಟಾಗುತ್ತದೆ. ಮಧುಮೇಹ ರೋಗಿಗಳ ಪೈಕಿ ಶೇ. 10-20 ಜನರು ಭುಜದ ಈ ನೋವು ಹಾಗೂ ಬಿಗಿತವನ್ನು ಅನುಭವಿಸುತ್ತಾರೆ. ಚಳಿಗಾಲದಲ್ಲಿ ಯಾತನೆ ಹೆಚ್ಚುತ್ತದೆ. ಈ ಕಾಯಿಲೆಗೆ ‘Frozen shoulder’ ಎಂಬ ಹೆಸರು ಇದೆ. ಹೆಚ್ಚಿನ ರೋಗಿಗಳಲ್ಲಿ ಎಡಭುಜವೇ ಜಾಸ್ತಿ ಮಟ್ಟಿಗೆ ಗುರಿಯಾಗುತ್ತದೆ.

ಸಮಸ್ಯೆಯನ್ನು ಗುರುತಿಸುವುದು ಹೇಗೆ ?

ರೋಗವನ್ನು ಗುರುತಿಸಲು ತಜ್ಞ ಮೂಳೆ ವೈದ್ಯರು ಎಕ್ಸ್‌-ರೇ, ಅಲ್ಟ್ರಾಸೌಂಡ್‌ ಸ್ಕ್ಯಾನ್‌ ಅಥವಾ ಎಂಆರ್‌ಐ ಸ್ಕ್ಯಾನ್‌ ಮಾಡಲು ಸೂಚಿಸುತ್ತಾರೆ. ಹಿರಿಯ ರೋಗಿಗಳಲ್ಲಿ ರಕ್ತದ ಸಕ್ಕರೆ ಅಂಶ ಹಾಗೂ ಹೃದಯಕ್ಕೆ ಸಂಬಂಧಿಸಿದ ತನಿಖೆ ನಡೆಸಬೇಕಾಗುತ್ತದೆ.

ರೋಗಕ್ಕೆ ಪರಿಹಾರ ಏನು? 

Advertisement

ಭುಜ ನೋವು ಹಾಗೂ ಬಿಗಿತ ಯಾವುದೇ ಕಾರಣಗಳಿಂದ ಇದ್ದರೂ ಹೆಚ್ಚಾಗಿ ನೋವು ನಿವಾರಕ ಔಷಧ, ಮುಲಾಮು ಸಹಾಯಕಾರಿ. ಔಷಧ ಸೇವನೆಯ ಜತೆಗೆ ಫಿಸಿಯೋಥೆರಪಿ ಅತೀ ಅಗತ್ಯ. ಊತಕ್ಕೆ ಒಳಗಾದ ಮಾಂಸಖಂಡಗಳಿಗೆ ನಾನಾ ವಿಧದ ಬಿಸಿ ಶಾಖ ಚಿಕಿತ್ಸೆ ಬೇಕಾಗುತ್ತದೆ. ಅದೇ ರೀತಿ ವಿವಿಧ ರೀತಿಯ ಭುಜದ ವ್ಯಾಯಾಮವನ್ನು ತಪ್ಪದೇ ಮಾಡಬೇಕಾಗುತ್ತದೆ. ಭುಜ ಮೊದಲಿನ ಹಾಗೆ ಸಮರ್ಪಕವಾಗಿ ಕೆಲಸ ಮಾಡಲು ಹಲವಾರು ತಿಂಗಳುಗಳೇ ಬೇಕಾಗಬಹುದು. ನಿರಂತರ ವ್ಯಾಯಾಮ ಹಾಗೂ ತಾಳ್ಮೆ… ಇವೇ ಯಶಸ್ಸಿನ ಗುಟ್ಟು !

ಫಿಸಿಯೋಥೆರಪಿ ಚಿಕಿತ್ಸೆಯ ಬಳಿಕವೂ ಭುಜ ಬಹಳ ಬಾಗಿ ಹೋಗಿದ್ದಲ್ಲಿ , ರೋಗಿಗೆ ಅರಿವಳಿಕೆ ನೀಡಿ ಮೂಳೆತಜ್ಞ ವೈದ್ಯರು ಭುಜವನ್ನೂ ಬಲವತ್ತಾಗಿ ಎಲ್ಲಾ ಕೋನಗಳಲ್ಲಿ ತಿರುಗಿಸಿ, ಬಿಗಿತವನ್ನು ಸಡಿಲಿಸುತ್ತಾರೆ. ಇದರ ಬಳಿಕ ಮತ್ತೂಮ್ಮೆ ಫಿಸಿಯೋಥೆರಪಿ ವ್ಯಾಯಾಮ ಮುಂದುವರಿಸುವುದು ಅಗತ್ಯ. ಅದೇ ರೀತಿ ಭುಜದ ಬಳಿ ನೋವು ಹಾಗೂ ಊತವನ್ನು ಶಮನಗೊಳಿಸುವ ಸ್ಟಿರಾಯ್ಡ ಚುಚ್ಚುಮದ್ದನ್ನು ವೈದ್ಯರು ಸೂಚಿಸಬಹುದು. ಕಿರಿಯ ವಯಸ್ಸಿನ ರೋಗಿಗಳಲ್ಲಿ ಮಾಂಸಖಂಡಗಳಲ್ಲಿ ಬಿರುಕು ಉಂಟಾಗಿದ್ದಲ್ಲಿ ಅಥವಾ ಕೀಲು ಪದೇ ಪದೇ ತಪ್ಪುತ್ತಿದ್ದಲ್ಲಿ ಶಸ್ತ್ರಕ್ರಿಯೆ ಮೂಲಕ ಅದನ್ನು ಸರಿಪಡಿಸಬಹುದು.

~ ಡಾ| ಬಿ. ಸೀತಾರಾಮ ರಾವ್‌
ಹಿರಿಯ ಮೂಳೆತಜ್ಞ ವೈದ್ಯರು
ಕಸ್ತೂರ್ಬಾ ಮೆಡಿಕಲ್‌ ಕಾಲೇಜು,
ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next