Advertisement

ಸತ್ತ ನಂತರ ಮನುಷ್ಯ ದೇಹವನ್ನು ಸುಡಬೇಕೇ, ಹೂಳಬೇಕೇ?

06:00 AM Mar 20, 2018 | |

ಎಲ್ಲೆಲ್ಲಿ ಜೀವವಿದೆಯೋ ಅಲ್ಲಿ ಮೃತ್ಯು ಕೂಡ ಇದೆ. ಪ್ರತಿ ಜನ್ಮದ ಪರಿಸಮಾಪ್ತಿ ಮೃತ್ಯುವಿನಿಂದ ನೆರವೇರುತ್ತದೆ. ಇದು ಸತ್ಯ ಮತ್ತು ಪ್ರತ್ಯಕ್ಷವಾಗಿ ಗೋಚರವಾಗುವ ಸಂಗತಿ. ಕಾಲವು ಮೃತ್ಯವಿನಿಂದ ಆವರಿಸಕೊಂಡ ಮನಷ್ಯನನ್ನು ಔಷಧ, ಉಪ-ತಪ, ದಾನ, ತಂದೆ-ತಾಯಿ, ಬಂಧುಗಳು ಯಾರೂ ರಕ್ಷಿಸಲು ಸಾಧ್ಯವಿಲ್ಲ. 

Advertisement

ಬದುಕಿರುವ ತನಕ ದೇಹಕ್ಕೆ ಅನೇಕ ಕಷ್ಟ ಕಾಯಿಲೆಗಳು ಬರುತ್ತಲೇ ಇರುತ್ತವೆ. ಯಾವ ದೇಹವನ್ನು ನಾನು ಅಂತ ಗುರುತಿಸಿ ಕೊಳ್ಳುತ್ತೇವೋ ಆಯಸ್ಸು ಮುಗಿದ ನಂತರ ಅದು ಸಾವನ್ನಪ್ಪುತ್ತದೆ. ಸತ್ತ ನಂತರ ದೇಹವನ್ನು ಮಣ್ಣಿನಲ್ಲಿ ಹೂಳಬೇಕಾ? ಅಥವಾ ಬೆಂಕಿಯಿಂದ ಸುಡಬೇಕಾ? ಇಲ್ಲಿ ಬೇರೆ ಬೇರೆ ಧರ್ಮಗಳ ಸಂಪ್ರ ದಾಯಕ್ಕಿಂತ ಹೆಚ್ಚಾಗಿ, ನಿರ್ದಿಷ್ಟ ಧರ್ಮದೊಳಗಿನ ಬೇರೆ ಬೇರೆ ಪಂಗಡಗಳು ಅವರವರ ಮನೆತನದಲ್ಲಿ ಅಂತ್ಯ ಸಂಸ್ಕಾರವನ್ನು ಹೇಗೆ ರೂಢಿಯಲ್ಲಿ ತಂದಿವೆಯೋ ಅದನ್ನೇ ಅನುಸರಿಸುತ್ತವೆ. 

ತನ್ನ ಕರ್ಮಫ‌ಲಗಳ ಪ್ರಕಾರ ಮೃತ್ಯುವಿನ ಅನಂತರ ಜೀವಾತ್ಮವು ಸೂಕ್ಷ್ಮಶರೀರದ ಮೂಲಕ ಸ್ವರ್ಗ ಅಥವಾ ನರಕವನ್ನು ಭೋಗಿಸಿ ಪುನರ್ಜನ್ಮಕ್ಕಾಗಿ ಇನ್ನೊಂದು ದೇಹಧಾರಣೆ ಮಾಡುತ್ತದೆ ಅಥವಾ ಪರಮಾತ್ಮನಿಂದಾಗಿ ಮೋಕ್ಷವನ್ನು ಹೊಂದುತ್ತದೆ. ಆದರೆ ಮೋಕ್ಷ ಪಡೆದು ಮತ್ತು ಹುಟ್ಟಬೇಕಾದ ಕರ್ಮದಿಂದ ತಪ್ಪಿಸಿಕೊಳ್ಳುವವರು ಬಹಳ ಕಡಿಮೆ ಮಂದಿಯಿರಬೇಕು. ಏಕೆಂದರೆ ಭಗವದ್ಗೀತೆಯಲ್ಲೇ ಕೃಷ್ಣ ಸತ್ತವನಿಗೆ ಮರುಜನ್ಮ ಖಚಿತ ಎಂದು ಹೇಳಿದ್ದಾನೆ .

ಜಾತಸ್ಯ ಹಿ ಧ್ರುವೋ ಮೃತ್ಯುಃ
ಧ್ರುವಂ ಜನ್ಮ ಮತಸ್ಯ ಚ|
ಎಲ್ಲೆಲ್ಲಿ ಜೀವವಿದೆಯೋ ಅಲ್ಲಿ ಮೃತ್ಯು ಕೂಡ ಖಚಿತವಾಗಿ ಇದೆ. ಎಲ್ಲಾ ಜೀವರಾಶಿಗಳ ಜನ್ಮ ಹೇಗೆ ಶುರುವಾಗುತ್ತದೋ ಹಾಗೇ ಸಮಯ ಬಂದಾಗ ಮೃತ್ಯುವಿಗೆ ಎಲ್ಲಾ ಜೀವಿಗಳೂ ಶರಣಾಗಲೇ ಬೇಕು. ಪ್ರಕೃತಿಯಿಂದ ಸೃಷ್ಟಿಯಾದ ಈ ದೇಹ ಸತ್ತ ನಂತರ ಪ್ರಕೃತಿಯೊಳಗೇ ಲೀನವಾಗುತ್ತದೆ. ಮೃತ ದೇಹವನ್ನು ಪ್ರಕೃತಿಗೇ ಸೇರಿಸಬೇಕು ಎಂಬುದನ್ನು ಎಲ್ಲ ಧರ್ಮಗಳೂ ಒಪ್ಪುತ್ತವೆ. ಆದರೆ ಹೇಗೆ ಸೇರಿಸಬೇಕು ಎಂಬ ವಿಷಯದಲ್ಲಿ ಬೇರೆ ಬೇರೆ ಪದ್ಧತಿ 
ಗಳನ್ನು ರೂಢಿಸಿಕೊಂಡಿವೆ.

ಪಂಚಭೂತಗಳಿಗೆ ಅರ್ಪಣೆ
ಪುರಾತನ ಕಾಲದಿಂದಲೂ ಜನರು ಮೂರ್‍ನಾಲ್ಕು ರೀತಿಯಲ್ಲಿ ಮೃತದೇಹದ ಅಂತ್ಯ ಸಂಸ್ಕಾರ ನಡೆಸಿಕೊಂಡು ಬಂದಿದ್ದಾರೆ. ಮನುಷ್ಯನ ತಾತ್ಕಾಲಿಕ ದೇಹದಿಂದ ಜೀವಾತ್ಮ ಹೊರಹೋದ ನಂತರ ಮೃತ ದೇಹಕ್ಕೆ ಅಷ್ಟೇ ಮರ್ಯಾದೆ ಗೌರವಗಳೊಂದಿಗೆ ವಿಧಿವಿಧಾನಗಳನ್ನನುಸರಿಸಿ ಅಗ್ನಿಯ ಮೂಲಕ ದೇಹವನ್ನು ಸುಡುವುದು ಒಂದು ಪದ್ಧತಿ. ಪಂಚಭೂತಗಳಿಂದ ಹೊರಬಂದ ಈ ದೇಹ ಮತ್ತು ಅದರಿಂದ ಹೊರ ಬಂದಿರುವ ಪಾಪಕರ್ಮಗಳನ್ನು ಅಗ್ನಿದೇವ ಪರಿಶುದ್ಧವಾಗಿ ಸುಟ್ಟು ಬೂದಿ ಮಾಡಿ ಬೇಗ ಪ್ರಕೃತಿಯೊಳಗೆ ಒಂದಾಗುವಂತೆ ಮಾಡುತ್ತಾನೆ ಎಂಬ ನಂಬಿಕೆ ಇದರ ಹಿಂದೆ ಇದೆ. ನಮ್ಮ ದೇಹವು ಪಂಚಭೂತಗಳಿಂದ ಆಗಿದೆ, ಹಾಗಾಗಿ ಅದು ಸತ್ತ ನಂತರ ಪಂಚಭೂತಗಳಲ್ಲೇ ಲೀನವಾಗಬೇಕು ಎಂಬುದು ದೇಹಕ್ಕೆ ಅಗ್ನಿಸ್ಪರ್ಶ ಮಾಡುವುದರ ಹಿಂದಿನ ತಾತ್ವಿಕತೆ. ಪಂಚಭೂತಗಳು ಅಂದರೆ-ಭೂಮಿ, ನೀರು, ಬೆಳಕು, ಗಾಳಿ ಮತ್ತು ಆಕಾಶ. ಈ ಐದು ಸಂಗತಿಗಳಿಂದ ಆಗಿರುವ ನಮ್ಮ ದೇಹ ಕೊನೆಯಲ್ಲಿ ಈ ಐದರೊಳಗೇ ವಿಲೀನವಾಗಬೇಕು ಎಂದು ಈ ತತ್ವ ಹೇಳುತ್ತದೆ. ಮೃತದೇಹವನ್ನು ಹೆಚ್ಚು ಸಮಯ ಹಾಗೇ ಇಟ್ಟಿರಬಾರದು, ಪ್ರಾಣಿ ಪಕ್ಷಿಗಳು ತಿನ್ನಬಾರದು ಎಂಬ ಕಾರಣಕ್ಕೂ ಅಗ್ನಿಯಲ್ಲಿ ಸುಡುವುದಿದೆ.

Advertisement

ಇದ್ದಾಗ ಭೂಮಿ ಮೇಲೆ ಸತ್ತಾಗ ಭೂಮಿ ಒಳಗೆ?
ಸುಡುವುದು ಒಂದು ಜನಾಂಗದ ನಂಬಿಕೆಯಾದರೆ ಮತ್ತೆ ಕೆಲವರು ಮೃತದೇಹ ಭೂಮಿಯನ್ನೇ ಸೇರಬೇಕು, ನಾವು ಬದುಕಿರುವಾಗ ಭೂಮಿತಾಯಿಯ ಮಡಿಲನು ಉಪಯೋಗಿಸಿ ಕೊಂಡಿದ್ದೆವು, ಸತ್ತ ನಂತರವೂ ನಮ್ಮ ದೇಹ ಆ ತಾಯಿಯ ಮಡಿಲಲ್ಲೇ ಮಲಗಬೇಕು ಎಂಬುದು ಇನ್ನೊಂದಷ್ಟು ಜನಾಂಗದ ನಂಬಿಕೆ. ಬದುಕಿರುವಾಗ ಭೂಮಿಯ ಮೇಲಿದ್ದೆವು, ಸತ್ತಾಗ ಭೂಮಿಯ ಒಳಗಿರುತ್ತೇವೆ, ಹಾಗೆ ನಮ್ಮ ದೇಹ ಹುಳ ಹುಪ್ಪಟಿಗಳಿಗೆ ಆಹಾರವಾಗಬೇಕು, ನಿಧಾನವಾಗಿ ಪ್ರಕೃತಿ ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ಅಷ್ಟು ಸಮಯ ತೆಗೆದು ಕೊಂಡು ಅದು ಸಹಜವಾಗಿಯೇ ಮಣ್ಣಾಗಬೇಕು. ಮೃತ ದೇಹ ವನ್ನು ನಾವೇ ಸುಟ್ಟು ಭಸ್ಮ ಮಾಡಬಾರದು ಅಂತ ಮಣ್ಣಿನಲ್ಲಿ ಹೂಳುವವರು ನಂಬುತ್ತಾರೆ. ತಾಯಿಯ ಗರ್ಭದಲ್ಲಿ ಅಂಡಾಣು ದೇಹವಾಗಿ ರೂಪುಗೊಳ್ಳಲು ಒಂಭತ್ತು ತಿಂಗಳನ್ನು ಹೇಗೆ ತೆಗೆದು ಕೊಳ್ಳುತ್ತದೋ ಹಾಗೆ ಮೃತ ದೇಹವು ಮಣ್ಣಾಗಲು ಪ್ರಕೃತಿಯ ನಿಯಮದ ಪ್ರಕಾರ ಅಷ್ಟೇ ಸಮಯ ತೆಗೆದುಕೊಳ್ಳುತ್ತದೆ. ಆದ್ದ ರಿಂದಲೇ ನಮ್ಮ ನಂಬಿಕೆ ದೇಹವನ್ನು ಮಣ್ಣು ಮಾಡುವುದರಲ್ಲಿದೆ ಎಂದು ಇವರು ಹೇಳುತ್ತಾರೆ.

ನೀರಿನಲ್ಲೇ ಪ್ರಾಣತ್ಯಾಗ
ಇನ್ನ ಕೆಲವರಿಗೆ ಹೂಳುವುದರಲ್ಲೂ ನಂಬಿಕೆಯಿಲ್ಲ. ಸುಡುವು ದರಲ್ಲೂ ನಂಬಿಕೆಯಿಲ್ಲ. ನಾನು ಸತ್ತಾಗ ನನ್ನ ದೇಹ ಗಂಗಾ ನದಿಯಲ್ಲೇ ತೇಲಿಕೊಂಡು ಹೋಗಬೇಕು, ಆಗಲೇ ನನ್ನ ಈ ಜನ್ಮದ ಪಾಪಕರ್ಮಕ್ಕೆ ಕ್ಷಮೆ ಸಿಗುತ್ತದೆ ಎಂದು ಬಹಳಷ್ಟು ಜನ ತಮ್ಮ ವೃದ್ಧಾಪ್ಯದಲ್ಲಿ ಕಾಶಿಯಲ್ಲಿ ನೆಲೆಸುತ್ತಾರೆ. ಕೆಲವರಂತೂ ಮನೆಯಲ್ಲಿ ಯಾರಿಗೂ ಹೇಳದೆ ತಮ್ಮ ಪಾಡಿಗೆ ತಾವು ಹೊರಟುಬಿಟ್ಟಿ ರುತ್ತಾರೆ. ಜೀವನದಲ್ಲಿ ಎಲ್ಲವನ್ನೂ ಕಂಡಾಯಿತು, ಎಲ್ಲವೂ ನಶ್ವರ, ಯಾವುದೂ ಶಾಶ್ವತವಲ್ಲ, ನನ್ನ ದುರಹಂಕಾರಿ ದೇಹ ಈಗಲಾದರೂ ಎಲ್ಲ ಬಂಧನಗಳಿಂದ ಮುಕ್ತವಾಗಿ ಸ್ವತಂತ್ರವಾಗಿ ಸಾಯಬೇಕು, ಸಾಯುವ ಸಮಯದಲ್ಲಾದರೂ ನನಗೆ ನೆಮ್ಮದಿ ಬೇಕು, ಸಂಸಾರದಲ್ಲೇ ಇದ್ದರೆ ಬೇಡ ಬೇಡ ಅಂದರೂ ಎಲ್ಲಾ ಮೋಹಗಳು ಬಂದು ಅಂಟಿಕೊಳ್ಳುತ್ತವೆ. ನನಗೆ ಜ್ಞಾನೋದಯ ಆದ ಮೇಲೂ ನಾನು ಅದೇ ತಪ್ಪುಗಳನ್ನು ಪದೇ ಪದೇ ಮಾಡಬಾರದು ಅಂತ ಅನೇಕ ಹಿರಿಯರು ಕಾಶಿ, ರಾಮೇಶ್ವರ ಅಥವಾ ಸಮುದ್ರದ ನೀರಿನಲ್ಲಿ ತೇಲಿಕೊಂಡು ತಮ್ಮ ದೇಹಾಂತ್ಯ ವನ್ನು ತಾವೇ ಮಾಡಿಕೊಳ್ಳುತ್ತಾರೆ. ಆಸ್ಪತ್ರೆ ಸೇರದೆ, ಕೃತಕವಾಗಿ ಬದುಕದೆ ಸಹಜವಾಗಿಯೇ ದೇವರ ಧ್ಯಾನ ಮಾಡುತ್ತಾ ಕೊನೆಯುಸಿರೆಳೆಯುತ್ತಾರೆ. ತಮ್ಮ ದೇಹ ಬೇರೆಯವರಿಗೆ ಸಿಕ್ಕಿ ಅನಾಥ ದೇಹವೆನಿಸಿಕೊಳ್ಳಬಾರದೆಂದು ತಾವೇ ನದಿ, ಸಮುದ್ರದಲ್ಲಿ ತೇಲಿಕೊಂಡು ಹೋಗಿ ಪ್ರಕೃತಿಯಲ್ಲಿ ಒಂದಾಗುತ್ತದೆ. 

ನೌಷಧಂ ನ ತಪೋ ನ ದಾನಂ
ನ ಮಾತಾ ನ ಚ ಬಾಂಧವಾಃ|
ಶಕು°ವಂತಿ ಪರಿತ್ರಾತುಂ
ನರಂ ಕಾಲೇನ ಪೀಡತಮ್‌||
ಪ್ರತಿ ಜನ್ಮದ ಪರಿಸಮಾಪ್ತಿ ಮೃತ್ಯುವಿನಿಂದ ನೆರವೇರುತ್ತದೆ. ಇದು ಸತ್ಯ ಮತ್ತು ಪ್ರತ್ಯಕ್ಷವಾಗಿ ಗೋಚರವಾಗುವ ಸಂಗತಿ. ಕಾಲವು ಮೃತ್ಯವಿನಿಂದ ಆವರಿಸಕೊಂಡ ಮನಷ್ಯನನ್ನು ಔಷಧ, ಉಪ-ತಪ, ದಾನ, ತಂದೆ-ತಾಯಿ, ಬಂಧುಗಳು ಯಾರೂ ರಕ್ಷಿಸಲು ಸಾಧ್ಯವಿಲ್ಲ. ಜಪ ತಪ ದಾನ ಧರ್ಮಗಳು ನಮ್ಮ ಪಾಪ ಪುಣ್ಯಗಳನ್ನು ತುಲನೆ ಮಾಡಿ ಮುಂದಿನ ಜನ್ಮದ ಗುಣಮಟ್ಟವನ್ನು ನಿರ್ಧರಿಸಲು ಸಹಕರಿಸುವುದೇ ಹೊರತು ಈ ಜನ್ಮದಲ್ಲಿ ನಿಶ್ಚಿತ ವಾಗಿರುವ ಆಯಸ್ಸನ್ನು ವೃದ್ಧಿಸಲು ಅಲ್ಲ.

ದೇಹ ಬಿಸಾಕುವ ಪದ್ದತಿ
ತತ್‌ ಕ್ಷಣತ್‌ ಸೋಥ ಗೃಹಾ¡ತಿ
ಶಾರೀರಂ ಚಾತಿವಾಹಿಕಮ್‌ |
ಅಂಗುಷ್ಠಪರ್ವ ಮಾತ್ರಂ ತು
ಸ್ವಪ್ರಾಣೈರೇವ ನಿರ್ಮಿತಮ್‌ ||
ಸ್ಕಂದ ಪುರಾಣದ ಪ್ರಕಾರ ಜೀವಾತ್ಮವು ಶರೀರದಿಂದ ನಿರ್ಗಮನ ಮಾಡುವಾಗ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಪ್ರಾಣ ವಾಯು ಹೊರ ಹೋಗುವ ಸಮಯದಲ್ಲಿ ಸಾಮಾನ್ಯ ಮನುಷ್ಯ ತನ್ನೊಳಗಿರುವ ಜೀವಾತ್ಮ ಹೊರಹೋಗುವುದನ್ನು ತನ್ನ ಚರ್ಮ ಚಕ್ಷುಗಳಿಂದ ನೋಡಲಾರ. ಹಾಗೆ ಹೊರಬಂದ ಜೀವಾತ್ಮವು ಅಂಗುಷ್ಠಪರ್ವದ ಅಪರಿಮಿತ ಅತಿವಾಹಿಕ ಸೂಕ್ಷ್ಮ ಶರೀರವನ್ನು ಧಾರಣೆ ಮಾಡುತ್ತದೆ.

ಝೊರಾಷ್ಟ್ರಿಯನ್ನರು ಇವತ್ತಿಗೂ ಮೃತದೇಹವನ್ನು ತುಂಡು ತುಂಡು ಮಾಡಿ ತಾವು ಖಚಿತಪಡಿಸಿಕೊಂಡಿರುವ ದೈವಿಕ ಪ್ರದೇಶ ಗಳಲ್ಲಿ ಬಿಸಾಕುತ್ತಾರೆ. ಅದನ್ನು ಹದ್ದು ಬಂದು ತಿನ್ನಬೇಕೆಂಬುದು ಅವರ ನಂಬಿಕೆ. ಅವರ ರಾಜ ಮನೆತನದವರೂ ಬೇರೆ ಪದ್ಧತಿ
ಗಳನ್ನು ಅನುಸರಿಸುವುದಿಲ್ಲ. ದೇಹದ ತುಂಡುಗಳನ್ನು ಎಲ್ಲಾ ದಿಕ್ಕಿಗೂ ಎಸೆದು ರಣಹದ್ದುಗಳು ತಿನ್ನಲೆಂದು ಕಾಯುತ್ತಾರೆ.
ಸತ್ತ ನಂತರ ದೇಹವನ್ನು ಏನು ಮಾಡಬೇಕು ಎಂಬುದಕ್ಕೆ ಎಲ್ಲ ಜನಾಂಗಗಳು ಬಹಳ ಪ್ರಾಮುಖ್ಯತೆ ನೀಡುತ್ತವೆ. ಆದರೆ ಬದುಕಿರುವಾಗ ದೇಹವನ್ನು ಹೇಗೆ ಚೆನ್ನಾಗಿ ಬಳಸಬೇಕು ಎಂಬುದಕ್ಕೆ ಯಾರೂ ಅಷ್ಟಾಗಿ ಗಮನ ನೀಡುವುದಿಲ್ಲ ಎಂಬುದೇ ವಿಪರ್ಯಾಸ!

Advertisement

Udayavani is now on Telegram. Click here to join our channel and stay updated with the latest news.

Next