Advertisement

ರಸ್ತೆ ಅಪಘಾತ : ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಗಂಭೀರ

09:31 AM Jul 29, 2019 | Hari Prasad |

ರಾಯ್ ಬರೇಲಿ : ದೇಶದ ಗಮನ ಸೆಳೆದಿದ್ದ ಉನ್ನಾವೋ ಅತ್ಯಚಾರ ಪ್ರಕರಣದ ಸಂತ್ರಸ್ತೆ ಆದಿತ್ಯವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಅಪಘಾತದಲ್ಲಿ ಸಂತ್ರಸ್ತೆಯ ತಾಯಿ ಮತ್ತು ಅತ್ತೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ರಾಯ್ ಬರೇಲಿಯ ರಾಷ್ಟ್ರೀಯ ಹೆದ್ದಾರಿ 232ರಲ್ಲಿ ಈ ಅಪಘಾತ ಸಂಭವಿಸಿದೆ.

Advertisement

ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರು ಲಾರಿಗೆ ಮುಖಾಮುಖಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣದಿಂದ ರಸ್ತೆಯಲ್ಲಿ ಜಾರು ಸ್ಥಿತಿ ಇದ್ದು ಎರಡೂ ವಾಹನಗಳೂ ವೇಗವಾಗಿ ಸಾಗುತ್ತಿದ್ದ ಸಂದರ್ಭದಲ್ಲಿ ಈ ಮುಖಾಮುಖಿ ಢಿಕ್ಕಿ ಸಂಭವಿಸಿರಬಹುದೆಂದು ಅಂದಾಜಿಸಲಾಗುತ್ತಿದೆ.

ಸಂತ್ರಸ್ತೆಯ ಅತ್ತೆಯ ಗಂಡ ರಾಯ್ ಬರೇಲಿ ಜೈಲಿನಲ್ಲಿದ್ದು ಅವರನ್ನು ಭೇಟಿಯಾಗಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಸಂತ್ರಸ್ತೆಯ ಅತ್ತೆ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಮೃತಪಟ್ಟರೆ, ತಾಯಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಇನ್ನು ಕಾರನ್ನು ಚಲಾಯಿಸುತ್ತಿದ್ದ ನ್ಯಾಯವಾದಿ ಮಹೇಂದ್ರ ಸಿಂಗ್ ಮತ್ತು ಸಂತ್ರಸ್ತೆ ಗಂಭೀರವಾಗಿ ಗಾಯಗೊಂಡು ಲಕ್ನೋ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬಿಜೆಪಿ ನಾಯಕ ಕುಲದೀಪ್ ಸೇನ್ ಗರ್ ಮೇಲೆ 2018ರಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಗಂಭೀರವಾದ ಆರೋಪವನ್ನು ಮಾಡಿದ್ದಳು. ಒಟ್ಟಾರೆಯಾಗಿ ಉನ್ನಾವೋ ಅತ್ಯಾಚಾರ ಪ್ರಕರಣ ಅಂದು ಇಡೀ ದೇಶದ ಗಮನವನ್ನು ಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next