Advertisement

ಮಂಗಳೂರು ದಸರಾ: ಶೋಭಾಯಾತ್ರೆ: ನಗರವಿಡೀ ಶೋಭಾಯಮಾನ

11:57 PM Oct 05, 2022 | Team Udayavani |

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ “ಮಂಗಳೂರು ದಸರಾ’ ಶೋಭಾ ಯಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಜೆ ಆರಂಭಗೊಂಡು, ಗುರುವಾರ ಮುಂಜಾನೆ ವರೆಗೆ ವೈಭವದಿಂದ ನೆರವೇರಿತು.

Advertisement

ಕುದ್ರೋಳಿ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆದ ಶೋಭಾಯಾತ್ರೆಯನ್ನು ಸಹಸ್ರಾರು ಜನರು ಕಣ್ತುಂಬಿಕೊಂಡರು.

ಕ್ಷೇತ್ರದಲ್ಲಿ ಪೂಜಿಸಲ್ಪಟ್ಟ ಶ್ರೀ ಮಹಾ ಗಣಪತಿ, ಆದಿಶಕ್ತಿ, ನವದುರ್ಗೆಯರು, ಶ್ರೀ ಶಾರದಾ ಮಾತೆ, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹ ಸಹಿತ ಹೊರಟ ಮೆರವಣಿಗೆ ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್‌ ಸರ್ಕಲ್‌, ಲಾಲ್‌ಬಾಗ್‌, ಬಲ್ಲಾಳ್‌ಬಾಗ್‌, ಪಿವಿಎಸ್‌ ವೃತ್ತ, ಕೆ.ಎಸ್‌. ರಾವ್‌ ರಸ್ತೆ, ಹಂಪನಕಟ್ಟೆ, ವಿ.ವಿ. ಕಾಲೇಜು ವೃತ್ತದಿಂದ ಗಣಪತಿ ಹೈಸ್ಕೂಲ್‌ ಮಾರ್ಗವಾಗಿ ಕಾರ್‌ಸ್ಟ್ರೀಟ್‌, ಅಳಕೆಯ ಮೂಲಕ ಮತ್ತೆ ಶ್ರೀಕ್ಷೇತ್ರಕ್ಕೆ ತಲುಪಿತು.

ಸಮ್ಮಾನ
ಶೋಭಾಯಾತ್ರೆ ಆರಂಭಕ್ಕೂ ಮುನ್ನ ಕುದ್ರೋಳಿಯ ಶ್ರೀ ಶಾರದೆಯ ಸನ್ನಿಧಿಯಲ್ಲಿ ಹಲವು ಮಂದಿ ಸೇವಾಕರ್ತರನ್ನು ಕ್ಷೇತ್ರಾಡಳಿತ ಮಂಡಳಿಯ ಪರವಾಗಿ ಸಮ್ಮಾನಿಸಲಾಯಿತು.ಬಿ. ಜನಾರ್ದನ ಪೂಜಾರಿ ಉಪಸ್ಥಿತಿ ಯಲ್ಲಿ ವಿಸರ್ಜನ ಪೂಜೆ ಸಂಜೆ ನೆರವೇರಿತು.ಮೇಯರ್‌ ಜಯಾನಂದ ಅಂಚನ್‌, ಕ್ಷೇತ್ರದ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಮ್‌, ಉಪಾಧ್ಯಕ್ಷರಾದ ಉರ್ಮಿಳ ರಮೇಶ್‌, ಖಜಾಂಚಿ ಪದ್ಮರಾಜ್‌ ಆರ್‌, ಪ್ರಮುಖರಾದ ಮಾಲತಿ ಜನಾರ್ದನ ಪೂಜಾರಿ, ಮಾಧವ ಸುವರ್ಣ, ಹರಿಕೃಷ್ಣ ಬಂಟ್ವಾಳ, ಡಾ| ಬಿ.ಜಿ. ಸುವರ್ಣ, ಎಂ. ಶಶಿಧರ ಹೆಗ್ಡೆ‌ ಮೊದಲಾದವರು ಉಪಸ್ಥಿತರಿದ್ದರು.

ರಂಗು ಮೂಡಿಸಿದ ಶೋಭಾಯಾತ್ರೆ
ಈ ಬಾರಿ ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹಗಳು ಶೋಭಾಯಾತ್ರೆಯಲ್ಲಿ ಮುಂದೆ ಸಾಗಿದ ಬಳಿಕ ಸ್ತಬ್ಧಚಿತ್ರಗಳು ಅನುಸರಿಸಿ ದವು. ಕಲಾ ತಂಡಗಳು, ಬಣ್ಣದ ಕೊಡೆಗಳು, ಚೆಂಡೆ ವಾದ್ಯ ಮತ್ತು ವಿವಿಧ ಕಲಾ ಪ್ರಕಾರಗಳು ಹೊಸ ರಂಗು ನೀಡಿದವು. ಸಂಗೀತ ರಸಮಂಜರಿ ಮತ್ತಿತರ ಕಾರ್ಯಕ್ರಮಗಳು ಮನಸೂರೆಗೊಂಡವು. ರಸ್ತೆ ಬದಿಯಲ್ಲಿ ವ್ಯಾಪಾರ-ವಹಿವಾಟು ಕೂಡ ಜೋರಾಗಿತ್ತು.

Advertisement

ಗಮನಸೆಳೆದ ಜಾನಪದ
ಕಲಾ ತಂಡಗಳು
ವಿವಿಧ ಜಿಲ್ಲೆಗಳಲ್ಲಿ ಖ್ಯಾತಿ ಗಳಿಸಿ ರುವ ಆಕರ್ಷಣೀಯ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಗಮನಸೆಳೆದವು. ನಂದಿದ್ವಜ ಕುಣಿತ, ಕರಡಿಮಜಲು, ಭಜನೆ ಕುಣಿತ, ಹಲಗಿ ಮಜಲು, ಕಂಸಾಳೆ,ಪಟ ಕುಣಿತ, ಗೊರವರ ಕುಣಿತ, ಪುರವಂತಿಕೆ, ಹಗಲುವೇಷ, ಜಗ್ಗಲಿಗೆ, ಡೊಳ್ಳು ಕುಣಿತ, ಮಹಿಳಾವೀರಗಾಸೆ, ಲಂಬಾಣಿ ನೃತ್ಯ, ಸಂಬಳಾವಾಸನ, ಸೋಮನ ಕುಣಿತ, ಝಂಜ್‌ ಮೇಳ, ಭಜನಾ ತಂಡ, ಕೊರಗರ ಡೋಲು ಕುಣಿತ, ಕಂಗಿಲು, ಚೆಂಡೆ, ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ವೈಶಿಷ್ಟéವ ಸಾರುವ, ಅಲ್ಲಿನ ಸಂಸ್ಕೃತಿ ಬಿಂಬಿಸುವ ವಿವಿಧ ಜನಪದ ಕಲಾತಂಡಗಳು ಮೆರವಣಿಗೆಯ ಸೊಬಗು ಹೆಚ್ಚಿಸಿದವು.

ಯುವವಾಹಿನಿ ಮಂಗಳೂರು ಘಟಕದ ಸಾರಥ್ಯದಲ್ಲಿ ಯುವ ವಾಹಿನಿ ಕೇಂದ್ರ ಸಮಿತಿಯ ವಿವಿಧ ಘಟಕಗಳು, ಶ್ರೀ ನಾರಾಯಣ ಗುರು ಸಂಘಗಳು ಹಾಗೂ ಗುರು ಭಕ್ತರ ಸಹಭಾಗಿತ್ವದಲ್ಲಿ ಶಿವಗಿರಿ ತೀರ್ಥಾಟನ ಯಾತ್ರೆಯ ಅರಿವಿನ ನಡಿಗೆ ಗಮನ ಸೆಳೆಯಿತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next