Advertisement

ಇನ್ನೂ ಹಲವರಿಗೆ ರೋಷಾವೇಶ: ಶೋಭಾ ಕರಂದ್ಲಾಜೆ

02:13 AM May 23, 2019 | Team Udayavani |

ಉಡುಪಿ: ಮಾಜಿ ಸಚಿವ ರೋಷನ್‌ ಬೇಗ್‌ ಅವರಂತೆ ಹಲವು ಶಾಸಕರಿಗೆ ಅಸಮಾಧಾನ ಇದೆ. ರಾಜ್ಯ ಸರಕಾರ ದುರ್ಬಲ ಮತ್ತು ಅಸ್ಥಿರ ಆಗಿದೆ.ರೋಷನ್‌ ಬೇಗ್‌, ಎಚ್. ವಿಶ್ವನಾಥ್‌, ಎಸ್‌.ಟಿ. ಸೋಮಶೇಖರ್‌ ಅವರೂ ಅಸಮಾಧಾನ ಹೊರ ಹಾಕಿದ್ದಾರೆ. ರಮೇಶ್‌ ಜಾರಕಿಹೋಳಿ ಕಾಂಗ್ರೆಸ್‌ ನಾಯಕರಕೈಗೆ ಸಿಗುತ್ತಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಉಡುಪಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ – ಜೆಡಿಎಸ್‌ನವರು ಜನಹಿತ ಮರೆತು ಅಧಿಕಾರ ಉಳಿಸಲೋಸುಗ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಬರಗಾಲದಿಂದ ಜೀವಿಗಳು ತತ್ತರಿಸಿವೆ. ಸರಕಾರ ಇದ್ದರೂ ಒಂದೇ ಬಿದ್ದರೂ ಒಂದೇ. ಇಷ್ಟೆಲ್ಲ ಗೊಂದಲ ಇದ್ದರೂ ಸರಕಾರವನ್ನು ಹೇಗೆ ನಿಭಾಯಿಸುತ್ತಿದ್ದಾರೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉತ್ತರ ಕೊಡಬೇಕು ಎಂದರು.

ಲೋಕ-ರಾಜ್ಯಸಭೆಯಲ್ಲಿ ಬಹುಮತ

ಮತದಾನೋತ್ತರ ಸಮೀಕ್ಷೆ ನರೇಂದ್ರ ಮೋದಿ ಸರಕಾರದ ಪರವಾಗಿದೆ. ಸಮೀಕ್ಷೆ ಪ್ರಕಾರ 325ರಿಂದ 350 ಸ್ಥಾನಗಳು ಎನ್‌ಡಿಎ ಪಾಲಾಗಲಿವೆ. ದೇಶದ ಹಲವಾರು ನಿರ್ಣಯಗಳಿಗೆ ಮೂರನೆಯ ಎರಡರಷ್ಟು ಬಹುಮತ ಬೇಕು. ಈ ಬಾರಿ ಲೋಕಸಭೆ,ರಾಜ್ಯಸಭೆಯಲ್ಲಿ ಬಹುಮತ ಸಿಗಲಿದೆ ಎಂದರು.

ಅತ್ಯಧಿಕ ಬಹುಮತ

Advertisement

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಹಿಂದಿಗಿಂತಲೂ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲಿದ್ದೇವೆ. ದಕ್ಷಿಣ ಭಾರತದಲ್ಲೇ ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಸಂಸದರು ಆಯ್ಕೆಯಾಗಲಿದ್ದಾರೆ. ರಾಜ್ಯದಿಂದ 20ಕ್ಕೂ ಹೆಚ್ಚು ಸಂಸದರು ಪ್ರಧಾನಿ ಮೋದಿಯವರ ಕೈ ಬಲ ಪಡೆಸುತ್ತಾರೆ. ಎಂದು ಶೋಭಾ ವಿಶ್ವಾಸ ವ್ಯಕ್ತಪಡಿಸಿದರು.

ಆಗೇಕೆ ಸಂಶಯ ಬರಲಿಲ್ಲ?

ವಿವಿಪ್ಯಾಟ್ ಮೇಲೆ ವಿಪಕ್ಷ ನಾಯಕರು ಸಂಶಯ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದಾಗ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಗೆದ್ದಾಗ ವಿವಿಪ್ಯಾಟ್‌ಗೆ ಏನಾಗಿತ್ತು? ವಿಪಕ್ಷಗಳ ಆರೋಪ ‘ಕುಣಿಯೋಕೆ ಬಾರದವ ನೆಲ ಡೊಂಕು’ ಎನ್ನುವ ಗಾದೆಯಂತಾಗಿದೆ. ಗೆಲ್ಲುವುದಕ್ಕೆ ಆಗೋದಿಲ್ಲ ಎಂದು ಈ ಸಂಶಯ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಮತಯಂತ್ರ ದುರ್ಬಲವಲ್ಲ

ಪ್ರಪಂಚದಲ್ಲೇ ಅತ್ಯಂತ ಉತ್ತಮ ತಾಂತ್ರಿಕ ವ್ಯವಸ್ಥೆ ಇದೆ. ಮತಯಂತ್ರ ಯಾರ ಕಾಲದಲ್ಲಿ ಆಗಿದೆ? ಈ ಕುರಿತು ಎರಡು ಬಾರಿ ಯುಪಿಎ ಅಧಿಕಾರಕ್ಕೆ ಬಂದಾಗ ಆಕ್ಷೇಪಿಸಿಲ್ಲ ಏಕೆ? ಮತಯಂತ್ರ ದುರ್ಬಲವಾಗಿಲ್ಲ. ವಿಪಕ್ಷ ದುರ್ಬಲವಾಗಿದೆ. ಅವರ ಮನಸ್ಸೂ ದುರ್ಬಲವಾಗಿದೆ, ಮಹಾ ಘಟಬಂಧನ ದುರ್ಬಲವಾಗಿದೆ ಎಂದು ಶೋಭಾ ಲೇವಡಿ ಮಾಡಿದರು.

ಕಾಂಗ್ರೆಸ್‌ ಪಕ್ಷದ ಶಾಸಕರನ್ನು ಬಿಜೆಪಿಯು ಸೆಳೆಯುವುದಿಲ್ಲ. ಪಕ್ಷ ಬಿಟ್ಟ ಅನಂತರ ಶಾಸಕರನ್ನು ಬಿಜೆಪಿ ಮಾತನಾಡಿಸುತ್ತದೆ. ಬಿಜೆಪಿ ಒಂದು ದೊಡ್ಡ ಸಮುದ್ರವಿದ್ದಂತೆ. ಯಾರೂ ಬಿಜೆಪಿಗೆ ಬರಬಹುದು ಎಂದರು.

ಜನತಾ ಜನಾರ್ದನನನ್ನು ಮರೆತ ಸಿಎಂ

ಮುಖ್ಯಮಂತ್ರಿಗಳ ದೇವಸ್ಥಾನಗಳ ಭೇಟಿ ಕುರಿತು ಪ್ರಶ್ನಿಸಿದಾಗ, ಜನಸೇವೆಯೇ ಜನಾರ್ದನನ ಸೇವೆ ಎಂದು ಹಿರಿಯರು ಹೇಳಿದ್ದಾರೆ. ಮುಖ್ಯಮಂತ್ರಿಯಾದವರು ಇದನ್ನು ಪಾಲಿಸಬೇಕು. ಆದರೆ ಅವರು ಜನತಾ ಸೇವೆ ಬಿಟ್ಟು ಬಿಟ್ಟಿದ್ದಾರೆ. ಜನಾರ್ದನ- ದೇವರು ಕೈ ಹಿಡಿಯಬಹುದು ಎನ್ನುವುದು ಅವರ ನಂಬಿಕೆ ಇರಬಹುದು. ಕರ್ತವ್ಯ ನಿಭಾಯಿಸದವನನ್ನು ದೇವರೂ ಕೈ ಹಿಡಿಯುವುದಿಲ್ಲ. ಇದನ್ನು ಅರಿತು ಕೆಲಸ ಮಾಡಿದರೆ ಅವರಿಗೆ ಒಳ್ಳೆಯದಾಗಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next