Advertisement

ಹಚ್ಚ-ಹಸಿರಿನಿಂದ ಕಂಗೊಳಿಸುತ್ತಿರುವ ಹಳಿಂಗಳಿ ಭದ್ರಗಿರಿ ಬೆಟ್ಟದ ಶಿವಗಿರಿ ಆಯುರ್ವೇದ ವನ

08:13 PM Jun 04, 2024 | Team Udayavani |

ರಬಕವಿ-ಬನಹಟ್ಟಿ: ಜೈನರ ಕಾಶಿ ಎಂದೇ ಖ್ಯಾತಿ ಹೊಂದಿರುವ ರಬಕವಿ ಬನಹಟ್ಟಿ ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟ ಅನೇಕರ ಪರಿಶ್ರಮದಿಂದ ಇಂದು ಹಚ್ಚ ಹಸಿರಾಗಿ ಕಂಗೊಳಿಸುತ್ತಿರುವ  ಬೆಟ್ಟದ ಶಿವಗಿರಿ ಆಯುರ್ವೇದ ವನ.

Advertisement

ಕಳೆದ 13 ವರ್ಷಗಳ ಹಿಂದೆ ಬೆಟ್ಟಕ್ಕೆ ಆಗಮಿಸಿದ ಜೈನಮುನಿ 108 ಶ್ರೀ ಕುಲರತ್ನ ಭೂಷಣ ಮಹಾರಾಜರು, ಜೈನರ ಕಾಶಿ ಎಂದು ಹೇಳುವ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟ ಎಂದು ಹೇಳಲಾಗುತ್ತಿದೆ. ಜೈನ ಧರ್ಮಿಯರನ್ನು ಹಾಗೂ ಅನ್ಯ ಜಾತಿಯರನ್ನೂ ತಮ್ಮ ಪ್ರವಚನದ ಮೊನಚಾದ ಮಾತುಗಳಿಂದ ಜಾಗೃತಿಗೊಳಿಸಿದ ಮುನಿಗಳು, ಲಕ್ಷಾಂತರ ಗಿಡಗಳನ್ನು ಹಂಚುವ ದೊಡ್ಡ ಕಾಯಕಕ್ಕೆ ಮುಂದಾಗಿ ತಮ್ಮ ಪರಿಸರ ಪ್ರೇಮವನ್ನು ಭೂತಾಯಿಗೆ ಅರ್ಪಿಸಿದ್ದಾರೆ.

ಅನೇಕ ಅನ್ಯ ಧರ್ಮಿಯರ ಸ್ವಾಮಿಜಿಗಳು, ಸಾಹಿತಿಗಳು, ರಾಜಕೀಯ ಮುಖಂಡರು, ರೈತ ಕುಟುಂಬಗಳು ಸೇರಿದಂತೆ ಅನೇಕ ಸಾಧಕರನ್ನು ಇಲ್ಲಿಗೆ ಕರೆಸಿ ಅವರ ಹಸ್ತದಿಂದ ಲಕ್ಷಾಂತರ ಗಿಡಿಗಳನ್ನು ನೆಡುವ ಸಾಧನೆ ಮಾಡಿದ ಮುನಿಗಳನ್ನು ಜನ ಮೆಚ್ಚುತ್ತಿದ್ದಾರೆ.

ಇಲ್ಲಿಗೆ ಬರುವ ಅನೇಕ ಶ್ರಾವಕ ಶ್ರಾವಕಿಯರು, ಕುಮಾರ ಕುಮಾರಿಕೆಯರು ಮಹಾರಾಜರ ಆಶೀರ್ವಾದ ಪಡೆದುಕೊಂಡು ಪ್ರತಿಯೊಬ್ಬರು ಪ್ರತಿದಿನ ಗಿಡಗಳಿಗೆ ನೀರು ಹಾಕುವ ಕಾಯಕದಲ್ಲಿ ನಿರತರಾಗುತ್ತಾರೆ. 2-3 ಎಕರೆಯಲ್ಲಿ ಶಿವಗಿರಿ ವನ ಎಂದು ನಾಮಕರಣ ಮಾಡಿದ ಮುನಿಗಳು, ಅಲ್ಲಿ ಸಾವಿರಾರು ಆಯೂರ್ವೇದ ಗಿಡಗಳನ್ನು ನೆಟ್ಟಿದ್ದಾರೆ. ಅವು ಈಗ ಆಳೇತ್ತರಕ್ಕೆ ಬೆಳೆದು ಆಯುರ್ವೇದ ಔಷಧಿ ನೀಡುತ್ತಿವೆ.

ಇಲ್ಲಿ ಪೆರಳೆ, ಚಿಕ್ಕು, ಸೀತಾಫಲ, ಮಾವು, ಹುಣಸೆ, ತೆಂಗು, ಸುಬಾಬುಲ, ಆಲ, ಅರಳಿಮರ, ಗುಲಗಂಜಿ, ಹನುಮ ಫಲ, ರಾಮಫಲ, ನೇರಳೆ, ಬೆಟ್ಟದ ನೆಲ್ಲಿ, ನೀಲಗಿರಿ, ಸಂಪಿಗೆ, ಬೇವು, ಗುಡ್ಡದ ತುಳಸಿ, ಹೊಂಗೆ, ಆಡುಸೋಗೆ, ಈಶ್ವರ ಬಳ್ಳಿ, ಉತ್ತರಾಣಿ, ಅಮೃತ ಬಳ್ಳಿ, ಅಶ್ವಗಂಧಿ, ಅಶ್ವತ್ಥ ಮರ, ಔಡಲ, ಕಾಡು ಕರಿಬೇವು, ಕಾಡು ತುಂಬೆಗಿಡ, ಕಾಡು ಕಣಗಿಲೆ ಸೇರಿದಂತೆ 500ಕ್ಕೂ ವಿವಿಧ ಮಾಧರಿಯ ಆಯುರ್ವೇದ ಔಷದಿ ನೀಡುವ ಗಿಡಗಳು ಇಂದು ಹೆಮ್ಮರವಾಗಿ ನಿಂತಿವೆ.

Advertisement

ಆ ವನದಲ್ಲಿ ಹಾಗೇ ಸುಮ್ಮನೆ ತಿರುಗಾಡಿ ಬಂದರೆ ಮನಸ್ಸಿಗೆ ಸಂತಸ ನೀಡುವುದರೊಂದಿಗೆ ಆರೋಗ್ಯವೆನಿಸುತ್ತದೆ. ಶಿವಗಿರಿಯ ಸುತ್ತಲೂ ತಂತಿ ಬೇಲಿ ಹಾಕಿ ಭದ್ರಗೊಳಿಸಲಾಗಿದೆ. ಅಲ್ಲಿ ಜೈನ ಧರ್ಮದ ಅನೇಕ ಮುನಿಗಳ ಧ್ಯಾನದ ಅನೇಕ ಚಿತ್ರಗಳನ್ನು ರಚಿಸಲಾಗಿದೆ.

ಇಲ್ಲಿ ಗಿಡಗಳು ಮರವಾಗಿ ಬೆಳೆದು ನಿಂತಿದ್ದರಿಂದ ಅನೇಕ ಜಾತಿಯ ಪಕ್ಷಿಗಳು ತಮ್ಮ ಸಂತತಿ ಹೆಚ್ಚಿಸಿಕೊಳ್ಳಲು ಗೂಡು ಕಟ್ಟಿ ಮರಿ ಮಾಡಿಕೊಂಡು ಹೋಗುತ್ತವೆ. ಅಲ್ಲದೆ ನವಿಲು, ಮೊಲ, ವಿಷ ಜಂತುಗಳು ಸಹ ಇಲ್ಲಿ ಭಯವಿಲ್ಲದೆ ತಿರುಗಾಡುತ್ತವೆ.

ಪ್ರವಾಸಿಗರು ಹಾಗೂ ಸಾವಿರಾರು ಭಕ್ತರನ್ನು ತನ್ನತ್ತ ಕೈ ಬೀಸಿ ಕರೆಯಲು ಇಲ್ಲಿನ ಕೆರೆಯಲ್ಲಿ ಜಲಮಂದಿರ ನಿರ್ಮಿಸಲಾಗಿದೆ. ಬೆಟ್ಟದಲ್ಲಿ ಜೈನ ಧರ್ಮಿಯರ ಸಾವಿರಾರು ವರ್ಷಗಳ ಹಿಂದಿನವು ಎನ್ನಲಾಗುವ 750ಕ್ಕೂ ಹೆಚ್ಚು ಗುಂಪುಗಳಿವೆ. ಅಲ್ಲದೆ ಜೈನಧರ್ಮವನ್ನು ಭೋದಿಸುವಂತೆ ಮುನಿಗಳು ಭಕ್ತರಿಗೆ ವಿಷಯ ಬೋಧನೆ ಮಾಡುವಂತೆ ಕಾಣುವ ಸುಂದರವಾದ ಹಸಿರಿನ ತಪ್ಪಲಿನಲ್ಲಿ ನೂತನವಾಗಿ ಕೃತಕ ಮೂರ್ತಿಗಳನ್ನು ನಿರ್ಮಿಸಿದ್ದಾರೆ.

ಇವು ನೋಡುಗರನ್ನು ಆಕರ್ಷಿಸುತ್ತವೆ. ಇವೆಲ್ಲವನ್ನು ರಕ್ಷಿಸಲು ಕೃತಕವಾಗಿ ನಿರ್ಮಿಸಿದ ಭದ್ರಗಿರಿ ಮಾತೆಯ ಮೂರ್ತಿಯಂತೂ ಬಹಳ ಸುಂದರವಾಗಿ ನಿರ್ಮಿಸಿದ್ದು, ಈ ಬೆಟ್ಟಕ್ಕೆ ಮತ್ತಷ್ಟು ಮೆರಗು ನೀಡುತ್ತಿದೆ. ಸಂಜೆ ಹಾಗೂ ಬೆಳಿಗ್ಗೆ ನವಿಲುಗಳು, ಹಕ್ಕಿಗಳ ಚಿಲಿಪಿಲಿ ಹಾಗೂ ಅನೇಕ ಜಾತಿಯ ಪಕ್ಷಿಗಳು ತಂಡ ತಂಡವಾಗಿ ಬಂದು ನರ್ತಿಸಿ ಹೂವಿನ ಮಕರಂದ ಹಾಗೂ ಹಣ್ಣು ಹಂಪಲು ತಿಂದು ಹೋಗುವ ಸನ್ನಿವೇಶವಂತೂ ನೋಡುಗರಿಗೆ ಮುದ ನೀಡುತ್ತವೆ.

ಧರ್ಮ ಜಾಗೃತಿಯೊಂದಿಗೆ ಪರಿಸರ ಬೆಳೆಸಿ ರಕ್ಷಣೆ ಮಾಡುತ್ತಿರುವ ಜೈನ ಮುನಿ  ಆಚಾರ್ಯ ರತ್ನ ಶ್ರೀ ಕುಲರತ್ನ ಭೂಷಣರ  ಸೇವೆ ನಿಜಕ್ಕೂ ಶ್ಲಾಘನಿಯ ಎಂದು ಇಲ್ಲಿಗೆ ಆಗಮಿಸುತ್ತಿರುವ ಅನೇಕ ಜೈನ ಹಾಗೂ ಅನ್ಯ ಧರ್ಮಿಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದು ನನ್ನ ಕೆಲಸವಲ್ಲ ಎಲ್ಲವೂ ಭಕ್ತರ ಸೇವೆ. ಅವರ ಪ್ರಾಮಾಣಿಕ ಹಾಗೂ ಅರ್ಪಣಾ ಮನೋಭಾವದ ಸೇವೆಯೇ ಇಂದು ಬೃಹತ್ ಅರಣ್ಯ ಸಂಪತ್ತಿನಂತೆ ಈ ಬೆಟ್ಟ ಸುಂದರವಾಗಿ ಕಾಣಲು ಕಾರಣವಾಗಿದೆ. ಮುಂದಿನ ಭವದಲ್ಲಿ ಇದೊಂದು ಜೈನ ಬೃಹತ್ ಭಕ್ತಿಯ ಸೊಂಪು ಸೂಸುವ ಜೈನರ ಕಾಶಿಯ ತಾಣವಾಲಿದೆ. –  1008 ಆಚಾರ್ಯ ಶ್ರೀ ಕುಲರತ್ನಭೂಷಣ ಮಹಾರಾಜರು

-ಕಿರಣ ಶೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next