Advertisement

Sandalwood: ಶಿವಣ್ಣ ಚಿತ್ರಕ್ಕೆ ದಿನಕರ್‌ ನಿರ್ದೇಶನ

12:56 PM Jan 01, 2024 | Team Udayavani |

ನಟ ಶಿವರಾಜ್‌ಕುಮಾರ್‌ ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಚಿತ್ರತಂಡ ಈ ಸಿನಿಮಾವನ್ನು ಘೋಷಣೆ ಮಾಡಿದೆ. ಅಂದಹಾಗೆ, ಈ ಚಿತ್ರವನ್ನು ದಿನಕರ್‌ ತೂಗುದೀಪ ನಿರ್ದೇಶನ ಮಾಡಲಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಶಿವಣ್ಣ ಹಾಗೂ ದಿನಕರ್‌ ಜೊತೆಯಾಗಿ ಕೆಲಸ ಮಾಡುತ್ತಿದ್ದಾರೆ.

Advertisement

ಪುನೀತ್‌ ರಾಜ್‌ಕುಮಾರ್‌ ಅವರಿಗೆ ಸಿನಿಮಾ ಮಾಡಲು ದಿನಕರ್‌ ಸರ್ವತಯಾರಿ ಮಾಡಿಕೊಂಡಿದ್ದರು. ಆದರೆ, ಪುನೀತ್‌ ನಿಧನದ ನಂತರ ಆ ಚಿತ್ರ ನಿಂತು ಹೋಗಿತ್ತು. ಈ ನಡುವೆಯೇ ದಿನಕರ್‌ ನವನಟ ವಿರಾಟ್‌ಗೆ ಹೊಸ ಸಿನಿಮಾ ಮಾಡಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ.

ಇನ್ನು, ಶಿವಣ್ಣ-ದಿನಕರ್‌ ಕಾಂಬಿನೇಶನ್‌ ಚಿತ್ರವನ್ನು ಬಿಂದ್ಯಾ ಮೂವೀಸ್‌ನಡಿ ಆರ್‌. ಕೇಶವ್‌ ಹಾಗೂ ಬಿ.ಎಸ್‌.ಸುಧೀಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಪಕ್ಕಾ ಮಾಸ್‌ ಹಾಗೂ ಕಮರ್ಷಿಯಲ್‌ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರಿಯದರ್ಶಿನಿ ರಾಮರೆಡ್ಡಿ ಕಥೆ ಬರೆದಿದ್ದಾರೆ. ಪ್ರೀ ಪ್ರೊಡಕ್ಷನ್‌ ವರ್ಕ್‌ ಬಿರುಸಿನಿಂದ ಸಾಗುತ್ತಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದೆ. ಮಹಾ ಶಿವರಾತ್ರಿ ಹಬ್ಬದ ವೇಳೆಗೆ ಶೀರ್ಷಿಕೆ ಬಿಡುಗಡೆಯಾಗಲಿದೆ.

ಸದ್ಯ ಶಿವರಾಜ್‌ಕುಮಾರ್‌ ಅವರ “ಕರಟಕ ಧಮನಕ’, “45′, “ಭೈರತಿ ರಣಗಲ್‌’ ಸಿನಿಮಾಗಳು ನಡೆಯುತ್ತಿದ್ದು, ಆ ಸಾಲಿಗೆ ಈಗ ಹೊಸ ಚಿತ್ರ ಸೇರ್ಪಡೆಯಾಗಿದೆ.

ಕಳೆದ ವರ್ಷ ಶಿವರಾಜ್‌ಕುಮಾರ್‌ ಅವರು “ಘೋಸ್ಟ್‌’, “ಕಬ್ಜ’, ಹಾಗೂ ತಮಿಳಿನ “ಜೈಲರ್‌’ ಚಿತ್ರಗಳ ಮೂಲಕ ತೆರೆಗೆ ಬಂದಿದ್ದರು. ಶಿವರಾಜ್‌ಕುಮಾರ್‌ ಅವರ ವರ್ಷದ ಮೊದಲ ಕನ್ನಡ ಚಿತ್ರವಾಗಿ “ಕರಟಕ ದಮನಕ’ ಬಿಡುಗಡೆಯಾಗಲಿದೆ. ಯೋಗರಾಜ್‌ ಭಟ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಭುದೇವ ಕೂಡಾ ಪ್ರಮುಖ ಪಾತ್ರ ಮಾಡಿದ್ದು, ರಾಕ್‌ಲೈನ್‌ ವೆಂಕಟೇಶ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದರ ಹೊರತಾಗಿ ತಮಿಳು ನಟ ಧನುಶ್‌ ಅವರ “ಕ್ಯಾಪ್ಟನ್‌ ಮಿಲ್ಲರ್‌’ ಚಿತ್ರದಲ್ಲೂ ಶಿವಣ್ಣ ಪ್ರಮುಖ ಪಾತ್ರ ಮಾಡಿದ್ದು, ಆ ಚಿತ್ರ ಜನವರಿಯಲ್ಲಿ ತೆರೆಕಾಣಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next