Advertisement

ದ್ವಾರಕೀಶ್‌ ಚಿತ್ರದಲ್ಲಿ ಶಿವಣ್ಣ

10:54 AM May 30, 2018 | |

ಬಹುಶಃ ಕೆಸಿಸಿ ಕ್ರಿಕೆಟ್‌ ಟೂರ್ನಿ ನಂತರ ಯಾವೊಂದು ವೇದಿಕೆಯಲ್ಲೂ ಅಷ್ಟೊಂದು ಸಂಖ್ಯೆಯ ಸ್ಟಾರ್‌ಗಳು ಸೇರಿರಲಿಲ್ಲ. ಆದರೆ, “ಅಮ್ಮ ಐ ಲವ್‌ ಯೂ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಲವು ಜನಪ್ರಿಯ ನಟ, ನಟಿಯರು ಒಂದೆಡೆ ಸೇರಿದ್ದರು.

Advertisement

ಹಿರಿಯ ನಿರ್ದೇಶಕ ಭಾರ್ಗವ, ಶಿವರಾಜಕುಮಾರ್‌, ಪುನೀತ್‌ ರಾಜಕುಮಾರ್‌, ಉಪೇಂದ್ರ, ಧ್ರುವ ಸರ್ಜಾ, ವಿ. ಮನೋಹರ್‌, ಸಾಧು ಕೋಕಿಲ, ಚಿಕ್ಕಣ್ಣ, ವಸಿಷ್ಠ ಸಿಂಹ, ಶ್ರೀಧರ್‌ ಸಂಭ್ರಮ್‌, ಕವಿರಾಜ್‌, ಪ್ರಿಯಾಂಕಾ ಉಪೇಂದ್ರ, ಮೇಘನಾ ಗಾಂವ್ಕರ್‌ ಸೇರಿದಂತೆ ಸಾಕಷ್ಟು ಜನ ಬಂದಿದ್ದರು.

ಈ ಸಂದರ್ಭದಲ್ಲಿ ಆಡಿಯೋ ಕಂಪೆನಿಯನ್ನು ಉದ್ಘಾಟಿಸಿ ಮಾತನಾಡಿದ ಶಿವರಾಜಕುಮಾರ್‌, “ನಾವು ಮತ್ತು ದ್ವಾರಕೀಶ್‌ ಕುಟುಂಬದವರು ಚೆನ್ನೈನಿಂದ ಯಾವುದೇ ಬೇಧ-ಭಾವ ಇಲ್ಲದೆ ಒಟ್ಟಿಗೆ ಬೆಳೆದವರು. ದ್ವಾರಕೀಶ್‌ ಅವರು ಚಿತ್ರಕ್ಕೆ ಯಾವತ್ತೂ ದ್ರೋಹ ಮಾಡಿಲ್ಲ.

ಹಾಗೆಯೇ ಖರ್ಚು ಮಾಡುವುದಕ್ಕೆ ಕೇರ್‌ ಮಾಡಿಲ್ಲ. ಅವರ ಸಂಸ್ಥೆಯ ಚಿತ್ರವೊಂದರಲ್ಲಿ ನಟಿಸಬೇಕು ಎಂಬ ಪ್ರಯತ್ನ ಕೆಲವು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ, ಕಾರಣಾಂತರಗಳಿಂದ ಅದು ಮುಂದಕ್ಕೆ ಹೋಗುತ್ತಿದೆ. ಮುಂದಿನ ವರ್ಷ (2019) ಅವರ ನಿರ್ಮಾಣದ ಚಿತ್ರದಲ್ಲಿ ನಟಿಸುವುದು ಗ್ಯಾರಂಟಿ.

ನಾನೆಷ್ಟೇ ಬಿಝಿ ಇದ್ದರೂ, ಕಿವಿ ಹಿಂಡಿ ಮಾಡು ಅಂತ ಹೇಳುವ ಅಧಿಕಾರ ಅವರಿಗಿದೆ’ ಎಂದು ಶಿವರಾಜಕುಮಾರ್‌ ಹೇಳಿದರು. ಅಂದಹಾಗೆ, “ಅಮ್ಮ ಐ ಲವ್‌ ಯೂ’ ಚಿತ್ರದ ಹಾಡುಗಳನ್ನು ದ್ವಾರಕೀಶ್‌ ಮತ್ತು ಗುರುಕಿರಣ್‌ ಇಬ್ಬರೂ ತಮ್ಮ ಹೊಸ ಆಡಿಯೋ ಸಂಸ್ಥೆಯಾದ “ಡಿಜಿಕೆ’ ಆಡಿಯೋ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next