Advertisement

ಚಿಕಿತ್ಸೆ ಬಳಿಕ ಲಂಡನ್‌ನಿಂದ ಬೆಂಗಳೂರಿಗೆ ಬಂದ ಶಿವಣ್ಣ

08:32 AM Jul 26, 2019 | Lakshmi GovindaRaj |

ತೀವ್ರ ಭುಜದ ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಲಂಡನ್‌ಗೆ ತೆರಳಿದ್ದ ಶಿವರಾಜಕುಮಾರ್‌, ಮಂಗಳವಾರ ರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಶಿವರಾಜಕುಮಾರ್‌ ಬರುವ ಸುದ್ದಿ ಹೊರಬೀಳುತ್ತಿದ್ದಂತೆಯೇ, ಅವರ ಅಪಾರ ಅಭಿಮಾನಿಗಳು, ಗೆಳೆಯರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿಶೇಷ ಸ್ವಾಗತ ಕೋರಿದ್ದಾರೆ. ಭುಜದ ನೋವು ಇದ್ದ ಕಾರಣ, ಅವರು ಹೆಚ್ಚಿನ ಚಿಕಿತ್ಸೆ ಪಡೆಯಲು ಲಂಡನ್‌ಗೆ ಹೋಗಿದ್ದರು.

Advertisement

ಜು.10 ರಂದು ವೈದ್ಯ ಆಂಡ್ರೂ ವ್ಯಾಲೇಸ್‌ ಅವರು ಶಿವಣ್ಣ ಅವರಿಗೆ ಯಶಸ್ವಿಯಾಗಿ ಸರ್ಜರಿ ನಡೆಸಿದ್ದರು. ಸರ್ಜರಿ ನಂತರ ಯಾವುದೇ ಸಮಸ್ಯೆ ಇಲ್ಲ ಎಂದು ವೈದರು ಸ್ಪಷ್ಟಪಡಿಸಿದ್ದರು. ಸ್ವಲ್ಪ ದಿನಗಳ ಕಾಲ ಅಲ್ಲೇ ವಿಶ್ರಾಂತಿ ಪಡೆದ ಶಿವರಾಜಕುಮಾರ್‌, ಮಂಗಳವಾರ ರಾತ್ರಿ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಈ ಸಂದರ್ಭದಲ್ಲಿ ಶಿವರಾಜಕುಮಾರ್‌ ಅವರ ಆಪ್ತ ಗೆಳೆಯರಾದ ನಿರ್ದೇಶಕ ರಘುರಾಮ್‌, ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಸೇರಿದಂತೆ ಅಭಿಮಾನಿಗಳು, ಹಿತೈಷಿಗಳು ಹಾಜರಿದ್ದು, ಸ್ವಾಗತಿಸಿದ್ದಾರೆ.

ಇನ್ನು, ಲಂಡನ್‌ನಲ್ಲಿ ಯಶಸ್ವಿ ಚಿಕಿತ್ಸೆ ಮಾಡಿ, ಪ್ರೀತಿಯ ಕಾಳಜಿ ತೋರಿದ ವೈದ್ಯ ಆಂಡ್ರೂ ವ್ಯಾಲೇಸ್‌ ಅವರಿಗೆ ಶಿವರಾಜಕುಮಾರ್‌ ಅವರು ತಮ್ಮ ಫೇಸ್‌ಬುಕ್‌ ಹಾಗು ಟ್ವಿಟ್ಟರ್‌ನಲ್ಲಿ ಧನ್ಯವಾದ ತಿಳಿಸಿ, “ಆಂಡ್ರೂ ವ್ಯಾಲೇಸ್‌ ಅವರು ಸದಾ ನಗುತ್ತಾ ಮತ್ತು ಪಾಸಿಟಿವ್‌ ಆಗಿಯೇ ಇರುತ್ತಾರೆ’ ಎಂದು ಬರೆದುಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಶಿವರಾಜಕುಮಾರ್‌ ಅವರು ಸದ್ಯ ಕೆಲ ತಿಂಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಬೇಕಿದೆ.

ನಂತರದ ದಿನಗಳಲ್ಲಿ ಅವರು ಮಾತಿನ ಭಾಗದ ಚಿತ್ರೀಕರಣದಲ್ಲಿ ತೊಡಗಿದರೂ, ಡ್ಯಾನ್ಸ್‌ ಹಾಗು ಫೈಟ್‌ ದೃಶ್ಯಗಳಲ್ಲಿ ತಮ್ಮ ಭುಜದ ನೋವು ಕಡಿಮೆಯಾದ ಬಳಿಕ ಆ ದೃಶ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಶಿವರಾಜಕುಮಾರ್‌ ಈಗ ದ್ವಾರಕೀಶ್‌ ಬ್ಯಾನರ್‌ನಲ್ಲಿ “ಆಯುಷ್ಮಾನ್‌ಭವ’ ಹಾಗು ಪ್ರಮೋದ್‌ ಚಕ್ರವರ್ತಿ ನಿರ್ದೇಶನದ “ದ್ರೋಣ’ ನಿರ್ದೇಶನದ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ಈ ಎರಡು ಚಿತ್ರಗಳ ಚಿತ್ರೀಕರಣ ಮುಗಿಯುವ ಹಂತದಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next