Advertisement

Shivamogga; ಅಪಘಾತದಲ್ಲಿ ಮಡಿದವರ ಎಮ್ಮೆಹಟ್ಟಿಯ ಮನೆಗಳಿಗೆ ಕೇಂದ್ರ ಸಚಿವ ಎಚ್ ಡಿಕೆ ಭೇಟಿ

06:04 PM Jun 30, 2024 | Vishnudas Patil |

ಹೊಳೆಹೊನ್ನೂರು: ಹಾವೇರಿಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವ ಜತೆಗೆ ಉತ್ತಮ ಜೀವನ ನಡೆಸಲು ಸಹಕರಿಸುತ್ತೇನೆ ಎಂದು ಕೇಂದ್ರ ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

Advertisement

ಶಿವಮೊಗ್ಗ ಜಿಲ್ಲೆಯ ಎಮ್ಮೆಹಟ್ಟಿ ಗ್ರಾಮದಲ್ಲಿ ಮೃತರ ಮನೆಗಳಿಗೆ ಭಾನುವಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಅಪಘಾತದಲ್ಲಿ ಮೃತ ಪಟ್ಟ ಶರಣಪ್ಪ ನವರ ಮಗ ಅರುಣ್ ರವರಿಗೆ 3 ತಿಂಗಳ ಹಸುಗೂಸು ಇದ್ದು, ಪತ್ನಿಗೆ ಸರ್ಕಾರಿ ಕೆಲಸ. ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪರಶುರಾಮ್ ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ಸ್ವಂತ ಮನೆಯನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಆಶಾ ಕಾರ್ಯಕರ್ತೆ ವಿಶಾಲಾಕ್ಷಮ್ಮನ ಮನೆಯಲ್ಲಿ ಬದುಕುಳಿದಿರುವ ಅಂಗವಿಕಲೆ ಅರ್ಪಿತಾಳಿಗೆ ಹೆಚ್ಚಿನ ಕಾಳಜಿಯ ಅವಶ್ಯಕತೆ ಇದೆ. ಅವಳು ಬದುಕಿರುವ ವರಗೂ ಆಕೆಯನ್ನು ಸಾಕಿ ಸಲಹಲು, ಮತ್ತು ಜೀವನ ನಿರ್ವಹಣೆಗೆ ಬೇಕಾಗಬಹುದಾದ ಆರ್ಥಿಕ ಸಹಾಯವನ್ನು ಒದಗಿಸಲಾಗುವುದು ಎಂದರು.

ಮೃತ ಕುಟುಂಬಗಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ, ಇಂತದೊಂದು ದುರ್ಘಟನೆ ನಡೆಯಬಾರದಿತ್ತು. ಆದರೆ ವಿಧಿಯ ಮುಂದೆ ನಮ್ಮ ನಿಮ್ಮ ಆಟ ಏನೂ ನಡೆಯುವುದಿಲ್ಲ. ಆದ್ದರಿಂದ ನಾವುಗಳು ಎಷ್ಟು ಹುಷಾರಿರುತ್ತೇವೂ ಅಷ್ಟೇ ಒಳ್ಳೆಯದು ಎಂದರು.

ಈ ಅಪಘಾತದಿಂದ ಮೃತರ ಕುಟುಂಬ ಅಷ್ಟೇ ಅಲ್ಲ, ಇಡೀ ಗ್ರಾಮವೇ ಆತಂಕಕ್ಕೆ ಒಳಗಾಗಿರುವುದು ಕಂಡುಬರುತ್ತಿದೆ. ಆಕಸ್ಮಿಕ ಅವಘಡಗಳು ಸಹಜ. ಇವೆಲ್ಲವನ್ನೂ ಮೆಟ್ಟಿ ನಿಂತು ಬದುಕಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಇಂದಿನ ಯುವಕರು ಉತ್ತಮ ರಸ್ತೆಗಳಿವೆ ಎಂದು ವಾಹನಗಳನ್ನು ಜೋರಾಗಿ ಓಡಿಸುವುದನ್ನು ಬಿಡಬೇಕು. ನಾವು ತಲುಪುವ ಸ್ಥಳ ಅರ್ದ ಘಂಟೆ ತಡವಾಗಬಹುದು ಅಷ್ಟೆ. ಇದರಿಂದ ಯಾವುದೇ ನಷ್ಟ ಇಲ್ಲ. ಬದಲಾಗಿ ಅವಸರ ಮತ್ತು ಅತಿಯಾದ ವೇಗದಿಂದ ಜೀವಕ್ಕೆ ಏನಾದರೂ ಹೆಚ್ಚು ಕಡಿಮೆ ಆದರೆ ನಿಮ್ಮನ್ನು ನಂಬಿಕೊಂಡಿರುವ ಇಡೀ ಕುಟುಂಬವೇ ತೊಂದರೆಗೆ ಒಳಗಾಗುತ್ತದೆ. ಆದ್ದರಿಂದ ಯುವಕರು ಸ್ವಲ್ಪ ನಿಧಾನವಾಗಿ ವಾಹನಗಳನ್ನು ಚಲಾಯಿಸಬೇಕು ಎಂದು ಯುವಕರಿಗೆ ಕಿವಿ ಮಾತು ಹೇಳಿದರು.

Advertisement

ಹಾಡೋನಹಳ್ಳಿ ತೆಪ್ಪ ದುರಂತದ ಪ್ರಸ್ತಾಪ

ಕೆಲ ವರ್ಷಗಳ ಹಿಂದೆ ಹಾಡೋನಹಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನೆಯ ವೇಳೆ ತೆಪ್ಪ ಮುಳುಗಿ 12 ಜನ ಮೃತಪಟ್ಟ ಘಟನೆಯನ್ನು ಪ್ರಸ್ತಾಪಿದ ಸಚಿವರು, ಹೆಚ್ಚು ಕಡಿಮೆ ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆದಿರುವ ಅಪಘಾತ ಪ್ರಕರಣ ಎರಡೂ ತಾಳೆಯಾಗುವಂತಿವೆ. ಅಂದೂ ಕೂಡ ರಾತ್ರಿ ಹಾಡೋನಹಳ್ಳಿ ಗ್ರಾಮಕ್ಕೆ ಶಾಸಕಿ ಸಹೋದರಿ ಶಾರದಾ ಪೂರ್ಯಾ ನಾಯ್ಕ್ ಒಟ್ಟಿಗೆ ಭೇಟಿ ನೀಡಿ ಆ ಕುಟುಂಬಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿತ್ತು. ಪ್ರಸ್ತುತ ಘಟನೆ ತಿಳಿದೊಡನೆ ಶಾಸಕರೊಂದಿಗೆ ಮಾತನಾಡಿದಾಗ ಸಮಾಧಾನವಾಗದೆ ಇದ್ದುದರಿಂದ ಇಂದು ಎಮ್ಮೆಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ನಿಮ್ಮೆಲ್ಲರೊಂದಿಗೆ ಚರ್ಚಿಸಲು ಅವಕಾಶ ಸಿಕ್ಕಿತು. ನಾಳೆ ಪಾರ್ಲಿಮೆಂಟ್ ಸಭೆ ಇರುವುದರಿಂದ ನಾನು ತುರ್ತಾಗಿ ತೆಳರಳಲಿದ್ದೇನೆ. ಮುಂದೆ ಇನ್ನೊಂದು ದಿನ ಬಿಡುವು ಮಾಡಿಕೊಂಡು ಮತ್ತೆ ಇಲ್ಲಿಗ ಬರುತ್ತೇನೆ. ಆಗ ನಿಮ್ಮಗಳ ಸಮಸ್ಯೆಯನ್ನು ಆಲಿಸಿ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next