Advertisement

ಮತ ಪ್ರಮಾಣ ಹೆಚ್ಚಳ; ಗೆಲುವಿಗೆ ಪೈಪೋಟಿ

01:31 PM Apr 28, 2019 | Naveen |

ಸಾಗರ: ಕೇವಲ ಆರು ತಿಂಗಳ ಹಿಂದಿನ ಉಪ ಚುನಾವಣೆಯ ಶೇ. 68ರ ಮತದಾನಕ್ಕಿಂತ ಈ ಬಾರಿ ತಾಲೂಕಿನಲ್ಲಿ ಶೇ. 10ರಷ್ಟು ಹೆಚ್ಚಿಗೆ ನಡೆದಿರುವ ಮತದಾನ ಪ್ರಮಾಣ ತಮಗೆ ಅನುಕೂಲ ಮಾಡಿಕೊಡುತ್ತದೆ ಎಂಬ ವಾದವನ್ನು ಬಿಜೆಪಿ ಹಾಗೂ ಮೈತ್ರಿಕೂಟಗಳು ಮಾಡುತ್ತಿರುವುದರಿಂದ ಏ. 23ರಂದು ನಡೆದ ಮತದಾನದ ಅಂತಿಮ ತೀರ್ಪು ಕುತೂಹಲ ಮೂಡಿಸಿದೆ. ಮೈತ್ರಿಕೂಟ ಮತ ಚಲಾವಣೆಯು ಜಾತಿ ಆಧಾರಿತವಾಗಿ ಆಗಿದ್ದರೆ ತಮಗೆ ಲಾಭವಿದೆ ಎಂದು ಪ್ರತಿಪಾದಿಸಿದರೆ ಬಿಜೆಪಿ ಜಾತಿ ಸಮೀಕರಣದ ಜೊತೆಗೆ ಎಲ್ಲ ಸಮುದಾಯದ ಯುವ ಮತದಾರರು ತಮ್ಮ ಕೈ ಹಿಡಿದಿದ್ದಾರೆ ಎಂದು ನಂಬಿದ್ದಾರೆ.

Advertisement

ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಾಗರ ತಾಲೂಕಿನಲ್ಲಿ 1,33,692 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಮಧು ಬಂಗಾರಪ್ಪ 68,993 ಹಾಗೂ ರಾಘವೇಂದ್ರ 60,256 ಮತಗಳನ್ನು ಪಡೆದಿದ್ದರು. ಈ ಬಾರಿ ತಾಲೂಕಿನ 1,99,502 ಮತದಾರರಲ್ಲಿ 1,55,760 ಜನ ಇವಿಎಂ ಬಟನ್‌ ಒತ್ತಿದ್ದಾರೆ. ಕಳೆದ ಉಪ ಚುನಾವಣೆಗಿಂತ 22,068 ಮತಗಳು ಹೆಚ್ಚು ಮತಪೆಟ್ಟಿಗೆಗೆ ಬಿದ್ದಿವೆ. ಈ ಮತಗಳೇ ನಿರ್ಣಾಯಕವಾಗುವ ಎಲ್ಲ ಸಾಧ್ಯತೆಗಳಿವೆ.

ಅರ್ಥವಾಗದ ಹಾಲಪ್ಪ ಕಸಿವಿಸಿ: ಚುನಾವಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಬಿಜೆಪಿ ಮತದಾರರ ಪಟ್ಟಿಯ ಪ್ರತಿ ಪುಟದ ಮತದಾರರನ್ನು ಗಮನಿಸಲು ಪೇಜ್‌ ಪ್ರಮುಖ್‌ ಎಂಬ ಹುದ್ದೆ ಸೃಷ್ಟಿಸಿ ನಿಷ್ಠಾವಂತ ಕಾರ್ಯಕರ್ತನಿಗೆ ಅದರ ಮೇಲ್ವಿಚಾರಣೆ ಜವಾಬ್ದಾರಿ ನೀಡಿದೆ. ಮತದಾನದ ನಂತರ ಅಂದಾಜಿನ ಅಳತೆಗೋಲಲ್ಲಿ ತಮ್ಮ ಪಕ್ಷಕ್ಕೆ ಬಿದ್ದಿರುವ ಮತಗಳನ್ನು ಈ ಪಕ್ಷ ಲೆಕ್ಕ ಹಾಕುತ್ತದೆ. ಬಿಜೆಪಿ ತಾಲೂಕು ಅಧ್ಯಕ್ಷ ಪ್ರಸನ್ನ ಕೆರೆಕೈ ಈ ಲೆಕ್ಕಾಚಾರಗಳ ಆಧಾರದ ಮೇಲೆ, ತಮ್ಮ ಪಕ್ಷ ಆರು ಸಾವಿರ ಮತಗಳ ಮುನ್ನಡೆಯನ್ನು ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಪಡೆಯುತ್ತದೆ ಎಂದು ಹೇಳುತ್ತಾರೆ.

ಕ್ಷೇತ್ರದ ಶಾಸಕ ಎಚ್. ಹಾಲಪ್ಪ ಅವರ ದೇಹಭಾಷೆ ವ್ಯತಿರಿಕ್ತ ಸಾಧ್ಯತೆಗಳನ್ನು ಹೇಳುವಂತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಈಡಿಗ ಮಠಗಳಿಂದ ಜೆಡಿಎಸ್‌ ಅಭ್ಯರ್ಥಿಗೆ ಮತ ಹಾಕಬೇಕು ಎಂಬ ಹುಕುಂ ಬಂದಿದೆ ಎಂಬ ವದಂತಿ ಅವರನ್ನು ವಿಚಲಿತಗೊಳಿಸಿತು. ಅವರು ಹೊಸನಗರದ ಮಾಜಿ ಶಾಸಕ ಸ್ವಾಮಿರಾವ್‌ ಜೊತೆಗೂಡಿ ನಿಟ್ಟೂರಿನತ್ತ ಧಾವಿಸಿ ವಿಚಾರಣೆಗೆ ಮುಂದಾದ ಕ್ರಮದಲ್ಲಿ ಪಕ್ಷಕ್ಕೆ ಆಗುವ ಧಕ್ಕೆಯನ್ನು ತಡೆಯುವ ಧಾವಂತ ಕಂಡುಬಂದಿತು. ಆ ಸಂದರ್ಭದಲ್ಲಿ ಕಂಡುಬಂದ ಅವರ ಅಸಹನೆ ಮತ್ತು ಬಿ.ಎಸ್‌. ಯಡಿಯೂರಪ್ಪ ಸಾಗರದಲ್ಲಿ ನಡೆಸಿದ ಬಹಿರಂಗ ಸಭೆಯಲ್ಲಿ ಅವರು ಈಡಿಗ ಮತದಾರರನ್ನೇ ಉಲ್ಲೇಖೀಸಿ ಮಾತನಾಡಿದ್ದನ್ನು ವಿಶ್ಲೇಷಕರು ಉದಾಹರಿಸುತ್ತಾರೆ. ಎಸ್‌. ಬಂಗಾರಪ್ಪ ಅವರ ಹಿರಿಯ ಪುತ್ರ ಸೊರಬದ ಶಾಸಕ ಕುಮಾರ್‌ ಬಂಗಾರಪ್ಪ ಅವರನ್ನು ಸಾಗರ ಕ್ಷೇತ್ರದ ಆಯಕಟ್ಟಿನ ಈಡಿಗ ಬೂತ್‌ಗಳಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲು ಹಾಲಪ್ಪ ಉತ್ಸುಕರಾಗಲಿಲ್ಲ ಎಂಬ ಆಕ್ಷೇಪ ಬಿಜೆಪಿ ವಲಯದಲ್ಲಿಯೇ ಇದೆ. ಉಪ ಚುನಾವಣೆಯ ಎಂಟು ಸಾವಿರ ಮತಗಳ ಹಿನ್ನಡೆ ಕಳೆದು ಒಂದೆರಡು ಸಾವಿರದ ಮುನ್ನಡೆಯಾದರೂ ಬೇಕು ಎಂಬ ಹಿನ್ನೆಲೆಯಲ್ಲಿ ಹಾಲಪ್ಪ ಪ್ರಚಾರದ ಆರಂಭಿಕ ದಿನಗಳಲ್ಲಿ ಉತ್ಸುಕವಾಗಿ ಕೆಲಸ ಮಾಡಿದರು. ಆ ಉತ್ಸಾಹ ನಂತರದಲ್ಲಿ ಕಡಿಮೆಯಾಯಿತು ಎನ್ನುವವರಿದ್ದಾರೆ.

ಕೈ ಕೊನೇ ಕ್ಷಣದ ಮ್ಯಾಜಿಕ್‌!: ಬಿಎಸ್‌ವೈ ಸಭೆಗೆ ಸೇರಿಸಿದ ಜನರ ಪ್ರಮಾಣದ ಕುರಿತು ಕೂಡ ಹಾಲಪ್ಪ ಅಸಮಾಧಾನ ಹೊಂದಿದ್ದರು. ಬಹಿರಂಗ ಸಭೆಗೆ ಸೇರುವ ಜನರ ಪ್ರಮಾಣ ಮತ್ತು ಆ ವಿವರ ಕ್ಷೇತ್ರದಲ್ಲಿ ಸುದ್ದಿಯಾಗಿ ಹರಡಿದಾಗ ಅದು ಮತಗಳಾಗಿ ಬದಲಾಗುತ್ತವೆ ಎಂಬ ನಂಬಿಕೆ ರಾಜಕಾರಣಿಗಳಲ್ಲಿದೆ. ಕೇವಲ 24 ಗಂಟೆಗಳ ತಯಾರಿಯಲ್ಲಿ ಸಾಗರದಲ್ಲಿ ಕಾಂಗ್ರೆಸ್‌ ಆಯೋಜಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ರೇವಣ್ಣ ಇನ್ನಿತರರ ಬಹಿರಂಗ ಸಭೆಗೆ ಸೇರಿದ್ದ ಜನಸ್ತೋಮ ಬಿಜೆಪಿಯ ಬಿ.ವೈ. ರಾಘವೇಂದ್ರ ಅವರ ಎದುರಿನ ಮಧು ಬಂಗಾರಪ್ಪ ಸ್ಪರ್ಧೆ ತುರುಸಿನದ್ದು ಎಂಬ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಯಿತು!

Advertisement

ಚುನಾವಣೆಗೆ ಶಿಸ್ತಿನ ತಯಾರಿ ನಡೆಸುವ ಬಿಜೆಪಿ ಜನಪರವಾಗಿಲ್ಲದಿರುವುದರಿಂದಲೇ ಅವರಿಗೆ ಚುನಾವಣೆಗಳಲ್ಲಿ ಹಿನ್ನಡೆಯಾಗುತ್ತದೆ. ಅವರ ತರಹ ಮಾಡಿದರೆ ನಮಗೆ ಸೋಲೇ ಆಗುವುದಿಲ್ಲ ಎಂದು ಟೀಕಿಸುವ ತಾಪಂ ಅಧ್ಯಕ್ಷ ಬಿ.ಎಚ್.ಮಲ್ಲಿಕಾರ್ಜುನ ಹಕ್ರೆ, ಜಾತಿ ಆಧಾರಿತವಾಗಿಯೇ ಈ ಬಾರಿ ಮತಗಳು ಬಿದ್ದಿವೆ. ಈ ನಿಟ್ಟಿನಲ್ಲಿ ಒಕ್ಕಲಿಗ ಮತಗಳು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿದರೆ ಮಧು ಗೆಲುವು ಸುಲಭವಾಗುತ್ತದೆ ಎಂದು ಪ್ರತಿಪಾದಿಸುತ್ತಾರೆ. ಮತದಾನದ ದಿನ, ಮರುದಿನಗಳಲ್ಲಿ ರಾತ್ರಿ ಬೆಂಗಳೂರು ಹಾಗೂ ಇತರೆಡೆಗೆ ತೆರಳಲು ಸಾಗರದ ಬಸ್‌ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಕಂಡುಕೇಳರಿಯದ ಪ್ರಮಾಣದಲ್ಲಿ ಜನಸಂದಣಿ ಇತ್ತು. 22 ಸಾವಿರದ ಮತ ಏರಿಕೆಯಲ್ಲಿ ಈ ಮತದಾರರ ಪಾತ್ರ ಹೆಚ್ಚು. ಯುವ ಸಮೂಹವನ್ನು ನರೇಂದ್ರ ಮೋದಿ ಪ್ರಭಾವಿಸಿದಷ್ಟು ಸ್ಥಳೀಯ ಅಭ್ಯರ್ಥಿಗಳು ಕಾಡಿಲ್ಲ. ಇದರಿಂದ ಸಾಗರ ತಾಲೂಕಿನಲ್ಲಿಯೂ ಬಿಜೆಪಿ ತೆಳುವಾದ ಮುನ್ನಡೆಯನ್ನು ಪಡೆಯಲಿದೆ ಎಂಬ ತರ್ಕವಿದೆ. ಇದೇ ವೇಳೆ ವಿಧಾನಸಭೆಗೆ ಕುಮಾರ್‌ ಬಂಗಾರಪ್ಪ, ಲೋಕಸಭೆಗೆ ಮಧು ಎಂಬ ಘೋಷಣೆ ತಾಳಗುಪ್ಪ ಹೋಬಳಿಯ ಬಹುಸಂಖ್ಯಾತ ಈಡಿಗ ಮತದಾರರನ್ನು ಪ್ರಭಾವಿಸಿರುವ ವಾದವೂ ಇದೆ. ಫಲಿತಾಂಶದ ಬಗ್ಗೆ ಅಸ್ಪಷ್ಟತೆ ಇರುವ ಕಾರಣದಿಂದಾಗಿಯೇ ಖಾಸಗಿ ಬೆಟ್ಟಿಂಗ್‌ ದೊಡ್ಡ ಪ್ರಮಾಣದಲ್ಲಿ ನಡೆದಿದೆ. ಈ ಕಾವು ಮುಂದಿನ ಮೂರು ವಾರ, ಮೇ 23ರವರೆಗೆ ಮುಂದುವರಿಯುವುದು ಖಚಿತ.

ಚುನಾವಣೆಗಳನ್ನು ಮಾಡುವುದರಲ್ಲಿ ನಾವು ಅಪ್‌ಡೇಟ್ ಆಗಬೇಕಾಗಿರುವುದು ಸತ್ಯ. ಈ ಬಾರಿ ರಚನೆಯಾಗಿರುವ ಪ್ರಚಾರ ಸಮಿತಿ ಚುನಾವಣಾ ಸಮಿತಿಯಲ್ಲ, ಹಾಗಾಗಿ ಇದು ನಿರಂತರವಾಗಿರುತ್ತದೆ. ಇದರ ಉಸ್ತುವಾರಿಯಾಗಿರುವ ಎಚ್.ಕೆ. ಪಾಟೀಲ್ ಸದ್ಯದಲ್ಲಿಯೇ ರಾಜ್ಯ ಮಟ್ಟದ ಮೀಟಿಂಗ್‌ ಕರೆಯಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಶಿಸ್ತುಭರಿತ ವ್ಯವಸ್ಥೆಯನ್ನು ನಾವು ರೂಪಿಸಲಿದ್ದೇವೆ.
ಮಲ್ಲಿಕಾರ್ಜುನ ಹಕ್ರೆ
ಕಾಂಗ್ರೆಸ್‌ ಪ್ರಚಾರ ಸಮಿತಿ ರಾಜ್ಯ ಕಾರ್ಯದರ್ಶಿ

192- ಎ ಕಾಯ್ದೆ ತಿದ್ದುಪಡಿಯಿಂದ ಜೈಲಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿರುವಾಗ ನಾವು ಮಾತ್ರ ರಕ್ಷಣೆಗೆ ಬರುತ್ತೇವೆ ಎಂಬ ಭಾವ ಜನರಲ್ಲಿರುವುದು ಮೈತ್ರಿ ಅಭ್ಯರ್ಥಿಗೆ ಮತವಾಗಿ ಪರಿವರ್ತನೆಯಾಗಲಿದೆ. ಮೋದಿ ಅಲೆ ಎಂಬುದು ಬಿಜೆಪಿ ಹಬ್ಬುತ್ತಿರುವ ವದಂತಿಯಷ್ಟೇ. 2014ರ ಮೋದಿ ಆಕರ್ಷಣೆಯ ಶೇ. 10ರಷ್ಟೂ ಈ ಬಾರಿ ಅಲೆ ಇಲ್ಲ. ವ್ಯವಸ್ಥಿತ ಪ್ರಚಾರದ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಕಳೆದ ಬಾರಿಯ 8 ಸಾವಿರ ಮುನ್ನಡೆಗೆ ಹೆಚ್ಚುವರಿಯಾಗಿ ಇನ್ನೂ ಐದಾರು ಸಾವಿರ ಮತ ಸೇರ್ಪಡೆಯಾಗುತ್ತದೆ.
ಬಿ.ಆರ್‌. ಜಯಂತ್‌,
ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ

ಮಾ.ವೆಂ.ಸ. ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next