Advertisement

ಮರಣ ಮೃದಂಗದ ಮಧ್ಯೆಯೂ ಮತದಾನ!

12:02 PM Apr 24, 2019 | Naveen |

ಸಾಗರ: ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮಂಡವಳ್ಳಿ, ನಂದೋಡಿ ಹಾಗೂ ಯಡ್ಡಳ್ಳಿ ಮತದಾನ ಕೇಂದ್ರಗಳ ಮತದಾರರು ಮಾರಣಾಂತಿಕ ಮಂಗನ ಕಾಯಿಲೆಯಿಂದ ತತ್ತರಿಸಿ ಹೋಗಿದ್ದರೂ ಪ್ರಜಾಪ್ರಭುತ್ವದ ತಮ್ಮ ಕರ್ತವ್ಯವನ್ನು ಪಾಲಿಸುವಲ್ಲಿ ಹಿಂದೆ ಬೀಳದ ಅಪರೂಪದ ದೃಶ್ಯಗಳು ಮಂಗಳವಾರ ಶಿವಮೊಗ್ಗ ಲೋಕಸಭಾ ಚುನಾವಣಾ ಕ್ಷೇತ್ರದ ಮತದಾನದ ಸಂದರ್ಭದಲ್ಲಿ ಕಂಡುಬಂದವು.

Advertisement

ಸಾವು ಮೆಟ್ಟಿ ಬಂದವರು!
18 ದಿನಗಳ ಕಾಲ ಮಣಿಪಾಲದ ಐಸಿಯುನಲ್ಲಿದ್ದು ಬಂದ ನೆಲ್ಲಿಮಕ್ಕಿಯ ದಿವಾಕರ, 12 ದಿನ ಜೀವನ್ಮರಣ ಸನ್ನಿವೇಶ ಅನುಭವಿಸಿದ ಸಂಪದ ರಾಮಚಂದ್ರ ಶಾಸ್ತ್ರಿ, ಇನ್ನು 10 ನಿಮಿಷ ಉಳಿಸಿಕೊಳ್ಳುವುದು ಕಷ್ಟವಿದೆ ಎಂಬ ವೈದ್ಯರ ಉದ್ಘಾರಕ್ಕೆ ಕಾರಣವಾಗಿದ್ದ ಮರಾಠಕೇರಿಯ ಸಂತೋಷ್‌, ಪತಿ ಪತ್ನಿಯರಿಬ್ಬರೂ ಮಂಗನ ಕಾಯಿಲೆಗೆ ಸರದಿಯಂತೆ ಮಣಿಪಾಲಕ್ಕೆ ಹೋಗಿ 12 ದಿನವಿದ್ದ ಬಣ್ಣುಮನೆಯ ಬಿ.ಎಸ್‌. ರಾಘವೇಂದ್ರ ಹಾಗೂ ರತ್ನಾವತಿ ಮೊದಲಾದ ಹಲವರು ಮತದಾನ ಕೇಂದ್ರದ ಬಳಿ ಗ್ರಾಮದ ಉಳಿದವರಿಗೆ ಕಾಣಿಸಿಕೊಂಡರು. ಬಹುತೇಕ ಜನ ಸಾಗರ ಸೇರಿದಂತೆ ಬೇರೆ ಬೇರೆ ಕಡೆ ಬಂಧುಗಳ ಅಥವಾ ಬಾಡಿಗೆ ಮನೆಯಲ್ಲಿ ತಾತ್ಕಾಲಿಕ ನಿವಾಸದಲ್ಲಿದ್ದರು ಮತದಾನಕ್ಕಾಗಿಯೇ ಅರಳಗೋಡಿನತ್ತ ಮಂಗಳವಾರ ಮುಖ ಮಾಡಿದ್ದರು.

684 ಮತಗಳಿರುವ ಮಂಡವಳ್ಳಿ ಬೂತ್‌ಗೆ ಮರಬಿಡಿ, ನೆಲ್ಲಿಮಕ್ಕಿ, ಜೇಗಳ, ವಾಟೆಮಕ್ಕಿ, ಸಂಪ, ಇಟಗಿ, ಐತುಮನೆ, ಆಲಗೋಡು, ತುಮ್ರಿ, ಕಸಗುಪ್ಪೆ, ಮಂಡವಳ್ಳಿ ಸೇರಿದ್ದರೆ 380 ಮತಗಳ ನಂದೋಡಿಯಲ್ಲಿ ಬಣ್ಣುಮನೆ, ಕಂಚಿಕೈ, ಯಲಗೋಡು, ಮರಾಠಿಕೇರಿ, ಕಣಗಲಘಟ್ಟ ಹಾಗೂ 280 ಮತಗಳಿರುವ ಯಡಳ್ಳಿ ಮತದಾನ ಕೇಂದ್ರದ ವ್ಯಾಪ್ತಿಗೆ ಬಿಳಿಗಲ್ಲೂರು, ಕಾಳಮಂಜಿ, ಮಳಲಿ, ಮರಳಕೊರೆ ಮೊದಲಾದ ಊರುಗಳು ಸೇರುತ್ತವೆ. ಮೂರು ಮತದಾನ ಕೇಂದ್ರಗಳ ವ್ಯಾಪ್ತಿಯಲ್ಲಿ ಮಧ್ನಾಹ್ನದ ವೇಳೆಗೇ ಶೇ. 50ರಷ್ಟು ಮತದಾನ ನಡೆದಿತ್ತು.

ಇತ್ತ ಮತದಾನ, ಅತ್ತ ಮಂಗನ ಕಾಯಿಲೆ
ಮಂಗನ ಕಾಯಿಲೆ ಸಂಬಂಧ ಈ ಭಾಗದ ಸುಮಾರು 400 ಜನರಲ್ಲಿ ಪಾಸಿಟಿವ್‌ ಬಂದಿದೆ. ಬಹುತೇಕ ಜನ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ವಾರಗಟ್ಟಲೆ ಇದ್ದು ಚಿಕಿತ್ಸೆ ಪಡೆದು ಬಂದಿದ್ದಾರೆ. 22 ಜನ ಜೀವವನ್ನೇ ತೆತ್ತಿದ್ದಾರೆ. ಜ್ವರ ಮರುಕಳಿಸಿದ ಹಿನ್ನೆಲೆಯಲ್ಲಿ ಸಂಪದ ಲಕ್ಷ್ಮೀನಾರಾಯಣ್‌ ಅವರನ್ನು ಮತ್ತೆ ಸೋಮವಾರ ಕೆಎಂಸಿಗೆ ಕರೆದೊಯ್ಯಲಾಗಿದೆ. ಸಾವುಗಳ ಮಧ್ಯೆಯೂ ಜನರ ಮತದಾನದ ಹಕ್ಕು ಪ್ರಜ್ಞೆ ಜೀವಂತವಾಗಿದೆ. ಮತ್ತೆ ಮಂಗನ ಕಾಯಿಲೆ ಬರುವುದೆಂಬ ಭಯವಿರುವ ಕಾರಣ ಮಂಡವಳ್ಳಿ ಬೂತ್‌ ವ್ಯಾಪ್ತಿಯ 25 ಕುಟುಂಬಗಳಲ್ಲಿ 15 ಕುಟುಂಬದವರು ಮತದಾನಕ್ಕಾಗಿಯೇ ಮರಳಿ ಬಂದು ಮತ ಹಾಕಿ ಮತ್ತೆ ತಾವಿದ್ದಲ್ಲಿಗೆ ಮರಳಿದ್ದಾರೆ.

ಅಳಗೋಡಿನ ಪರಮೇಶ್ವರ್‌ ಮನೆಯಲ್ಲಿ ಅವರ ತಮ್ಮ ಮಹಾಬಲಗಿರಿ ಅವರ ಪತ್ನಿ ಪೂರ್ಣಿಮಾ (39) ಸಾವನ್ನಪ್ಪಿದ್ದಾರೆ. ಮಹಾಬಲಗಿರಿಯವರಿಗೂ ಆರೋಗ್ಯ ಸಮಸ್ಯೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಒಂದೂವರೆ ಎಕರೆ ತೋಟದಲ್ಲಿ ಕೊನೆ ಕೊಯ್ಲು ನಡೆಸಲಾಗಿಲ್ಲ. ಅವರ ಕುಟುಂಬದ ಏಳು ಎಕರೆ ತೋಟದಲ್ಲಿ ದೊಡ್ಡ ಪ್ರಮಾಣದಲ್ಲಿ ಮೆಣಸಿನ ಬೆಳೆಯಿದ್ದು ಕೊಯ್ಲು ಮಾಡಿಲ್ಲ. ಸಾಗರದಲ್ಲಿ ತಾತ್ಕಾಲಿಕವಾಗಿ ವಸತಿ ಮಾಡಿರುವ ಈ ಮನೆಯ ನಾಲ್ವರು ಮತದಾನಕ್ಕಾಗಿಯೇ ಊರಿಗೆ ಬಂದಿದ್ದಾರೆ. ಶಾಸ್ತ್ರಕ್ಕೆ ಮನೆ ಬಾಗಿಲು ತೆರೆದು ಮತ್ತೆ ಸಾಗರಕ್ಕೆ ಮರಳಿದ್ದಾರೆ. ಊರಿನ ಎರಡು ಮೂರು ಮನೆಗಳಲ್ಲೂ ಇದೇ ಸ್ಥಿತಿ ಇದೆ. ಈ ಭಾಗದಲ್ಲಿ ಹಳೆ ಮಳೆ ಕಡಿಮೆ. ಜೂನ್‌ 10ರಿಂದ ಮಳೆಗಾಲ ಆರಂಭವಾದ ನಂತರ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಆಶೆಯಿದೆ. ಆದರೆ ನಮ್ಮ ಸಂಕಷ್ಟಗಳೇನೇ ಇರಲಿ. ಮತದಾನ ನಮ್ಮ ಹಕ್ಕು. ಅದನ್ನು ತಪ್ಪಿಸುವುದಕ್ಕೆ ಯಾವ ಕಾರಣವೂ ಸಮರ್ಥವಲ್ಲ ಎಂಬ ಕಾರಣಕ್ಕೆ ಮತದಾನ ಮಾಡಲು ಬಂದಿದ್ದೇವೆ ಎಂದು ಶುಂಠಿ ಪರಮೇಶ್ವರ ಅಳಗೋಡು ಸ್ಪಷ್ಟಪಡಿಸಿದರು.

Advertisement

ಈಗಲೂ ಮಂಗ ಸಾಯುತ್ತಿದೆ!
ಮಂಗನ ಕಾಯಿಲೆ ಈ ಭಾಗದಿಂದ ಒಂದಿನಿತೂ ಕಣ್ಮರೆಯಾಗಿಲ್ಲ ಎಂದು ಪ್ರತಿಪಾದಿಸುವ ಈ ಭಾಗದ ರಾಜೇಶ ಯಲಕೋಡು, ಇದೀಗ ಕೆರಿಯ ನಂದೋಡು ಎಂಬಾತ ತೀವ್ರ ತಲೆನೋವು, ಜ್ವರದಿಂದ ಅರಳಗೋಡು ಪಿಎಚ್ಸಿಗೆ ಸೇರ್ಪಡೆಯಾಗಿದ್ದಾರೆ. ನಂದೋಡಿಯ ಯಶೋಧಮ್ಮ ಅವರ ಮನೆಯ ಹಿತ್ತಲಿನಲ್ಲಿ ಬೆಳಗ್ಗೆ ಸತ್ತ ಮಂಗ ಪತ್ತೆಯಾಗಿದೆ. ಈ ಭಾಗದಲ್ಲಿ ಸುಮಾರು 1500 ಮಂಗಗಳು ಸತ್ತಿದ್ದರೆ ಅರಣ್ಯ ಇಲಾಖೆಯವರು 400ಕ್ಕಷ್ಟೇ ಅಗ್ನಿಸ್ಪರ್ಶ ಮಾಡಿದ್ದಾರೆ. ಕಾಯಿಲೆ ಗುಪ್ತಗಾಮಿನಿಯಾಗಿ ಈ ಪ್ರದೇಶದಲ್ಲಿಯೇ ಇದೆ. ನಂದೋಡಿ ಬೂತ್‌ ವ್ಯಾಪ್ತಿಯಲ್ಲಿ ಕಾಯಿಲೆ ಬಾಧಿಸಿದ 55 ಜನರಲ್ಲಿ 20 ಜನ ಮಾತ್ರವೇ ಮತದಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿದೆ. ಐದು ಮನೆಯವರು ಬಹಳ ದಿನಗಳಿಗೆ ವಲಸೆ ಹೋದವರು ಮರಳಿಲ್ಲ ಎಂಬುದರತ್ತ ಗಮನ ಸೆಳೆಯುತ್ತಾರೆ.

ಮರಬಿಡಿಯ ಎಂ.ಜಿ. ಅಶೋಕ್‌, ಬಣ್ಣುಮನೆಯ ಬಿ.ಎಸ್‌. ರಾಘವೇಂದ್ರ ಮೊದಲಾದವರು, ಮಂಗನ ಕಾಯಿಲೆಯ ವೈರಾಣು ರೂಪಾಂತರಗೊಂಡಿರುವ ಬಗ್ಗೆಯೂ ಸಂಶೋಧನೆಗಳಾಗಬೇಕಿದೆ. ಎರಡೆರಡು ಬಾರಿ ತೆಗೆದುಕೊಂಡರೂ ಪ್ರಭಾವಶಾಲಿ ಅಲ್ಲದ ಲಸಿಕೆ ಮೇಲೆ ನಾವು ನಂಬಿಕೆ ಕಳೆದುಕೊಳ್ಳುತ್ತಿದ್ದೇವೆ. ಮಂಗನಿಗೆ ಕ್ಯಾಸನೂರು ಅರಣ್ಯ ಕಾಯಿಲೆ ಬರದಂತೆ ನೋಡಿಕೊಳ್ಳುವ ನಿಟ್ಟಿನಲ್ಲೂ ಪ್ರಯೋಗಗಳಾಗಬೇಕು. ಆಗಲೇ ಮನಷ್ಯ ಸುರಕ್ಷಿತನಾಗುತ್ತಾನೆ ಎಂದು ಪ್ರತಿಪಾದಿಸಿದರು.

ಮತದಾನದ ದಿನವಾದ ಮಂಗಳವಾರ ಮಧ್ಯಾಹ್ನ ಅರಳಗೋಡು ಭಾಗದಲ್ಲಿ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮಳೆ ಸುರಿಯಿತು.

ಪ್ರಧಾನಿಗೆ ಮೊರೆ!
ನಮ್ಮಲ್ಲಿನ್ನೂ ಸಹನೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿದೆ. ಈ ಭಾಗದಲ್ಲಿ ಯಾವುದೇ ರಾಜಕೀಯ ಪಕ್ಷದ ನಾಯಕರು ಮಂಗನ ಕಾಯಿಲೆಗೆ ಹೆದರಿ ಪ್ರಚಾರಕ್ಕೆ ಬಾರದಿದ್ದರೂ ನಾವು ಮತ ಹಾಕುವ ಮೂಲಕ ಆಯ್ಕೆಯಾಗುವ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕು ಉಳಿಸಿಕೊಂಡಿದ್ದೇವೆ. ಪ್ರಧಾನ ಮಂತ್ರಿಗಳಿಗೆ ಸಾಮಾನ್ಯ ನಾಗರಿಕ ದೂರವಾಣಿಯಲ್ಲಿ ನೇರವಾಗಿ ಸಂಪರ್ಕಿಸಬಹುದು ಎಂದು ಕೇಳಿದ್ದೇನೆ. ನಾಳೆ ಈ ಪಕ್ಷದ ಕಾರ್ಯಕರ್ತರನ್ನು ಕೇಳಿ ನೇರವಾಗಿ ಮಂಗನ ಕಾಯಿಲೆಯ ಶಾಶ್ವತ ಪರಿಹಾರ ಪಡೆಯಲು ಪ್ರಧಾನ ಮಂತ್ರಿಯನ್ನೇ ಆಗ್ರಹಿಸುತ್ತೇವೆ ಎಂದು ಮಂಗನ ಕಾಯಿಲೆ ಪೀಡಿತ ಮಗನೋರ್ವನ ತಂದೆ ಹೇಳಿದ್ದು ಇಡೀ ಅರಳಗೋಡು ಭಾಗದ ಜನರ ಮನಸ್ಸಿನ ಪ್ರತಿಧ್ವನಿಯಂತೆ ಕೇಳಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next