Advertisement

ಹಾಳಾದ ರಸ್ತೆಗಳು ಸಂಚಾರಕ್ಕೆ ಮುಕ್ತ

12:41 PM Aug 23, 2019 | Naveen |

ಶಿವಮೊಗ್ಗ: ಆಶ್ಲೇಷ ಮಳೆ ಅಬ್ಬರಕ್ಕೆ ಜಿಲ್ಲೆಯ ರಸ್ತೆಗಳೆಲ್ಲ ಕ್ಲೇಷವಾಗಿವೆ. ವಾರದ ಕಾಲದ ಎಡೆಬಿಡದೆ ಸುರಿದ ಮಳೆಯಿಂದ ಬಹುತೇಕ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಲೋಕೋಪಯೋಗಿ ಇಲಾಖೆ ತಾತ್ಕಾಲಿಕ ದುರಸ್ತಿ ಮಾಡಿದೆ. ಎಲ್ಲ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ.

Advertisement

ದಾಖಲೆ ಮಳೆಗೆ ರಾಜ್ಯ, ರಾಷ್ಟ್ರೀಯ, ಜಿಲ್ಲಾ ಮಟ್ಟದ ರಸ್ತೆಗಳು ಗುಂಡಿ, ಗಟಾರುಗಳಿಂದ ಕೂಡಿದ್ದು ದುರಸ್ತಿಗೆ ಸರಕಾರದ ನೆರವನ್ನು ಬೇಡುತ್ತಿವೆ. ರಸ್ತೆ ಸಂಪೂರ್ಣ ಕೊಚ್ಚಿ ಹೋಗಿರುವ ಕಡೆ ತಾತ್ಕಾಲಿಕ ದುರಸ್ತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 113 ಕೋಟಿ ಮೌಲ್ಯದ ರಸ್ತೆ, ಸೇತುವೆಗಳು ನೀರು ಪಾಲಾಗಿವೆ.

ರಾಜ್ಯ ಹೆದ್ದಾರಿ: ಭದ್ರಾವತಿ ತಾಲೂಕಿನಲ್ಲಿ 5.6 ಕಿಮೀ, ಹೊಸನಗರ 2.34 ಕಿಮೀ, ಸಾಗರ 2.8 ಕಿಮೀ, ಶಿಕಾರಿಪುರ 4.9 ಕಿಮೀ, ಶಿವಮೊಗ್ಗ 6, ಸೊರಬ 11. 8 ಕಿಮೀ, ತೀರ್ಥಹಳ್ಳಿ 19 ಕಿಮೀ ಸೇರಿ ಒಟ್ಟು ಜಿಲ್ಲೆಯಲ್ಲಿ 52.44 ಕಿಮೀ ರಾಜ್ಯ ಹೆದ್ದಾರಿ ಹಾಳಾಗಿದ್ದು 20.84 ಕೋಟಿ ನಷ್ಟ ಉಂಟಾಗಿದೆ. ಅದೇ ರೀತಿ ಜಿಲ್ಲಾ ಮುಖ್ಯ ರಸ್ತೆಗಳು ನೀರು ಪಾಲಾಗಿದ್ದು ಭದ್ರಾವತಿಯಲ್ಲಿ 6.8 ಕಿಮೀ, ಹೊಸನಗರ 8.6 ಕಿಮೀ, ಸಾಗರ 17.82 ಕಿಮೀ, ಶಿಕಾರಿಪುರ 11.49 ಕಿಮೀ, ಶಿವಮೊಗ್ಗ 1.21 ಕಿಮೀ, ಸೊರಬ 12.27 ಕಿಮೀ, ತೀರ್ಥಹಳ್ಳಿ 4.45 ಕಿಮೀ ಸೇರಿ ಒಟ್ಟು 62.64 ಕಿಮೀನಷ್ಟು ರಸ್ತೆ ಹಾಳಾಗಿದ್ದು 30.65 ಕೋಟಿ ರೂ. ನಷ್ಟ ಸಂಭವಿಸಿದೆ.

ರಾಷ್ಟ್ರೀಯ ಹೆದ್ದಾರಿಗಳೂ ಹಾಳು: ಬೆಂಗಳೂರು- ಹೊನ್ನಾವರ, ಬೈಂದೂರು- ರಾಣೆಬೆನ್ನೂರು, ತೀರ್ಥಹಳ್ಳಿ ಮೂಲಕ ಉಡುಪಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು ಸಹ ಇವೆ. ಈ ಪೈಕಿ ಸಾಗರ ತಾಲೂಕಿನಲ್ಲೇ ಅತಿ ಹೆಚ್ಚು ನಷ್ಟ ಸಂಭವಿಸಿದೆ. ಸಾಗರ ತಾಲೂಕಿನ 51.80 ಕಿಮೀನಷ್ಟು ರಸ್ತೆ ನೀರಿನಲ್ಲಿ ಆಹುತಿಯಾಗಿದೆ. ಹೊಸನಗರ 16.22 ಕಿಮೀ, ಭದ್ರಾವತಿ 5.10 ಕಿಮೀ, ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 7.72 ಕಿಮೀ ಸೇರಿ ಒಟ್ಟು 80.84 ಕಿಮೀ ರಾಷ್ಟ್ರೀಯ ಹೆದ್ದಾರಿ ಹಾನಿಯಾಗಿದೆ. 16.97 ಕೋಟಿ ನಷ್ಟ ಸಂಭವಿಸಿದೆ.

ಸ್ಕ್ವಾಯರ್‌ ಕಟ್: ಸಿಎಂ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ರಸ್ತೆ ಗುಂಡಿಗಳನ್ನು ಸಮಭುಜ ಆಕಾರದಲ್ಲಿ ಕತ್ತರಿಸಿ ದುರಸ್ತಿ ಮಾಡಬೇಕೆಂದು ಶಾಸಕ ಕುಮಾರ್‌ ಬಂಗಾರಪ್ಪ ಒತ್ತಾಯಿಸಿದರು. ಇರುವ ಗುಂಡಿಗಳನ್ನು ಅದೇ ಆಕಾರದಲ್ಲಿ ಮುಚ್ಚಿದರೆ ಅವು ಇನ್ನಷ್ಟು ದೊಡ್ಡದಾಗುತ್ತವೆ. ವಾಹನಗಳಿಗೂ ತೊಡಕಾಗುತ್ತದೆ ಎಂಬುದನ್ನು ಗಮನ ಸೆಳೆದಿದ್ದರು.

Advertisement

ಮಣ್ಣು ಬೇಡ: ರಸ್ತೆ ಗುಂಡಿಗಳನ್ನು ತಾತ್ಕಾಲಿಕವಾಗಿ ಮಣ್ಣು ಮುಚ್ಚಿ ದುರಸ್ತಿ ಮಾಡಲಾಗಿದೆ. ಮಳೆ ಪೂರ್ಣ ಮುಗಿದ ಮೇಲೆ ಡಾಂಬರು ಹಾಕಿ ಮುಚ್ಚಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳು ತಿಳಿಸಿದ್ದಾರೆ. ಮಳೆ ಬಿಟ್ಟು ಬಿಟ್ಟು ಬರುತ್ತಿರುವುದರಿಂದ ವಾಹನ ಸವಾರರಿಗೆ ಬಿಸಿಲು ಬಂದಾಗ ಧೂಳು, ಮಳೆ ಬಂದಾಗ ಕೆಸರು ಎದುರಾಗುತ್ತಿದೆ. ಪೂರ್ಣ ಪ್ರಮಾಣದ ದುರಸ್ತಿಗೆ ನಾಗರಿಕರು ಆಗ್ರಹಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲೂ ಹಾಳು: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಕಾಂಕ್ರೀಟ್ ರಸ್ತೆ ಹೊರತುಪಡಿಸಿ ಡಾಂಬರು ರಸ್ತೆಗಳು ಮಳೆಗಾಲಕ್ಕೂ ಮೊದಲೇ ಗುಂಡಿ ಬಿದ್ದಿದ್ದವು. ಈಗ ಸಂಪೂರ್ಣ ಹಾಳಾಗಿದ್ದು, ರಸ್ತೆ ಸಂಚಾರ ನರಕವಾಗಿದೆ. ಪಾಲಿಕೆ ವ್ಯಾಪ್ತಿಯ ರಸ್ತೆಗಳ ದುರಸ್ತಿಗೆ ವಿಶೇಷ ಅನುದಾನ ಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next