Advertisement

ಗ್ರಾಪಂಗಳಲ್ಲೇ ಆಯುಷ್ಮಾನ ಕಾರ್ಡ್‌

12:53 PM Dec 14, 2019 | Naveen |

„ಶರತ್‌ ಭದ್ರಾವತಿ
ಶಿವಮೊಗ್ಗ:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಆಯುಷ್ಮಾನ ಭಾರತ್‌ ಯೋಜನೆ ಕಾರ್ಡ್‌ಗಳು ಎರಡು ವರ್ಷ ಕಳೆದರೂ ಜನರ ಕೈ ಸೇರಿಲ್ಲ. ಇದಕ್ಕೆ ಪರಿಹಾರ ಕಂಡುಕೊಂಡಿರುವ ಸರ್ಕಾರ ಇನ್ಮುಂದೆ ಗ್ರಾಪಂಗಳಲ್ಲೇ ಕಾರ್ಡ್‌ ವಿತರಣೆ ಮಾಡಲು ವ್ಯವಸ್ಥೆ ಮಾಡಿದೆ. ಬಾಪೂಜಿ ಸೇವಾ ಕೇಂದ್ರಗಳಲ್ಲಿ ಈ ಹೊಸ ಸೇವೆ ಸೇರ್ಪಡೆಗೊಳ್ಳಲಿದೆ.

Advertisement

ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ವರೆಗೆ ಸಹಾಯಧನ ನೀಡುವ ಈ ಯೋಜನೆಗೆ ಸಾಕಷ್ಟು ಬೇಡಿಕೆ ಇದೆ. ಅದಕ್ಕಾಗಿ ಪ್ರತಿ ದಿನ ಕ್ಯೂನಲ್ಲಿ ನಿಂತು ಅರ್ಜಿ ಹಾಕುವವರ ಸಂಖ್ಯೆ ಕೂಡ ಅಷ್ಟೇ ಇದೆ. ಒಂದೂವರೆ ವರ್ಷದಿಂದ ಶಿವಮೊಗ್ಗದಲ್ಲಿ 3 ಲಕ್ಷ ಜನರಿಗೆ ಮಾತ್ರ ಕಾರ್ಡ್‌ ವಿತರಿಸಲಾಗಿದೆ. ಬಿಪಿಎಲ್‌ ಕಾರ್ಡ್‌ ಹೊಂದಿರುವ 13,04,120 ಮಂದಿ ಜಿಲ್ಲೆಯಲ್ಲಿದ್ದು ಇನ್ನೂ 10 ಲಕ್ಷ ಜನಕ್ಕೆ ಕಾರ್ಡ್‌ ಅಗತ್ಯವಿದೆ. ರಾಜ್ಯದ ಎಲ್ಲ ಜಿಲ್ಲೆಯಲ್ಲೂ ಸ್ಥಿತಿ ಹೀಗೆಯೇ ಇದೆ.

ಕಾರ್ಡ್‌ಗಳನ್ನು ಮೊದಲು ಜಿಲ್ಲಾಸ್ಪತ್ರೆ, ತಾಲೂಕು, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ 13 ಕೇಂದ್ರಗಳಲ್ಲಿ ಮಾತ್ರ ವಿತರಿಸಲಾಗುತಿತ್ತು. ಅದು ಕೂಡ ಆಸ್ಪತ್ರೆಗೆ ದಾಖಲಾದವರಿಗೆ ಮಾತ್ರ ನೀಡಲಾಗುತ್ತಿತ್ತು. ನಂತರ 311 ಸಾಮಾನ್ಯ ಸೇವಾ ಕೇಂದ್ರಗಳಿಗೆ ಕಾರ್ಡ್‌ ವಿತರಿಸುವ ಜವಾಬ್ದಾರಿ ನೀಡಲಾಗಿತ್ತು. ಜನರಿಂದ ಹಣ ವಸೂಲಿ ಆರೋಪ ಕೇಳಿ ಬಂದ ಮೇಲೆ ಪ್ರಸ್ತುತ 106 ಸೇವಾ ಕೇಂದ್ರಗಳು ಕಾರ್ಡ್‌ ವಿತರಿಸುವ ಕೆಲಸ ಮಾಡುತ್ತಿವೆ. ಈಗ ಸೇವೆಯನ್ನು ಗ್ರಾಪಂಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಿಗೆ ವಿಸ್ತರಿಸಲಾಗಿದೆ.

270 ಗ್ರಾಪಂ: ಜಿಲ್ಲೆಯಲ್ಲಿ 270 ಗ್ರಾಪಂಗಳಿದ್ದು ಎಲ್ಲ ಕಡೆಯೂ ವಿವಿಧ ಸೇವೆಗಳನ್ನು ಒದಗಿಸುವ ಬಾಪೂಜಿ ಸೇವಾ ಕೇಂದ್ರವಿದೆ. 100 ಸೇವೆಗಳನ್ನು ಒದಗಿಸುವ ಜತೆಗೆ ಆಯುಷ್ಮಾನ್‌ ಭಾರತ್‌ ಕಾರ್ಡ್‌ಗಳನ್ನು ಸಹ ವಿತರಣೆ ಮಾಡಲಿವೆ. ಈ ಬಗ್ಗೆ ಸರ್ಕಾರ ನಿರ್ದೇಶನ ನೀಡಿದ್ದು 10 ರೂ. ಪಡೆದು ಎ-4 ಹಾಳೆಯಲ್ಲಿ ಕಾರ್ಡ್‌ ವಿವರ ಮುದ್ರಿಸಿಕೊಡಲು ಸೂಚಿಸಿದೆ. ಈ ಹಣವನ್ನು ಬಾಪೂಜಿ ಸೇವಾ ಕೇಂದ್ರದ ಪ್ರತ್ಯೇಕ ಖಾತೆಗೆ ಜಮಾ ಮಾಡಿ ಆ ಹಣವನ್ನು ನಿಯಮಾನುಸಾರ ಬಳಕೆ ಮಾಡುವಂತೆ ಸೂಚಿಸಲಾಗಿದೆ.

ಈವರೆಗೆ ಸುಮಾರು 3 ಲಕ್ಷ ಜನರಿಗೆ ಆಯುಷ್ಮಾನ್‌ ಕಾರ್ಡ್‌ ವಿತರಿಸಲಾಗಿದೆ. 106 ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕಾರ್ಡ್‌
ವಿತರಿಸಲಾಗುತ್ತಿದೆ. ಕಾಗದದ ಪ್ರಿಂಟ್‌ಗೆ 10 ರೂ., ಕಾರ್ಡ್‌ಗೆ 35 ರೂ. ನಿಗದಿಪಡಿಸಲಾಗಿದೆ. ಬಾಪೂಜಿ ಸೇವಾ ಕೇಂದ್ರದ ಸಿಬ್ಬಂದಿ ಈಗಾಗಲೇ ಪರಿಣತಿ ಹೊಂದಿರುವುದರಿಂದ ಕಾರ್ಡ್‌ ವಿತರಣೆಗೆ ತೊಂದರೆ ಇಲ್ಲ. ಇನ್ನೆರಡು ತಿಂಗಳಲ್ಲಿ ಬಾಕಿ 10 ಲಕ್ಷ ಜನರಿಗೆ ಕಾರ್ಡ್‌ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು.
ಡಾ| ರಾಜೇಶ್‌ ಸುರಗಿಹಳ್ಳಿ,
ಡಿಎಚ್‌ಒ

Advertisement

ಆಸ್ಪತ್ರೆ ಅಭಿವೃದ್ಧಿಗೆ ಅನುಕೂಲ
ಆಯುಷ್ಮಾನ್‌ನಿಂದ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ವೈದ್ಯಕೀಯ ವೆಚ್ಚದ ಶೇ.70ರಷ್ಟನ್ನು ಆಸ್ಪತ್ರೆ ಅಭಿವೃದ್ಧಿಗೆ ಬಳಸಲು ಅವಕಾಶವಿದೆ. ಆಸ್ಪತ್ರೆಗಳಿಗೆ ಅಗತ್ಯವಿರುವ ಉಪಕರಣಗಳನ್ನು ಈ ಹಣದಲ್ಲಿ ಕೊಂಡುಕೊಂಡರೆ ಸೇವೆ ಗುಣಮಟ್ಟ ಇನ್ನಷ್ಟು ಹೆಚ್ಚಲಿದೆ. ವೈದ್ಯರು ತಮ್ಮ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೋ ಇಲ್ಲವೋ ಎಂಬುದರ ಮಾನಿಟರಿಂಗ್‌ ಮಾಡಲು ಸಹ ಇದರಿಂದ ಅನುಕೂಲವಾಗುತ್ತದೆ. ಒಂದು ಆಪರೇಷನ್‌ನ ಶೇ.30ರಷ್ಟು ವೆಚ್ಚವು ವೈದ್ಯರಿಗೆ ಸಿಗುವುದರಿಂದ ಪ್ರೈವೇಟ್‌ ಪ್ರಾಕ್ಟಿಸ್‌ ಅವಶ್ಯಕತೆಯೂ ಇರುವುದಿಲ್ಲ ಎನ್ನುತ್ತಾರೆ ಶಿವಮೊಗ್ಗ ಡಿಎಚ್‌ಒ ರಾಜೇಶ್‌ ಸುರಗಿಹಳ್ಳಿ.

20 ಕೋಟಿ ರೂ. ಸದ್ಬಳಕೆ
ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿಯಾದಾಗಿನಿಂದ ಶಿವಮೊಗ್ಗ ಜಿಲ್ಲೆಯಲ್ಲಿ 7300ಕ್ಕೂ ಹೆಚ್ಚು ಫಲಾನುಭವಿಗಳು 20 ಕೋಟಿ ರೂ. ಅಧಿಕ ಪ್ರಯೋಜನ ಪಡೆದಿದ್ದಾರೆ. ಇನ್ನೂ 1700
ಅರ್ಜಿಗಳು ಬಾಕಿ ಇದ್ದು ಮೂರ್‍ನಾಲ್ಕು ಕೋಟಿ ಹಣ ಬರುವ ನಿರೀಕ್ಷೆ ಇದೆ. 20 ಕೋಟಿಯಲ್ಲಿ ಖಾಸಗಿ ಆಸ್ಪತ್ರೆಗಳು 17 ಕೋಟಿ ಹಾಗೂ ಸರ್ಕಾರಿ ಆಸ್ಪತ್ರೆ 3 ಕೋಟಿ ವೆಚ್ಚದ ವೈದ್ಯಕೀಯ ಸೇವೆ ನೀಡಿವೆ.

Advertisement

Udayavani is now on Telegram. Click here to join our channel and stay updated with the latest news.

Next