Advertisement

ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸೋದು ಬಿಡಿ

10:26 PM May 26, 2021 | Shreeraj Acharya |

ಶಿವಮೊಗ್ಗ: ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಿ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಸಿ.ಟಿ. ರವಿ, ಸಂತೋಷ್‌ ಜೀ ಮೊದಲಾದ ಬಿಜೆಪಿ ನಾಯಕರು ರಾಜ್ಯದಲ್ಲಿ ಕೊರೊನಾ ಹರಡಲು ಕಾಂಗ್ರೆಸ್‌ ಕಾರಣ ಎಂಬ ನೀಚತನದ ಹೇಳಿಕೆ ನೀಡಿದ್ದಾರೆ.

Advertisement

ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನೇ ಗುರಿಯನ್ನಾಗಿಸಿಕೊಂಡು ತಮ್ಮ ಹುಳುಕು ಮುಚ್ಚಿಕೊಳ್ಳುತ್ತಿದ್ದಾರೆ. ಇನ್ನು ಮುಂದಾದರೂ ಕಾಂಗ್ರೆಸ್‌ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು. ದೇಶದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿದ್ದರೂ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿ 5 ರಾಜ್ಯಗಳಲ್ಲಿ ಚುನಾವಣೆ ನಡೆಸಿತು. ರಾಜ್ಯದಲ್ಲಿಯೂ ಕೂಡ ಉಪ ಚುನಾವಣೆ ನಡೆಸಲಾಯಿತು. ಹೀಗೆ ಚುನಾವಣೆ ಮೇಲೆ ಚುನಾವಣೆ ಮಾಡಿ, ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾಗಿದ್ದು ಬಿಜೆಪಿ ಸರ್ಕಾರ. ಜೊತೆಗೆ ಕರ್ನಾಟಕದಲ್ಲಿ ಕರ್ಫ್ಯೂ ಘೋಷಿಸುವ ಮುನ್ನ ಬೆಂಗಳೂರಿಂದ ಸುಮಾರು 12 ಸಾವಿರ ಬಸ್‌ಗಳನ್ನು ಗ್ರಾಮೀಣ ಪ್ರದೇಶಗಳಿಗೆ ಬಿಟ್ಟು ಸೋಂಕು ಹರಡಲು ನೇರ ಕಾರಣವಾಗಿದೆ.

ಇಷ್ಟೆಲ್ಲಾ ತಪ್ಪು ಎಸಗಿರುವ ಬಿಜೆಪಿ ಸರ್ಕಾರ ಕಾಂಗ್ರೆಸ್‌ ಮೇಲೆ ವಿನಾಕಾರಣ ಆರೋಪ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲಸಿಕೆಗೆ ಸಂಬಂ ಧಿಸಿದಂತೆ ಬಿಜೆಪಿ ಸರ್ಕಾರ ಸುಳ್ಳು ಹೇಳುತ್ತಿದೆ. ಕಾಂಗ್ರೆಸ್‌ ಲಸಿಕೆ ಹಾಕಿಸಿಕೊಳ್ಳುವುದು ಬೇಡ ಎಂದು ಜನರಿಗೆ ಪ್ರಚಾರ ಮಾಡಿತು. ಆ ಕಾರಣದಿಂದ ಕೊರೊನಾ ಹೆಚ್ಚಾಗಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಬುದ್ಧಿ ಇಲ್ಲವೇ? ಎಲ್ಲರೂ ಕಾಂಗ್ರೆಸ್‌ ಮಾತನ್ನೇ ಕೇಳುತ್ತಿದ್ದಾರೆಯೇ? ಬಿಜೆಪಿಯವರ ಮಾತನ್ನು ಕೇಳುವುದಿಲ್ಲವೇ? ಎಲ್ಲಾ ವಿಷಯಕ್ಕೂ ಜನ ನಮ್ಮ ಜೊತೆ ಇದ್ದಾರೆ ಎಂದು ಹೇಳುವ ಬಿಜೆಪಿಗೆ ಲಸಿಕೆ ಹಾಕಿಸುವುದು ಗೊತ್ತಿರಲಿಲ್ಲವೇ? ಈಗ ಸಲ್ಲದ ಕಾರಣ ಕೊಟ್ಟು ಜಾರಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಈಗಲೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಲಸಿಕೆ ನೀಡುವುಲ್ಲಿ ವಿಫಲವಾಗಿವೆ. ಹೊರದೇಶಕ್ಕೆ ಲಸಿಕೆ ಕಳುಹಿಸುವ ಅವಶ್ಯಕತೆ ಏನಿತ್ತು? ಇವರಿಗೆ ಮಾಹಿತಿ ಇರಲಿಲ್ಲವೇ? ಲಸಿಕೆ ಕೊರತೆ ಇಲ್ಲವೆಂದು ಹೇಳುವ ಸರ್ಕಾರಕ್ಕೆ ಈಗಲಾದರೂ ತನ್ನ ತಪ್ಪಿನ ಅರಿವಾಗಬೇಕು. ಶಿವಮೊಗ್ಗದಂತಹ ನಗರದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ಬಂದಿದೆ ಎಂದರು.

Advertisement

ಕೊರೊನಾ ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ. ಸರ್ಕಾರ ದಿವಾಳಿಯಾಗಿದೆ. ಯಾವುದೇ ಆಸ್ಪತ್ರೆಗಳಿಗೆ ಹೋದರೂ ಆಮ್ಲಜನಕ, ವೆಂಟಿಲೇಟರ್‌, ಬೆಡ್‌ಗಳು ಇಲ್ಲ. ಇದರ ನಡುವೆ ಶಿಲೀಂದ್ರ ರೋಗ (ಬ್ಲಾಕ್‌ ಫಂಗಸ್‌) ಕೂಡ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

ಕೊರೊನಾ ತಡೆಯಲು ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿದೆ ಎಂದು ಹೇಳುತ್ತಿದೆ. ಆದರೆ, ಆ ಹಣ ಎಲ್ಲಿ ಹೋಗಿದೆ? ಲಸಿಕೆ, ಆಮ್ಲಜನಕ, ವೆಂಟಿಲೇಟರ್‌, ಔಷಧಗಳ ಖರೀದಿ, ಮಾಸ್ಕ್ ಖರೀದಿ ಎಲ್ಲವುದರಲ್ಲೂ ಭ್ರಷ್ಟಾಚಾರ ನಡೆದಿದ್ದು ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಚಾಮರಾಜನಗರದಲ್ಲಿ ಆಕ್ಸಿಜನ್‌ ಇಲ್ಲದೇ ಮೃತಪಟ್ಟ 24 ಜನರಿಗೆ ಕೇವಲ 2 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇದು ಯಾವುದಕ್ಕೂ ಸಾಲದು, ಕನಿಷ್ಠ 10 ಲಕ್ಷ ರೂ. ಪರಿಹಾರ ನೀಡಬೇಕು. ಇದಲ್ಲದೆ ಕೊರೊನಾದಿಂದ ಮೃತಪಟ್ಟ ಎಲ್ಲಾ ಕುಟುಂಬಗಳಿಗೂ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಎರಡನೇ ಅಲೆಯನ್ನೇ ಸಮರ್ಪಕವಾಗಿ ನಿರ್ವಹಿಸದ ಸರ್ಕಾರ ಕೊರೊನಾ ಮೂರನೇ ಅಲೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹಸಿ ಸುಳ್ಳು ಹೇಳುತ್ತಿದೆ. ಹೀಗೆ ಸುಳ್ಳು ಮಾಹಿತಿ ನೀಡುತ್ತಾ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಕಾಯಿಲೆಗಿಂತ ಇವರಿಗೆ ಪ್ರತಿಷ್ಠೆ ಪಕ್ಷದ ಬೆಳವಣಿಗೆ ಮುಖ್ಯವಾಗಿದೆ. ಇನ್ನಾದರೂ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು ಕೊರೊನಾ ನಿಯಂತ್ರಿಸಲು ಗಮನಹರಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ ಹೋರಾಟ ಆರಂಭಿಸಬೇಕಾದೀತು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಎಚ್‌.ಸಿ.ಯೋಗೀಶ್‌, ನಾಗರಾಜ್‌, ಎಂ.ಚಂದನ್‌, ಎಚ್‌.ಪಿ. ಗಿರೀಶ್‌, ಯು. ಶಿವಾನಂದ್‌, ನಟರಾಜ್‌, ಚಂದ್ರಶೇಖರ್‌, ಪ್ರಮೋದ್‌, ಪ್ರಭಾಕರ್‌, ಮೂರ್ತಿ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next